ಐತಿಹಾಸಿಕ ಬಸವನಗುಡಿ ಮತ್ತು ಗಾಂಧಿ ಬಜಾರ್
ಲೇಖನ - ರಾಮಮೂರ್ತಿ, ಬೆಸಿಂಗ್ ಸ್ಟೋಕ್
ನೀವು ಬೆಂಗಳೂರಿನಲ್ಲಿ ಬೆಳದೋ ಅಥವಾ ಹಿಂದೆ ವಾಸವಾಗಿದ್ದರೆ ಬಸವನಗುಡಿ ಗೊತ್ತಿರಬೇಕು, ಇಲ್ಲದೇ ಇದ್ದರೆ ನೀವು ಬೆಂಗಳೂರಿನವರಲ್ಲ ಅಂತ ನನ್ನ
ಭಾವನೆ. ಹಿಂದಿನ ಕಾಲದಲ್ಲಿ ಇದು ಸುಕ್ಕೇನ ಹಳ್ಳಿ ಅಂತ ಒಂದು ಊರು, ಕಡಲೇಕಾಯಿ ಬೆಳೆಯುವ ಜಾಗ, ಆದರೆ ದಂತಕಥೆ (legend ) ಪ್ರಕಾರ ಒಮ್ಮೆ ಒಂದು ಗೂಳಿ ಬಂದು ರೈತರ
ಬೆಳೆಯನ್ನು ಹಾಳುಮಾಡುತ್ತಿತ್ತು. ಒಬ್ಬ ರೈತ ಕೋಪದಲ್ಲಿ ಕೋಲಿನಿಂದ ಹೊಡೆದಾಗ ಈ ಪ್ರಾಣಿ ಜ್ಞಾನ
ತಪ್ಪಿ ಅಲ್ಲೇ ಬಿದ್ದಿದ್ದು ನೋಡಿ ರೈತನಿಗೆ ತುಂಬಾ ನೋವು ಬಂದು ಹಳ್ಳಿಯಲ್ಲಿ ಅದರ ನೆನಪಿಗೆ ಒಂದು
ಗುಡಿ ಕಟ್ಟಿದನಂತೆ, ಪ್ರತಿ ವರ್ಷ ಇಲ್ಲಿ ಕಡಲೇಕಾಯಿ ಪರಿಷೆ ಆಗುವುದು ಈ ಕಾರಣದಿಂದ. ಇದು ಈಗ ಬಸವನಗುಡಿ. ಸುಮಾರು ೧೮೦೦
ರಲ್ಲಿ ಈ ಪ್ರದೇಶದಲ್ಲಿ ಸುಮಾರು ಜನಸಂಖ್ಯೆ ಇತ್ತು, ೧೮೯೬ ನಲ್ಲಿ ಬೆಂಗಳೂರಿನ ಕೆಲವು
ಜಾಗದಲ್ಲಿ ಭಯಂಕರ ಪ್ಲೇಗ್ ಬಂದು ೩೦೦೦ ಜನರ ಮರಣ, ಅಂದಿನ ಡೆಪ್ಯುಟಿ ಕಮ್ಮಿಷನರ್
ಆಗಿದ್ದ ಮಾಧವ ರಾವ್ ಪ್ಲೇಗ್ ಬಂದ ಚಾಮರಾಜ ಪೇಟೆ ಮತ್ತು ಫೋರ್ಟ್ ಪ್ರದೇಶದಲ್ಲಿ ಉಳಿದವರನ್ನು
"ಸ್ವಲ್ಪ ದೂರದ" ಬಸವನಗುಡಿ ಮತ್ತು ಮಲ್ಲೇಶ್ವರದ ಕಡೆ ವಾಸ ಮಾಡಲು ಏರ್ಪಾಡು
ಮಾಡಿದರು. ಆಗಿನ ಸರ್ಕಾರಕ್ಕೆ ಇವರ ಸಲಹೆಗೆ ಬೆಂಬಲ ಕೊಟ್ಟು ಈ ಹೊಸ ಜಾಗಗಳ ಬೆಳವಣಿಗೆ ಆಯಿತು Town Planning ಇಲ್ಲೇ ಶುರು ವಾಗಿದ್ದು, ಮರಗಳ ವಿಶಾಲ ರಸ್ತೆಗಳು ಮತ್ತು ಅಂಗಡಿ ಬೀದಿಗಳು ಮತ್ತು
ಜನರಿಗೆ ತಕ್ಕಂತೆ ಬೇಕಾದ ಮನೆಗಳು, ನೀರು ಮತ್ತು ನೈರ್ಮಲ್ಯ ವ್ಯವಸ್ಥೆ ಮಾಡಿದವರು ಮಾಧವ
ರಾಯರು. ಹತ್ತಿರದಲ್ಲೇ ಲಾಲ್ ಬಾಗ್ ಸಹ ಶ್ರೀ ಕ್ರುಮ್ಬೆಗೋಲ್ ಅವರ ನೇತೃತ್ವದಲ್ಲಿ ಚೆನ್ನಾಗಿ
ಅಭಿವೃದ್ಧಿ ಆಗುತ್ತಿತ್ತು. ಇಲ್ಲಿ ತಲತಲಾಂತರಿಂದ ಇರುವ ಕುಟುಂಬಗಳು ಅನೇಕರು, ಎಲ್ಲಾ ಮಧ್ಯಮವರ್ಗದವರು. ಆದರೆ
ಈಚೆಗೆ ಹಳೇ ಮನೆಗಳು ಹೋಗಿ ಮೂರು ನಾಲ್ಕು ಅಂತಸ್ತಿನ ಮನೆಗಳು ಬಂದಿವೆ. ಗೋವಿಂದಪ್ಪ, ಸರ್ವೇಯರ್, ಹೆಚ್ ಬಿ ಸಮಾಜ ರಸ್ತೆಗಳು
ನಾಗಸಂದ್ರ ರಸ್ತೆಯಿಂದ ಶುರುವಾಗಿ ಲಾಲ್ ಬಾಗ್ ವರೆಗೆ ಬಹಳ ಉತ್ತಮ ದರ್ಜೆಯ ವಸತಿ ಪ್ರದೇಶಗಳು. (Residential areas )
ಗಾಂಧಿ ಬಜಾರ್ ಬಸವನಗುಡಿಯ ಪ್ರಮುಖ ಬೀದಿ, ಇದು ರಾಮಕೃಷ್ಣ ಆಶ್ರಮದಿಂದ ಶುರುವಾಗಿ ಸುಮಾರು ಒಂದು ಕಿಲೋಮೀಟರ್
ಉದ್ದದ ರಸ್ತೆ. ಇಲ್ಲಿ ಅನೇಕ ಅಂಗಡಿಗಳು
ಮತ್ತು ಜಾಗಗಳು ಬಹಳ ವರ್ಷದಿಂದ ಇವೆ. ಜಾಸ್ತಿ ಬದಲಾವಣೆ ಕಂಡಿಲ್ಲ. ಗರಿ ಗರಿ ಮಸಾಲೆ ದೋಸೆ ಬೇಕಾದರೆ ವಿದ್ಯಾರ್ಥಿ ಭಾವನ್ ಗೆ ಹೋಗಿ. ೧೯೪೩ರಲ್ಲಿ ಈ ಹೋಟೆಲ್ ಅಂದರೆ ಕೆಫೆ
ಪ್ರಾರಂಭ ಆದದ್ದು ಹತ್ತಿರ ಇರುವ ಶಾಲೆಗಳ ವಿದ್ಯಾರ್ಥಿಗಳಿಗೆ. ಅಕ್ಟೋಬರ್ ೨೦೧೮ ರಲ್ಲಿ ೭೫ನೇ ಶತಮಾನೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. ಇದರ ವೈಶಿಷ್ಟ್ಯ ಬಹಳ, ಜಾಗ ಚಿಕ್ಕದು, ಒಳಗೆ ಸರಳವಾದ ವಾತಾವರಣ, ಗೋಡೆಗಳ ಮೇಲೆ ಕರ್ನಾಟಕದ ಪ್ರಸಿದ್ಧ ಕವಿಗಳು ಮತ್ತು ಲೇಖಕರ ಭಾವ
ಚಿತ್ರಗಳು.(ಅನ್ಯಾಯವೆಂದರೆ ಇಬ್ಬರು ಮೂವರು ರಾಜಕಾರಣಿಗಳದ್ದೂ ಸಹ ಇದೆ!!) ಇಲ್ಲಿ ಮಾಡುವುದು
ಕೆಲವೇ ತಿಂಡಿಗಳು, ಊಟ ಇಲ್ಲ. ದೋಸೆ ಮತ್ತು ರವೆ ಇಡ್ಲಿ ಪ್ರಮುಖವಾದ ತಿಂಡಿಗಳು. ಪಂಚೆ ಉಟ್ಟ ಮಾಣಿಗಳು ಒಟ್ಟಿಗೆ
೨೦ ದೋಸೆ ತಟ್ಟೆಗಳನ್ನು ಹೊತ್ತು ತರುತ್ತಾರೆ, ಚಟ್ನಿ ಒಂದು
ಪಾತ್ರೆಯಲ್ಲಿ ತಂದು ಬಡಿಸುತ್ತಾರೆ. ಕೈ ಒರಿಸಿಕೊಳ್ಳಕ್ಕೆ ಹಿಂದೆ,ಕನ್ನಡ ದಿನ ಪತ್ರಿಕೆಗಳನ್ನ
ಹರಿದು ಕೊಡುತ್ತಿದ್ದರು, ಆದರೆ ಈಗ
ಪರವಾಗಿಲ್ಲ ಸರಿಯಾದ tissue ಗಳು ಇದೆ. ರುಚಿಯಾದ ಕಾಫಿ ಎರಡು ಬಟ್ಟಲಿನಲ್ಲಿ ಕೊಡುತ್ತಾರೆ. ಹೊರಗೆ ಜನಗಳು ಮುತ್ತಿಗೆ
ಹಾಕಿರುತ್ತಾರೆ. ಆದ್ದರಿಂದ ನಿಮಗೆ ಅಲ್ಲಿ ವಿರಾಮವಾಗಿ ಕೂರುವುದಕ್ಕೆ
ಅವಕಾಶವಿಲ್ಲ. ಆದರೆ ಇಲ್ಲಿ ತಿನ್ನದೇ ಹೋದರೆ
ಬೆಂಗಳೂರಿಗೆ ಬಂದಹಾಗಿರಲ್ಲ.
ಬಸವನಗುಡಿ co -operative
society ಬಹಳ ಹಳೇಯ ಸಂಸ್ಥೆ, Sir
MV ದಿವಾನರಾಗಿದ್ದಾಗ ಶುರು ಮಾಡಿದ್ದು, ಈಗ ಈ ಕಟ್ಟಡ ಇಲ್ಲ ಆದರೆ ಸಂಸ್ಥೆ ಇದೆ. ಇದರ ಮುಂದೆ ಅನೇಕ ಹೂವಿನ
ಮತ್ತು ಹಣ್ಣು ಮತ್ತು ಪೂಜೆ ಸಾಮಾನುಗಳ ಅಂಗಡಿಗಳು foot path ಮೇಲೆ ಇದೆ.
ಹಬ್ಬದ ಹಿಂದಿನ ದಿನ ಇಲ್ಲಿ ಕಾಲು ಇಡೋಕ್ಕೂ ಜಾಗ ಇಲ್ಲ ಅಷ್ಟು ಜನ.
ಈಚೆಗೆ ಇಲ್ಲಿ ಜನ ತಮ್ಮ ಮನೆಯಲ್ಲಿ ಹಬ್ಬದ ದಿನ ಹೋಳಿಗೆ ಲಾಡು ಇತ್ಯಾದಿ ಮಾಡುವುದಿಲ್ಲವಂತೆ, ಏಕೆಂದರೆ ಗಾಂಧಿ ಬಜಾರ್ ನಲ್ಲಿ ಎಲ್ಲ ಸಿಗುತ್ತೆ. ಸಂಕ್ರಾಂತಿ ಸಮಯದಲ್ಲಿ ನಿಮಗೆ
ಎಳ್ಳು, ಸಕ್ಕರೆ ಅಚ್ಚು ಕಬ್ಬು ಮುಂತಾದವು pre-pack ಸಿಗತ್ತೆ. ಗಾಂಧಿ ಬಜಾರ್ one stop for all your needs.
ಈ ರಸ್ತೆ ಕೊನೆಯಲ್ಲಿ ಬಸವನಗುಡಿ ಕ್ಲಬ್. ಎರಡೂ ಕಡೆ ಸಾಲು ಮರಗಳು. ಮಾಸ್ತಿ ಅವರು ಈ ಕ್ಲಬ್ ಗೆ ಸಾಯಂಕಾಲ ಹೋಗುವಾಗ ಛತ್ರಿ ಹಿಡಿದು ಹೋಗುತ್ತಿದ್ದರಂತೆ, ಯಾಕೆ ಅಂತ ಗೊತ್ತಲ್ಲ ..... ಕಾಗೆಗಳ ಕಾಟ!!? ಈಗ ಮರದ ಮೇಲೆ ಕಾಗೆಗಳೂ ಪತ್ತೆ ಇಲ್ಲ, ಯಾವ ಹಕ್ಕಿಗಳೂ
ಇಲ್ಲ. ದೊಡ್ಡ ಗಣೇಶನ ದೇವಸ್ಥಾನ ಹತ್ತಿರದಲ್ಲೇ ನಂದಿ ಗುಡಿ . ಇದು ೧೫೩೭ ಕೆಂಪೇ ಗೌಡರು ಕಟ್ಟಿ ಸಿದ್ದು, ಇದರ ವಾಸ್ತುಶಿಲ್ಪಿ
ವಿಜನಗರ ಶೈಲಿಯದು. ನಂದಿಯ ವಿಗ್ರಹ ೧೫ ಅಡಿ ಎತ್ತರ ಮತ್ತು ೨೦ ಅಡಿ ಅಗಲ . ಈ ಎರಡು ದೇವಸ್ಥಾನಗಳು ಬ್ಯುಗಲ್ ರಾಕ್ ಅನ್ನುವ ಬಂಡೆಗಳ ಮತ್ತು ಮರಗಳ ಮಧ್ಯೆ ಇದೆ. ಹಿಂದಿನ
ಕಾಲದಲ್ಲಿ ಜನಗಳಿಗೆ ಎಚ್ಚರಿಕೆಯ ಸುದ್ದಿ ಕೊಡುವ ಮುಂಚೆ ಗುಡ್ದದ ಮೇಲಿಂದ ಕಹಳೆ ಊದತ್ತಿದ್ದರು , ಇದು ಈಗ Bugle
Rock.
ಬುಲ್ ಟೆಂಪಲ್ ರಸ್ತೆಯಲ್ಲಿ. ಸ್ವಲ್ಪ ಮೇಲೆ ಹೋದರೆ ಡಿವಿಜಿ
ಅವರು ಶುರುಮಾಡಿದ್ದ Gokhale Institute ಇದೆ, ೧೯೧೫ ರಲ್ಲಿ ಮಹಾತ್ಮ ಗಾಂಧಿ ಇಲ್ಲಿಗೆ ಭೇಟಿ
ಕೊಟ್ಟಿದ್ದರು ಆಗ ಡಿವಿಜಿ ಇವರನ್ನು ಭೇಟಿ ಮಾಡಿದ್ದರು.
ಡಿವಿಜಿ ಅವರ ಮನೆ ಗಾಂಧಿ ಬಜಾರ್ ಗೆ ಹತ್ತಿರ ಇತ್ತು ಈಗ ಈ ರಸ್ತೆ
ಡಿವಿಜಿ ರಸ್ತೆ. ಆದರೆ ಅವರ ಮನೆ ಈಗ ಇಲ್ಲ ಇದನ್ನು ಕೆಡವಿ ಅಂಗಡಿಗಳು ಬಂದಿವೆ. ನೋಡಿ ಅದೇ ಇಂಗ್ಲೆಂಡ್ ನಲ್ಲಿ ಇಂಥಹ ಹೆಸರಾಂತ ವ್ಯಕ್ತಿ ಗಳ ಮನೆಗಳನ್ನು ನಾಜೂಕಾಗಿ ಸಂರಕ್ಷಿಸುತ್ತಾರೆ. ಹಾಗೇ ಕೈಲಾಸಂ ಬೆಳೆದಿದ್ದ ಮನೆ White House ಕೂಡಾ ಈಗ ಇಲ್ಲ. ಸದ್ಯ ಮಾಸ್ತಿಯವರ ಮನೆ ಇಲ್ಲೇ ಹತ್ತಿರದಲ್ಲಿ ಈಗ ಒಂದು
ಮ್ಯೂಸಿಯಂ ಆಗಿದೆ, ಅವರ ಮೊಮ್ಮಗಳ ಕಾಳಜಿಯೇ ಇದಕ್ಕೆ ಕಾರಣ.
ಈ ರಸ್ತೆಯಲ್ಲಿ ಕೆಲವು ಅಂಗಡಿಗಳು ಬಹಳ ವರ್ಷದಿಂದ ಇದೆ.
ಮಲ್ನಾಡ್ ಸ್ಟೋರ್ಸ್ ನಲ್ಲಿ ಒಳ್ಳೆ ಅಡಿಕೆ ಮತ್ತು ಇತರ ಮಲೆನಾಡಿನ ಪದಾರ್ಥಗಳು, ಶ್ರೀನಿವಾಸ ಬ್ರಾಹ್ಮಣರ ಬೇಕರಿಯ ಅನೇಕ ತಿಂಡಿಗಳು, ಕುರುಕುಲು ಮತ್ತು
ಬ್ರೆಡ್ ಮಾರಾಟ. "ಕಾಂಗ್ರೆಸ್ ಕಡ್ಲೇಬೀಜ" ಬಹಳ ಫೇಮಸ್. ಈ ಹೆಸರು ಹೇಗೆ
ಬಂತು ಅನ್ನುವುದು ಗೊತ್ತಿಲ್ಲ, ಆದರೆ ನ್ಯಾಷನಲ್ ಕಾಲೇಜ್ ವೃತ್ತದಲ್ಲಿ ಸುಮಾರು ವರ್ಷದ ಹಿಂದೆ
ಗೋಖಲೆ ಅನ್ನುವರು ಈ ಕಡ್ಲೇಬೀಜವನ್ನು ಮಾರುತಿದ್ದು ನನಗೆ ಜ್ಞಾಪಕ ಇದೆ. ಇದಕ್ಕೆ ಕಾಂಗ್ರೆಸ್ ಅಂತ
ನಾಮಕರಣ ಇತ್ತು. ಅಂದಹಾಗೆ ಈಗ ಈ ವೃತ್ತ ಇಲ್ಲ Fly Over ಕಟ್ಟಿ ಹಾಳುಮಾಡಿದ್ದಾರೆ. ಇಲ್ಲೇ ಹತ್ತಿರದಲ್ಲಿ ಸುಬ್ಬಮ್ಮನ ಅಂಗಡಿ. ಇದು ಇವತ್ತಿಗೂ
ತ್ರಿಕೋನವಾದ ಸಣ್ಣ ಸ್ಥಳ . ಈಕೆ ಸುಮಾರು ೭೦
ವರ್ಷದ ಹಿಂದೆ ಬಾಲ ವಿಧುವೆಯಾಗಿ ಬೆಂಗಳೂರಿನಲ್ಲಿ ಅಡುಗೆ ಕೆಲಸ ಶುರು ಮಾಡಿ, ಕೊನೆಗೆ ಒಂದು ಸಣ್ಣ
ಅಂಗಡಿ ತೆರೆದರು. ಹಪ್ಪಳ, ಸಂಡಿಗೆ, ಹುರಿಗಾಳು ಇತ್ಯಾದಿ ಮಾರಾಟ ಅಲ್ಲಿ. ಅವರ ಮನೆಯವರು ಅದೇ ಆಂಗಡಿಯಲ್ಲಿ
ಇನ್ನೂ ವ್ಯಾಪಾರ ನಡೆಸುತ್ತಿದ್ದಾರೆ. ನಮ್ಮಂಥ ಹೊರನಾಡಿನ ಕನ್ನಡಿಗರು ಊರಿಗೆ ಬಂದಾಗ ಇಲ್ಲಿ ಮುತ್ತಿಗೆ ಹಾಕಿರುತ್ತಾರೆ.
ಬಸವನಗುಡಿ ಯಲ್ಲಿ ನಾಷನಲ್ ಕಾಲೇಜ್ ಬಹಳ ಹಳೇಯ ಸಂಸ್ಥೆ. ೧೯೧೭ ರಲ್ಲಿ
ಹೈಸ್ಕೂಲ್ ಶುರುವಾಗಿ ೧೯೪೫ ರಲ್ಲಿ ಕಾಲೇಜ್ ಸಹ ಬಂತು. ಇದೇ ಶಾಲೆಯಲ್ಲಿ ಓದಿ ಅಲ್ಲೇ ವಾಸಮಾಡಿ
ಕೊನೆಗೆ ಪ್ರಿನ್ಸಿಪಾಲ್ ಆಗಿದ್ದವರು ಡಾ ನರಸಿಮಯ್ಯ, ಪ್ರೀತಿ ಇಂದ ಎಲ್ಲಾರಿಗೂ H N ಅವರು. ಇವರ ಸರಳತೆ ಮತ್ತು ಗಾಂಭೀರ್ಯ ಅಪಾರ. ಬೆಂಗಳೂರು
ವಿಶ್ವವಿದ್ಯಾನಿಲಯಕ್ಕೆ ಉಪಕುಲಪತಿ ಆಗಿದ್ದರು. ಇವರು ಕಾಲೇಜ್
ಹಾಸ್ಟೇಲ್ ನಲ್ಲಿ ಒಂದು ಸಣ್ಣ ಕೊಠಡಿಯಲ್ಲಿ ವಾಸವಾಗಿದ್ದರು, ಯಾವಾಗಲೂ ಖಾದಿ ಪಂಚೆ ಜುಬ್ಬಾ ಮತ್ತು ಟೋಪಿ, ನಿಜವಾದ ಗಾಂಧಿ ಅಂದರೆ ಇವರೇ.
ಪ್ರೊ ನಿಸ್ಸಾರ್ ಅಹ್ಮದ್ ಅವರ ಪ್ರೀತಿಯ ರಸ್ತೆ ಗಾಂಧಿ ಬಜಾರ್. ೨೦೦೮
ರಲ್ಲಿ ನಮ್ಮ ಕನ್ನಡ ಬಳಗದ ಮುಖ್ಯ ಅಥಿತಿಯಾಗಿ ಬಂದವರು ನಮ್ಮ ಮನೆಯಲ್ಲಿ ೩ ವಾರ ಇದ್ದರು. ಒಂದು
ಸಂಜೆ ಕೆಲವು ಮಿತ್ರರ ಜೊತೆ ಮಾತನಾಡಿದಾಗ ದಿವಂಗತ ಶ್ರೀ ರಾಜಾರಾಮ್ ಕಾವಳೆ ಅವರನ್ನು ಮುಂದಿನ
ಜನ್ಮ ಹುಟ್ಟಿದರೆ ಅದು ಎಲ್ಲಿ ಸಾರ್ ಅಂತ ಕೇಳಿದರು. ನಿಸಾರ್ ಅವರ ಉತ್ತರ ಹೀಗಿತ್ತು "ನೋಡಿ, ನನಗೆ ಮುಂದಿನ ಜನ್ಮ ಬಗ್ಗೆ ನಂಬಿಕೆ ಇಲ್ಲ ಆದರೆ ನಾನು ಪುನಃ ಹುಟ್ಟಿದರೆ ಅದು ಭಾರತಲ್ಲೇ , ಕರ್ನಾಟಕದಲ್ಲೇ ಬೆಂಗಳೂರಿನಲ್ಲಿ ಮತ್ತು ಗಾಂಧಿ ಬಜಾರ್ ಹತ್ತಿರ !!
" ಬಹುಶಃ ಮಾಸ್ತಿಯವರು ಮತ್ತು ಡಿವಿಜಿ ಅವರೂ ಇದೇ ಉತ್ತರ
ಕೊಡುತ್ತಿದ್ದರು ಅಂತ ಕಾಣತ್ತೆ.
ಇದೇ ರಸ್ತೆಯಲ್ಲಿ BMS ಕಾಲೇಜ್
ಪ್ರಸಿದ್ದವಾದ ಮತ್ತು ಬಹಳ ಹಳೇಯ ಇಂಜಿನೀರಿಂಗ್ ಕಾಲೇಜ್. ೧೯೪೬
ರಲ್ಲಿ ಸ್ಥಾಪನೆ ಭಾರತದಲ್ಲಿ ಇದು ಮೊದಲನೇಯ ಖಾಸಗಿ ಇಂಜನೀರಿಂಗ್ ಕಾಲೇಜ್ .
ನಿಮಗೆ ವಿದ್ಯಾರ್ಥಿ ಭವನದ ದೋಸೆ ಕರಗಿದ್ದರೆ, ಈ ರಸ್ತೆಯಲ್ಲಿ ಮೇಲೆ ಕಾಮತ್ ಹೋಟೆಲ್ ನಲ್ಲಿ ಉತ್ತರ ಕರ್ನಾಟಕದ ಜೋಳದ
ರೊಟ್ಟಿ ಸೊಗಸಾದ ಊಟ ಸಿಗುತ್ತೆ.
ಕೊನೆಯದಾಗಿ ಒಂದು ವಿಷಾದಕರ ಸಂಗತಿ. ಗಾಂಧಿ ಬಜಾರ್ ಅಷ್ಟು ಖ್ಯಾತವಾದ
ಮತ್ತು ಐತಿಹಾಸಿಕ ರಸ್ತೆ ಆದರೆ ಈಚೆಗೆ ಎಲ್ಲೆಲ್ಲಿ ನೋಡಿದರು ಕಸ. foot path ಸರಿಯಾಗಿಲ್ಲ, ರಸ್ತೆ ತುಂಬಾ pot holes. ನೋಡಿದರೆ ತುಂಬಾ ಬೇಜಾರಾಗುತ್ತೆ. ಇಲ್ಲಿ ಬಡತನ ಇಲ್ಲ, ಮದ್ಯಮ ಮತ್ತು ಉತ್ತಮ
ವರ್ಗದ ಜನರ ವಾಸ. ಆದರೂ ಈ ಸ್ಥಿತಿ ಏಕೆ? ಅನ್ನುವುದು ದೊಡ್ಡ ಸಂಶಯ.
ಆದರೂ ನಾವು ಅಲ್ಲಿಗೆ ಹೋದಾಗ ಗಾಂಧಿ ಬಜಾರ್ ಗೆ ಹೋಗಲೇ ಬೇಕು, ವಿದ್ಯಾರ್ಥಿ ಭವನಲ್ಲಿ ದೋಸೆ ತಿನ್ನಲೇ ಬೇಕು, ನೀವು ಅಷ್ಟೇ.
೧೯೪೬
ರಾಮಮೂರ್ತಿ
ಬೆಸಿಂಗ್ ಸ್ಟೋಕ್
ಈ ಲೇಖನ ಓದುವಾಗ ರಾಮಮೂರ್ತಿ ಅವರೊಂದಿಗೆ ವಿರಾಮವಾಗಿ ನಡೆದಾಡುತ್ತಾ, ಹರಟುತ್ತಾ, ಬಸವನಗುಡಿಯ, ಗಾಂಧಿಬಜಾರಿನ ರಸ್ತೆಗಳಲ್ಲಿ, ಗಲ್ಲಿಗಳಲ್ಲಿ ಅಡ್ಡಾಡಿಬಂದ ಅನುಭವವಾಯಿತು. ಈ ಬರಹದಲ್ಲಿ ಏನಿಲ್ಲವೆಂದೂ ಒಂದರ್ಧ ಶತಮಾನ ಕಾಲದ ಮಧುರ ಸ್ಮೃತಿಗಳಿವೆ. ರಾಮಮೂರ್ತಿ ಅವರು ಆ ಸ್ಮೃತಿಗಳನ್ನೆಲ್ಲಾ ಸುಂದರವಾಗಿ ಹಿಡಿದಿಟ್ಟಿದ್ದಾರೆ. ಯಾರಿಗೇ ಆದರೂ ಅವರ ಬಾಲೋದ್ಯಾನದಲ್ಲಿ, ನೆನಪಿನ ಲೋಕದ ಗಲ್ಲಿಗಲ್ಲಿಗಳಲ್ಲಿ ಗುರಿಯಿಲ್ಲದೆ ಅಲೆದಾಡುವುದೆಂದರೆ ಅದೊಂದು ಆಪ್ಯಾಯಮಾನ ಅನುಭವ. ರಾಮಮೂರ್ತಿ ಅವರು ಮಾಡಿರುವುದೂ ಅದನ್ನೇ. ಹತ್ತತ್ತಿರ ಅರ್ಧ ಶತಮಾನ ಕಾಲ ದೇಶದಿಂದ ದೂರವಿದ್ದರೂ ಅವರ ಕನ್ನಡ ಭಾಷೆಯಲ್ಲಿರುವ ರಸಾರ್ದ್ರತೆ ಸೋಜಿಗವೆನಿಸುತ್ತದೆ. ಅದರರ್ಥ ರಾಮಮೂರ್ತಿ ಅವರು ದೂರದ ಇಂಗ್ಲೆಂಡ್ ನಲ್ಲಿದ್ದೂ ಕನ್ನಡಕ್ಕೆ, ಕನ್ನಡ ನಾಡಿಗೆ ಭಾವುಕ ಸಾಮೀಪ್ಯವನ್ನು ಇಟ್ಟುಕೊಂಡೇ ಬದುಕುತ್ತಿದ್ದಾರೆ. ಎರಡು ಸಂಸ್ಕೃತಿಗಳಲ್ಲಿ ಬದುಕುವ ಅನಿವಾರ್ಯತೆ ಇರುವವರು ಆ ಎರಡೂ ಸಂಸ್ಕೃತಿಗಳ ಉತ್ತಮಾಂಶಗಳನ್ನು ಸ್ವೀಕರಿಸಿ ಬದುಕುವುದು ಒಳ್ಳೆಯದು. ನಮ್ಮ ಋಗ್ವೇದ ಹೇಳುವುದೂ ಅದನ್ನೇ. "ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ" -ಅಂದರೆ ಸದ್ಭಾವನೆಗಳು ವಿಶ್ವದೆಲ್ಲೆಡೆಯಿಂದಲೂ ನಮ್ಮೆಡೆಗೆ ಬರಲಿ ಅಂತ. ರಾಮಮೂರ್ತಿ ಅವರು ಹಾಗೇ ಬದುಕುತ್ತಿರುವುದನ್ನು ನಾನು ಬಲ್ಲೆ.
ReplyDeleteಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
ಒಂದು ಬಿನ್ನಹ-
ಲೇಖನದಲ್ಲಿ ತುಂಬಾ ಕಾಗುಣಿತ ದೋಷಗಳಿವೆ. ಸಂಪಾದಕರು ಅವನ್ನು ದಯವಿಟ್ಟು ಗಮನಿಸಿಕೊಳ್ಳಬೇಕು.
ಪ್ರೊ ಕೃಷ್ಣೇ ಗೌಡರಿಗೆ ಚಿಲುಮೆಯ ಲೇಖನ ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು. ನಮಗೆ ಕಂಡ ಬಹುತೇಕ ತಿದ್ದುಪಡಿಗಳನ್ನು ಮಾಡಿದ್ದೇವೆ ಸಾರ್. ಸಾಧ್ಯವಾದಲ್ಲಿ ತಾವೂ ನಮ್ಮ ಜಾನಪದ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ
Deleteಶ್ರೀ ರಾಮ ಮೂರ್ತಿಯವರೇ ಲೇಖನ ಸೊಗಸಾಗಿದೆ. ಓದುತ್ತಿರಲು ಅಲ್ಲೇ ಓಡಾಡಿದ ಅನುಭವ ಮರುಕಳಿಸುತ್ತದೆ. Thank you sir
ReplyDelete