ತೇಜಸ್ವಿ

ತೇಜಸ್ವಿ

 ಲೇಖನ - ಡಾಮಂಜುಳಾ ಹುಲ್ಲಹಳ್ಳಿ.

 


ಮೊಗೆದಷ್ಟೂ ಅರಿವು, ತಿಳಿದಷ್ಟೂ ಬೆರಗು: ಪೂರ್ಣ ಚಂದ್ರ ತೇಜಸ್ವಿ ಸೊಬಗು!

     ‘ಪೂರ್ಣ ಚಂದ್ರ ತೇಜಸ್ವಿಯುವ ಮನಸ್ಸುಗಳ ಮೋಡಿ ಮಾಡಿದ; ಚಿಂತಕರಿಗೆ ವೈಚಾರಿಕ ಪ್ರೇರಣೆ ನೀಡಿದ; ವಿಚಾರವಂತರಿಗೆ ಸಾಮರಸ್ಯದ ತಿಳಿವು ಹೆಚ್ಚಿಸಿದ; ಆಡದಯೇ ಮಾಡುತ್ತಾರೂಢಿಯೊಳಗುತ್ತಮಆಗುವುದು ಹೇಗೆಂದು ಬದುಕಿದ ಪರಿಯಿಂದಲೇ ಎಳೆ ಎಳೆಯಾಗಿ ತಿಳಿಸಿದ; ನಿರುತ್ತರದಲ್ಲೇ ಬದುಕಿನ ಉತ್ತರವನ್ನು ನೀಡಿದ; ಎಲ್ಲಾ ಮನೋಭಾವದವರೆಗೂ ಹತ್ತಿರತ್ತಿರವಾಗುತ್ತಲೇ ಎತ್ತರೆತ್ತರ ಬೆಳೆದವರು ನಮ್ಮ ತೇಜಸ್ವಿ. ಭೌತಿಕವಾಗಿ ಮರೆಯಾದರೂತಮ್ಮತನದಿಂದ ಕನ್ನಡದ ಜಗತ್ತಿನಲ್ಲಿ ವಿಶಿಷ್ಟ ಸಂಚಲನವನ್ನು ಹೇಗೆಲ್ಲಾ ಮೂಡಿಸುತ್ತಲೇ ಇರಬಹುದು ಎಂಬುದಕ್ಕೆ ಅಪೂರ್ವ ನಿದರ್ಶನ ಆಗಿರುವವರೂ ಇವರು!

           ದಾಂಪತ್ಯ ಜೀವನದ ಪರಮಪಾವಿತ್ರ್ಯದ ಕ್ಷಣಗಳೆಂದರೆ, ಸತಿಪತಿಗಳೊಂದಾಗಿ ತಮ್ಮಿಬ್ಬರ ಸಾಂಗತ್ಯದ ಕುಡಿಯನ್ನು ನಿರೀಕ್ಷಿಸುವ ಅಪೂರ್ವ ಸಮಯಜಗತ್ತಿನೆಲ್ಲ ತಂದೆ ತಾಯಿಗಳೂ ಅನುಭವಿಸುವ ಭಾವ ಸಂಭ್ರಮವನ್ನು ಎಲ್ಲಾ ಪೋಷಕರ ಎದೆಯಾಳದ ದನಿಯಾಗಿ ಕುವೆಂಪು ತೆರೆದಿಟ್ಟಿದ್ದಾರೆ.

     ಬಾಲ್ಯದಿಂದಲೂ ವಿಶೇಷ ಪರಿವೇಷದ ಆವರಣದಲ್ಲಿಯೇ ಬೆಳೆದು ಸ್ವಂತ ಪರಿಶ್ರಮದಿಂದ ಬೆಳೆದು ಅತ್ಯುತ್ತಮ ಕವಿಸಾಹಿತಿಯೆಂದು ಗುರುತಿಸಿಕೊಂಡರೂ ಕುವೆಂಪು ಅವರು ಗೃಹಸ್ಥಾಶ್ರಮ ಸ್ವೀಕರಿಸುವ ಬಗೆಗೆ ತೀವ್ರ ದ್ವಂದ್ವ ಹೊಂದಿದ್ದರು. ಕಡೆಗೆ

 ‘ಕಬ್ಬಿಗಗೆ ನಿನ್ನೆದೆಯೆ ಕಟ್ಟಕಡೆಯ ಆಶ್ರಮ ಮತ್ತು ಉತ್ತಮ ಆಶ್ರಯಎಂದು ಪರಿಭಾವಿಸಿ ಪ್ರೇಮಾವತಾರಿಣಿಯಾದ  ಹೇಮಾವತಿಯನ್ನು  ಸತಿಯೆಂದು  ಆರಿಸಿಕೊಂಡರು. ಗೃಹತಪಸ್ವಿನಿಯನ್ನು ತಮ್ಮಾತ್ಮದ ಜೀವನ ಲಕ್ಷ್ಮಿಯಾಗಿ ಹೃದಯದ ವಾಣಿಯಾಗಿ ಮುದ್ದಿನ ರಾಣಿಯಾಗಿ ಒಲಿದು ಆರಾಧಿಸುವ ವೇಳೆ, ಅವರ ಗರ್ಭದಗುಡಿಯಲ್ಲಿ ದಿವ್ಯಾರ್ಭಕ ಬೆಳೆಯುತ್ತಿರುವ ಸೂಚನೆ ಸಿಕ್ಕಿದಾಗ ಗರ್ಭಿಣಿ ಸತಿ ಕವಿ ಕಣ್ಣಿಗೆ ದೇವಾಲಯವಾಗುತ್ತಾರೆ, ಪೂಜ್ಯೆಯಾಗುತ್ತಾರೆ. ಸೃಷ್ಟಿ ಸಾಮ್ರಾಜ್ಯೆಯಾಗಿ ಕಾಣುತ್ತಾರೆ.

     ಸಮಯದಲ್ಲಿ ಅವರು ತಮಗೆ ಎಂತಹ ಪುತ್ರ ಜನ್ಮಿಸಿದರೆ ಚಂದ ಎನ್ನುವ ಭಾವಕ್ಕೆ ಹೀಗೆ ನುಡಿರೂಪ ಕೊಟ್ಟಿದ್ದಾರೆ:

   ಕಳುಹಿಸು ಯೋಗ್ಯನನು,

ಹೇ ಗುರುವೇ,

ಕಳುಹಿಸು ಭಾಗ್ಯನನು

ಶ್ರೀ ಗುರುವೇ.

 

ಕಳುಹಿಸು ಮಂಗಳ ಚೆಲುವನನು

ಲೋಕವನೊಲಿವನನು ;

ಬಾಳಿನ ಬವರವ ಗೆಲುವನನು,

ನಿನ್ನೊಳು ನಿಲುವನನು.....’

  ಎಂದು ಮನದುಂಬಿ ಹಾರೈಸುತ್ತಾ ಪವಿತ್ರ ಚರಿತ್ರನನ್ನೂ ಗೌರವ ಪಾತ್ರನನ್ನೂ ಕಾವ್ಯಾಸಕ್ತನನ್ನೂ ಪುತ್ರನಾಗಿ ಬರಲೆಂದು ನಿರೀಕ್ಷಿಸುತ್ತಾರೆ. ಕವಿಗೆ ಕುಮಾರಸಂಭವದ ಸುದ್ದಿ ಕೇಳಿದೊಡನೆ ಆನಂದದ ಓಕುಳಿಯ ಬುಗ್ಗೆ ಚಿಮ್ಮಿತು. ಎದೆಯಲ್ಲಿ ಕಾಮನ ಬಿಲ್ಲು ಕಟ್ಟಿತು. ಕವಿಕಲ್ಪನೆ ಇಂದ್ರನ ಅಮರಾವತಿಗೆ ಲಗ್ಗೆ ಹಾಕಿ, ಐರಾವತದ ಬೆನ್ನಿಗೆ ಏರಿ, ದೇವಗಂಗೆಯಲ್ಲಿ ಮಿಂದು, ಅಮೃತವನ್ನು ಕುಡಿದು ಗುರುದೇವನ ಪಾದಗಳನ್ನು ಮುಟ್ಟಿನಿನ್ನ ಕೃಪೆ ನನ್ನ ಸತಿ ಸುತರ ಮೇಲಿರಲಿ ಸರ್ವದಾ, ಶ್ರದ್ಧೆ ಬಳುಕದೆ ನಿತ್ಯವಾಗಿರಲಿ, ಪ್ರೇಮಾಂಗಿನಿಯ ನನ್ನ ಕುವರನಾಗಲಿ ಪೂರ್ಣಚಂದ್ರ ಸಮ ತೇಜಸ್ವಿಎಂದು ಬೇಡಿಕೊಂಡಿತಂತೆ

  ಪೂರ್ಣ ಸುಧಾಕರ ತೇಜಸ್ವಿಯನ್ನು ಕವಿ ಸ್ವಾಗತಿಸುವುದು ಹೀಗೆ :

 ನಮ್ಮಾತ್ಮದ ಅಮೃತತ್ವದ ಬಿಂದುವೆ,

ನಮ್ಮಿಬ್ಬರ ಚಿರಸುಖರಸ ಸಿಂಧುವೆ,

ಸಿಂಧುವನುಕ್ಕಿದ ಪೂರ್ಣೇಂದುವೆ,

ಸ್ವಾಗತ ನಿನಗೆಲೆ ಕಂದಯ್ಯ!

 

ನಮ್ಮಾತ್ಮದ ಜನ್ಮಾಂತರದ ಬಂಧುವೆ,

ನಮ್ಮಿಬ್ಬರ ಕಲ್ಪಾಂತರ ಬಂಧವೆ,

ಮಂಗಳ ನಿನಗೋ ಜೀವಾನಂದವೆ,

ನಮ್ಮೆದೆ ಬಾನಿನ ಚಂದಯ್ಯ!’

    ಕವಿಯ ಸಂತಸದ ಒಂದು ಹನಿಯಷ್ಟೂ ಕೂಡ ಚಕ್ರಾಧಿಪತಿಗಳಿಗಿರುವುದಿಲ್ಲ ಎಂಬ ಸತ್ಯಸ್ಯಸತ್ಯವನ್ನು ಮಗುವಿನ ಒಡನಾಟದಲ್ಲಿ ಕಂಡುಕೊಳ್ಳುವ ಕವಿಗೆ ಮಗುವಿಗೆ ಹರಕೆ ನೀಡಿದಷ್ಟೂ ತಣಿವಾಗುವುದಿಲ್ಲ.

 ವಿಶ್ವವೆಲ್ಲಾ ಸೇರಿ ವಿಶ್ವಾಸದಲಿ ಕೋರಿ

ಪಡೆದಂದವೀಯೊಡಲ ಚಂದ, ಕಂದಾ.

ವಿಶ್ವಾತ್ಮವನೆ ಸಾರಿ, ವಿಶ್ವದೊಲವನೆ ತೋರಿ,

ವಿಶ್ವದಾನಂದವಾಗೆನ್ನ ಕಂದಾ!’


  


   ಮೈಯ ಭೋಗಕ್ಕೆ ಮನದ ಯೋಗದ ಮುಡಿಪನ್ನಿತ್ತು ಪಡೆದ ಪ್ರಾರ್ಥನೆಯ ಶಿಶು ತನುಜಾತನಷ್ಟೇ ಅಲ್ಲ, ಆತ್ಮಜಾತನೂ ಕೂಡ. ಮಗುವಿನ ಕಾಯಕಾಂತಿಗೆ ತಾಯಿತಂದೆಯರ ಮೈಯ ತೇಜಸ್ಸಿನಷ್ಟೇ ಆತ್ಮದ ಓಜಸ್ಸೂ ಕಾರಣ ಎಂದು ನಂಬಿದ ಕವಿ ತತ್ವದಿಂದ, ಕಾವ್ಯದಿಂದ, ವಿಜ್ಞಾನದಿಂದ, ಋಷಿಗಳಿಂದ, ಕವಿಗಳಿಂದ, ಆಚಾರ್ಯವರ್ಯರಿದ ಪಡೆದ ಎಲ್ಲಾ ಸುಜ್ಞಾನ ಕೃಪೆಗಳನ್ನೂ ನೆರವಿಟ್ಟು ಮಗುವಿನ ತೇಜಸ್ವೀ ವ್ಯಕ್ತಿತ್ವವನ್ನು ಪಡೆದುದಾಗಿ ಹೆಮ್ಮೆ ಪಡುತ್ತಾರೆ.

      ಮಗುವಿನಮಗುತನದೊಡನೇ ಕವಿಯತಂದೆತನವೂ ಹಿಗ್ಗಿ ಬೆಳೆಯತೊಡಗುತ್ತದೆ. ಮಗು ಹುಟ್ಟಿದ ಮೇಲೆಯೇತಂದೆತನವನ್ನು ಪಡೆದ ಕವಿತಂದೆಗೆ ಮಗುವಿನಷ್ಟೇ ವಯಸ್ಸು. ಸುಳ್ಳಲ್ಲ! ದೇವರ ಹರಕೆಯು ಬಾನಿಂದ ಭೂಮಿಗೆ ನೀಡಿದ ಕೈ ಕಂದನ ಮೈ. ಮುದ್ದು, ಸೊಗಸು, ಪೆಂಪು, ಇಂಪುಗಳನ್ನು ಬೇರೆಯವರಿಂದ ಮಾಡಲು ಸಾಧ್ಯವೇನು? ಎಂದು ಸುಖಿಸುವ ಕವಿ ಈಗ ತಮ್ಮದೇ ಮಗುವಿನ ಮುಖದಲ್ಲಿ ಬ್ರಹ್ಮಾಂಡವನ್ನೇ ಗುರುತಿಸುವ ಸಿದ್ದಿ ಪಡೆದಿದ್ದಾರೆ.

 

ಸೂರ್ಯ ಚಂದ್ರರಲೆಯುತಿಹರಿಲ್ಲಿ;

ಉರಿದಿವೆ ತಾರಾ ಕೋಟಿಗಳೆಲ್ಲ;

ಹೊಳೆ ತೊರೆ ಹರಿದಿವೆ; ಮುನ್ನೀರ್ ಮೊರೆದಿವೆ;

ಪರ್ವತ, ಕಾನನ ಖಗಮೃಗ ಮೆರೆದಿವೆ;

ಸೃಷ್ಟಿಯೊಳೇನೇನಿಹುದೋ ಎಲ್ಲಾ

ಮುಖದೊಳೆ ಕವಿ ಕಾಣಲು ಬಲ್ಲಾ

 

      ಮಗುವಿನೊಡನೆ ಕವಿತಂದೆ ಹೊರನಡೆದರೆ, ಯೌವನ ಶಿಶುತನಗಳ ಜೋಡಿಯ ನೆರಳೂ ಎಳೆಬಿಸಿಲೂ ಜತೆಗೂಡಿ ಕುಣಿದಾಡಿದರೆ ಮೂರು ಲೋಕಗಳೂ ತಲ್ಲಣಿಸುತ್ತವಂತೆ. ಗಾಳಿ ನೀರು ಬೆಳಕು ಭೂಮಿ ಗಗನಗಳೆಲ್ಲಾ ತಾವೂ ಹೀಗೇ ತಮ್ಮದೇ ಮಗುವಿನೊಡನೆ ನಲಿಯಬೇಕೆಂದು ಮನ ಮಾಡುತ್ತಾವಂತೆ

 ಕವಿ ಹೇಳುತ್ತಾರೆ;

 ಸಂಸಾರದ ಸಾಧನೆಗಿದೆ ಸಿದ್ಧಿ :

ಸಕಲೈಶ್ವರ್ಯದ ಸುಖಕಿದೆ ಕಣ್:

ಕಂದನೊಡನೆ ಕುಣಿದಾಡುವ ಬುದ್ಧಿ;

ಕಂದನ ಸಿರಿಮೆಯ್ಗಂಟಿದ ಮಣ್!

ಇನ್ನೆಲ್ಲರಸುವೆ? ಇಲ್ಲಿದೆ, ಕಾಣ್,

ಈಶನ ಕಣ್! ’

    ಹೀಗೆ ರಸ‌ಋಷಿಯನ್ನೇ ತಂದೆಯಾಗಿ ಪಡೆದು ಅವರ ವಾತ್ಸಲ್ಯಜೇನಿನ ಸವಿಯನುಂಡು ಅವರ ಮಮತಾಭಾವದ  ಸಿರಿರಕ್ಷೆಯಲ್ಲಿ ಬೆಳೆದ ಭಾಗ್ಯವಂತ ಮಗು ತೇಜಸ್ವಿ. ತಂದೆಯ ನಿರೀಕ್ಷೆಗೆ ಮೀರಿ ಕನ್ನಡದ ಭಾಗ್ಯವನ್ನು ಹೆಚ್ಚುಸಿದರು ಎಂಬುದೂ ಮತ್ತೊಂದು ಸೊಬಗು!!!

 


Comments