ಅಮ್ಮ ಅಪ್ಪ ಅಂದ್ರೆ ಮಕ್ಕಳಿಗ್ಯಾಕೆ ಅಲರ್ಜಿ ! ?

 ಅಮ್ಮ ಅಪ್ಪ ಅಂದ್ರೆ ಮಕ್ಕಳಿಗ್ಯಾಕೆ ಅಲರ್ಜಿ ! ?

  ಲೇಖಕರು : ಎಂ ಆರ್ ವೆಂಕಟರಾಮಯ್ಯ           



    ಇಂಗ್ಲೀಷಿನ  ‘ಅಲರ್ಜಿ’ ಎಂಬ ಪದಕ್ಕೆ  ದೇಹದ ರೋಗದ ನಿರೋಧಕ ಶಕ್ತಿಯ ಮೇಲೆ  ಪ್ರತಿರೋಧಕ ಪ್ರತಿಕ್ರಿಯೆ ನೀಡುವ ಒಂದು ಪ್ರಕ್ರಿಯೆ ಎಂಬ ಅರ್ಥವಿದೆ. ಇದರ ಪರಿಣಾಮವಾಗಿ ಮೂಗು ಸೋರುವಿಕೆ, ಕಣ್ಣು ಕೆಂಪಾಗುವಿಕೆ, ನವೆ, ಯಾತನೆ ಇತ್ಯಾದಿಗಳಿಂದ ಶರೀರ ಬಾಧೆ ಅನುಭವಿಸುವ ಸ್ಥಿತಿ ತಲುಪುತ್ತದೆ. ಇಷ್ಟೂ ಪ್ರಕ್ರಿಯೆಗಳನ್ನೂ ಒಂದೇ ಪದದಲ್ಲಿ ಹೇಳಬಹುದಾದದ್ದು ಅಂದರೆ ‘ ಯಾತನೆ’ ಅರ್ಥಾತ್ ‘ತಾಳಲಾರದ, ಹೇಳಲಾರದ ಸ್ಥಿತಿ’.  ಈ ತಾಳಲಾರದ, ಹೇಳಲಾರದ ಸ್ಥಿತಿಯನ್ನೇ ಪ್ರಸಕ್ತ ಲೇಖನದ ಶೀರ್ಷಿಕೆಯಲ್ಲಿ ‘ಅಲರ್ಜಿ’ ಎಂ¨ ಹೆಸರಿನಲ್ಲಿ ಬಳಸಲಾಗಿದೆ. 

     ಶೀರ್ಷಿಕೆಯಲ್ಲಿನ  ಪ್ರಶ್ನೆಗೆ  ಮೂರು ವರ್ಗಗಳ ಜನರು ಮೂರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಬಹುದು.  ನಮ್ಮ ಮಕ್ಕಳು ರಾಮ ಲಕ್ಷö್ಮಣರಂತೆ. ಅಮ್ಮ ಅಪ್ಪ ಅಂದರೆ ಅವರಿಗೇನೂ ಅಲರ್ಜಿಯಿಲ್ಲ ಎಂದು ಒಂದು ವರ್ಗದವರೆಂದರೆ, ಹೆತ್ತ ತಪ್ಪಿಗೆ ನಮ್ಮ ಡ್ಯೂಟಿ ನಾವು ಮಾಡ್ತೀವಿ. ಅಮ್ಮ ಅಪ್ಪ ಅವರಿಗೆ ಅಲರ್ಜಿಯಾದರೆ, ಅವರು ನಮ್ಮನ್ನು ಹಚ್ಚಿಕೊಳ್ಳೋದೇ ಬೇಡ ಅನ್ನೋರು ಎರಡನೆಯ ವರ್ಗದವರು. 

ಇದು ಕಲಿಯುಗ ಅಲ್ವೇನ್ರೀ, ಹಿಂದಿನ ಮೂರು ಯುಗಗಳಲ್ಲಿ ಅಂದಿನ ಜನ ಹೇಗೆ ನಡಕೊಂಡ್ರೋ ಅದಕ್ಕೆ ತದ್ವಿರುದ್ಧಾಗಿ ನಡೆದುಕೊಳ್ಳೋರು ಈ ಯುಗದ ಜನ. ಇದು ‘ಯುಗ ಪ್ರಭಾವ. ‘ಅನ್ನ ಇಟ್ಟವರ ಮನೆಗೆ ಕನ್ನ ಹಾಕಿದ, ಮುತ್ತು ಕೊಡೋಳು ಬಂದಾಗ, ತುತ್ತಿಟ್ಟೋಳ್ನ ಮರೆತ ‘ ಎಂಬAತೆ  ಪಕ್ಕಕ್ಕೆ ಹೆಂಡತಿ ಬಂದ ಮೇಲೆ, ಮಗನಿಗೆ  ಸರ್ವಸ್ವವೂ ಅವಳೇ ಅಲ್ವೇ ! ಅಮ್ಮ ಯಾರೋ, ಅಪ್ಪ ಯಾರೋ, ಅವರ ಉದ್ದಾರ ಅವರು ಮಾಡಿಕೊಳ್ತಾರೆಯೇ ಹೊರತು, ಇವರು ಹೆತ್ತವರು, ಸಾಕಿ ಸಲುಹಿದವರು ಅನ್ನೋ ಮುಲಾಜು ಇಟ್ಕೊಂಡ್ ಈಜಾಡ್ತಾರಾ ನಮ್ಮ ಜೊತೇಲೇ ! ಇಲ್ಲ, “ಮಕ್ಕಳು ನಮ್ಮಿಂದ ಹುಟ್ಟಿದವರೇ ವಿನಃ ನಮಗಾಗಿ ಹುಟ್ಟಿದವರಲ್ಲಾ “ ಅಂತಾ ಒಬ್ಬ ಸ್ವಾಮಿಗಳು ಇತ್ತೀಚೆಗೆ ಹೇಳಿದ್ದು ಕೇಳಿಲ್ವಾ ! ಅಮ್ಮ ಅಪ್ಪ ಅಂದರೆ ಅಲರ್ಜಿನೇ ಇಂದಿನ ಬಹಳಷ್ಟು ಜನ ಮಕ್ಕಳಿಗೆ ಎನ್ನುವವರು ಮೂರನೆಯ ವರ್ಗದವರು. 

ಯಾವುದೇ ವಿಚಾರದಲ್ಲಾದರೂ ಪ್ರತಿಯೊಬ್ಬರೂ ತಮ್ಮ ತಮ್ಮದೇ ಆದ ಅಭಿಪ್ರಾಯ ಹೊಂದಲು, ವ್ಯಕ್ತಪಡಿಸಲು ಸ್ವತಂತ್ರರಲ್ಲವೇ ! ಇರಲಿ, ಅವರವರ ಅಭಿಪ್ರಾಯ ಅವರವರಿಗೆ ತೃಪ್ತಿ ತರಲಿ, ನಾನು ಹತ್ತಿರದಿಂದ ಕಂಡ ಮೂರು ಕುಟುಂಬಗಳಲ್ಲಿ, ಅಮ್ಮ- ಅಪ್ಪ-ಮಕ್ಕಳ ನಡುವಿನ ಸಂಬAಧ,  ಹೆತ್ತವರ ಬಗ್ಗೆ ಮಕ್ಕಳ ಅಭಿಪ್ರಾಯ ಹೇಗಿತ್ತು  ?  ಇಲ್ಲಿದೆ ಇದರ ಕಿರು ಚಿತ್ರಣ. 

ಇದು ಕೆಲವು ದಶಕಗಳ ಹಿಂದಿನ ಕತೆ. ಅಮ್ಮ  ಗೃಹಿಣಿ. ಅಪ್ಪ ಸಣ್ಣ ಖಾಸಗಿ ಸಂಸ್ಥೆಯಲ್ಲಿ ಕೆಲಸ. ಸಂಬಳ ೨ ಅಂಕಿಯದು. ಈ ಒಬ್ಬನ ಸಂಬಳದಲ್ಲಿ ತಿನ್ನೋರು ಅಮ್ಮ ಅಪ್ಪ + ೫ ಮಕ್ಕಳು. ಇವರಿಗೆಲ್ಲಾ ಆಹಾರ, ಉಡುಪು, ವಾರ್ಷಿಕ ಹಬ್ಬಗಳು, ಕಾಯಿಲೆಗೆ ಚಿಕಿತ್ಸೆ ಎಲ್ಲವನ್ನೂ  ಈ ಸಂಬಳದಲ್ಲೇ ನಿರ್ವಹಿಸಬೇಕಾಗಿತ್ತು  ಅಪ್ಪ  ತಂದಿದ್ದನ್ನು ಅಮ್ಮ ಬೇಯಿಸಿ ಹಾಕೋದು, ಇದನ್ನು. ತಿಂದ ಮಕ್ಕಳಲ್ಲಿ ಕೆಲವರು ಸರ್ಕಾರಿ ಶಾಲೆಗೆ ಹೋದರೆ, ಮತ್ತೆ ಕೆಲವರು ಶಾಲೆಗೆ ಅಂತ ಹೇಳಿ ೧-೨ ಪುಸ್ತಕ ಕೈಲಿ ಹಿಡಿದು ಆಚೆ ಹೊರಟವರು, ಆ ಬೀದಿ, ಈ ಅಂಗಡಿ, ಅವರಿವರ ಮನೆ, ಹೋಟೆಲ್ ಬಾಗಿಲು ಕಾದು ಅಲ್ಲಿ ಸಿಕ್ಕಿದ್ದು ತಿಂದು ಸಂಜೆಯ ವೇಳೆಗೆ ಮನೆ ಸೇರುವುದು ದಿನದ ಕೆಲಸವಾಗಿತ್ತು. ಏನ್ ಕಲಿತೆಯೋ ಇಂದು ! ಎಂದು ಹೆತ್ತವರು ಕೇಳುವ ಅಭ್ಯಾಸ ಇಟ್ಟಿರಲಿಲ್ಲ. ನಿಮ್ ಹುಡುಗ ಯಾಕೆ ಶಾಲೆಗೆ ರ‍್ತಿಲ್ಲಾ ಅಂತಾ ಶಾಲೆ ಹೆತ್ತವರನ್ನು ಕೇಳ್ತಿರಲಿಲ್ಲ. ಇವರ ದಿನಚರಿ ನೋಡಿದವರು, ಯಾಕೆ ನಿಮ್ಮ ಮಗ ಹೀಗೆ ? ಅಂತ ಪ್ರಶ್ನಿಸಿದರೆ, ಅಯ್ಯೋ ಹುಡುಗ ಮುಂಡೇದು, ಎಲ್ಲೋ ಅಲೀತರ‍್ತವೆ. ಆಡಿಕೊಳ್ಲಲಿ ಬಿಡಿ, ದೊಡ್ಡವರಾದ ಮೇಲೆ ಇದ್ದೇ ಇದೆ ನಮ್ಮ ಹಾಗೆ ದುಡಿಯೋದು ಎನ್ನುತ್ತಾ ದೇÀಶಾವರಿ ನಗು ಬೀರುತ್ತಿದ್ದ ಅಪ್ಪ. 

“ಟೈಮ್ ಅಂಡ್ ಟೈಡ್ ವೈಟ್ಸ್ ಫಾರ್ ನನ್” ಎಂಬಂತೆ ಕಾಲ ಉರುಳಿತು. ಹುಡುಗರು ದೊಡ್ಡವರಾಗಿ ೫—೬ ತರಗತಿಗೆ ಬರುವ ವೇಳೆಗೆ, ‘ಇನ್ನು ಶಾಲೆ ನಮಗಲ್ಲ ‘ಎಂಬ ಮನಸ್ಥಿತಿ ತಲುಪಿದ್ದರು. ಈ ಹೊತ್ತಿಗೆ  ಅಪ್ಪ ಸೇವೆಯಿಂದ ರಿಟೈರ್ ಆದ. ಸಂಬಳ ಇಲ್ಲ, ಪೆನ್‌ಷನ್ ಇಲ್ಲ. ಜೀವನ ನಡೆಸೋದು ಕಷ್ಟ ಆಗಿ ಸ್ಚಲ್ಪ ಕಾಲದಲ್ಲೇ  ತೀರಿಕೊಂಡ. ತಿನ್ನೋಕಿಲ್ಲದೆ ಮಾನಸಿಕ ಸಮತೋಲನ ಕಳೆದುಕೊಂಡ ಒಬ್ಬ ಮಗ ಬೀದಿಗೆ ಬಿದ್ದ. ಅವರಿವರ ಮನೆ, ಅಂಗಡಿ ಹೋಟೆಲ್ ಮುಂದೆ ಬೇಡಿ ಸಿಕ್ಕಿದ್ದು ತಂದು ರಾತ್ರಿ ಮನೆಗೆ ಬಂದು ಮಲಗತಿದ್ದ. ಯಾಕೋ ಹೀಗಾದೆ ಅಂದ್ರೆ, ಇದೆಲ್ಲಾ ನಮ್ಮಪ್ಪನ ತಪ್ಪು. ಸಣ್ಣವನಿದ್ದಾಗ ನನ್ನ ಹೆದರಿಸಿ ವಿದ್ಯೆ ಕಲಿಸಿದ್ದರೆ ನಾನೂ ಎಲ್ಲರ ಹಾಗೆ ಜೀವನ ಮಾಡ್ತಿದ್ದೆ. ಆದರೆ ನಾ ಹೋದ ದಾರಿಗೆ ಅಪ್ಪ ಬಿಟ್ಟು ತನ್ನ ಪಾಡಿಗಿದ್ದ. ಅವನು ಸತ್ತು ಮುಕ್ತನಾದ. ನನಗಿನ್ನೂ ಸಾವು ಬರಲಿಲ್ಲ ಎಂದು ಅಪ್ಪನ ಬಗ್ಗೆ ಅವನಿಗಿದ್ದ ಅಲರ್ಜಿ ಕೋಪ ಹೊರಹಾಕಿದ. 

“ಬಾಲ್ಯದಲಿ ಅಕ್ಕರದಿಂ ವಿದ್ಯೆಗಳ ಅರುಪದಿರ್ದೊಡೆ ಲಕ್ಕ ಧನಮಿರಲ್ ಕೊಂದA” ಎಂದಿರುವ ಪಾಲ್ಕುರಿಕೆ. ಹೀಗೇನೇ, “ಮಾತಾ ಶತ್ರುಃ ಪಿತಾ ವೈರೀ ಬಾಲೋ ಯೇನ ನ ಪಾಠಿತಃ,”ಮಗುವಿಗೆ ವಿದ್ಯಾಭ್ಯಾಸ ಕಲಿಸದ ತಾಯಿ ಶತ್ರು, ತಂದೆ ವೈರಿ ಎಂದಿದೆ ಸುಭಾಷಿತ,À  ಈ ಹಿತ ನುಡಿಗಳೆಲ್ಲವೂ ಪ್ರಸಕ್ತ ಪ್ರಸಂಗದ ಅಮ್ಮ ಅಪ್ಪನನ್ನು ಕುರಿತೇ ಹೇಳಿದಂತೆ ಇದೆಯಲ್ಲವೇ ! 

    ಎರಡನೆ ಪ್ರಸಂಗ. ಕೇಟರಿಂಗ್ ದಂಧೆ ನಡಸ್ತಿದ್ದ ಒಬ್ಬ ಅಪ್ಪ ತಾನು ಒಪ್ಪಿಕೊಂಡಿದ್ದ ‘ಪಾರ್ಟಿ’ಗೆ ಕೊಂಡುಹೋಗಲು ಮೆನು ಎಲ್ಲಾ ಸಿದ್ಧಪಡಿಸಿಟ್ಟಿದ್ದ. ೧-೨ ಗಂಟೆಗಳಲ್ಲಿ ಅವು ಗಳೊಂದಿಗೆ ಆತ ಹೊರಗೆ ಹೊರಡಬೇಕಿತ್ತು. ಇಷ್ಟರಲ್ಲೇ ಈತನ ಮಗ, ಸಣ್ಣವ, ಬಾಯಿ ಚಪಲ ತಡೆಯಲಾರದೆ ಪಾರ್ಟಿಗಾಗಿ ತಂದಿದ್ದ ಬಾಳೆ ಹಣ್ಣಿನ ಗೊನೆಯಿಂದ ಒಂದು ಹಣ್ಣನು ಕಿತ್ತ್ನು ತಿಂದ ಅಪ್ಪನಿಗೆ ಕಾಣದಂತೆ. ಆದರೆ ಇವನ ದುರದೃಷ್ಟ, ಗೊನೆಯಲ್ಲಿ ಒಂದು ಹಣ್ಣಿದ್ದ ಜಾಗ ಖಾಲಿ ಕಂಡ ಅಪ್ಪ,  ಕಣ್ಣು ಕೆಂಪಗೆ ಮಾಡಿ, ಏರು ದ್ವನಿಯಲ್ಲಿ ಯಾರೋ ಇದರ ಹಣ್ಣು ತಿಂದಿದ್ದು ? ತಿಂದವ ತಪ್ಪು ಒಪ್ಪಿಕೊಂಡರೆ ಸರಿ, ಇಲ್ಲದಿದ್ದರೆ ನಾನೇ ಪತ್ತೆ ಹಚ್ಚಿ ಶಿಕ್ಷೆ ವಿಧಿಸ್ತೇನೆ ಎಂದ.. ಸ್ವಲ್ಪ ಕಾಲ ಮನೆಯೆಲ್ಲಾ ಮೌನ ಆವರಿಸಿತ್ತು. ಯಾರೂ ಬಾಯಿ ಬಿಡದಿದ್ದರೆ ನಿಮ್ಮೆಲ್ಲರಿಗೂ ಏಟು ಬೀಳುತ್ತೆ ಎಂದ ಅಪ್ಪ ಎಲ್ಲರ ಮುಖ ನೋಡುತ್ತಾ. ಭಯದಿಂದ ತತ್ತರಿಸಿದ ಆ ಹುಡುಗ, ನಾನೇ ಅಪ್ಪ ತಿಂದಿದ್ದು ತಪ್ಪಾಯಿತು, ಇನ್ಮೇಲೆ ಯಾವೊತ್ತೂ ಹೀಗೆ ಮಾಡೊಲ್ಲ ಎಂದ. ಅಷ್ಟಕ್ಕೆ ಕ್ಷಮಿಸದೆ, ಮಗನಿಗೆ ನಾಲ್ಕೇಟು ಬಿಗಿದು, ಈವತ್ತು ನಿನಗೆ ಊಟ ಇಲ್ಲ ಎಂದು ಮೂಲೆಗೆ ದಬ್ಬಿದ ಆ ಕ್ರೂರಿ ಅಪ್ಪ. ತನ್ನ ಬಗ್ಗೆ ಅಪ್ಪ ತೋರಿದ ಕ್ರೌರ್ಯ, ತನಗೆ ಮಾಡಿದ ಅವಮಾನ ಎಲ್ಲದರಿಂದ ರೋಸಿದ ಆ ಹುಡುಗ ನಂತರದ ಕೆಲವೇ ದಿನಗಳಲ್ಲಿ  ತನ್ನ ಅನ್ನ ಹುಡುಕುತ್ತಾ. ಇದ್ದ ಊರೇ ಬಿಟ್ಟು ಹೊರಟುಹೋದ. ಮುಂದೆ, ಒಂದು ದಿನ ಹುಡುಗನ ಗುರುತು ಕಂಡವರು ಯಾಕಪ್ಪಾ,  ಹೆತ್ತರ‍್ನೆಲ್ಲಾ ಬಿಟ್ಟು ಅವರನ್ನು ನೋಯಿಸಿದೆಯಲ್ಲಾ ಎಂದಾಗ, ಆ ಪರಿಚಿತನೊಡನೆ ಅಂದ ಹುಡುಗ, ಅಂದು ಒಂದೇ ಒಂದು ಹಣ್ಣು ತಿಂದಿದ್ದಕೆ ನನಗೆ ಕ್ರೂರ ಶಿಕ್ಷೆ ಕೊಟ್ಟವನನ್ನು ಅಪ್ಪ ಅನ್ಬೇಕೇನ್ರಿ ! ಅಂಥಹವನ ಹತ್ತಿರ ಇರೋಕಿಂತಾ ಹುಲಿ ಹತ್ತಿರವಾದರೂ ಬಾಳಬಹುದು ಅದನ್ನು ಪಳಗಿಸಿ ಎಂದ ಅಪ್ಪನ ಬಗ್ಗೆ ಅಲರ್ಜಿ ಬೆಳೆಸಿಕೊಂಡಿದ್ದ ಆ ಮಗ. 

ಈ ಮೂರನೆಯ ಪ್ರಸಂಗದಲ್ಲಿ ಅಮ್ಮ ಅಪ್ಪ ಇಬ್ಬರೂ ವಿದ್ಯಾವಂತರು, ಶಿಕ್ಷಕರು. ಮಕ್ಕಳೆಂದರೆ ತಮ್ಮ ಪ್ರಾಣಕ್ಕಿಂತಲೂ ಹೆಚ್ಚು ಪ್ರೇಮ. ಇವರು ತಮಗಿಂತಲೂ ಹೆಚ್ಚು ವಿದ್ಯಾವಂತರೂ ಬುದ್ಧಿಶಾಲಿಗಳೂ ಆಗಿ ಉನ್ನತ ಹುದ್ದೆ, ಲಕ್ಷಗಳ ಸಂಬಳ, ಸಮಾಜದಲ್ಲಿ ಗೌರವ, ಘನತೆ ಮಾನ್ಯತೆ ಗಳಿಸಿ ಬೆಳಗಬೇಕು ಎಂಬೆಲ್ಲಾ ಬೆಟ್ಟದಷ್ಟು ಆಶೆ ಹೊತ್ತವರು. ಇವೆಲ್ಲನ್ನೂ ತಮ್ಮ ಮಕ್ಕಳೊಂದಿಗೆ ಆಗಾಗ್ಗೆ ಪ್ರಸ್ತಾವಿಸಿ, ನಿಮಗೆ ಬೇಕಾದ್ದೆಲ್ಲಾ ಒದಗಿಸ್ತೀವಿ, ನೀವು ನಮ್ಮೀ ಆಸೆಗಳನ್ನು ಪೂರೈಸಬೇಕು ಎನ್ನುತ್ತಿದ್ದರು. ಇದಕ್ಕಾಗಿ ಅಂಗ್ಲ ಮಾಧ್ಯಮದ ಶಾಲೆಗೆ ದಾಖಲಾತಿ ಆಯಿತು. ದಿನವೂ ಬೆಳಗ್ಗೆ ಶಾಲೆಗೆ ಹೊರಟರೆ ಮನೆಗೆ ಬರುವುದು ಮಧ್ಯಾನ್ಹ ದಾಟಿ ಸಂಜೆ ಪ್ರವೇಶಿಸುತ್ತಿರು ವಾಗ. ಒಂದಷ್ಟು ಉಪಹಾರ ಸೇವನೆ, ಕೂಡಲೇ ಪಾಠದ ಮನೆಗೆ ದೌಡು,  ಮತ್ತೆ ಮನೆಗೆ ಹಿಂತಿರುಗುವ ವೇಳೆಗೆ ರಾತ್ರಿಯಾಗಿದ್ದು  ಶಾಲಾ ಹೋಂ ವರ್ಕ್ ಮುಗಿಸಿ ಮರು ದಿನ ಶಾಲೆಗೆ ಹೊರಡಲು ಸಿದ್ಧತೆ ಮಾಡಿಕೊಳ್ಳುವಿಕೆ, ರಾತ್ರಿ ಊಟ ಮುಗಿಸಿ ‘ಅರ್ಲಿ ಟು ಬೆಡ್, ಅರ್ಲಿ ಟು ರೈಸ್ ‘  ಮಂತ್ರ ಜಪಿಸುತ್ತಾ ನಿದ್ರೆಗೆ ಜಾರುವಿಕೆ, ಇದು  ಈ ದಂಪತಿಗಳ ಮಕ್ಕಳ ದಿನಚರಿ ಯಾಗಿತ್ತು. ಹೀಗಾಗಿ ಇತರೇ ಹುಡುಗರಂತೆ ಆಟ ಓಟ ಗೆಳೆಯರೊಡನೆ ತಿರುಗಾಟಕ್ಕೆ ತಮ್ಮೀ ಮಕ್ಕಳಿಗೆ ಅವಕಾಶವೇ ಕೊಡುತ್ತಿರಲಿಲ್ಲ. ಈ ಹೆತ್ತವರು. ಸಮಯ ವ್ಯರ್ಥ ಮಾಡದೆ ಕಲಿಬೇಕಪ್ಪಾ, ಮುಂದೆ ಇದ್ದೇ ಇದೆ ಆಟ, ಓಡಾಟ ಎನ್ನುತ್ತಾ ಶಾಲೆಯಲ್ಲಿ, ಪಾಠದÀ ಮನೆಯಲ್ಲಿ, ಕಲಿಕೆ, ಕಲಿಕೆ ಕಲಿಕೆ ಎಂಬ ಮಂತ್ರ ಜಪ ಮಾಡಿಸಿದರು ಮಕ್ಕಳಿಂದ. ಪಾಪ, ಅಮ್ಮ ಅಪ್ಪನ ಕೆಂಗಣ್ಣು, ಸಿಡುಕಿನ ಮಾತುಗಳಿಗೆ ಹೆದರಿದ ಆ  ಮಕ್ಕಳು, ಸದಾ  ತಮ್ಮ ಕಣ್ಗಳನ್ನು ಪುಸ್ತಕದಿಂದ ಆಚೆಗೆ ಹೊರಳಿಸ ದಾದರು. ಈ ವಯಸ್ಸಿನ ಇತರೆ ಹುಡಗರಂತೆ  ಯಾವ ಪ್ರವೃತ್ತಿಯನ್ನೂ ಬೆಳೆಸಿಕೊಳ್ಳಲು ಬಿಡದೆ, ಪುಸ್ತಕದ ಹುಳುಗಳು, ಅದೇ ಇಂಗ್ಲಿಷಿನ ‘ಬುಕ್ ವರ್ಮ್ಸ್’ನಂತೆ ತಮ್ಮ ಮಕ್ಕಳನ್ನು ತಯಾರುಮಾಡಿದರು. 

ವಾರದ ರಜಾ ದಿನ, ಹಬ್ಬ ಹರಿದಿನ ಅವರಿವರ ಜಯಂತಿಗೆ ಶಾಲೆಗೆ, ಪಾಠದ ಮನೆಗೆ ರಜಾ ಇದ್ದ ದಿನ, ಅಮ್ಮನಿÀಂದಲೋ ಅಪ್ಪನಿಂದಲೋ ಮನೆಯಲ್ಲೇ ಟೆಸ್ಟ್, ಅದರ ಎವೇಲ್ಯು ಯೇಶನ್. ಇಷ್ಟರಲ್ಲಿ ಆ ದಿನ ಕಳೆದಂತೆ. ಮತ್ತೆ ಮರು ದಿನದ ಶಾಲೆಗೆ ಸಿದ್ಧತೆ, ಹೀಗೆ ಈ ಮಕ್ಕಳು ಕಲಿಯುವ ಬೊಂಬೆಗಳಾದರು. ಅಮ್ಮ ಅಪ್ಪನ ಇಚ್ಚೆ ಪೂರೈಸುವ ಸಾಧನಗಳಾದರು. ಏನ್ ನಿಮ್ಮ ಧ್ಯೇಯ ! ಎಂದು ಕೇಳಿದವರಿಗೆ, ‘ಓದು, ಓದು ಓದು’ ಇದೇ ನಮ್ಮ ಮೂಲ ಮಂತ್ರ ಎನ್ನುವಂತಾಯಿತು ಇವರು  

ಈ ಹುಡುಗರೂ ಬುದ್ಧಿವಂತರು. ಪ್ರತಿ ತರಗತಿಯಲ್ಲೂ ಉನ್ನತ ಅಂಕಗಳು ಸ್ಥಾನ ಗಳಿಸಿ ಇಂಜಿನಿಯರ್‌ಗಳಾದರು. ಇವರ ಕಲಿಕೆಗೆ ತಕ್ಕಂತಹಾ ಉದ್ಯೋಗ ಭಾರತದಲ್ಲೇ ದೊರೆಯಿತು. ಮಕ್ಕಳು ತಾಯ್ನಾಡಿನಲ್ಲೇ ಸೇವೆ ಸಲ್ಲಿಸಲು ಇಚ್ಛಿಸಿದರೂ, ‘ಏ ಇಂಡಿಯಾದಲ್ಲೇನಿದೆ ಮಣ್ಣು, ಒಂದಷ್ಟು ವರ್ಷಗಳು ಫಾರಿನ್‌ನಲ್ಲಿ ಕೆಲಸ ಮಾಡಿದರೆ ಅದಕ್ಕೆ ವೇಲ್ಯು, ಫಾರಿನ್ ರಿಟರ್ನ್ಡ್ ಅಂತ ‘ ಎಂದು ಮಕ್ಕಳನ್ನು ವಿದೇಶಕ್ಕೂ ರವಾನಿಸಿದರು ಈ ಅಪ್ಪ ಅಮ್ಮ. 

ಎಲ್ಲಕ್ಕೂ ಒಂದು ಮಿತಿಯಿರುತ್ತದೆ. ‘ಅತಿ ಆಸೆ ಗತಿ ಕೇಡು’ ಎಂಬ ಗಾದೆಯೂ ಚಾಲ್ತಿ ಯಲ್ಲಿದೆ. ಸಹನೆಯ ಕಟ್ಟೆ ಒಡೆದಾಗ ಏನಾಗುತ್ತದೆ ? ಅದೇ ಆಯ್ತು ಈ ಪ್ರಸಂಗದಲ್ಲೂ. ಹೆತ್ತವರ ಆಸೆ ಪೂರೈಸಲು ವಿದೇಶಕ್ಕೆ ಬಂದ ಈ ಯುವಕರು” ಇನ್ನು ಈ ಜನ್ಮದಲ್ಲಿ ಮತ್ತೆ ಇಂಡಿಯಾಗೆ ಕಾಲಿಡೊಲ್ಲ, ಮತ್ತೆ ನಮ್ಮ ಅಮ್ಮ ಅಪ್ಪನ ಕೈಲಿ ಆಡಿಸಿಕೊಳ್ಳುವ ಕೀಲು ಬೊಂಬೆ ಗಳಾಗೊಲ್ಲ” ಎಂದು ನಿರ್ಧರಿಸಿದರು. 

    ಆದರೂ,  ಹೊತ್ತು ಹೆತ್ತವರು, ಸಾಕಿ ಸಲುಹಿದವರು. ಇವರನ್ನು ಕಷ್ಟಕ್ಕೆ  ಸಿಲುಕಿಸಬಾರದು ಎನಿಸಿ, ಅಮ್ಮ ಅಪ್ಪನ ಸುಖ ಜೀವನಕ್ಕೆ ಬೇಕಾದ್ದೆಲ್ಲವನ್ನೂ ಒದಗಿಸಿ, ಎಷ್ಟೋ ವರ್ಷಗಳಾದ ನಂತರ ತಮಗೆ ದೊರೆತಿರುವ ಸ್ವತಂತ್ರವನ್ನು ಸವಿಯುತ್ತಾ ಶಾಂತಿ ಸಮಾಧಾನವನ್ನು ಪಡೆದರು. ತಮಗೆ ಇಷ್ಟವಾದ ಹುಡುಗಿಯನ್ನು ಮದುವೆಯಾಗಿ ಮಕ್ಕಳನ್ನೂ ಪಡೆದು ವಿದೇಶದಲ್ಲೇ ನೆಲೆಯೂರಿದರು ಶಾಶ್ಚತವಾಗಿ.

ಇಂಡಿಯಾಗೆ ಬೇಗ ಹಿಂತಿರುಗಿ ತಮ್ಮ ಜೊತೆ ಮಕ್ಕಳು ಸೊಸೆಯರು ಮೊಮ್ಮಕ್ಕಳು ರ‍್ತಾರೆ ಎಂದು ಊಹಿಸಿದ್ದ ಅಮ್ಮ ಅಪ್ಪ ನಿರಾಸೆಯಿಂದ ಕುಂದಿದರು. ತಮ್ಮ ಬಗ್ಗೆ ಇಷ್ಟು ನಿರ್ಲಕ್ಷö್ಯವೇ ಮಕ್ಕಳಿಗೆ ! ಎಂಬ ಬೇಸರವೂ ಆಯಿತು. ತಮ್ಮ, ಮಕ್ಕಳ ಹಿತೈಷಿಯೊಬ್ಬರ ಮೂಲಕ ಮಕ್ಕಳಿಗೆ ತಿಳಿಹೇಳಿಸುವ ಪ್ರಯತ್ನ ಮಾಡಿದರು. ಆಗ ಹೊರಬಿತ್ತು ಅಮ್ಮ ಅಪ್ಪ ಎಂದರೆ ಅವರಿಗ್ಯಾಕೆ ಅಲರ್ಜಿ ! ಎಂಬ ರಹಸ್ಯ. “ನೋಡಿ ಅಂಕಲ್, ಅಮ್ಮ ಅಪ್ಪ ನಮ್ಮನ್ನು ಬಂಗಾರದ ಪಂಜರ ದಲ್ಲಿಟ್ಟು ಸಾಕಿದರು, ನಿಜ. ಆದರೆ ಅವರು ನಮ್ಮನ್ನು ಮಕ್ಕಳನ್ನಾಗಿ ಬೆಳೆೆಸಲಿಲ್ಲ. ಪ್ರೀತಿಯ ಮಾತಾಡಲಿಲ್ಲ. ಹತ್ತಿರ ಕರೆದು ಮುದ್ದಿಸಲಿಲ್ಲ. ಕಥೆ ಹೇಳಲಿಲ್ಲ. ಹುಡುಗರಂತೆ ಸ್ವತಂತ್ರವಾಗಿ ಉಸಿರಾಡಲೂ ಬಿಡಲಿಲ್ಲ. ಬಾಲ್ಯದಲ್ಲಿ  ನಮಗೆ ಸಿಗಬೇಕಾಗಿದ್ದ ಸ್ವಾತಂತ್ರ,  ಆಟ  ಓಟ ನೆಗೆತ ಜಿಗಿತ ಸ್ನೇಹಿತರ ಒಡನಾಟ, ಸಂತಸ ಇವೆಲ್ಲರಿಂದಲೂ ನಮ್ಮನ್ನು ವಂಚಿತರನ್ನಾಗಿ ಮಾಡಿದರು ಹೆತ್ತವರು. ನಮಗಾಗಿ ಶ್ರಮವಹಿಸಿ ವಿದ್ಯೆ ಬುದ್ದಿ ಕಲಿಸಿ ನಮ್ಮನ್ನು ಬೆಳೆಸಿ, ಕೇವಲ ಕಲಿಯುವ ಯಂತ್ರಗಳನ್ನಾಗಿ ಮಾಡಿಟ್ಟರು. ಇದು ನಮ್ಮ ಅವರ ನಡುವಿನ ಸಂಬAಧ, ಹೀಗಾಗಿ, ಇಂದು ಅಮ್ಮ ಅಪ್ಪನ ಸಂಪರ್ಕ, ಅವರ ಜೊತೇಲಿ ಇರಬೇಕು ಅಂತ ನಮಗೆ  ಅನ್ನಿಸೋದೇ ಇಲ್ಲ. 


   ಇಷ್ಟಕ್ಕೂ ನಾವು ಅವರೊಂದಿಗೆ ಮಾತಾಡೋದೇನಿದೆ ! ನಮಗೆ ಬಾಲ್ಯದಲ್ಲಿ ಸುಖ ಸಂತಸ ಆನಂದ ಅವರಿಂದ ನಮಗೆ  ಸಿಗದಾದರೂ, ಅವರು ಕಷ್ಟ ಪಡದೆ ಸುಖವಾಗಿರಲಿ ಎಂದು ಹಾರೈಸ್ತೇವೆ, ಅವರಿಗಾಗಿ ಏನೂ ಮಾಡಲು ಸಿದ್ದ.  ಆದರೆ ನಮ್ಮನ್ನು ನಮ್ಮ ಪಾಡಿಗೆ ನೆಮ್ಮದಿ ಯಿಂದ ದೂರವಿರಲು ಅವರು ಬಿಟ್ಟರೆ ಸಾಕು ಎಂದರಾ ವಯಸ್ಕ ಮಕ್ಕಳು. 

     ಇಷ್ಟು ಹೊತ್ತಿಗೆ  ಗೊತ್ತಾಗಿರಬೇಕಲ್ವೇ  ಅಮ್ಮ ಅಪ್ಪಾ ಅಂದ್ರೆ ಮಕ್ಕಳಿಗ್ಯಾಕಿರುತ್ತೆ ಅಲರ್ಜಿ  ಅಂತಾ !   

                           ***********************

 

Comments

  1. ಕಾಲಕ್ಕೆ ತಕ್ಕ ಲೇಖನ ಮಕ್ಕಳು ಇದನ್ನು ಓದುವಂತಾಗಬೇಕು

    ReplyDelete

Post a Comment