ತೇಜಸ್ವಿ
ಲೇಖನ - ಡಾ. ಮಂಜುಳಾ ಹುಲ್ಲಹಳ್ಳಿ.
ಮೊಗೆದಷ್ಟೂ ಅರಿವು, ತಿಳಿದಷ್ಟೂ ಬೆರಗು: ಪೂರ್ಣ ಚಂದ್ರ ತೇಜಸ್ವಿ ಸೊಬಗು!
ದಾಂಪತ್ಯ ಜೀವನದ ಪರಮಪಾವಿತ್ರ್ಯದ ಕ್ಷಣಗಳೆಂದರೆ, ಸತಿಪತಿಗಳೊಂದಾಗಿ ತಮ್ಮಿಬ್ಬರ ಸಾಂಗತ್ಯದ ಕುಡಿಯನ್ನು ನಿರೀಕ್ಷಿಸುವ ಅಪೂರ್ವ ಸಮಯ. ಜಗತ್ತಿನೆಲ್ಲ ತಂದೆ ತಾಯಿಗಳೂ ಅನುಭವಿಸುವ ಈ ಭಾವ ಸಂಭ್ರಮವನ್ನು ಆ ಎಲ್ಲಾ ಪೋಷಕರ ಎದೆಯಾಳದ ದನಿಯಾಗಿ ಕುವೆಂಪು ತೆರೆದಿಟ್ಟಿದ್ದಾರೆ.
‘ಕಬ್ಬಿಗಗೆ ನಿನ್ನೆದೆಯೆ ಕಟ್ಟಕಡೆಯ ಆಶ್ರಮ ಮತ್ತು ಉತ್ತಮ ಆಶ್ರಯ’ ಎಂದು ಪರಿಭಾವಿಸಿ ಪ್ರೇಮಾವತಾರಿಣಿಯಾದ ಹೇಮಾವತಿಯನ್ನು ಸತಿಯೆಂದು ಆರಿಸಿಕೊಂಡರು. ಆ ಗೃಹತಪಸ್ವಿನಿಯನ್ನು ತಮ್ಮಾತ್ಮದ ಜೀವನ ಲಕ್ಷ್ಮಿಯಾಗಿ ಹೃದಯದ ವಾಣಿಯಾಗಿ ಮುದ್ದಿನ ರಾಣಿಯಾಗಿ ಒಲಿದು ಆರಾಧಿಸುವ ವೇಳೆ, ಅವರ ಗರ್ಭದಗುಡಿಯಲ್ಲಿ ದಿವ್ಯಾರ್ಭಕ ಬೆಳೆಯುತ್ತಿರುವ ಸೂಚನೆ ಸಿಕ್ಕಿದಾಗ ಗರ್ಭಿಣಿ ಸತಿ ಕವಿ ಕಣ್ಣಿಗೆ ದೇವಾಲಯವಾಗುತ್ತಾರೆ, ಪೂಜ್ಯೆಯಾಗುತ್ತಾರೆ. ಸೃಷ್ಟಿ ಸಾಮ್ರಾಜ್ಯೆಯಾಗಿ ಕಾಣುತ್ತಾರೆ.
‘ಕಳುಹಿಸು ಯೋಗ್ಯನನು,
ಹೇ ಗುರುವೇ,
ಕಳುಹಿಸು ಭಾಗ್ಯನನು
ಶ್ರೀ ಗುರುವೇ.
ಕಳುಹಿಸು ಮಂಗಳ ಚೆಲುವನನು
ಲೋಕವನೊಲಿವನನು ;
ಬಾಳಿನ ಬವರವ ಗೆಲುವನನು,
ನಿನ್ನೊಳು ನಿಲುವನನು.....’
ಈ ಪೂರ್ಣ ಸುಧಾಕರ ತೇಜಸ್ವಿಯನ್ನು ಕವಿ ಸ್ವಾಗತಿಸುವುದು ಹೀಗೆ :
ನಮ್ಮಿಬ್ಬರ ಚಿರಸುಖರಸ ಸಿಂಧುವೆ,
ಆ ಸಿಂಧುವನುಕ್ಕಿದ ಪೂರ್ಣೇಂದುವೆ,
ಸ್ವಾಗತ ನಿನಗೆಲೆ ಕಂದಯ್ಯ!
ನಮ್ಮಾತ್ಮದ ಜನ್ಮಾಂತರದ ಬಂಧುವೆ,
ನಮ್ಮಿಬ್ಬರ ಕಲ್ಪಾಂತರ ಬಂಧವೆ,
ಮಂಗಳ ನಿನಗೋ ಜೀವಾನಂದವೆ,
ನಮ್ಮೆದೆ ಬಾನಿನ ಚಂದಯ್ಯ!’
ಪಡೆದಂದವೀಯೊಡಲ ಚಂದ, ಕಂದಾ.
ವಿಶ್ವಾತ್ಮವನೆ ಸಾರಿ, ವಿಶ್ವದೊಲವನೆ ತೋರಿ,
ವಿಶ್ವದಾನಂದವಾಗೆನ್ನ ಕಂದಾ!’
ಮೈಯ ಭೋಗಕ್ಕೆ ಮನದ ಯೋಗದ ಮುಡಿಪನ್ನಿತ್ತು ಪಡೆದ ಪ್ರಾರ್ಥನೆಯ ಶಿಶು ತನುಜಾತನಷ್ಟೇ ಅಲ್ಲ, ಆತ್ಮಜಾತನೂ ಕೂಡ. ಈ ಮಗುವಿನ ಕಾಯಕಾಂತಿಗೆ ತಾಯಿತಂದೆಯರ ಮೈಯ ತೇಜಸ್ಸಿನಷ್ಟೇ ಆತ್ಮದ ಓಜಸ್ಸೂ ಕಾರಣ ಎಂದು ನಂಬಿದ ಕವಿ ತತ್ವದಿಂದ, ಕಾವ್ಯದಿಂದ, ವಿಜ್ಞಾನದಿಂದ, ಋಷಿಗಳಿಂದ, ಕವಿಗಳಿಂದ, ಆಚಾರ್ಯವರ್ಯರಿದ ಪಡೆದ ಎಲ್ಲಾ ಸುಜ್ಞಾನ ಕೃಪೆಗಳನ್ನೂ ನೆರವಿಟ್ಟು ಈ ಮಗುವಿನ ತೇಜಸ್ವೀ ವ್ಯಕ್ತಿತ್ವವನ್ನು ಪಡೆದುದಾಗಿ ಹೆಮ್ಮೆ ಪಡುತ್ತಾರೆ.
‘ಸೂರ್ಯ ಚಂದ್ರರಲೆಯುತಿಹರಿಲ್ಲಿ;
ಉರಿದಿವೆ ತಾರಾ ಕೋಟಿಗಳೆಲ್ಲ;
ಹೊಳೆ ತೊರೆ ಹರಿದಿವೆ; ಮುನ್ನೀರ್ ಮೊರೆದಿವೆ;
ಪರ್ವತ, ಕಾನನ ಖಗಮೃಗ ಮೆರೆದಿವೆ;
ಸೃಷ್ಟಿಯೊಳೇನೇನಿಹುದೋ ಎಲ್ಲಾ
ಈ ಮುಖದೊಳೆ ಕವಿ ಕಾಣಲು ಬಲ್ಲಾ’
ಈ ಮಗುವಿನೊಡನೆ ಕವಿತಂದೆ ಹೊರನಡೆದರೆ, ಈ ಯೌವನ ಶಿಶುತನಗಳ ಜೋಡಿಯ ನೆರಳೂ ಎಳೆಬಿಸಿಲೂ ಜತೆಗೂಡಿ ಕುಣಿದಾಡಿದರೆ ಮೂರು ಲೋಕಗಳೂ ತಲ್ಲಣಿಸುತ್ತವಂತೆ. ಗಾಳಿ ನೀರು ಬೆಳಕು ಭೂಮಿ ಗಗನಗಳೆಲ್ಲಾ ತಾವೂ ಹೀಗೇ ತಮ್ಮದೇ ಮಗುವಿನೊಡನೆ ನಲಿಯಬೇಕೆಂದು ಮನ ಮಾಡುತ್ತಾವಂತೆ!
ಕವಿ ಹೇಳುತ್ತಾರೆ;
ಸಕಲೈಶ್ವರ್ಯದ ಸುಖಕಿದೆ ಕಣ್:
ಕಂದನೊಡನೆ ಕುಣಿದಾಡುವ ಬುದ್ಧಿ;
ಕಂದನ ಸಿರಿಮೆಯ್ಗಂಟಿದ ಮಣ್!
ಇನ್ನೆಲ್ಲರಸುವೆ? ಇಲ್ಲಿದೆ, ಕಾಣ್,
ಈಶನ ಕಣ್! ’
ಹೀಗೆ ರಸಋಷಿಯನ್ನೇ ತಂದೆಯಾಗಿ ಪಡೆದು ಅವರ ವಾತ್ಸಲ್ಯಜೇನಿನ ಸವಿಯನುಂಡು ಅವರ ಮಮತಾಭಾವದ ಸಿರಿರಕ್ಷೆಯಲ್ಲಿ ಬೆಳೆದ ಭಾಗ್ಯವಂತ ಮಗು ತೇಜಸ್ವಿ. ತಂದೆಯ ನಿರೀಕ್ಷೆಗೆ ಮೀರಿ ಕನ್ನಡದ ಭಾಗ್ಯವನ್ನು ಹೆಚ್ಚುಸಿದರು ಎಂಬುದೂ ಮತ್ತೊಂದು ಸೊಬಗು!!!
Comments
Post a Comment