ಉಡ್ಡಾಣ

 ಉಡ್ಡಾಣ 

ಲೇಖನ  - ಹೇಮಾ ಸದಾನಂದ್  ಅಮೀನ್, ಮುಂಬಯಿ 

  ಎಡೆಬಿಡದೆ ಅಳುವ ಆ ಮಗುವಿನ  ತಾಯಿಯ ಬೇಜವಾಬ್ದಾರಿತನವನ್ನು ನೋಡಿ ಯಾರೂ ಸಿಡಿಮಿಡಿಗೊಳ್ಳುವದು ಸಹಜವೇ. ಆದರೆ ಇದು  ಫಸ್ಟ್ ಕ್ಲಾಸ್ ಕಂಪಾರ್ಟ್ಮೆಂಟಿನಲ್ಲಿ  ಆಗಿರುವುದರಿಂದ ಕೇವಲ ಮುಖ ಸಿಂಡರಿಸಿ, “  ತಾನು ಡಿಸ್ಟರ್ಬ್ ಆಗಿದ್ದೇನೆ. ದಯಮಾಡಿ ನಿಮ್ಮ ಸಮಸ್ಯೆಯನ್ನು  ಆದಷ್ಟು ಬೇಗ ಬಗೆಹರಿಸಿಕೊಳ್ಳಿ “ ಎಂದು ವಕ್ರ ದೃಷ್ಟಿಯಿಂದಲೇ ಎಚ್ಚರಿಕೆ ಕೊಡುವ ಮನಸ್ಥಿತಿಯುಳ್ಳವರ ಮಧ್ಯ ಮೂರೂ ತಿಂಗಳ ಗರ್ಭಿಣಿಯಾಗಿದ್ದ  ಸಮೀಕ್ಷಳ ಮನಸ್ಸು  ತೀರ ವಿಚಲಿತಗೊಂಡಿತ್ತು. ಆಕೆ ಆ ತಾಯಿ ಮಗುವನ್ನು ಒಂದೇ ಸವನೆ ನೋಡುತ್ತಾ ಇದ್ದಳು. ಮಗು ಅಳುತ್ತಿದ್ದರೆ ಅದನ್ನು ಪುಸಲಾಯಿಸಿ ಸಮಾಧಾನಪಡಿಸುವುದನ್ನು ಬಿಟ್ಟು ಯಾವುದೋ ಲೋಕದಲ್ಲಿ ಮಗ್ಮಳಾಗಿರುವ ಆಕೆಯ ನಿಸ್ತೇಜ ಕಣ್ಣುಗಳು ಒಂದು ಕಥೆಯನ್ನು ಹೇಳಿದರೆ ಆಕೆಯ ಸ್ಟ್ರೇಟ್ನಿಂಗ್ ಮಾಡಿ ಚದುರಿದ ಹೆರಳು, ಮ್ಯನಿಕೂರ್ ಪೆಡಿಕ್ಯೂರ್ ಮಾಡಿ ಬಣ್ಣ  ಮಾಸುತ್ತಾ ಬಂದಿರುವ ನೀಲ ಬೆರಳುಗಳು , ಕೆನ್ನೆಯ ಸುತ್ತ ಹೊಂಬಣ್ಣದ ರೋಮಗಳಿಂದ ಮಸುಕು ಮಸುಕಾಗಿ   ಹೊಳೆಯುತ್ತಿರುವ ಮುಖ.  ಸೀರೆಯೂ ಅಷ್ಟೇ, ಪ್ರಿಂಟೆಡ್ ರವಕೆಗೆ ತೆಳುವಾದ ಪ್ಲೇನ್ ಹಸಿರು ಬಣ್ಣದಾಗಿದ್ದು ಆಕೆ  ನೋಡಲು ಒಂಥರ ಅಪ್ಸರೆ ಅಲ್ಲವಾದರೂ ತೆಳುವಾಗಿ ಚೆಂದವಾಗಿದ್ದಳು.  

ಅಳುತ್ತಿರುವ ಮಗುವನು ಮುದ್ದಾಡಿ ಮುಖ ಒರೆಸುವುದಾಗಲಿ, ನೀರು ಕುಡಿಸುವುದಾಗಲಿ ಏನೂ ಮಾಡದೇ ತನ್ನದೇ ಗುಂಗಿನಲ್ಲಿರುವಾಗ ಸಮೀಕ್ಷಾಳ ಅನುಮಾನದ ಗರಿ ಶಿಥಿಲಗೊಂಡಿತು .  “ ಈ ಮಗು ಅವಳದ್ದೇ ಆಗಿದ್ದರೆ ಆಕೆ ಇಷ್ಟು ಅಳುತ್ತಿರುವ ಮಗುವನ್ನು ನೋಡಿಯೂ ಸುಮ್ಮನಿರಲು ಸಾಧ್ಯವೇ ಇಲ್ಲ .  ಬಹುಶಃ ಯಾರದ್ದೋ ಮಗುವನ್ನು ಕದ್ದು ತಂದಿರಬಹುದೇ?  ಮತ್ತೊಮ್ಮೆ ಛೆ!   ಈಗೀಗ ತಲೆಯಲ್ಲಿ ವಾಟ್ಸ್ ಆಪ್ಗಳಲ್ಲಿ ಓಡಾಡುವ ಸಂದೇಶಗಳೇ ಇಂತಹ ಅನುಮಾನದ ಹುಳುಗಳು”  ಎಂದು ತನ್ನಲ್ಲಿಯೇ ನಕ್ಕು ಅಕ್ಕಪಕ್ಕ ನೋಡಿದಳು . ಎಲ್ಲರೂ ಕಿವಿಗೆ ಇಯರ್ ಫೋನ್ ವಾಯರ್ ಸಿಕ್ಕಿ  ಭ್ರಮಾಲೋಕದಲ್ಲಿ ಸಂಚರಿಸುತ್ತಿದ್ದರು. 



ಇಂತಹ  ಹೊಳೆಯುತ್ತಿರುವ ನಿರ್ಭಾವುಕ ಮುಖಗಳೊಂದಿಗೆ ಪಯಣಿಸುತ್ತಿರುವ ಸಮೀಕ್ಷಗೆ ಸಂತೋಷ, ಘನತೆಯ ವಿಷಯಕ್ಕಿಂತ  ಬೇಜಾರಾದದ್ದೇ ಜಾಸ್ತಿ.  ಕಳೆದ ಆರು ವಾರಗಳಿಂದ ಸಿ. ಎಸ್. ಟಿ.   ಲೋಕಲಿನ  ಫಸ್ಟ್ ಕ್ಲಾಸ್ ಕಂಪಾರ್ಟ್ಮೆಂಟನಲ್ಲಿ ದಿನಾ ನೋಡುತ್ತಿರುವ ಪರಿಚಿತ ಮುಖಗಳೇ,  ಆದರೂ ಯಾರೂ ಒಬ್ಬರನೊಬ್ಬರು ಒಂದು ಕಿರುನಗೆ ಚೆಲ್ಲಿ ಮಾತಾನಾಡಿಸುವ ಸೌಜನ್ಯ ಬಿಡಿ ಪಕ್ಕದಲಿ ಸೀಟು ಖಾಲಿಯಿದ್ದರೂ , ಸರಿದು ಕೂರಲು ತುಟಿಬಿಚ್ಚದ ಮೂಕ ಜಗತ್ತೆಂದು ಸಮೀಕ್ಷಳ ಸಮೀಕ್ಷೆಯಾಗಿತ್ತು. ಇದೇ  ದ್ವಿತೀಯ  ದರ್ಜೆಯಲ್ಲಾಗಿದ್ದರೆ , ತನ್ನ ಪೂರ್ತಿ ಶಕ್ತಿಯ ಬಂಡವಾಳದಿಂದ ಒಳನುಗ್ಗಿ ಸೀಟಲ್ಲಿ ಕೂತವರು ತಮ್ಮ ಮನೆಯವರೇ ಎನ್ನುವಂತೆ “ ಎಲ್ಲಿ ಇಳಿಯಬೇಕೆಂದು ಕೇಳಿ ತನ್ನ ಆರಾಮಿನ ಸೌಕರ್ಯ ಮಾಡಿಕೊಳ್ಳುವುದಷ್ಟೇ ಅಲ್ಲದೇ ಇತರರಿಗೂ ಖಾಲಿ ಸೀಟುಗಳಿದ್ದರೆ ಕರೆದು ಕೂರಿಸುವ ಮನೋಭಾವ. ಯಾತ್ರಿಗಳೇ ಅಲ್ಲ , ಅಲ್ಲಿ ವ್ಯಾಪಾರ ಮಾಡುತ್ತಿರುವ ಹೆಣ್ಣು ಮಕ್ಕಳು ನಮ್ಮವರೇ ಆಗುತ್ತಾರೆ. ಒಬ್ಬರ ಮಡಿಲಲ್ಲಿಟ್ಟ ಕ್ಲಿಪ್ಪುಗಳ ಬಿಂದಿಗಳ ಟ್ರೇಗಳಿಗೆ ಒಂದೇ ಮನೆಯವರಂತೆ ಹತ್ತಾರು ಮಂದಿ ಮುಗಿಬಿದ್ದು ಚರ್ಚೆ ಮಾಡಿ ಖರೀದಿಸಿದ ಸಣ್ಣ ವಸ್ತುಗಳಲ್ಲಿಯೂ ದೊಡ್ಡ ಖುಷಿ ಪಡುತ್ತಾರೆ. ಇದೆಲ್ಲಾ ರಘುನಂದನನಿಂದಾಗಿಯೇ. “  ಮಗುವಿನ ಸುರಕ್ಷೆಯ ದೃಷ್ಟಿಯಿಂದ’   ಎಂದು ಫಸ್ಟ್ ಕ್ಲಾಸಿನ ಪಾಸ್ ತಂದು ಸಮೀಕ್ಷಳ ಕೈಯಲಿಟ್ಟಾಗ ಒಪ್ಪದೆ ಬೇರೆ ದಾರಿ ಇರಲಿಲ್ಲ. 

ಈಗ ಈ ಮಗುವಿನ ಅಳಲು ಹೃದಯಕ್ಕೆ ಅಪ್ಪಳಿಸಿ  ಚಿಗುರುತ್ತಿರುವ ಆಕೆಯ ತಾಯ್ತನವೇ ಇದ್ದಿದ್ದೂ ಅನುಮಾನದತ್ತ ಮುಖ ಮಾಡಿ,  ಆ ತಾಯಿ ಮಗುವಿನ ಪೋಟೋ ಕ್ಲಿಕಿಸಿ ರಘುನಂದನನಿಗೆ ಕಳುಹಿಸುವಂತೆ ಮಾಡಿತ್ತು. ಆ ಸಂದೇಶವನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಪರಿಗಣಿಸುವುದಕ್ಕಿಂತ ವಿಷಯವನ್ನು ನಿರ್ಲಕ್ಷಿಸಿ  ಸಮೀಕ್ಷಳ ಭಾವನೆಗಳನ್ನು ನೋಯಿಸಬಾರದೆಂದು,  ಅವಳಿಂದ ಪೂರ್ತಿ ಮಾಹಿತಿ ಪಡೆದು,  ರೇಲ್ವೆ ಪೋಲಿಸರಿಗೆ ದೂರು ಸಲ್ಲಿಸಿ, ಅವರು ವಿಕ್ರೋಲಿ ಸ್ಟೇಷನಿನಲ್ಲಿರೈಲು ಹತ್ತಿ ಮುಂದಿನ ಸ್ಟೇಷನಿನಲ್ಲಿ ಅವಳೊಂದಿಗೆ ಇಳಿಯುತ್ತಾರೆ.”  ಎಂದು ಸಂದೇಶ ಕಳುಹಿಸಿದ, ಪೊಲೀಸರಿಗೆ  ನಿನ್ನ ಹೆಸರು ಹೇಳದೆ ದೂರು ನೀಡಿರುವೆನು ಆದ್ದರಿಂದ  ಇವೆಲ್ಲಾ ಗೊಂದಲಗಳಲ್ಲಿ  ಬೀಳದೇ ನಿನ್ನ ಪಾಡಿಗೆ ನೀನು ಆಫೀಸಿಗೆ ಹೋಗು ಎಂದೂ ಒತ್ತೊತ್ತಿ ಹೇಳಿದ್ದ. 

ಸರಿ ಎಂದು ಒಪ್ಪಿದ್ದವಳನ್ನು ಆ ಅನುಮಾನಸ್ಥ ತಾಯಿ ಮಗುವಿನ ಹಿಂದೆ ಹೋಗಲು ಕಾದಿದ್ದು ಮನ ಮಾಡಿದ್ದು ಯಾರು ಎಂದಾಗ, ಅವಳ ಸೆಕೆಂಡ್ ಕ್ಲಾಸ್ ಮೆಂಟಾಲಿಟಿಯೋ, ಅವಳ ತಾಯ್ತನವೋ, ಅಲ್ಲ ಅವಳಲ್ಲಿರುವ ಹೆಣ್ತನವೋ ಗೊತ್ತಿಲ್ಲ?   ಆ ತಾಯಿ ಮಾತ್ರ ಎಷ್ಟೂ ಕಾಡಿ ಬೇಡಿದರೂ ಲೇಡಿ ಕ್ವಾನ್ಸ್ಟೇಬಲಿನ ಕರುಣೆ ಕರಗಲಿಲ್ಲ. ಅದು ಅವರ ವೃತ್ತಿಗೂ ಸರಿ ಬರುವುದಿಲ್ಲ ಅನ್ನಿ.      ಘಾಟ್ಕೊಪರ್ ಪ್ಲಾರ್ಟಫಾರ್ಮಿನ ಮಧ್ಯದಲ್ಲಿದ್ದ  ವಿಚಾರಣೆ, ಕೊಠಡಿಗೆ ಆಕೆಯ ಕೈ ಎಳೆದು ತರುತ್ತಿದ್ದಂತೆ ನಿಬಿಡ ಜನರ ಕಣ್ಣಿಗೆ ಕುತೂಹಲದ ತುತ್ತಾಗಿದ್ದಳು. ಮಗುವನ್ನು ಎದೆಗಾತು, “ ನಾನು ಮಗು ಕದ್ದಿಲ್ಲ ಸಾರ್ ” ಎಂದೇ ಗೋಗರೆಯುತ್ತಾ ಪೋಲಿಸ್ ಅಧಿಕಾರಿಯ ಮುಂದೆ ಕೂತವಳ ಬಾಯಿ ಒಣಗಿ ಕಣ್ಣು ತೇವವಾಗಿತ್ತು.  ಸಮೀಕ್ಷ ತಾನಾಗಿಯೇ ಮುಂದು ಬಂದು “ ನಾನೇ  ದೂರು ಕೊಟ್ಟರುವುದು. ಮಗು ಎಷ್ಟೊತ್ತಿನಿಂದ ಅಳುತ್ತಿದ್ದರೂ  ಪ್ರತಿಕ್ರಿಯೆಯೇ ಇಲ್ಲದೆ ತನ್ನಳೊಳಗೆ ಗುಂಗಿನಲ್ಲಿರುವುದು, ಅ ಮಗುವೂ ತಾಯಿಯ ಮಡಿಲಲ್ಲಿ ಅಪರಿಚಿತರ ಕೈಯಲ್ಲಿರುವಂತೆ ಚಡಪಡಿಸುತ್ತಿರುವುದನ್ನು  ನೋಡಿ ಅನುಮಾನ ಬಂತು ಸರ್ ಎಂದಳು. 

“ಡಾಟ್ಸ್  ಗುಡ್ ಯು ಡನ್ ಆ ಗುಡ್ ಜಾಬ್ “  ಎಂದು ಅವಳನ್ನೂ ಕೂರಿಸಿ  ಮಗುವಿಗೂ ನೀರು ಕುಡಿಸಲು ಹೇಳಿ ಆ ತಾಯಿಗೆ  ಕುಡಿಯಲು ನೀರು ಕೊಟ್ಟು,  ವಿಚಾರಣೆಗೆ  ಇಳಿದರು. ವಿಚಾರಣೆ ಗಡುಸಾದಂತೆ, 

 ಅವಳೊಳಗಿನ ಮೌನ ಈ ಅನಿರೀಕ್ಷಿತ  ಪ್ರಶ್ನೆಗಳನ್ನು  ಕೇಳಿ ಕೇಳಿ  ರೋಸಿ , “ ಇನ್ನೆಷ್ಟು ಬಾರಿ ಹೇಳಲಿ  ನನ್ನದೇ ಮಗು ಇದು.  ನಾನೇ  ಈ ಮಗುವಿನ ತಾಯಿ  “. 

ಅಲ್ಲಿಯೇ ಇದ್ದ ಹಿರಿಯ ಅಧಿಕಾರಿ ಪಟವರ್ಧನ್ ಸರ್,ಅವಳ  ಒಳಗುದಿತವನ್ನು ಅರ್ಥೈಸಿಕೊಂಡು,    ಒತ್ತಾಯವಾಗಿ ಕೇಳುವ ಪ್ರಶ್ನೆಗಳನ್ನೇ ಮೃದುವಾಗಿ,  “ ನೋಡಿ ನೀವು ನನ್ನ ಸಹೋದರಿಯಂತೆ, 

ನಿಮ್ಮ ಹೆಸರೇನು, ಯಾವ ಊರು ,  ಮಗುವಿಷ್ಟು ಅಳಲು ಕಾರಣವೇನು?  ಮಗುವ್ಯಾಕೆ ನಿಮ್ಮನ್ನು  ಅಪರಿಚಿತರಂತೆ ಕಾಣುತಿದೆ?  ಅನಿರೀಕ್ಷಿತ  ಪ್ರಶ್ನೆಗಳನ್ನು  ಭೇದಿಸಿ  ಆಕೆ ಗಂಟಲು  ಸಡಿಲು ಗೊಳಿಸುತ್ತಾ  ಉತ್ತರಕ್ಕೆ ತೆರೆದುಕೊಂಡಳು. 

***********

  ಶಾಲೆಯಲ್ಲಿ  ಮಾತ್ರ ಶರೈಯೂ . ಖೇಡಿನಲ್ಲಿ ಎಲ್ಲರಿಗೂ  ಶರು . ನಮ್ಮೂರು ಇಲ್ಲೇ ಹತ್ತಿರ,  ಕರ್ಜತ್ದಿಂದ  ಐದು ಕಿಲೋಮೀಟರ್ ದೂರ. ಸಾಂಜಾ ಖೇಡ್ ಅಂತ. ರುಕುಮಾಯಿ ಮಂದಿರದ ಹಿಂಬದಿ ನಮ್ಮ ಮನೆ.  ಅಪ್ಪ ಸಣ್ಣ ಕಾರಖಾನೆಗೆ ಕೆಲ್ಸಕ್ಕೆ ಹೋಗ್ತಿದ್ರು .  ಅಮ್ಮ ಮನೆಯಲ್ಲೇ.  ನಾನು ಮತ್ತು ನನ್ನ ಜೊತೆಗೆ ಹುಟ್ಟಿದ ಅವಳಿ ತಮ್ಮ ಸಾರ್ಥಕ್.  ಸಾರ್ಥಕನಿಗೆ ಮಿರ್ಗಿ ಹುಟ್ಟು ಕಾಯಿಲೆಯಾಗಿ ಬಂದಿತ್ತು. ಆತನ   ಹದಗೊಂಡಿದ್ದ ಜೀವಕ್ಕೆ ನಮ್ಮ ಮನೆ    ಆಸ್ಪತ್ರೆಯಂತೆ . ಗುಳಿಗೆ, ಟಾನಿಕ್ , ಡ್ರಾಪ್ಸ್  ಕಿಟಕಿಯ ಪಕ್ಕದಲ್ಲಿ  ಮಗುಮ್ಮಾಗಿ  ಕೂತು ತನ್ನ ಉಪಸ್ಥಿತಿಯನ್ನು ವ್ಯಕ್ತಪಡಿಸುತ್ತಿತ್ತು.   ಆ ಎಳೆಯ ಜೀವ  ಈ ನೋವು, ಬೇಸರ , ದ್ವೇಷ, , ನಿರಾಶೆಯ ಒತ್ತಡಗಳನ್ನು  ಎಷ್ಟು ಸಹಿಸಿಕೊಳ್ಳಲು ಸಾಧ್ಯ? ,    ಅಷ್ಟಕ್ಕೂ ಕೆಲವು ಅನಿವಾರ್ಯಗಳು ಅವನ   ಸ್ವಾಸ್ಥ್ಯಕ್ಕಾಗಿಯೇ ಮಾಡಬೇಕಾಗಿತ್ತು.  ಅಪ್ಪ ಡಬಲ್ ಕೂಲಿ ಮಾಡುತ್ತಿದ್ದ. ಅಮ್ಮ ದೇವಸ್ಥಾನದ ಚಾಕರಿಗೆ ಹೋಗುತ್ತಿದ್ದಳು. ಮನೆಯಲ್ಲಿ ಕಿವಿ ಸರಿ ಕೇಳದ ಅಜ್ಜಿ ನಮ್ಮಿಬ್ಬರನ್ನು  ನೋಡಿಕೊಳ್ಳುತ್ತಿದ್ದಳು. ನೋಡಿಕೊಳ್ಳುವುದೇನು ? ಒಮ್ಮೊಮ್ಮೆ  ನಾವು ಆತ್ತು ಆತ್ತು ಕಂಗಾಲಾದರೂ ಅಜ್ಜಿ ಕೇಳದೆ ವಿಠಲಾ …..... ಪಾಂಡುರಂಗ….  ನಾಮಾವಳಿಯಲ್ಲಿ  ಮಗ್ನರಾಗಿದ್ದಾಗ  ಪಕ್ಕದ ಮನೆಯವರು ಬಂದು “  ಏ ಕಿವುಡೆ.. ಕಿವಿಯಂತು ಪೊಳ್ಳಾಗಿದೆ ಕಣ್ಣಿಗೂ ಕಾಣಿಸ್ತಿಲ್ವಾ ? ಎಂದು  ಅಣಕಿಸುತ್ತಿದ್ದರು.  ಕೊನೆಗೂ ಕಣ್ಣೆವೆಯಲ್ಲಿಟ್ಟು ಕಾದ ಮಗುವನ್ನು ಬೆಂಬಿಡದೆ ವಿಧಿ  ಕೊಂಡೊಯ್ಯಿತು.  ಹತ್ತು ವರುಷ ನಮ್ಮೊಂದಿಗಿದ್ದು   ತೀರಿಹೋದವನ ನೆನಪು ಮರೆಯಾಗಲು ಸಾಧ್ಯವೇ?   ಅಮ್ಮನಿಂದ ಈ ಆಘಾತ ಸಹಿಸಲಾರದೆ ಆಕೆಯೂ ದಿನೇ ...ದಿನೇ  ಕುಸಿಯಲಾರಂಭಿಸಿದಳು. ಮನೆಯ ಎರಡು ಗೋಡೆಯ ಪಕ್ಕದಲ್ಲಿ  ಎರಡು ಜೀವಂತ ಶವಗಳಂತೆ ಅಜ್ಜಿ ಮತ್ತು  ಅಮ್ಮ . 

ಯಾರ್ ಮಾಡ್ತಾರೆ ಸಾಹೇಬ್?  , ಅಪ್ಪ ಮಾತ್ರ ಬಿರುಗಾಳಿಗೆ ಎದೆಕೊಟ್ಟು ನಿಂತಂತೆ ಸೆಟೆದು ನಿಂತಿದ್ದ. ಅಮ್ಮನಿಗೂ “ ಹೇ ಶ್ಯಾಮೆ, ಇನ್ನು ನಮ್ಮ ಮಗನನ್ನು   ಇವಳಲ್ಲೇ ಕಾಣಬೇಕೆಂದು  ಹೇಳಿದರೂ,   “ ತನ್ನ ಕಡೆ ಕಾಲದ ಆಸರೆ , ಅಪ್ಪನ ದೇಹಕ್ಕೆ ಕೊಳ್ಳಿ ಇಡುತ್ತಿದ್ದ”  ಎನ್ನುವ  ಖಾಲಿತನದ ಛಾಯೆ  ಅವನ ಚಹರೆಯಲ್ಲೂ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಬದುಕು ಒಳ್ಳೆಯದನ್ನೂ ಕೆಟ್ಟದನ್ನೂ ಒಂದೇ  ಗಿರಣಿಯಲ್ಲಿ ಪುಡಿ ಮಾಡುತ್ತೆ”  ಎನ್ನುವಂತೆ  ಜೀವನವಂತೂ ಸಾಗುತ್ತಿತ್ತು.   ಅಮ್ಮನ ಕಾಯಿಲೆ ಅಪ್ಪನ ಸಾಲದ ಇಳಿಸುವ ಒತ್ತಡದ ಮಧ್ಯೆ ನಾನು  ಹತ್ತನೇವರೆಗೆ ಮಾತ್ರ ಕಲಿತೆ.  ಮನೆಯೊಳಗಿನ ಎಲ್ಲಾ ಕೆಲಸ ಮಾಡಿ ಮುಂದೆ ಕಲಿಯುವುದು ಕಷ್ಟಕರವಾಗಿತ್ತು. ಹಾಗೆ ಹೆಚ್ಚು ಕಲಿಯುವ ಆಸೆಯಾಗಲಿ,  ದೊಡ್ಡ ದೊಡ್ಡ ಕನಸುಗಳನ್ನು ಹೃದಯದಲ್ಲಿಟ್ಟು ಅರಳಿಸುವ ಆಕಾಂಕ್ಷೆಯಾಗಲಿ ನನ್ನಲ್ಲಿ ಅಂದೂ ಇರಲಿಲ್ಲ.  ಇಂದೂ ಇಲ್ಲ. ಎನ್ನುವಾಗ ಅವಳ ನಿಸ್ತೇಜ ಕಣ್ಣುಗಳ ಭಾವ ಸಾಕ್ಷಿಯಾಗಿದ್ದವು.  ಅಜ್ಜಿ ಸಾಯುವ ಮೊದಲು ನಿನ್ನ ತಲೆಗೆ ಅಕ್ಷತೆಯ ಎರಡು ಕಾಳು ಹಾಕ್ಬೇಕೆಂಬ ಒತ್ತಾಯಕ್ಕೆ ಮಣಿದು ನಾನು ಮದುವೆಗೆ ಒಪ್ಪಿದೆ. ಕಿಶೋರ್ ಸಿಂಪಲ್ ಆಗಿಯೇ ನನ್ನನ್ನು ನೋಡಲು ಬಂದಿದ್ದ. 

ಆ ಕ್ಷಣದಲ್ಲಿ  ಅವಳ  ಕೆನ್ನೆಗಳು  ಅರಳಿ ಕಣ್ಣಲಿ  ಸಣ್ಣ ಬೆಳಕು ಮಿನುಗಿದಂತೆ, “ ಕಿಶೋರನಿಗೆ ಮಾತ್ರ ಹಾಗಲ್ಲ.  ಅವನ ಕಣ್ಣಲ್ಲಿ ಕನಸುಗಳು ನಕ್ಷತ್ರ ರಾಶಿಗಳಂತೆ    ಮಿನುಗುತ್ತಲೇ ಇತ್ತು.  ಅದ್ಯಾವ ಸುಖಕ್ಕಾಗಿ ನನ್ನನ್ನು  ಮದುವೆಯಾದನೋ ಗೊತ್ತಿಲ್ಲ.   ಮದುವೆ ತೀರ ಸರಳವಾಗಿ ಮಾಡಿ ಮುಗಿಸಿದ್ದಕ್ಕೂ ಅವನ ಸಹಮತವಿತ್ತು. ಮುಂಬಯಿಯಲ್ಲಿ  ಸ್ವಂತ ಮನೆಯಂತ ಇರಲಿಲ್ಲ.  ಸ್ವಂತ ಮನೆಯೇ ಆಗಬೇಕೆಂಬ ಬಯಕೆಯೂ ನನ್ನಲ್ಲಿ ಇರಲಿಲ್ಲ.  ಕುರ್ಲಾದ ಬೈಠಕ್ ಚಾಳಿಯಲ್ಲಿಯ ಮಾಳಿಗೆಯಲ್ಲಿ ಬಾಡಿಗೆದಾರನಾಗಿರುತ್ತಿದ್ದ.   ನಮ್ಮ ಮೊದಲ ರಾತ್ರಿಯೂ ಅದೇ  ಹತ್ತು ಬೈ ಹತ್ತರ ಆ ಸಣ್ಣ ಕೋಣೆಯಲ್ಲಿಯೇ ನಡೆದಿತ್ತು. ಔಷಧಿಗಳ  ಕಮಟು ವಾಸನೆಯಿಂದ ಹೊರಬಂದ ಈ ಸಣ್ಣ ಕೋಣೆಯೂ ಅಂದು ಸ್ವರ್ಗದಂತೆ ಕಂಡಿತ್ತು. 


ಟ್ರೇನುಗಳ ಅವಜಾಹಿಗಳ ಸಂತೆಯ ಮದ್ಯೆಯೂ ಶರೂನ ಕಥೆ ಕೇಳುವುದರಲ್ಲಿ ಎಲ್ಲರೂ ತಲ್ಲೀನರಾಗಿದ್ದ್ರರು.  

ಗಡಿಯಾರದ ಮುಳ್ಳು ಮೌನವಾಗಿದ್ದರೂ , ಸಿಲಿಂಗ್ ಪ್ಯಾನಿನ  ಟರ್ ಟರ್ ಟರ್ ಸದ್ದಿನ  ಏಕತಾನತೆ ಹುಂ... ಗುಡುವಂತ್ತಿತ್ತು.  ಮಧ್ಯ ಒಂದೊಂದು ಕ್ಷಣದ ಅಂತರದಲ್ಲಿ ಸಮೀಕ್ಷಾ ಮೊಬೈಲ್ ಗುಂಡಿ ಒತ್ತಿ ಸಮಯ ನೋಡಿದಳು. ಆಗಲೇ ರಘುನಂದನನ ಜೊತೆಗೆ ಆಫೀಸಿನ ಕರೆಗಳು   ಮೆಸೇಜ್ಗಳು ಬಂದು ತೆಪ್ಪಗೆ ಬಿದ್ದಿದ್ದವು. ಅದನ್ನು  ಹಾಗೆಯೇ  ಸ್ಕ್ರೀನ್ ಆಫ್ ಮಾಡಿ, ಬ್ಯಾಗಿನೊಳಗಿಟ್ಟಳು.  ಕೈಗೆ ತಾಗಿದ ನೀರಿನ ಬಾಟಲಿಯಿಂದ ಒಂದು ಗುಟುಕು ನೀರು ಗಂಟಲೊಳಗೆ ಇಳಿಸಿ, ಶರೂಗೆ ನೀರು ಬೇಕಾ ಎಂದು ಸನ್ನೆ ಮಾಡಿದಳು. ತನ್ನ ನೆನಪಿನ ಲೋಕದಿಂದ ಹೊರಬರಲು ಮನಸ್ಸಿಲ್ಲದ ಆಕೆ  ಬೇಡವೆಂದು ತಲೆಯಾಡಿಸಿ ಮುಂದುವರಿದಳು. 


ಪಕ್ಕದ್ದಲ್ಲಿದ್ದ ಲೇಡಿ  ಕಾಂಸ್ಟೇಬಲ್ , “ನಿನ್ನ ಗಂಡ ಏನ್ ಮಾಡುತ್ತಿದ್ದ"  ಎಂದು ಗದರಿಸುತ್ತಾ  ಮಧ್ಯ ಬಾಯಿ ಹಾಕಿದಾಗಲೂ  .  ಪಟವರ್ಧನ್ ಸರ್, " ಸ್ವಲ್ಪ ತಾಳ್ಮೆ ಇರಲಿ, ಆಕೆ ಹೇಳ್ತಿದ್ದಾಳಲ್ಲ " ಎಂದು ಖಡಕ್ ಆಗಿಯೇ ಹೇಳಿದರು.  "ಇದು ಬೇಕಿತ್ತಾ ?'  ಎನ್ನುವಂತೆ   ಬೆಕ್ಕಿನಂತೆ ಮುಖ ಸಪ್ಪಗೆ ಮಾಡಿ ಕುಳಿತಳು. ಶರೂ,  “ಸಾಹೇಬ್, ನನ್ನ ಕಿಶೋರ್ "ಅಶ್ವಬಲ"  ಕೇಬಲಲ್ಲಿ ಕೆಲಸ ಮಾಡುತ್ತಿದ್ದ.  ಟಿ.ವಿ. ಕೇಬಲ್ ಜೋಡಿಸುವುದು  , ಹಣ ವಸೂಲಿ, ಮತ್ತೆ ಗಿರಾಕಿಗಳ ಏನಾದರೂ ಕಂಪ್ಲೇಂಟ್ ಬಂದ್ರೆ ಹೋಗಿ ಸರಿ ಪಡಿಸೋದು ಈ ತರದ ಕೆಲ್ಸ ಮಾಡುತ್ತಿದ್ದ”.


" ಅಂದ್ರೆ ನೆಟ್ಟಿನ ವ್ಯಾಪಾರ"  

 ವ್ಯಾಪಾರ ಅಲ್ಲ ಸರ್,  ಅವನಂತು ಅಲ್ಲಿ ಕೂಲಿಯಾಗಿಯೇ ಇದ್ದ.  ಆದರೆ ಅಶ್ವಬಲ ಕೇಬಲಿನ  ಪಾಲುದಾರನಾಗಬೇಕೆಂದು ದಿನರಾತ್ರಿ ಕನಸು ಕಾಣುತ್ತಿದ್ದ. ಆದರೆ  ಅದೇನು ಅಷ್ಟು ಸುಲಭವಾಗಿರಲಿಲ್ಲ.  ಅದರ ಮಾಲೀಕ ಜಿಗ್ನೇಶ್ ಪಟೇಲ್ ನಗರದ ಖ್ಯಾತ ಉದ್ದಮಿಗಳಲ್ಲಿ ಒಬ್ಬರಾಗಿದ್ದರು. ಅವನ  ಕೇಬಲಿನ  ವಹಿವಾಟು ಠಾಣೆಯಿಂದ ದಾದರ್ ವರೆಗೂ ಹಬ್ಬಿದೆ.  ಅವರ ಕೈ ಕೆಳಗೆ ಸುಮಾರು ಜನ ಕೆಲಸಕ್ಕೂ ಇದ್ದಾರೆ. ಘಾಟ್ಕೊಪರಿನಿಂದ  ಕುರ್ಲಾದ  ಕೇಬಲ್ ಜಬಾಬ್ದಾರಿ ವೈಯಕ್ತಿಕವಾಗಿ ಪಡೆದುಕೊಳ್ಳಬೇಕೆಂಬ ಆಸೆ ಕಿಶೋರನಿಗೆ.  ಅದಕ್ಕಾಗಿ ಮುಂಗಡ ಒಂದೂವರೆ ಲಕ್ಷ ರೂಪಾಯಿ ಇಡಬೇಕಿತ್ತು .    ಕಿಶೋರನಲ್ಲಿ  ಹೇಳಿ ಕೇಳಿ ಕೂಡಿಸಿಟ್ಟ ಮೂವತ್ತೋ ನಲವತ್ತು ಸಾವಿರವಷ್ಟೇ ಗಟ್ಟಿ ಧನವಿತ್ತು .  ಇನ್ನು  ಮನೆಯಿಂದ ಸಾಲ ಪಡೆದುಕೊಳ್ಳಬೇಕೆಂದರೆ.  ಎಲ್ಲಾ  ಉಂಡು  ತಿಂದು ಕೈ ಒರಿಸಿಕೊಳ್ಳುವವರೇ.  ಮದುವೆಯ ಖುಷಿ ಒಂದೆಡೆಯಾದರೆ ತನ್ನ  ಕನಸುಗಳು ಕಣ್ಮರೆಯಾಗುವ   ದುಃಖ ಇನ್ನೊಂದೆಡೆ. ನಾಲ್ಕು ಗೋಡೆಗಳ ಮಧ್ಯ ಈ ಆಸೆ ನಿರಾಶೆಗಳ  ಘರ್ಷಣೆಗಳಿಂದ ಬಿಡುಗಡೆಹೊಂದಲು ದಿನಾ  ನಾವಿಬ್ಬರೂ ದೇಹಗಳ  ಬಿಸುಪಿನಲ್ಲಿ  ಕಳೆದು  ಹೋಗುತ್ತಿದ್ದವು.    ಮನೆ ಮಾಲೀಕನ  ಹೆಂಡ್ತಿ ಸುಧಾ ಘಾರ್ಮೆಂಟ್ ಕೆಲ್ಸಕ್ಕೆ ಹೋಗುತ್ತಿದ್ದಳು. ಅವಳೊಂದಿಗೆ ಮಾತಾಡಿ ಕೆಲಸಕ್ಕೆ ಸೇರೋಣವೆಂದರೆ, ಆಗಲೇ  ಮುಟ್ಟು ನಿಂತು  ಎರಡು ತಿಂಗಳಾಗಿತ್ತು.   ನಮ್ಮದೇ ಅವಸ್ಥೆ  ಸಂಕೀರ್ಣವಾಗಿರುವಾಗ  ಮಗು  ಇಷ್ಟು ಬೇಗ ಬೇಡವಾಗಿತ್ತು. ಆದರೆ ಸಾವು ಬದುಕಿನ ನರಕ  ಯಾತನೆಯನ್ನು ಹತ್ತಿರದಿಂದ ಕಂಡ ನನಗೆ ಬದುಕು ಅಮೂಲ್ಯವೆನಿಸಿತ್ತು. 

" ಮಗು ಹುಟ್ಟಿದ ಬಳಿಕ ನಿಮ್ಮ ನಸೀಬ್  ಬದಲಾಗುತ್ತೆ  " ಎಂದು ಸುಧಾ ಯಾವಾಗ್ಲೂ ಹೇಳೋಳು. ಅವಳ  ಮಾತಿನಲ್ಲಿ  ನನಗೂ  ಭರವಸೆ.  ನಸೀಬ್ ಏನೂ ಬದಲಾಗಲಿಲ್ಲ ಪರಿಸ್ಥಿತಿ ಇನ್ನೂ ಬಿಗಿಯಾಯಿತು. ಮಗುವಿನ ಹಾಲು, ಬಟ್ಟೆ ಔಷಧಿ ಎಲ್ಲಿಂದ ತರುವುದು.  ನಸೀಬ್ ಬದ್ಲಾಗುತ್ತೆ ಎನ್ನುತ್ತಿದ್ದ ಸುಧಾಕ್ಕ ಗಂಡ ಹೇಳಿಕೊಟ್ಟಂತೆ, " ಒಂದು ವರ್ಷವಾಯಿತು.  ವಾಯದೆ ಮುಗಿದು ಆಗಲೇ ಎರಡು ತಿಂಗಳಾದವು.  ಪುಣೆಯ ಗಿರಾಕಿಯೊಂದಿದೆ."  ಎಂದು   ಬಾಡಿಗೆ ಏರಿಸುವ ಸೂಚನೆ ಕೊಟ್ಟು ಬಿಟ್ಟಿದ್ದಳು . 

 

ಅಂದು ಸಂಜೆ ಕಿಶೋರ್  ಮನೆಗೆ ಬಂದಾಗ ನನ್ನ ಇಷ್ಟದ ರಸ್ಮಾಲಾಯಿ ತಂದಿದ್ದ.  ಮಗುವಿಗೂ  ಆಟದ ಸಾಮಾನು, ಹಾಲಿನ ಡಬ್ಬಿ ..  

   ನಾನು ಏನಾದರೂ ಕೇಳಬೇಕೆನ್ನುವಷ್ಟರಲ್ಲೇ ನನ್ನ ಕೈಯಲ್ಲಿ ಇಪ್ಪತ್ತು ಸಾವಿರವಿಟ್ಟು , "ಶರೂ  ನಿನ್ನ ಕೈಯಾರೆ ಸುಧಾ ಅವರಿಗೆ ಕೊಡು ಮುಂದಿನ ಆರು ತಿಂಗಳಿನ ಬಾಡಿಗೆ ಇದರಲ್ಲಿದೆ. "   

ಓ ದೇವರೇ ಮುಂದಿನ ಆರು ತಿಂಗಳು ನಿವಾಂತವಾಗಿರಬಹುದೆಂಬ ಸಮಾಧಾನವನ್ನು ಮನಸ್ಸಿನಲ್ಲಿ  ಭದ್ರಗೊಳಿಸಿ ಹಣ ಕೊಟ್ಟಾಗ,  ಆಕೆ "  

 ಏನೇ,    ಲಾಟ್ರಿ ಗೀಟ್ರಿ   ಏನಾದರೂ ತಾಗಿದೆಯ ? ನಾನು ಹೇಳಿಲ್ವ, ನಿಮ್ಮ ನಸೀಬ್ ಬದಲಾಗುತ್ತೆ.  ಎಂದು ನಾನ್ ಸ್ಟಾಪ್ ಹೇಳುತ್ತಾ ಹೋದಳು. 

 ಅವರ ಆ ಮಾತು ನಿಜವೆಂದೆನಿಸಿತು.   ರಾತ್ರಿ ಹಾಸಿಗೆಯಲ್ಲಿ ಅದೆಷ್ಟು  ಕೇಳಲು  ಪ್ರಯತ್ನಿಸಿದೆ.   


 ಆತ , " ಶರೂ    ಈ ಹೊತ್ತು ಇವೆಲ್ಲ ಕೇಳಿ ನನ್ನ ಮೂಡ್  ಹಾಳು ಮಾಡಬೇಡ ಎಂದು ನಿನಗೆ ಎಷ್ಟು ಬಾರಿ ಹೇಳಿದ್ದೇನೆ. " ನಾನು ಹೆಚ್ಚು  ತಲೆ ಕೆಡಿಸಿದ ಆ ದಿನದ  ಖುಷಿ ಬೊಗಸೆಯಲ್ಲಿ ಕಣ್ಣಲ್ಲಿ, ಎದೆಯಲ್ಲಿ  ಬಾಚಿಕೊಂಡಿದ್ದೆ.  ಮರು ದಿನ ಚಹ  ಕುಡಿಯುವಾಗ ಎಲ್ಲ ವಿಷಯ ಹೊರಗೆ ಬಂತು.    ಕಿಶೋರನಿಗೆ  ಬೇಕಾಗಿರುವ ಒಂದುವರೆ ಲಕ್ಷ ರೂಪಾಯಿಗಳನ್ನೂ  ಜಿಗ್ನೇಶ್  ಭಾಯಿ ತಾನಾಗಿಯೇ ಕಟ್ಟಿದರಂತೆ.  ಅವರು  ನಮ್ಮ ಪಾಲಿನ ದೇವರಾಗಿಯೇ ಬಂದಿದ್ದರು ಎನ್ನಬಹುದು.  


ಜಿಗ್ನೇಶ್ ಭಾಯಿಗಿರುವುದು  ಒಬ್ಬ ಮಗಳು ಅವಳಿಗೆ ಮದುವೆಯಾಗಿ ಆಕೆ ಬೆಂಗಳೂರಿನಲ್ಲಿದ್ದಾಳೆ. ಮಗ ಶಿಕ್ಷಣಕ್ಕೆಂದು ಕೆನಡಾದಲ್ಲಿದ್ದಾನೆ. ಹೆಂಡ್ತಿ  ತೀರಿ ಹೋಗಿ ಎರಡು ವರ್ಷಗಳಾಗಿತ್ತು.  ಅವರಿಗೆ ಶುಗರ್ ಪ್ರಾಬ್ಲಮ್, ಹಾಗಾಗಿ ಊಟ ತಿಂಡಿ ಎಲ್ಲಾ  ಟೈಮ್ ಟೈಮಿಗೆ ಆಗ್ಬೇಕು.   ತನಗೆ ಬೇಕಾದನ್ನು ತಾನೇ ಮಾಡಿಕೊಳ್ಳುತ್ತಿದ್ದರು.  ಎರಡು  ತಿಂಗಳ ಮುಂಚೆ  ಸಣ್ಣ ಅಟ್ಯಾಕ್ ಬಂದು, ಡಾಕ್ಟರ್, "   ಕಂಪ್ಲೀಟ್ ಬೆಡ್ ರೆಸ್ಟ್ ಎಂದಿದ್ದರು" .   ಸ್ವಲ್ಪ ದಿನ  ಮಗಳು  ಬಂದಿದ್ದಳು.  ಅವಳಿಗೂ ಅವಳದ್ದೇ ಜವಾಬ್ದಾರಿ ಇರುವಾಗ ಇಲ್ಲಿ ಎಷ್ಟು ದಿನ ಇರುವುದು?   "   ಬೇರೆ ಒಳ್ಳೆಯ ಕೆಲಸದವಳು ಸಿಗುವ ವರೆಗೆ ಅಡುಗೆ ಕೆಲಸ ಮಾಡಬಹುದೇ " ಕಿಶೋರ್ ನನ್ನಲ್ಲಿ ಪ್ರೀತಿಯಿಂದ ಕೇಳಿದ್ದ. 


"  ಪ್ರೀತಿಗೇ  ಯಾರು ಸೋಲದಿರಲು ಸಾಧ್ಯ  ಸರ್.? "  ಅದೂ ನಮಗೆ ಒಂದು ದಾರಿ ತೋರಿಸಿದವರಿಗೆ?   ನಾನೂ ಒಪ್ಪಿಕೊಂಡೆ.  ಆದರೆ ಮಗುವನ್ನು ಅಲ್ಲಿ  ಕರ್ರ್ಕೊಂಡು ಹೋಗುವುದು ತುಂಬಾ ಕಷ್ಟ. ಮುಂಬೈ ಲೋಕಲ್ ಗರ್ದಿ ನಿಮಗೆ ಗೊತ್ತೇ ಉಂಟು. ಬೆಳಗಿನ ಹೊತ್ತು ಕುರ್ಲಾ ದಿಂದ  ಗ್ರಾಂಟ್ ರೋಡ್  ವರೆಗೆ  ದಿನಾ ಆಪ್  ಅಂಡ್ ಡೌನ್ ಮಾಡ್ತಿದ್ದೆ.  ಎರಡು ಹೊತ್ತಿನ ಅಡುಗೆ ಮಾಡಿ  ಎರಡು ಬಾರಿ  ಹೋಗುವುದು  ಕಷ್ಟ.  ಕಿಶೋರ ಸಹ   ಕೆಲ್ಸದಲ್ಲಿ ಬ್ಯುಸಿಯಾಗಿ ಬಿಟ್ಟ.  ಮಧ್ಯಾಹ್ನದ ಊಟಕ್ಕೂ  ಮನೆಗೆ ಬರಲು ಆಗ್ತಿರಲಿಲ್ಲ. ಹಾಗಾಗಿ ನಾನು ಅಲ್ಲೇ ಇದ್ದು  ಎರಡ್ಹೊತ್ತಿನ ಅಡುಗೆ ಮಾಡಿ ಬರಲಾರಂಭಿಸಿದೆ.   ನನ್ನ ಮಧ್ಯಾಹ್ನದ ಊಟ ಅಲ್ಲಿಯೇ ಆಗ್ತಿತ್ತು.   ಬರುವಾಗ  ಏನಾದರೂ ಉಳಿದರೆ , ಜಿಗ್ನೇಶ್ ಭಾಯಿ ಒತ್ತಾಯಿಸಿ " ಮನೆಗೆ ಕೊಂಡುಹೋಗಮ್ಮ"  ಎನ್ನುವರು .  ನಮ್ಮ ವೇದುವಿಗೆ ಮಾತ್ರ ಅಲ್ಲಿ ಸರಿ ಆಗ್ಲೇ ಇಲ್ಲ. ಒಂದೇ  ಸಮನೆ ಅಳುವುದು.  ಆದ್ದರಿಂದ ಜಿಗ್ನೇಶ್ ಭಾಯಿಗೆ  ತೊಂದರೆ ಆಗದಂತೆ ಕಿಶೋರ   ನಾಲ್ಕೈದು  ದಿನ   ನನ್ನ ಅಪ್ಪ ಅಮ್ಮನ ಬಳಿ ಬಿಟ್ಟು ಬಂದಿದ್ದ .  ಮಗುವಿಲ್ಲದೆ ಒಬ್ಬಂಟಿಗಳಾಗಿರುವಾಗ   ಮನೆಯ ಉಳಿದ ಕೆಲಸಗಳನ್ನೂ ನಾನೇ ಮಾಡಿ ಮುಗಿಸುತ್ತಿದ್ದೆ.  ಅವರಿಗೆ ಬೇಕಾದ  ಕಷಾಯ , ಜ್ಯುಸೂ ಎಲ್ಲಾ ಟೈಮ್ ಟೈಮಿಗೆ ಮಾಡಿ ಕೊಡುವುದು ನನ್ನ ದಿನಚರಿ ಆಯಿತು. 

ಲೇಡಿ ಕೌಂಸ್ಟೇಬಲ್  ತಾರಾಳ ಸಹನೆಯ ಮಿತಿ ಮೀರುತ್ತಿತ್ತು    ನಿಲ್ಲಿಸು ನಿನ್ನ ಪುರಾಣ.   ಸರ್   ಇವಳ್ಯಾಕೋ ನಮ್ಮೆಲ್ಲರನ್ನೂ   ದಿಕ್ಕು ತಿರುಗಿಸುತ್ತಿದ್ದಾಳೆ.   ಕಪಾಳಕ್ಕೆ  ಎರಡು ಬಾರಿಸಿ ವಿಚಾರಿಸಿದರೆ  ಯಾರ ಮಗುವೆಂಬ ಸತ್ಯ ಹೊರ ಹೊರ ಬೀಳಬಹುದು “  ಎಂದು  ಆವೇಶದಿಂದ ಮುನ್ನುಗ್ಗಲು ಪಟವರ್ಧನ್ ಸರ್, ಅಡ್ಡ ಬಂದು, ಅಹೋ ಮ್ಯಾಡಮ್, ಜರ ಧೀರ್ ತರಿ ಧರಾ ....   (ಕೊಂಚ  ತಾಳ್ಮೆಇರಲಿ ) ಅವಳು ಹೇಳ್ತಿದ್ದಾಳಲ್ಲ. 

ಸರಿಯಮ್ಮ ಮುಂದುವರಿಸಿ,  ಈಗ ಶರೂಳ   ಗಂಟಲು ನಿಜವಾಗಿಯೂ ಒಣಗಿತ್ತು. ಕೈಯಲ್ಲಿಯೇ ಒಂದು ಗ್ಲಾಸು ನೀರಿಗಾಗಿ ಸನ್ನೆ ಮಾಡಿ, ಒಂದೇ ಗುಕ್ಕಿಗೆ ನೀರನ್ನು ಗಂಟಲೊಳಗಿಳಿಸಿ ಮುಂದುವರಿಸಲಾರಂಭಿಸಿದಳು. 


ಜಿಗ್ನೇಶ್ ಭಾಯಿ  ಪೂರ್ತಿ ಚೇತರಿಸಿದ ಬಳಿಕ ಇನ್ನೇನು ನನ್ನ ಕೆಲಸ ಆಯಿತು, ಇನ್ನು ತಾನು ಹೊರಡುತ್ತೆಂದು  ಹೇಳಿದ್ದೆ.   ಮನೆಯಲ್ಲಿ ಹೆಣ್ಣೆಂದು ಇದ್ದರೆ ಅದೆಷ್ಟು ಕಳೆ ಇರುತ್ತೆ ನೋಡು.   ನನ್ನ ಮನೆಯವಳು  ಇಹಲೋಕ ತ್ಯಜಿಸಿದ ಬಳಿಕ ಈ ಮನೆ ಸುಡುಗಾಡಾಗಿತ್ತು. ನೀನು ಬಂದು ಇದಕ್ಕೂ ಜೀವ ಕೊಟ್ಟೆ.  ಜೊತೆಗೆ  ನನಗೂ. ಹೋಗಬೇಡ  ಶರೂ ಎಂದು  ಕೈ ಜೋಡಿಸಿದ್ದ. 

ನನಗೆ ನನ್ನ ವೇದುನ  ಬಿಟ್ಟು ಹೆಚ್ಚು ದಿನ ಇರಲಾಗದೆ . ಕಿಶೋರನಿಗೂ ಫೋನ್ ಮಾಡಿ ತಿಳಿಸಿದ್ದೆ.   ಮಗುವಿನ ನೆನಪಾಗುವುದಾದರೆ ನಾನೇ ಬಂದು ಮಗುವನ್ನು ಬಿಟ್ಟು ಬರುವೆನೆಂದು ಆ ದಿನ ಕಿಶೋರ್  ಕರ್ಕೊಂಡು  ಬಂದಿದ್ದ.  ಆ ದಿನ ಮನೆಯ ಒಳಗೆ ಬಂದು   " ಹೇ,, ಶರೂ ನಿನ್ನದಂತೂ ಜಲ್ಸಾ. ನೀನಂತೂ ಥೇಟ್ ರಾಣಿ ತರಾನೇ ಇದ್ದೀಯಾ .  ಎಂದು ನನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳಿದಾಗ ನನ್ನೊಳಗಿನ ನಾಚಿಕೆ ಕೆನ್ನೆಯಲ್ಲಿ   ಹರಡಿಕೊಂಡಿತ್ತು. ದೊಡ್ಡ ಮನೆ ಉಳಿದ ಕೆಲಸದವರು ಕೆಲಸ ಮಾಡಿ ಮನೆಗೆ ಹೋಗಿದ್ದರು. ಜಿಗ್ನೇಶ್ ಭಾಯಿ ತಮ್ಮ ಕೋಣೆಯಲ್ಲಿದ್ದಾರೆಂದು  ಕಿಶೋರನಿಗೆ ಗೊತ್ತಿತ್ತು.   ಆತ ಮೆಲ್ಲನೆ ಎದ್ದು ಹೇ,,  ಶರೂ  ಈಗ ಮಸ್ತ್ ಆಗಿದ್ದೀಯಾ, ನೋಡು ನಿನ್ನ ಕೆನ್ನೆ ,  ತುಟಿ. ಎಂದು ಬೆರಳಿಂದ ನೇವರಿಸುತ್ತಾ ಹತ್ತಿರ ಹತ್ತಿರ ಬಂದು ತುಟಿಯನ್ನು ತುಟಿಗೊತ್ತಿದ್ದಾಗ  ತಡೆಯುವ ಸಾಹಸ ನಾನು ಮಾಡಲಿಲ್ಲ.   ಮನಸ್ಸು ದೇಹ ಹಗುರಾದಾಗ ಕೋಣೆಯ  ಬಾಗಿಲು ಮುಚ್ಚಿರಲಿಲ್ಲದ್ದು ತಿಳಿಯಿತು.  ಹೊರಗೆ ಬರುತ್ತಾ ಎದುರಿಗೆ ಜಿಗ್ನೇಶ್ ಭಾಯಿ. 


ಎಲ್ಲಾ ನಾಚಿಕೆ ಆತಂಕಗಳನ್ನು ಸೆರಗಿನ  ಸುತ್ತಿ ಅವರನ್ನು ದಾಟಿ ಹೋದೆ.  ನಮ್ಮ ಮಗ ನನ್ನ ಜೊತೆ ಇರುವುದರಿಂದ ಅವನೊಂದಿಗೆ ಕಾಲ ಕಳೆಯುತ್ತಾ  ಜಿಗ್ನೇಶ್ ಭಾಯಿಯ  ಊಟ ಉಪಚಾರದಲ್ಲಿ ಏರುಪೇರಾಯಿತು.   ಅಂದು ಅಚಾನಕಾಗಿ   “ ಶರೂ,  ಗ್ಲಾಸ್ ತಾ “ ಅಂದಾಗ ನನಗಂತೂ ಎಲ್ಲಿಲ್ಲದ ಆಶ್ಚರ್ಯ! ಅವರೂ ಮದ್ಯಪಾನ ಮಾಡ್ತಾರೆಂದು ಅಂದೇ ಗೊತ್ತಾದದ್ದು. ನನ್ನ  ಆಶ್ಚರ್ಯ ಪ್ರಾಯಶ: ಅವರಿಗೆ ಗೊತ್ತಾಯಿತೋ ಏನೂ?  ಶರೂ ಮೊದಲು ಕುಡಿಯುತ್ತಿರಲಿಲ್ಲ. ನನ್ನ ಪ್ರೇಮ ನನ್ನನು ಬಿಟ್ಟು ಹೋದ ಬಳಿಕ ಇವಳೇ ಗತಿ.  ಎಂದು ಬಾಟಲಿಯಲ್ಲಿ ಎದೆಗಚ್ಚಿಕೊಂಡು ಭಾವುಕನಾಗಿದ್ದ.   ಆವನ ಒಂಟಿತನದ ಬಿಕ್ಕಳಿಕೆಯನ್ನು ನಾನು ಅರ್ಥ  ಮಾಡುವಷ್ಟರಲ್ಲಿ  ಎಲ್ಲವೂ ಮುಗಿದು ಹೋಗಿತ್ತು.    ಮನಸ್ಸು  ಹಗುರ ಮಾಡಲು  ನನ್ನನ್ನು ಬಳಿ ಸೆಳೆದಷ್ಟೇ ನೆನೆಪು ನನ್ನ ಕೊಸರಾಟಕ್ಕೂ ಎಡೆಬಿಡದ  ಬಿಗಿತನದಲ್ಲಿ ಸೋತ ನನ್ನ  ಬಿಕ್ಕಳಿಗೆ ನನ್ನನ್ನು  ಎಚ್ಚರಿಸಿತ್ತು.  ಆದರೂ ಪೂರ್ತಿ ನಿದ್ದೆಯಲ್ಲಿಯೇ ಇದ್ದ ಮಂಪರು.  ಯಾರನ್ನು ಕೇಳೋದು, ಏನಂಥ ಹೇಳೋದು?  ಮೈಯ  ಗೀರು ಮನಸ್ಸನ್ನು  ಸೀಳಿ  ಕಣ್ಣಲ್ಲಿ ಧಾರಾಕಾರ  ಹರಿದು ಹೋಗಿದ್ದರೂ   ಸ್ವಲ್ಪ ನಿರಾಳವಾಗುತ್ತಿದ್ದೆ.   


ಭಾಯಿ ಎಂದು ಬಾಯ್ತುಂಬ ತುಂಬ ಕರೆದೆ .  ಅವರಲ್ಲಿ ಹೆಂಡ್ತೀನೂ ಭಾಯಿ…. ಬೇನ್ ….  ಎಂದೇ ಸಂಭೋದಿಸುತ್ತಾರಂತೆ.  ಬದುಕಿನಲ್ಲಿ ಬಂದ ಎಲ್ಲಾ ಭಾರಗಳನ್ನು ಹೊತ್ತು ಕೊಂಡಿದ್ದರೂ ಈ ಭಾರ ಹೊತ್ತೋದು ಬಹಳ ಕಷ್ಟವೆನಿಸಿ  ಸಾಯೋದೆ ಲೇಸೆಂದು  ಅದಕ್ಕೂ ಪ್ರಯತ್ನಿಸಿದ ಸೀದಾ  ಅಡುಗೆ  ಕೋಣೆಗೆ  ಹೋಗಿ ಚಾಕುವಿನಿಂದ ಕೈಯ ನರ ಕತ್ತರಿಸಲು ಹೋದೆ .  ವೇದುವಿನ  ಹಾಲಿನ ಪಾತ್ರೆಯಲ್ಲಿ ಹಾಲು ಇನ್ನೂ  ಬಾಕಿಯಿತ್ತು .  ಬಿಟ್ಟರೆ ಹಾಲು ಹೆಪ್ಪು ಗಟ್ಟುವುದೆಂದು  ವಾಟಿಗೆ ಬಗ್ಗಿಸಿ  ಒಂದೊಂದೇ ಚಮಚ ಕುಡಿಸುತ್ತಾ ಹೋದೆ.  ಹಾಲು ಕುಡಿಯುತ್ತಾ ಅವನ ಮುಖದಲ್ಲಿದ್ದ  ನಗುವಿನಲ್ಲಿ ನೋವುಗಳು ಮರೆಮಾಚಿಕೊಂಡವು .  ಮನಸ್ಸು ಗಟ್ಟಿ ಮಾಡಿ ಕಿಶೋರನಿಗೆ  ಕರೆ ಮಾಡಿ ರಾತ್ರಿಯ ವಿಷಯವನ್ನೆಲ್ಲಾ ಹೇಳಿದೆ .   ಅವನ  ಮಾತಿನಲ್ಲಿ  ಯಾವುದೇ ರೀತಿಯ ಆತಂಕ , ರೋಷ  ಕಾಣಿಸಲಿಲ್ಲ . ಬದಲಿಗೆ,  ನನ್ನನ್ನೇ ಬೈಯುತ್ತಾ , ಸರಿ ಸರಿ   ವಿಷಯ ನಿನ್ನಲ್ಲಿಯೇ ಇರಲಿ .  ಇದನ್ನು ತುಂಬ  ಗಂಭೀರವಾಗಿ ತಗೊಳ್ಬೇಡ .  ಒಂದೆರಡು ದಿನಗಳಲ್ಲಿ ಎಲ್ಲಾ ಸರಿ ಹೋಗುವುದು . ನಾನು ನಾಳೆ  ಬಂದು ಭೇಟಿಯಾಗ್ತೇನೆ  ಎಂದಿದ್ದ.  

ಅವನ ಆ ಮಾತುಗಳು ನನ್ನನ್ನು ವಿಚಾರಗಳ   ಸಂಕೋಲೆಗಳಲ್ಲಿ ಕಟ್ಟಿದಂತಾಯಿತು .  ನನ್ನ ವೇದು  ಈ ನೆರಳಲ್ಲಿ ಬದುಕಬಾರದೆಂದು,  ಆ ಬಿಗಿತನದಿಂದ ಹೇಗಾದರೂ ಪಾರಾಗಬೇಕೆಂದು ಅಲ್ಲಿಂದ ಓಡಿ ಬಂದೆ  ಸಾಹೇಬ್.  ಈ ಮಗುವು  ನನ್ನದೇ  ಎಂದು ಬಿಕ್ಕಿ ಬಿಕ್ಕಿ ಅಳುವಾಗ  ಶರೈಯೂ ನದಿ ಮೈದುಂಬಿ ಹರಿದಂತಾಯಿತು . 

ಕಿಶೋರನ  ಹುಡುಕಾಟ  ಮಾತ್ರ  ಜಾರಿಯಿದೆ .

Comments

  1. ಕಥೆ ಕಲ್ಪನೆ ಸಂಭಾಷಣೆ ಬಹಳ ಸೊಗಸಾಗಿದೆ

    ReplyDelete

Post a Comment