ಅವರೆಲ್ಲಾ ದೇವರಾಗಿದ್ದಾರೆ........ 1
ಲೇಖನ - ಹೇಮಾ ಸದಾನಂದ್ ಅಮೀನ್
ಭಾಗ ೧
ಯಾಧಗಿರಿಯ ಕಾಜಗಾರವಾಡಿಯ ಇಪ್ಪತ್ತೈದು ಮನೆಗಳ ಒಂದು ವಠಾರವದು. ಆಂಧ್ರದಿಂದ ವಲಸೆ ಬಂದು ಆ ಸರ್ಕಾರಿ ಜಾಗದಲ್ಲೇ ಚಿಕ್ಕ ಚಿಕ್ಕ ಗುಡಿಸಲು ಕಟ್ಟಿ ಜೀವನ ಸಾಗಿಸುತ್ತಿದ್ದರು. ಅವರ ಮನೆ ಮಾತು ಕನ್ನಡ . ಅದು ಉತ್ತರ ಕರ್ನಾಟಕ ಭಾಷೆ. ಅಲ್ಲಿದ್ದವರನ್ನು ಪಾತ್ರಧಾರಿಗಳೆಂದು ಕರೆಯಲಾಗುತ್ತಿತ್ತು. ಕಾಜಗಾರವಾಡಿ ಗಾಜಿನ ಬಳೆಗಳಿಗೆ ಬಹಳ ಹೆಸರು ಪಡೆದಿತ್ತೆಂದು ಅಪ್ಪ ಹೇಳುತಿದ್ದರು. ಹಾಗೆ ನೋಡಲು ಹೋದರೆ ಅಲ್ಲಿ ಮುಸ್ಲಿಂ ಕುಟುಂಬಗಳೇ ಜಾಸ್ತಿ. ಮಧ್ಯದಲ್ಲಿ ಒಂದೆರಡು ಬ್ರಾಹ್ಮಣರು, ಒಬ್ಬರು ಕ್ರಿಶ್ಚಿಯನ್ನರ ಮನೆ . ಬಳೆಗೂ ಹೆಣ್ಣಿಗೂ ಇದ್ದ ಅವಿನಾಭಾವ ಸಂಬಂಧವೋ ಏನೋ ಆ ಬಲೆ ಅಂಗಡಿಯಲ್ಲಿ ಹೆಣ್ಮಕ್ಕಳೆ ಬಳೆಗಳನ್ನು ಮಾರುತ್ತಿದ್ದರು. ಇನ್ನೊಂದು ಕಾರಣ ಆಗ ಹದಿ ಹರೆಯದ ಹೆಣ್ಣಿನ ಕೈ ಹೂವಿನಂತೆ ಮೆತ್ತಗಿದ್ದು ಗಂಡಸರು ಕೈ ಮುಟ್ಟುವ ನೆಪದಿಂದ ಸಲೀಸಾಗಿ ಬಲೆ ಜಾರುತಿದ್ದರೂ ಬೇಕಂತಲೇ ಅದುಮುತ್ತಾ ಖುಷಿಪಡುತ್ತಿದ್ದರು. ಅಂತಹ ಅಂಗಡಿಗಳಿಗೆ ಗಿರಾಕಿಗಳೇ ಕಡಿಮೆ. ಹಾಗಾಗಿ ಹೆಣ್ಣು ಮಕ್ಕಳೇ ವ್ಯಾಪಾರದ ನೊಗವೆತ್ತಿಕೊಳ್ಳಬೇಕಾಯಿತು. ಮನೆಕೆಲಸ ಮಾಡಿ ಒರಟಾಗಿರುವ ಕೈಗಳಿಗೆ ಕೆಂಪು ಹವಳ ಹಸಿರು ಬಣ್ಣದ ಬಳೆಗಳನ್ನು ಅದುಮಿ ಅದುಮಿ ತೊಡಿಸುತ್ತಿದ್ದಾಗ ಕಣ್ಣು ಕಡಲಾದರೂ ಮುಖದಲ್ಲಿ ನಗುವೇ. ಅಮ್ಮನೂ ಸಂಕ್ರಾಂತಿ, ಉಗಾದಿ, ನಾಗರಪಂಚಮಿ, ಮಾರ್ನಮಿಯಂದು ಬಳೆ ತೊಡಿಸಿಕೊಳ್ಳುತ್ತಿದ್ದರು. ಹೊಸ ಮಾದರಿಯ ಬಳೆಗಳಿದ್ದರೆ ಅಂಗಡಿಯಾಕೆ , “ ಬೇಬಿಗೆ ಹೊಸ ಡಿಸಾಯಿನ್ ಬಳೆಗಳಿವು ಬಲು ಚೆಂದ ಕಾಣಬಹುದು” ಎಂದರೆ ಸಾಕು, ಅಮ್ಮನಿಗೆ ಹಠಮಾಡಿ ಎರಡೂ ಕೈಗಳಿಗೆ ಸೇರಿಸಿ ಇಪ್ಪತೈದು ಬಳೆಗಳನ್ನು ತೊಡಿಸಿಕೊಂಡು ಅಣ್ಣ- ಅಪ್ಪನೆದುರು ಘಲ್ ಘಲ್ ನಾದದಿಂದ ರಮಿಸುತಿದ್ದೆ.
ಈ ಪಾತ್ರಧಾರಿಗಳನ್ನು ವೇಷಧಾರಿಗೆಲೆಂದೂ ಕರೆಯುತ್ತಿದ್ದರು. ದಿನಾ ಬೆಳಿಗ್ಗೆ ಅಲ್ಲಿಯ ಪುರುಷರೆಲ್ಲ ರಾಮ, ರಾವಣ, ಲಕ್ಷ್ಮಣ, ಸೀತೆ ಹನುಮಂತ ಹೀಗೆ ಐದೈದು ಜನರು ಬಣ್ಣ ಬಳಸಿ ಬಿಲ್ಲು – ಬಾಣ, ಕೀರಿಟ, ಪಂಚೆಗಳನ್ನುಟ್ಟು ಒಂದು ಗುಂಪು ಒಂದೆಡೆ ಹೋದರೆ, ಮತ್ತೊಂದು ಪಂಚ ಪಾಂಡವರಾಗಿ ದ್ರೌಪದಿ ಜೊತೆ ಅಥವಾ ಕರ್ಣ, ದುರ್ಯೋಧನ , ಕೃಷ್ಣ ವಿಧುರ ಹೀಗೆ ಮತ್ತೊಂದು ದಿಕ್ಕಿಗೆ ಹೋಗಿ ರಾಮಾಯಣದ, ಮಹಾಭಾರತದ ಒಂದು ಪ್ರಸಂಗವನ್ನು ಪ್ರದರ್ಶಿಸುತ್ತಿದ್ದರು.
ಆಗಿನ್ನೂ ನಾನು ಶಾಲೆ ಸೇರಿರಲಿಲ್ಲ. ಇವರೆಲ್ಲ ನನ್ನ ಕಣ್ಣಿಗೆ ದೇವತೆಗಳೇ. ಆಕಾಶದಿಂದಿಳಿದು ನಮ್ಮ ಮನೆ ಮುಂದೆ ಬಂದಿದ್ದಾರೆ. ಎನ್ನುವಂತೆ. ರೌದ್ರ ವೇಷಧಾರಿಗಳು. ಪಾತಾಳದಿಂದ ಬಂದಂತಹ ರಕ್ಕಸರೇ. ಅಮ್ಮನಿಗೆ ನನ್ನ ಮನಸ್ಸಿನಲ್ಲಿ ಅವರ ಬಗ್ಗೆ ಇದ್ದ ಭಯದ ಬಗ್ಗೆ ಗೊತ್ತಿತ್ತು, ನಾನೇನಾದರೂ ಊಟ ಮಾಡಲು ಕೇಳದಿದ್ದಲ್ಲಿ, ಹಠ ಮಾಡಿದ್ದಲ್ಲಿ , ಅಮ್ಮಾ,
“ ಸಿಂಚನಾ, ಲಘು ಲಘುನೆ ಊಟ ಮುಗಿಸು ಇಲ್ಲಾಂದ್ರೆ ರಾವನ್ ಬರ್ತಾನೆ “ ಅವನಲ್ಲಿ ಪುಷ್ಪಕ ವಿಮಾನ ಉಂಟು ನಿನ್ನನ್ನು ಅದರಲ್ಲೇ ಹೊತ್ಕೊಂಡು ಹೋಗ್ತಾರೆ.
ಎಲ್ಲಿಗೆ ಹೋಗ್ತಾನೆ ಅಮ್ಮ?
ದೂರ ಒಂದು ಕಾದಿದೆ. ಅಲ್ಲಿ ಹೋಗೆ ರಾಕ್ಷಸನೋಬ್ಬನಿದ್ದಾನೆ. ಅವನಿಗೆ ಹೋಗೆ ಅಂದ್ರೆ ಬಹಳ ಇಷ್ಟ. ಆಟ ಅಮ್ಮನ ಮಾತು ಕೇಳದ ಮಕ್ಕಳನ್ನು ದೊಡ್ಡ ಬಾಣಲೆಯಲ್ಲಿ ಹಾಕಿ ಕುದಿಸುತ್ತಾನೆ. ಆ ಬಾಣಲೆಯನ್ನು ಇಡಲು ಒಂದು ದೊಡ್ಡ ಓಲೆ, ಆ ಓಲೆ ಹೊತ್ತಿಸಲು ಇಷ್ಟಿಷ್ಟು ದಡದ ಕಟ್ಟಿಗೆಗಳನ್ನು ಕಾದಿ ಕಡಿದು ಹಾಕುತ್ತಾನೆ.
ಹೌದಾ ... ಎಂದು ನಾಳಕ್ಕೆ ನಾಲ್ಕು ಬಾಯಲ್ಲಿ ಗಬ ಗಬನೇ ಊಟ ಓಡಿಬಿದುತಿದ್ದೆ.
ಆ ಬಳಿಕ ಅವರು ಬರುವುದೆಂದರೆ ನನಗೆ ಆತಂಕ. ದೂರದಲ್ಲಿ ಅವರ ಕಾಲಿನ ಗೆಜ್ಜೆಯ ದ್ವನಿ ಕೇಳಿಸಿದರೆ ನಾನು ಓಡೋಡಿ ಬಾಗಿಲ ಹಿಂದೆಯೋ ಬಚ್ಚಲು ಮನೆಯಲ್ಲೋ ಅವಿತು ಕೂರುತ್ತಿದ್ದೆ. ಆ ಭಯದ ಕಪ್ಪು ನೆರಳು ಈಗಲೂ ನನ್ನ ಮನಸ್ಸನ್ನು ಆವರಿಸುತ್ತದೆ.
ಅಮ್ಮನಿಗೆ ಆ ಬಳಿಕ ನನ್ನಿಂದ ಯಾವ ಕೆಲಸ ಮಾಡಿಸಿಕೊಳ್ಳಲಿದ್ರೂ ಅದೊಂದು ಮಂತ್ರದ ಕೋಲಿನಂತಾಯಿತು. ಅಪ್ಪ ಮಾತ್ರ ಅಮ್ಮನಿಗೆ
“ ಲೇ ...ವಿಜಯಾ ನಿನಗೇನಾದ್ರೂ ಬುದ್ದಿ- ಗಿದ್ದಿ ಇದೆಯಾ? ಅಲ್ಲಿ ಇಷ್ಟು ಸಣ್ಣ ಜೀವ ಅದು ಅದನ್ನು ಈಗಲೂ ಬೆದರಿಸಿಟ್ಟಿದ್ದೀಯ. “
ರೀ ಮತ್ತೇನ್ರಿ ...ಒಂದು ತುತ್ತು ತಿನ್ನೋಕು ಅರ್ಧ ತಾಸು ತಗೊತ್ತಾಳೆ. ಇತ್ತ ನನಗೆ ಕೈ ತುಂಬಾ ಕೆಲಸ . ನಾ ಏನ್ರಿ ಮಾಡಿ ಮತ್ತೆ” ಎಂದು ಮೂಗು ಕಣ್ಣು ಕೆಂಪಗೆ ಮಾಡಿ ಇನ್ನೇನು ಕಣ್ಣಿನ ಮಡು ಒದ್ದು ಕುಸಿಯುತ್ತೆ ಕುಸಿಯುತ್ತೆ ಎನ್ನುವಷ್ಟರಲ್ಲೇ ....
ಅಪ್ಪಾ ಮೆದುವಾಗಿ ಲೇ.... ಲೇ.... ಲೇ... ನನ್ನ ಬಂಗಾರಿ ಹಾಗಲ್ವೆ. ಇನ್ನೂ ಪುಟ್ಟ ಜೀವ ಯಾಕಿಷ್ಟು ಭಯ ತುಂಬಿಸೋದು. ಅದಲ್ಲದೆ ವಿಜಯ, ಈಗ ಯಾವ ಭಯ ತೋರಿಸಿ ನೀ ಅವಳಿಂದ ಕೆಲಸ ಮಾಡಿಸಿಕೊಳ್ಳುತ್ತಿಯೋ ಅದೇ ಭಯ ಮುಂದೆ ಅವಳನ್ನು ಆವರಿಸಿ ಯಾವುದೇ ಕೆಲಸ ಮಾಡಲೂ ಅವಳು ಹಿಂಜರಿಯಬಹುದು.
“ ಹೌದಾ “
ಹ್ಮೂ... ಅದಕ್ಕಾಗಿಯೇ ಈ ಭಯವನ್ನು ಈಗಲೇ ಬೇರುಸಹಿತ ಕಿತ್ತು ಹಾಕಲೇ ಬೇಕು.
“ ಅದು….. ಹೇಗೆ? “
ನೋಡು , ನಾನು ಅವರನ್ನು ನಮ್ಮ ಮನೆಯತ್ತ ಕರಿಸ್ತೀನಿ. ಅವರು ಯಾವ ದೇವರೋ ಅಲ್ಲ. ದಾನವರೂ ಅಲ್ಲ ಎಂದು ಖಾತ್ರಿ ಮಾಡಿಸ್ತೇನೆ
ಮರುದಿನ ನಾನು ಅಂಗಳದಲ್ಲಿ ಅಜ್ಜಿ ಜೊತೆ ಗಾಜಿನ ಚೂರುಗಳಿಂದ ಅಷ್ಟೋ... ಇಷ್ಟೋ... ಆಟ ಆಡುತ್ತಿದ್ದೆ. ಆಗಲೇ ದೂರದಿಂದ ಗೆಜ್ಜೆ ಸದ್ದು . ತಟ್ಟನೆ ಗಾಜಿನ ಚೂರುಗಳನ್ನು ಅಲ್ಲೇ ಬಿಸಾಕಿ ಓದಿ ಅಡುಗೆ ಮನೆಯಲ್ಲಿ ಅಮ್ಮನ ಸೀರೆ ಸೆರಗಲ್ಲಿ ಮೈಮರ್ಸಿಕೊಳ್ಳಲು ಜಗ್ಗಾಡಿದೆ.
“ ಸಿಂಚನಾ... ಏನಾಯಿತು ಕೂಸೇ?
ಅಮ್ಮಾ... ಅಲ್ನೋಡು ಹೋಗೆ ರಾಕ್ಷಸ ಬಂದ...
ಇದೆ ಹೊತ್ತಲ್ಲಿ ಅಪ್ಪ ಬೇರೆ ಕರೆಯಬೇಕಾ?
ಸಿಂಚನಾ... ಅಮ್ಮಾ ಎಲ್ಲಿದ್ದೀಯ ನೋಡು ಯಾರು ಬಂದಿದ್ದಾರೆ? ಎಂದು ಅಪ್ಪ
ಬೇಡಮ್ಮಾ ನಾನು ಹೋಗಲ್ಲ.
ಏನೂ ಆಗಲ್ಲ ನಿನ್ನ ಅಪ್ಪ ಇದ್ದರಲ್ಲಾ. ನಡಿ , ಬಾ ನಾನೂ ಬರ್ತೇನೆ.
ನನ್ನ ಆತಂಕದ ಹಿಂದೆ ಅಮ್ಮಾ, ಮುಂದೆ ಅಪ್ಪ. ಈಗ ಸ್ವಲ್ಪ ಧೈರ್ಯ ಬಂತು.
ಹೋ... ಹೋ... ಶಬ್ಭಾಶ್! ನನ್ನ ಕಂದಾ ಇವರ್ಯಾರು ನೋಡು.
ನಾನು ಸೆರಗಿನ ಮರೆಯಿಂದಲೇ ಅಳುಕುತಾ, “ ಹೊಗೆ ರಾಕ್ಷಸರು” ಎಂದೇ
ಅಲ್ಲಿದ್ದವರೆಲ್ಲರೂ ಗಹಗಹಿಸಿ ನಕ್ಕರು.
“ಇದೇನು ಹೊಸ ಹೆಸರು. ? ಎಂದು ರಾಮ ಪಾತ್ರಧಾರಿ ಕೇಳಲು,
“ ಅದು ಅವಳಲ್ಲ ನಿಮ್ಮ ವಿಜಯಕ್ಕ ಕೊಟ್ಟ ಹೆಸರು ಕಣೋ. ಪಾಪ ಈ ಬಡಜೀವ ತುಂಬಾನೇ ಹೆದರಿಕೊಂಡಿದೆ. ಅದಕ್ಕೆ ನಿಮ್ಮನ್ನು ಕರೆಸಿದೆ.
ಓಹೋಹೋ.... ಹಾಗಾ ವಿಷಯ...
ಬಾಮ್ಮಾ ಇತ್ಲಾಗೆ . ನಾವೇನು ರಕ್ಕಸರು ಅಲ್ಲ , ದೇವರೂ ಅಲ್ಲ. ನೋಡು ನಾನು ಸಲಿಂ ಕಾಕ. ಎಂದು ತನ್ನ ಬಿಲ್ಲು ಬಾಣ ಬದಿಗಿಟ್ಟು ಕಿರೀಟ ಕಳಚಿ ಮೀಸೆ ತೆಗೆದು ಮುಖ ತೋರಿಸಿದ. ರಜ್ಜಾಕ್ ಭಾಯಿ ರಾವಣ , ಭೀಮಣ್ಣ ಶೂರ್ಪನಕಿ , ಕಾಶಿನಾಥ ಲಕ್ಷ್ಮಣ, ಹೀಗೆಯೇ ಒಬ್ಬೊಬ್ಬರು ತನ್ನ ನಿಜರೂಪ ತೋರಿಸಿದಾಗ ಭಯ ಕಾಣೆಯಾಗಿ ಕಣ್ಣಲ್ಲಿ ನಗುವಿನ ಮಿಂಚೊಂದು ಹೊಳೆಯಿತು. ಈಗ ನೋಡಲು ಇನ್ನಷ್ಟು ವಿಕಾರ. ಜುಟ್ಟಿಲ್ಲ. ಬಣ್ಣವಿಲ್ಲ, ದಿರಸುಗಳಿಲ್ಲ. ಮೋಡ ಸರಿದ ಆಕಾಶ, ...
ಅಂತು ಅಪ್ಪನೆದೆ ಸಮೃದ್ದಿಯ ಬಯಲು.. ನನ್ನನ್ನು ಬಾಲಿ ಕರೆಸಿ ಅಲ್ಲರೊಂದಿಗೆ ಮಾತಾನಾಡಿಸಿದಾಗ ಅವಳು ಬಿಲ್ಲು ಬಾಣಗಳನ್ನು ಗಧೆಗಳನ್ನು ಮೆಲ್ಲನೆ ಎತ್ತಿ ರಟ್ಟಿನ ಅಯುಧಗಳೆಂದು ಖಚಿತವಾದ ಬಳಿಕ ಅಪ್ಪನಿಗೆ,
ಬಿಡ್ಲಾ ಬಾಣ ಅಪ್ಪಾ, ಅಪ್ಪಾ... ಬಾಣ ಬಿಡ್ಲಾ? ಎಂದಾಗ ಅಪ್ಪನಿಗೆ ಖುಷಿಯೋ ಖುಷಿ. ಅಂತೂ ತಾನು ಮಾಡಿದ ಕಾರ್ಯ ಸಫಲ ವಾಯಿತಲ್ಲ.
ವಿಜಯ ಈ ಸಂಭ್ರಮಕ್ಕೆ ಎಲ್ಲರ ಬಾಯಿ ಸಿಹಿ ಮಾಡು ಹೋದು ಏನಾದರೂ ತಗೊಂಡು ಬಾ. ಆ ದಿನ ಅಮ್ಮನಿಗೂ ಶಾಪಮುಕ್ತಳಾದೆನೆಂಬ ನಿರಾಳತೆ.
ಅಪ್ಪ ಅವರನ್ನು ಮಾತನಾಡಿಸುತ್ತಾ, ಸಲಿಂ ಭಾಯಿ ಹೇಗೆ ನಡೆಯುತ್ತಿದೆ ನಿಮ್ಮ ಬಯಲಾಟ “
ಏನ್ ಹೇಳ್ಲಿ ಬುದ್ದಿ? ಎಲ್ಲಾರೂ ನೋಡ್ತಾರೆ , ಹಾಗೆಯೇ ಹೋಗ್ತಾರೆ. ಕೈಗೆ ಪುದಿಕಾಸು ಹಾಕೋರು ಬಾಳ್ ಕಮ್ಮೀ. ನಾವೂ ನಮ್ಮ ಹಿರಿಯರು ಮಾಡುತ್ತಿದ್ದ ಪಾತ್ರಗಳನ್ನೇ ಮಾಡೋದು ಅದನ್ನು ಎಲ್ಲರೂ ನೋಡಿರ್ತ್ತಾರೆ. ಹಾಗೆ ಯಾರೂ ದುಡ್ಡೇ ಕೊಡಲ್ಲ. ಅದರೆ ಸಲಿಂ ಬಾಯ್ ನಿಮ್ಮ ವ್ಯಾಪಾರ...., ಕೋಳಿ ವ್ಯಾಪಾರ...ಇದೆ ಅಲ್ವ
ಅಯ್ಯೋ ... ಬುದ್ಧಿ ಮನೇಲಿ ನಾಲ್ಕೈದು ಮಕ್ಕಳು , ಹಿರಿಯರು ಕೋಳಿ ಮೊಟ್ಟೆ ಅವರಿಗೇನೆ ಸರಿಹೋಗುತ್ತೆ. ಇನ್ನು ಹಬ್ಬ ಹರಿದಿನಗಳಿದ್ದರೆ ಮಾತ್ರ ಹೆಂಗಸರು ತೊಡೋಕೆ ಬರ್ತ್ತಾರೆ.
“ ಮಕ್ಕಳನ್ನು ಶಾಲೆಗೇ ಸೇರಿಸಿಲ್ವಾ?
ಜೀವನ ಸಾಗೋದೆ ಕಷ್ಟವಾಗಿದೆ.ಮಕ್ಕಳನ್ನು ಶಾಲೆಗೆ ಸೇರಿಸಿದ್ರೆ . ಪುಸ್ತಕ ಪೆನ್ಸಿಲ್ಲಿನ ಖರ್ಚು ಎಲ್ಲಿಂದ ತರೋದು ಬುದ್ದಿ.
ಎಲ್ಲರೂ ತಂತಮ್ಮ ತಾಪತ್ರಯಗಳನ್ನು ಹೇಳುತ್ತಾ ಇದ್ರೂ. ಅಪ್ಪನ ಕಿವಿ ಇಲ್ಲಿದ್ದರೂ ಮನಸ್ಸು ಗಾಢ ಚಿಂತನೆಯಲ್ಲಿತ್ತು
“ ಒಂದು ಕೆಲಸ ಮಾಡಿ ಸಲಿಂ ಭಾಯಿ ಬರುವ ರವಿವಾರ ನಮ್ಮ ಹೋಟೆಲು ಮುಚ್ಚಿದ ಬಳಿಕ ಸಂಜೆ ನಮ್ಮ ವಠಾರದಲ್ಲಿ ಒಂದು ಪ್ರಸಂಗ ಮಾಡಿ ತೋರಿಸಿ. ಈಗ ಮುಂಗಡ ಹಣ ಕೊಡ್ತೇನೆ . ಬಾಕಿ ಆ ದಿನ ಕೊಡುವೆನು. ಸರಿಯಾ?
ಅವರೆಲ್ಲರ ಮುಖ ಬಿರುಬಿಸಿಲಲ್ಲಿ ಸುರಿದ ಅಲಿಕಲ್ಲ ಮಳೆಯಂತೆ ಅರಳಿತು.
“ ಸರಿ ಬುದ್ಧಿ ನಾವು ಸೀತಾ ಸ್ವಯಂವರ ಪ್ರಸಂಗ ಮಾಡ್ತೀವಿ ‘
ಸರಿಯಪ್ಪಾ ನಿಮಗೆ ಯಾವುದು ಸರಿ ಅನಿಸುತ್ತೋ ಅದನ್ನೇ ಮಾಡಿ ಎಂದು ಚಹಾ – ತಿಂಡಿ ಕೊಟ್ಟು ಕಳುಹಿಸಿದರು. ಅಂದು ಅಂಗಳದಲ್ಲಿ ಖುಷಿಯೋ ಖುಷಿ .
So beautiful ನಾನು Karnataka da ಬಗ್ಗೆ ಚೆನ್ನಾಗಿ ತಿಳಿದ ಹಾಂಗೆ ಆಯ್ತು
ReplyDeleteExcellent article
ReplyDeleteವಿಭಿನ್ನ ವಿಷಯದ ಬಗ್ಗೆ ಲೇಖನ ಬಹಳ ಸೊಗಸಾಗಿದೆ.
ReplyDelete