ಬೆಂಗಳೂರಿನಲ್ಲಿ ಆರು ವಾರ

ಬೆಂಗಳೂರಿನಲ್ಲಿ ಆರು ವಾರ

ಲೇಖಕರು  -  ರಾಮಮೂರ್ತಿ,  ಬೇಸಿಂಗ್ ಸ್ಟೋಕ್ 

ಕೋವಿಡ್ ನಿಂದ ಕಳೆದ ಮೂರು ವರ್ಷ ಬೆಂಗಳೂರಿಗೆ ಹೋಗಿರಲಿಲ್ಲ. ಈ ವರ್ಷ ಜನವರಿ ತಿಂಗಳಲ್ಲಿ ಹೋಗಿ ಆರು ವಾರ ಇದ್ದು,  ಅಲ್ಲಿ ಈ ಮೂರು ವರ್ಷಗಳಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಈ ಲೇಖನ. ಬೆಂಗಳೂರು Airport  ಬಹಳ ಚೆನ್ನಾಗಿದೆ ಇದು ನಮ್ಮೆಲ್ಲರ ಹೆಮ್ಮೆಯ ವಿಷಯ. Immigration ಸಹ ತುಂಬಾ ಸರಾಗ ಮತ್ತು ವಿನಯದಿಂದ ನಡೆಯಿತು. ಕೋವಿಡ್ ಔಪಚಾರಿಕತೆಗಳು ಏನೂ ಇರಲಿಲ್ಲ.  ಕೆಲವು ವರ್ಷದ ಹಿಂದೆ Auto ಅಥವಾ Taxi ಸಮಸ್ಯೆ ಇತ್ತು, ಆದರೆ ಈಗ Uber ಮತ್ತು Ola ಇರುವುದರಿಂದ ಯಾವ ತೊಂದರೆಯೂ ಇಲ್ಲ. ಸುಮಾರು ಐದು ನಿಮಿಷದ ಒಳಗೆ ನಿಮ್ಮ ವಾಹನ ಬರುವ ಸಾಧ್ಯತೆ ಇದೆ.  ದರದ ಚೌಕಾಸಿ ಅಥವಾ ಜಗಳ ಬರಿ ನೆನಪುಗಳು ಅಷ್ಟೇ ! 



ಇನ್ನೊಂದು ವಿಷಯ ಗಮನಕ್ಕೆ ಬರುವುದು  ದೇಶದಲ್ಲಿ ಆಗಿರುವ Digital Revolution. ರಸ್ತೆ ಯಲ್ಲಿ ತರಕಾರಿ ಮಾರುವರು , ಚಾಟ್ ಅಂಗಡಿಯವರು ಸಹ ಇದರಲ್ಲಿ ಭಾಗವಹಿಸಿದ್ದಾರೆ. ಫೋನಿನಿಂದ QR Code scan ಮಾಡಬಹುದು. ಅನೇಕ ಉಪಹಾರ ಮಂದಿರಗಳಲ್ಲಿ QR  code ನಿಂದ ಅವತ್ತಿನ ತಿಂಡಿಗಳ ವಿವರ ತಿಳಿಯಬಹುದು. ಅಂಗಡಿ ಸಾಮಾನುಗಳನ್ನು on line ನಲ್ಲಿ ತರಿಸಬಹುದು. ನೋಡಿದರೆ ಬೆಂಗಳೂರಿನಲ್ಲಿ ಎಲ್ಲರ ಮನೆಯಲ್ಲೂ  ಒಂದು ನಾಲಕ್ಕು ಚಕ್ರದ  ವಾಹನ  ಇರಬಹುದೇನೋ   ಅನ್ನಿಸುತ್ತೆದೆ, ರಸ್ತೆಯಲ್ಲಿ ಅಷ್ಟೊಂದು traffic! Highway ಗಳು ಈಗ ಚೆನ್ನಾಗಿವೆ, ಆದರೆ ಬಹು ಮಂದಿ ವಾಹನ ನಡೆಸುವ ನಿಯಮಗಳನ್ನು ಪಾಲಿಸಿವುದಿಲ್ಲ ಅನ್ನುವುದು ಬಹಳ ಶೋಚಿನಿಯವಾದ ವಿಷಯ. 

 ಇನ್ನು ಮೆಟ್ರೋ (ನಮ್ಮ ಮೆಟ್ರೋ ) ಬಹಳ ಅನುಕೂಲವಾಗಿದೆ. ನಾನು ಬಹಳ ಹಿಂದೆ ಒಂದು ಸಲಿ ಇಲ್ಲಿ ಪ್ರಯಾಣ ಮಾಡಿದ್ದೆ.

ಆದರೆ ಏನು ಬದಲಾವಣೆ ಆಗಿದೆ ಅನ್ನುವ ವಿಚಾರ ಗೊತ್ತಿರಲಿಲ್ಲ. ಸರಿ, ಇದರಲ್ಲಿ ಪ್ರಯಾಣ ಮಾಡಿ ನೋಡೋಣ ಅಂತ ನ್ಯಾಷನಲ್ ಕಾಲೇಜು ನಿಲ್ದಾಣಕ್ಕೆ ಬಂದೆ. ಟಿಕೆಟ್ counter ನಲ್ಲಿ ಮಂತ್ರಿ ಮಾಲ್ ಗೆ ಎಷ್ಟು ಅಂತ ಕೇಳಿದಾಗ ಆಕೆ ೧೮ ರೂಪಾಯಿ ಅಂದಳು, ನಾನು ಆಶ್ಚರ್ಯದಿಂದ ”೧೮ ಆ?” ಅಂದೆ. ಆಕೆ ಹೌದು ಸರ್, ಸೀನಿಯರ್ concession ಇಲ್ಲ ಅಂದಳು! ನನಗೆ ಆಶ್ಚರ್ಯ ಆಗಿದ್ದು ಕೇವಲ ೧೮ ರೂಪಾಯಿ ಮಾತ್ರ ಅಂತ , ಆದರೆ ಆಕೆ ನಾನು ಇದು ದುಬಾರಿ ಅಂತ ಹೇಳುತ್ತಿದ್ದೇನೆ ಅಂತ ತಿಳಿದಿರಬೇಕು!! (London Tube ನಲ್ಲಿ ಕನಿಷ್ಠ £೭!) ದುಡ್ಡು ಕೊಟ್ಟೆ,  ಚಿಲ್ಲರೆ ಬಂತು,  ಟಿಕೆಟ್ ಕೊಡಿ ಅಂದೆ. ಆಕೆ ಕೊಟ್ಟಿದ್ದೀನಿ ನೋಡಿ ಸರ್ ಅಂದಳು. (ಈ ಮನುಷ್ಯ ಎಲ್ಲಿಂದ ಬಂದಿದ್ದಾನೆ ಅಂತ ಯೋಚಿಸರಬಹುದು!!). ನೋಡಿದರೆ ಟಿಕೆಟ್ ಒಂದು ಬಿಲ್ಲೆ ಆದರೆ Digital ಬಿಲ್ಲೆ ! ಅಂತೂ ಪ್ರಯಾಣ ಕೇವಲ ೧೦ ನಿಮಿಷ ಮಾತ್ರ.  ಅದೇ Auto ನಲ್ಲಿ ಮಲ್ಲೇಶ್ವರಕ್ಕೆ ಹೋಗಿದ್ದರೆ ೧೦೦ ರೂಪಾಯಿ ಮತ್ತು ಅರ್ಧ ಅಥವಾ ಮುಕ್ಕಾಲು ಗಂಟೆ ಸಮಯ ಹಿಡಿಯುತ್ತಿತ್ತು. 

ಬೆಳಗ್ಗೆ ಅಥವಾ ಸಾಯಂಕಾಲ ತಿಂಡಿ/ಊಟಕ್ಕೆ ಜನಗಳು ಉಪಹಾರ ಮಂದಿರಗಳ ಮುಂದೆ ನಿಂತಿರುವುದನ್ನ ನೋಡಿದರೆ  ಮನೆಯಲ್ಲಿ ಅಡಿಗೆ ಮಾಡುವ ಅಭ್ಯಾಸ ಇಲ್ಲವೇನೋ ಅನ್ನುವ ಸಂಶಯ ಹುಟ್ಟುತ್ತದೆ. ಗಾಂಧಿ ಬಜಾರ್ನಲ್ಲಿರುವ ಹೆಸರಾದ  ವಿದ್ಯಾರ್ಥಿ ಭವನದ ಮುಂದೆ queue ನಿಂತಿರುತ್ತಾರೆ. ಎಲ್ಲಾ  ಉಪಹಾರ ಮಂದಿರಗಳಲ್ಲೂ ಇದೇ ಸಮಸ್ಯೆ.  



ಸಂಕ್ರಾಂತಿ ಸಮಯದಲ್ಲಿ, ಎಳ್ಳು, ಬೆಲ್ಲ, ಸಕ್ಕರೆ ಅಚ್ಚು ಮುಂತಾದವು ಈಗ ಅನೇಕ ಅಂಗಡಿಗಳಲ್ಲಿ Prepack ಸಿಗುತ್ತೆ. ಮನೆಯಲ್ಲಿ ಕಷ್ಟ ಪಡಬೇಕಾದ ಅವಶ್ಯಕತೆ ಇಲ್ಲ. ಯುಗಾದಿ ಹಬ್ಬಕ್ಕೆ ಹೋಳಿಗೆ ಮಾಡುವ ಅಂಗಡಿಗಳು ಅನೇಕ.   

 ನಾವು ಇದ್ದ ಆರು ವಾರದಲ್ಲಿ, ಅಡಿಗೆ ಮಾಡಿಕೊಳ್ಳುವ ಸೌಲಭ್ಯ ಇದ್ದಿದ್ದರೂ ಮಾಡುವ ಅವಶ್ಯಕತೆ ಇರಲಿಲ್ಲ. ಹತ್ತಿರದಲ್ಲೇ  ಇದ್ದ ವಿದ್ಯಾರ್ಥಿ ಭವನ, ಭಟ್ಟರ ಹೋಟೆಲ್ ಅಥವಾ ಉಡುಪಿ ಕೃಷ್ಣ ಭವನದಲ್ಲಿ ಬೆಳಗ್ಗೆ ಬಿಸಿ ಬಿಸಿ ಇಡ್ಲಿ ದೋಸೆ (Take Away) ಸಿಗಬೇಕಾದರೆ ಮನೆಯಲ್ಲಿ ಕಷ್ಟ ಪಡಬೇಕಾಗಿಲ್ಲ ಅಲ್ಲವೇ?  ಊಟ ಸಹ On Line ನಲ್ಲಿ ತರಿಸಬಹುದು! When in Rome Do as Romans Do ಅಂದ ಹಾಗೆ. 

ನಮ್ಮ ಮನೆಯ ಕಿರಿಯ ಇಬ್ಬರು ಸಂಬಂಧಿಕರು ಬ್ರೂವರಿ (Brewery )ಗೆ ಹೋಗೋಣ ಅಂದರು. (ಬೆಂಗಳೂರಿನಲ್ಲಿ ಸುಮಾರು ೩೦-೪೦ ಇವೆಯಂತೆ). ಸಾಯಂಕಾಲ ೭ ೩೦ ಕ್ಕೆ booking ಇದ್ದಿದ್ದು, ಸುಮಾರು ೧೫೦೦ ಜನ ಇದ್ದಿರಬಹುದು ಆ ಸಮಯದಲ್ಲಿ! QR  code scan ಮಾಡಿದರೆ ಅನೇಕ ರೀತಿಯ beer ಮಾಹಿತಿ ಸಿಗುತ್ತೆ. (ಈ Beer ಇಲ್ಲಿ ಸಿಗುವ Lager)

 ಸುಮಾರು ೨೫-೩೦ ವರ್ಷದ ಹಿಂದೆ, ಬಸವನಗುಡಿ ಅಥವಾ ಮಲ್ಲೇಶ್ವರದ ರಸ್ತೆಗಳಲ್ಲಿ ಒಂಟಿ ಮನೆಗಳು ಇದ್ದವು, ಈಗ  ಎಲ್ಲೆಲ್ಲಿ ನೋಡಿದರೂ ಹಳೇ ಮನೆಗಳನ್ನು ಕೆಡವಿ ೩ ಅಥವಾ ೪ ಅಂತಸ್ತಿನ apartment ಗಳು ಬಂದಿವೆ. ರಸ್ತೆಗಳ ತುಂಬಾ ಮರಳು, ಸಿಮೆಂಟ್ ಇತ್ಯಾದಿ. ಇದು ಸಾಲದು ಅಂತ ಚರಂಡಿ ರಿಪೇರಿ, ಅದರ ಕಲ್ಲಿನ ಚಪ್ಪಡಿಗಳೂ ಸಹ ರಸ್ತೆ ಮಧ್ಯೆ. ಹೀಗಾಗಿ ರಸ್ತೆಯಲ್ಲಿ ನಡೆಯುವುದೇ ಒಂದು ಸಮಸ್ಯೆ, ಗಾಂಧಿ ಬಜಾರ್ ನಂತೂ ಪೂರ್ತಿ ಅಗದು ಬಿಟ್ಟಿದ್ದಾರೆ. ಇದು ಹೇಗೆ ಅನ್ನುವ ಪ್ರಶ್ನೆ ನೀವು ಕೇಳಬಹುದು. ಕಾರಣ, ಇಂಗ್ಲಿಷ್ನನಲ್ಲಿ ಹೇಳಬೇಕಾದರೆ, Lack of Accountability. ಸರಿಯಾದ ಉಸ್ತುವಾರಿ ಸಹ ಕಡಿಮೆ. ಆದರೆ ಸ್ಥಳೀಯ ಜನ ಇದನ್ನ ಸಹಿಸಿಕೊಂಡು ಇದು ತಮ್ಮ ಹಣೆ ಬರಹ ಎಂದು ಸುಮ್ಮನಿರುತ್ತಾರೆ. ನಿಮ್ಮ ಪ್ರತಿನಿಧಿ (ಕಾರ್ಪೊರೇಟರ್ )ಗೆ ದೂರು ಕೊಡಬಹುದಲ್ಲ ಎಂದು ಕೇಳಿದಾಗ ಬಂದ ಉತ್ತರ ಇದು " ಇವರು ಇರುವುದು ನಮಗೆ ಸಹಾಯ ಮಾಡುವುದಕ್ಕೆ ಅಲ್ಲ ತಮ್ಮ ಜೇಬು ತುಂಬಿಸಿಕೊಳ್ಳುವುದಕ್ಕೆ!"

 

ಆದರೆ ನೀವು ಮೈಸೂರಿಗೆ ಹೋಗಿ, ಅಲ್ಲಿನ ವಾತಾವರಣ, ಸೌಂದರ್ಯ ಕಂಡು ಹೆಮ್ಮೆ ಬರುತ್ತೆ. ಸಧ್ಯ ಇಲ್ಲಿ Apartment ಹುಚ್ಚುತನ ಇನ್ನೊ ಬಂದಿಲ್ಲ. ಹಳೆ ಕಟ್ಟಡಗಳನ್ನು ಒಡೆದಿಲ್ಲ, ರಸ್ತೆಯಲ್ಲಿ ಅಷ್ಟೇನೂ ಗಲಾಟೆ ಇಲ್ಲ. ಮುಂದೆ IT ಕಂಪನಿಗಳು ಇಲ್ಲಿ ಬಂದರೆ ಮೈಸೂರಿನ ಗತಿ ಬೆಂಗಳೂರಿನ ಹಾಗೆ ಅನ್ನುವ ನನ್ನ ಅಭಿಪ್ರಾಯ! (ದಯವಿಟ್ಟು Software ನವರು ನನ್ನ ಹತ್ತಿರ ಜಗಳ ಮಾಡಬೇಡಿ, ಇರೋ ವಿಚಾರ ಹೇಳುತ್ತಿದ್ದೇನೆ.)

 ಅಪ್ಪಿ ತಪ್ಪಿ ನೀವು ರಾಜಕೀಯದ ವಿಚಾರ ಎತ್ತಿ ಬೇಡಿ, ನಾನು ಒಮ್ಮೆ ದೇಶದಲ್ಲಿ ಅಸಹಿಸ್ಣುತೆ ( intolerance  ) ಹೆಚ್ಚಾಗಿದೆ ಅನ್ನುವ comment ಮಾಡಿದೆ. ನಮ್ಮ ಕೆಲವು ಸಂಬಂಧಿಕರು ನನ್ನ ಮೇಲೆ serious ಆಗಿ ಜಗಳಕ್ಕೆ ಬಂದರು, ಬಿಬಿಸಿನ ಬೈದರು, ನಿಮ್ಮ ಪತ್ರಿಕೆಗಳು "anti India" ಇನ್ನೂ colonial mind set ಹೋಗಿಲ್ಲ ಇತ್ಯಾದಿ, ಇತ್ಯಾದಿ. ಆದರೆ ಈಗ UK  ಇಂತಹ  ವಿಚಾರದಲ್ಲಿ ಎಷ್ಟು ಮುಂದುವರೆದಿದೆ ಅನ್ನುವ ಮಾಹಿತಿಯನ್ನು ಅವರಿಗೆ ಕೇಳುವ ಕುತೂಹಲ ಅಥವಾ ಉತ್ಸಾಹ ಇರಲಿಲ್ಲ.  

 ಇದ್ದ ಆರು ವಾರದಲ್ಲಿ, ಹೊರಗೆ , ಅಂದರೆ ಬೆಂಗಳೂರು ಬಿಟ್ಟು ಜಾಸ್ತಿ ಅನೇಕ ಕಾರಣಗಳಿಂದ  ಹೋಗಲಿಲ್ಲ. ಆದರೆ ಹೆಸರಘಟ್ಟ ದಲ್ಲಿರುವ Horticulture Research Institute ಗೆ ಭೇಟಿ ಕೊಟ್ಟಿದ್ದು ಅದ್ಭುತವಾಗಿತ್ತು. ನಮ್ಮ ಮನೆಯಲ್ಲಿ ನಮ್ಮಿಬ್ಬರಿಗೂ   ತೋಟಗಾರಿಕೆ ಮೇಲೆ ಆಸಕ್ತಿ ಇದೆ, ಇದರ ಬಗ್ಗೆ ಅನಿವಾಸಿಯಲ್ಲಿ ಹಿಂದೆ ಬರೆದಿದ್ದೇನೆ. ಈ ಸಂಸ್ಥೆ ೧೯೩೮ ರಲ್ಲಿ ಅಂದಿನ ಮೈಸೂರು ಸರ್ಕಾರ ಹಣ್ಣು ಮತ್ತು ತರಕಾರಿ ಸಂಶೋಧನೆಗೆ ಈ ಸಂಸ್ಥೆಯನ್ನು ಹೆಸರಘಟ್ಟದಲ್ಲಿ ಸ್ಥಾಪನೆ ಮಾಡಿದರು. ನಾಲ್ಮಡಿ ಕೃಷ್ಣರಾಜ ಓಡೆಯರ್ ಮಹಾರಾಜರು  ರಾಜ್ಯಕ್ಕೆ ಮಾಡಿದ ಅನೇಕ ಸೇವೆಗಳಲ್ಲಿ ಇದೊಂದು. ಸುಮಾರು ೫೦೦ ಎಕರೆ ವಿಸ್ತರಣೆಯಲ್ಲಿ ಇರುವ ಸಂಸ್ಥೆ ಈಗ ಕೇಂದ್ರ ಸರ್ಕಾರದ Institute of Agricultural  Research (IAR) ಗೆ ಸೇರಿದ್ದು. ಕೆಲವು ಹಣ್ಣುಗಳ ಮತ್ತು  ತರಕಾರಿಯ ಬಗ್ಗೆ ಇಲ್ಲಿನ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಗಿಡಗಳಿಗೆ ಬರುವ ರೋಗ ಮತ್ತು ಅದರ ನಿವಾರಣೆಯ ರೀತಿ ರೈತರಿಗೆ ಮಾಹಿತಿ ಕೊಡುವ ಕೆಲವನ್ನು ಇಲ್ಲಿ ನಡೆಯುತ್ತದೆ. ಇವರ ಸಂಶೋಧನೆ ಅಂತರ ರಾಷ್ಟ್ರೀಯ ಪ್ರಶಂಸೆ ಪಡದಿದೆ ಅನ್ನುವುದು ಹೆಮ್ಮೆಯ ವಿಚಾರ. ಇಲ್ಲೇ ಬೆಳದ ಗಿಡ ಮತ್ತು ಬೀಜಗಳನ್ನ ಖರೀದಿ ಮಾಡಬಹುದು. ಅರ್ಕ (Arka ) ಈ ಸಂಸ್ಥೆಯ ವ್ಯಾಪಾರ ಗುರುತು (Trade Mark ). ಈ ಹೆಸರಿನಲ್ಲಿ ಗಿಡಗಳನ್ನು ಮಾರುವುದರಿಂದ ಜನಗಳಿಗೆ (ರೈತರಿಗೆ) ಇದು ಈ ಸಂಸ್ಥೆಯಿಂದ ಬಂದಿದ್ದು ಅಂಬ ಭರವಸೆ ಬರುತ್ತೆ. ಗುಣಮಟ್ಟದ ಬಗ್ಗೆ( Quality ) ಗೊಂದಲ ಇರುವುದಿಲ್ಲ. IAR ಸೇರಿದ ಸಂಸ್ಥೆಗಳು ಸರ್ಕಾರಕ್ಕೆ ೧೩೦೦೦ ಕೋಟಿ ಆದಾಯ ತರುತ್ತದೆ ಎಂದು ಅಂದಾಜು ಮಾಡಲಾಗಿದೆ. ಇಲ್ಲೇ ಬೆಳೆದ ಗಿಡಗಳ ಬೀಜಗಳನ್ನುಖರೀದಿ ಮಾಡ ಬಹುದು. ೧೫ ರೀತಿಯ Bougainvillea ಮತ್ತು ಗುಲಾಬಿ ಹೂವುಗಳ ತೋಟ ನೋಡುವುದಕ್ಕೆ ಸುಂದರ ವಾಗಿತ್ತು. ಅಲ್ಲಿ ಕೆಲಸ ಮಾಡುವ ಸ್ಥಳೀಯ ಮಹಿಳೆಯಯರು ಹೈಬ್ರಿಡ್ ಮಾವಿನ ಸಸಿಗಳನ್ನು ಮಾಡುವ ಕೌಶಲ್ಯ (Skill ) ವನ್ನು ಮೆಚ್ಚಬೇಕು. IAR ಸೇರಿದ ಸಂಸ್ಥೆಗಳಿಂದ ಸರ್ಕಾರಕ್ಕೆ ೧೩೦೦೦ ಕೋಟಿ ರೂಪಾಯಿ ಆದಾಯ ಎಂದು ಅಂದಾಜು ಮಾಡಲಾಗಿದೆ.

 ಮಾರ್ಚ್ ತಿಂಗಳಲ್ಲಿ ಬಿಸಿಲು ಹೆಚ್ಚು,  ಹೊರಗೆ ಹೋಗುವುದು ಕಷ್ಟ , ಅಲ್ಲದೇ  ಇಲ್ಲಿ ನಮ್ಮ ಮನೆ ಯೋಚನೆ ಬರುವುದು ಸಹಜ, ಆದ್ದರಿಂದ ಆರು ವಾರಕ್ಕೆ ಮೀರಿ ಅಲ್ಲಿರುವುದು ನಮಗೆ ಕಷ್ಟವೇ . ಪುನಃ ಈ ವರ್ಷ ಬೆಂಗಳೂರಿಗೆ ಹೋಗುವ ನಿರೀಕ್ಷೆ ಇದೆ.  


 

Comments