ಕವನ

ಸ್ಥಳೀಯರ  ಕವನಗಳಿಗೆ ಈ ಪುಟ ಮೀಸಲು.
ತಮ್ಮ ಕಥೆ ಕವನಗಳನ್ನು horanadachilume@gmail.com ಗೆ ಕಳಿಸಿ.


ಹೋಳಿಯ  ಹುಣ್ಣಿಮೆ
ರಚನೆ - ಜಗದೀಶ ಚಂದ್ರ ಬಿ ಎಸ್



ಹೋಳಿಯ  ಹುಣ್ಣಿಮೆ ಬಂದಿಹುದು
            ಕೃಷ್ಣನು ಚಂದ್ರನ ಹಿಂದೆ ಅಡಗಿಹನೆ? //

ಸಖಿಯರೇ ಬನ್ನಿ, ಕೃಷ್ಣನ ಹುಡುಕಿ
ಓಕುಳಿಯಾಟವ ಸವಿಯುವ ಬನ್ನಿ  
ಕೃಷ್ಣನ ಜೊತೆಯಲಿ ಓಕುಳಿ ಆಡಿ
ಪಾವನ ರಾಗುವ ಬನ್ನಿರೆ ಎಲ್ಲರು //

            ನೇಮ ವೆಂಬ ಬಣ್ಣವ ತಂದು
            ನಿಷ್ಠೆ  ಎಂಬ ಸುಜಲಕೆ ಬೆರೆಸಿ
            ಭಕ್ತಿ ಭಾವದಿ ನರ್ತಿಸಿ ಅರ್ಪಿಸುತಾ  
            ಜಗದಾ ಒಡೆಯಗೆ ನಮಿಸುವ ಬನ್ನಿ  

*******************************************

ಹೋಳಿಯ ಬಣ್ಣ
ರಚನೆ - ಜಗದೀಶ ಚಂದ್ರ ಬಿ ಎಸ್


ಹಬ್ಬ ಬಂದಿತಣ್ಣ   ಹೋಳಿ ಹಬ್ಬ ಬಂದಿತಣ್ಣ
ಹೋಳಿ ಹಬ್ಬ ಬಂದಿತಣ್ಣ   ಬಣ್ಣ ಬಣ್ಣ ತಂದಿತಣ್ಣ
ಎಲ್ಲ ಬಣ್ಣ ಸೇರಿಕೊಂಡು  ರಂಗಿನಾಟ ಆಡಿತಣ್ಣ //

ಯಾವ ಬಣ್ಣ ಒಳ್ಳೆ ಬಣ್ಣ     ವರ್ಣನೆಯಾ ಕೇಳಿರಣ್ಣ
ಎಲ್ಲ ಬಣ್ಣಕದರದೇ     ಛಾಪು ಉಂಟು ನೋಡಿರಣ್ಣ //

ಉತ್ಸಾಹದ ಚಿಲುಮೆ ನಾನೆ     ಕೂಗಿತೀಗ ಕೆಂಪು ಬಣ್ಣ  
ವಿಶ್ವಾಸದ ಕುರುಹು ನಾನೆ    ಹೇಳಿತೀ ಕಿತ್ತಳೆ ಬಣ್ಣ //

ಶಾಂತಿಯ  ಸಂಕೇತ ನಾನೆ   ಹೇಳಿತಾ ನೀಲಿ ಬಣ್ಣ
ಸಂತಸವಾ ಮನಕೆ  ಕೊಡುವೆ   ಹೇಳಿತೀಗ ಹಸಿರು ಬಣ್ಣ //

ಉತ್ತೇಜನ ಕೊಡುವೆ ನಾನು   ಸಾರುತಿದೆ ಹಳದಿ ಬಣ್ಣ
ಮಹತ್ವಾಕಾಂಕ್ಷೆಗೆ    ಕುರುಹು ನಾನೆ ನೇರ್ಳೆ  ಬಣ್ಣ //

ಎಲ್ಲ ಬಣ್ಣ ಬಿಳಿ ಬಣ್ಣ   ಶುಭ್ರತೆ ಸಂಕೇತವಣ್ಣ
ಜೊತೆಗೆ ಕೊಂಚ ಕಪ್ಪು ಬಣ್ಣ   ಇನ್ನೂ ಚೆಂದ ಕಾಣ್ವೆನಣ್ಣ//


ನಿವೇದನೆ 
ಸೀತಾತನಯ
(ಜಿ.ಎಸ್. ಟಿ. ಪ್ರಭು)


ಮುಸ್ಸಂಜೆಯ ಮಸುಕಿನಲಿ ನಿನ್ನ ರೂಪವ ಕಂಡಾಗ
ಚಂದಿರನೂ ನಾಚಿ ಮೋಡಗಳ ಹಿಂದೆ ಸರಿದಾಗ
ನಕ್ಷತ್ರಗಳ ಮಿಣುಕಿನ ಬೆಳಕಿನಲ್ಲಿ ನಾ ಮೌನಕ್ಕೆ ಶರಣಾದಾಗ  
ಮಸ್ತಿಷ್ಕದೊಳು ಭಾವನೆಗಳ ತರಂಗಗಳು ಹುಚ್ಚೆದ್ದು ಕುಣಿದಾಗ 
ಮನಸಿನಾ ತುಮುಲುಗಳ ಸಹಿಸದಾದೆನು ನಾನಾಗ

ಅತಿ ಶೀಘ್ರದಿ ನಿದ್ರಾದೇವಿಯ ದಾಸನಾಗಿ ಕನಸಿನ  ವಶವಾಗಿರಲು
ನೀ ದರ್ಪಣದ ಮುಂದೆ ನಿಂತು ಮುದ್ದಾದ ಮುಂಗುರುಳ ತೀಡುತಿರಲು 
ಕಣ್ಣಲಿ ಪ್ರೀತಿಯ ಕಾಂತಿಯು ಇಮ್ಮಡಿಸಿ ಚಿಮ್ಮುತಿರಲು
ಇನಿಯನ ಸಂಗ ಬಯಸುವ ಗೆರೆಗಳು ಮಸ್ತಕದಿ ಮೂಡಿರಲು
ನೀರಸ ಮೌನವು ಕೊಣೆಯಲ್ಲ ಕಾರ್ಮೋಡಕವಿದಂತೆ ತುಂಬಿರಲು
ಹಿಂಬದಿಯಿಂದ ನಾ ನಿನ್ನ ಬರಸೆಳದು  ಅಪ್ಪಿ ಮುದ್ದಾಡಿದಂತೆ ಕನಸ ಕಂಡೆನು

ಇದು ಮನದ ಹಂಬಲವೊ ಯೌವ್ವನದ ಉನ್ಮಾದೊವೊ ಅರಿಯದಾಗಿಹೆನು
ಎಷ್ಟೋ ಹೆಣ್ಣುಗಳ ಈ ಮೊದಲು ನಾನು ಸಂಧಿಸಿರುವೆನು 
ಅವರುಗಳ ಮಂದಹಾಸದ ಹಿಂದಿನ ಮರ್ಮವ ಗ್ರಹಿಸಿರುವೆನು 
ಯಾರಿಗೂ ಮನಸೋಲದ ಮನವೇಕೆ ಚಡಪಡಿಸುತ್ತಿರುವುದಿಂದು ತಿಳಿಯೆನು
ಇದು ಕನಸಾಗಿಯೆ ಇರುವ ನನಸೊ ನನಸಂತೆ ಕಾಣುವ ಕನಸೋ ಅರಿಯದಾಗಿಹೆನು 

ಇರುಳ ಮಬ್ಬಿನಲಿ ಮಸುಕಾಗಿ ಕಂಡ ಸುಂದರಿ ನೀ ಹೇಗಾದರು ಇರು
ನನ್ನ ಎದೆಯಲಿ ಪ್ರೀತಿಯ ಕಿಡಿಯನು ಹಚ್ಚಿದ ಹೆಣ್ಣೆ ನೀ ಎಲ್ಲಾದರು ಇರು 
ನಮ್ಮಿಬ್ಬರ ನಡುವಿನ ಪ್ರೇಮ ಕಾಮನಬಿಲ್ಲಿನಂತೆ ವರ್ಣರಂಜಿತವಾಗಿರಲಿ
ಮಳೆಬಂದಾಗ ಭೂಮಿ ಪಸರಿಸುವ ಸುಗಂಧದಂತೆ ಹಿತಾನುಭವ ಬೀರಲಿ
ಎಲ್ಲ ಇನಿಯರು ತಮ್ಮ ಜೀವನದಿ ಪ್ರೇಮ ಕಾವ್ಯವ ಜೇನಿನಂತೆ ಸವಿಯಲಿ.

ಸೀತಾತನಯ
(ಜಿ.ಎಸ್. ಟಿ. ಪ್ರಭು)

****************************************

 "ಪ್ರೀತಿ ವ್ಯಕ್ತ ಪಡಿಸುವ  ನಾನಾ ಪರಿ "
ರಚನೆ : ಜೆ.ಎಸ್.ಗಾಂಜೇಕರ.ಕುಮಟಾ (ಉ.ಕನ್ನಡ) ಕರ್ನಾಟಕ.

ಪ್ರಿಯತಮೆ, 
ಪ್ರೀತಿ ,  ಪ್ರೇಮ ,  ವಾತ್ಸಲ್ಯ  ವ್ಯಕ್ತ  ಪಡಿಸುವ  ನಾನಾ ವಿಧಾನ :
ನೀನು  ಗಮನಿಸಿದೆಯಾ  ನಿಸರ್ಗ ಪ್ರೀತಿಸುವ   ಪರಿ ? 
ನೋಡು ಪ್ರಿಯೇ, 
ರವಿಯ ಪ್ರಥಮ  ಕಿರಣದ  ಚುಂಬನ ,  ಧರೆಗೆ. 
ಮಂದ  ಮಾರುತನ  ನಲ್ಮೆಯ ಚುಂಬನ,  ಗಿಡ -ಮರ ಗಳಿಗೆ.
ಪಾತ್ತರಗಿತ್ತಿಯ  ಒಲವಿನ  ಚುಂಬನ,  ಹೂವುಗಳಿಗೆ. 
ಜೇನುನೊಣದ ಸವಿಯ ಚುಂಬನ,ಬಗೆಬಗೆಯ  ಪುಷ್ಪ ಗಳಿಗೆ
ಧಾವಿಸಿ  ಬರುವ  ಸಾಗರದ ಅಲೆಗಳ  ಕಾತುರದ  ಚುಂಬನ,  ದಡಕೆ 
ಹಾಗೆಯೇ ,
ತಾಯಿಯ  ಪ್ರಥಮ  ಚುಂಬನ ,  ಮಗುವಿಗೆ .
ಪ್ರಿಯೇ , 
ಇದೆಲ್ಲವೂ   ಪ್ರಕೃತಿಯು ಪ್ರೀತಿ ವ್ಯಕ್ತಪಡಿಸುವ   ಪರಿ.  
ಪ್ರಿಯೇ , 
ನಿನ್ನ ಬೊಗಸೆಯಷ್ಟು  ಪ್ರೀತಿ  ಸಾಕು  
ನಮ್ಮ ಸುಖ ಬಾಳಿಗೆ ಇನ್ನೇನು  ಬೇಕು ?

**********************************************

ದಿವ್ಯ ದ್ವೀಪ - ಬಾಲಿ
ಶ್ರೀಮತಿ ಅನು ಶಿವರಾಂ  


ಬಾಲಿಯ ಮುಂಜಾವಿನಲಿ ಕೋಳಿಯ ಕೂಗಿಗೆ ಕಣ್ ತೆರೆಯುವ ಮುದ, 
ಮುಂಬಾಗಿಲಿನಲಿ  ಗರಿಕೆ ಹೂಗಳ ಸಿಂಗಾರ ನಿತ್ಯವೂ  ವಿಧ ವಿಧ;
ಕಪ್ಪಕ್ಕಿ- ಕೆಂಪಕ್ಕಿಗಳ ಬಿಸಿ ಗಂಜಿಗೆ  ಬೆರೆಸಿದ ಸಿಹಿ ಜೇನಿನ ಹದ ,
ಜಲತರಂಗದ ಅಲೆಯ ಹೊತ್ತು ತರುವ ತಿಳಿ ಗಾಳಿಯ ನಿನಾದ. 

ನಮ್ಮ ದೇವ- ದೇವತೆಗಳ ದಿಬ್ಬಣವೇ ಬಂದು ನೆರದಿದೆ ಇಲ್ಲಿ 
ಹೆಜ್ಜೆ, ಹೆಜ್ಜೆಗೂ ಅಲಂಕೃತ ಮೂರ್ತಿಗಳ ಮೆರವಣಿಗೆ ಇಲ್ಲಿ; 
ಭೀಷ್ಮ, ದ್ರೋಣ ಹನುಮಂತರ ಹೆಸರು ಹೊತ್ತಿವೆ ರಸ್ತೆಗಳಿಲ್ಲಿ, 
ರಾಮಾಯಣ, ಭಾರತಗಳು ಇಂದಿಗೂ ಜೀವಂತ  ನೃತ್ಯನಾಟಕದಲ್ಲಿ.

ಕಿರು ರಸ್ತೆಗಳ ತುಂಬ ಪ್ರವಾಸಿಗರ ಸಡಗರದ ಸಂಚಾರ,
ಓಣಿಗಳ ಇಕ್ಕೆಡೆಯಲೂ ಕಣ್ ಸೆಳೆವ ಚಿತ್ರ ಕಲಾ ಆಗರ;
ಬುದ್ಧ, ಬಾಟಿಕ್, ಬಾಳೆ ನಾರಿನ ಬುಟ್ಟಿಗಳೇ ಬಾಲಿಯ ವ್ಯಾಪಾರ 
ಸುಡು ಬಿಸಿಲಿನಲ್ಲೂ ಸಾಗುವುದು ನಗುಮೊಗದ ವ್ಯವಹಾರ 
 
ಯೋಗ, ಧ್ಯಾನ, ಅಭ್ಯಂಗಗಳ ಸಂಸ್ಕಾರ ಈ ಸುಂದರ ಲೋಕದಲ್ಲಿ 
ಪೋಲೀಸಿನವನೂ ಹೂವು ಮುಡಿಯುವ ಈ ದಿವ್ಯ ದ್ವೀಪದಲ್ಲಿ 



***********************************
ಚುಟುಕು/ಹನಿಗವನ
ಶ್ರೀಮತಿ ಸವಿತಾ ಹಿಪ್ಪರಗಿ

ಚುಟುಕು

ಬದುಕೊಂದು ಸುಂದರ ಕನ್ನಡಿ
ಸರಿಯಾಗಿ ಬರೆ ನೀ ಮುನ್ನುಡಿ
ಜೀವನ ಚರಿತ್ರೆಯಡಿ
ಬಾಳು ಸುಂದರ ಚಾವಡಿ.

ಟಂಕಾ

ಬೆಲೆಯಿಲ್ಲದ
ಬಹುದಿನದ ಬಾಳು
ಬೇಡವೆನಗೆ 
ಮೌಲ್ಯದಿಂ ಬದುಕುವೆ.
ನಾ ಚಿರಾಯುವಾಗುವೆ.

ಚುಟುಕು

ಬದುಕಿನುದ್ದಕು ಹೋರಾಟ
ದಿನನಿತ್ಯದ ಗೋಳಾಟ
ಭಾವನೆಗಳ ತೊಳಲಾಟ
ಎಲ್ಲಿಹುದು ಚಿರಶಾಂತಿಯ ತಟ.

ಹನಿಗವನ

ಚಿತ್ರ ವಿಚಿತ್ರವಾದ ಕನಸು
ವಿಚಲಿತವಾಗಿದೆ ಮನಸು
ಭಯವಾಗುತಿದೆ ತುಸು
ಆಗಬಾರದದು ನನಸು
ದೇವರೆನ್ನ ಮೊರೆಯ ಆಲಿಸು
ಇದರಿಂದ ನನ್ನ ರಕ್ಷಿಸು.


ಕವಿಯ  ಕೋರಿಕೆ
- ಜೆ.ಎಸ್.ಗಾಂಜೇಕರ, ಕುಮಟಾ (ಉ.ಕನ್ನಡ.) 


ಸ್ವಪ್ನಗಳೇ, 
ನೀವು  ನನ್ನ  ನಿದ್ದೆಯಲ್ಲಿ  ಬರಲೇಬೇಕೆಂದಿದ್ದರೆ ಕಥೆಯರೂಪದಲ್ಲಿಯೋ, ಕವನ  ರೂಪದಲ್ಲಿಯೋ  ಬನ್ನಿರಿ.

ಸುವಿಚಾರಗಳೇ, 
ನೀವು  ನನ್ನ  ಧ್ಯಾನದಲ್ಲಿ ಬರಲೇಬೇಕಿಂದಿದ್ದರೆ 
ಭಜನೆಯ ರೂಪದಲ್ಲಿಯೋ,  ಕೀರ್ತನೆಯ  ರೂಪದಲ್ಲಿಯೋ ಬನ್ನಿರಿ.

ಕಲ್ಪನೆಗಳೇ,
ನೀವು  ನನ್ನ  ಏಕಾಂತದಲ್ಲಿ  ಬರಲೇಬೇಕೆಂದಿದ್ದರೆ
ಪತ್ತೆದಾರಿ ಕಾದಂಬರಿ ರೂಪದಲ್ಲಿಯೋ, ಕುತೂಹಲ  ಬರಹ  ರೂಪದಲ್ಲಿಯೋ ಬನ್ನಿರಿ

ಆಧ್ಯಾತ್ಮಿಕ  ತತ್ವಗಳೇ, 
ನೀವು  ನನ್ನ  ಮೌನದಲ್ಲಿ  ಬರಲೇಬೇಕೆಂದಿದ್ದರೆ
ಮಹಾಪುರುಷರರ  ಕಥನ  ರೂಪದಲ್ಲಿಯೋ, ಧಾರ್ಮಿಕ  ಜ್ಞಾನ ರೂಪದಲ್ಲಿಯೋ  ಬನ್ನಿರಿ.

ನಿಮ್ಮನ್ನೆಲ್ಲಾ ನನ್ನ  ಹೃದಯದಲ್ಲಿ  ಸೆರೆಹಿಡಿದು   ಲೇಖನಿಯ  ಮೂಲಕ  ಸಹೃದಯ  ಓದುಗರಿಗೆ  ಉಣಬಡಿಸುವೆ.
ಇದರಿಂದಾಗಿ  ಸಾಹಿತ್ಯ ರಂಗದಲ್ಲಿ   ಅಂಬೆಗಾಲಿಕ್ಕುವ    ಬಯಕೆ. ಇದುವೇ  ಕವಿಯ  ಕೋರಿಕೆ.

ರಾಮನಾಥ್ ಅವರಿಗೊಂದು ಶಾಲು 

ರಚನೆ ದತ್ತು ಕುಲಕರ್ಣಿ, ಸಿಡ್ನಿ 

ಎನ್  ಸರ್  ರಾಮನಾಥ ಅವರೆ
ನೀವೊಬ್ರು ಫೂಟಿ ಆಟಗಾರರೇ ಖರೆ 
ಶಬ್ದಗಳ ನಡುವಿನ ಅಕ್ಷರಗಳನ್ನು ಒಂದೊಂದು ಸಲ ವದಿತೀರಿ 
ಮತ್ತೊಂದು ಸಲ ಕೈಯಿಂದ ತಳ್ಳತಿರಿ 
ಹೆಂಗರ ಮಾಡಿ ಅರ್ಥ ಮತ್ತು ಹಾಸ್ಯ 
ಎಂಬೊ ಪೋಸ್ಟ್ ನಡುವೆ ಹೊಡೆದು ಗೋಲ್ ಮಾಡೇಬಿಡ್ತೀರಿ. 
ಅದಕ್ಕೆ 
ತಗೊಳ್ಳಿ ಸರ್ ಈ ಶಾಲು 
ಕೊಡತಾ ಇದ್ದೀವಿ ನಾವು ಆಸಿ ಕನ್ನಡಿಗರು 
ನಿಂತಗೊಂಡು ಸಾಲು-ಸಾಲು 
(ಹಾಗೆ ಅದರೊಳಗಡೆ ಇವೆ ಬೀರ್ ಬಾಟಲು)

ಮತ್ತ ಇನ್ನೊಂದು ಕಡೆ ನೋಡಿದರೆ 
ನೀವು ಪಕ್ಕಾ  ಪೇಯಿಂಟರ್ ಖರೆ 
ಎಲ್ಲ ಶಬ್ದಕ್ಕೂ ಇತಿಹಾಸದ್ದು ಪುರಾಣದ್ದು ಮತ್ತು ಈಗಿಂದು ಸೇರಿ 
ಬಣ್ಣ ಬಳದು  ಮಿಸಳಬಾಜಿ ಮಾಡಿ 
ಚಿಲುಮ್ಯಾಗ ತೂಗಹಾಕ್ತೀರಿ 
ಅದಕ್ಕೆ 
ತಗೊಳ್ಳಿ ಸರ್ ಈ ಶಾಲು 
ಕೊಡತಾ ಇದ್ದೀವಿ ನಾವು ಆಸಿ ಕನ್ನಡಿಗರು 
ನಿಂತಗೊಂಡು ಸಾಲು-ಸಾಲು 
(ಹಾಗೆ ಅದರೊಳಗಡೆ ಇವೆ ಬೀರ್ ಬಾಟಲು)

ಇಷ್ಟ ಅಲ್ಲ ಒಮ್ಮೊಮ್ಮೆ 
ಶಬ್ದ ಕೊಯ್ದು ಕತ್ತರಿಸಿ ಕೂಡಿಸಿ 
ಇದ್ದ ಅರ್ಥ ಇಲ್ಲದಂಗ ಮತ್ತ ಇಲ್ಲದ ಅರ್ಥ ಬರೂ ಹಂಗ  
ಮಾಡೊ ಸರ್ಜನ ಅನಸ್ತೀರಿ 
ಯಾವ-ಯಾವಾದೊ ಭಾಷಾದ್ದು 
ಶಬ್ದಗಳನ್ನು ಕೊಳ್ಳಪಟ್ಟಿ ಹಿಡಿದು ಕೊಂಡು ಬಂದು 
ದುಡಿಸಿ ಗುಂಡಾ ಗರ್ದಿ ಮಾಡತಿರಿ 

ಇದನ್ನೆಲ್ಲಾ ನಾವು ಪಬ್ಲಿಕ್ ನಾಗ  ಓದಿ 
ಖೋಕಾಡಿಸಿ ನಕ್ಕು ಮಂಗ್ಯಾ ಆಗುವಂಗ ಮಾಡತಿರಿ 
ಆದರೂ ನಮಗ ನೀವು ಒಂತಾರಾ  ಸಂತನ ತರಾ ಅನಸ್ತೀರಿ
ಅದಕ್ಕೆ 
ತಗೊಳ್ಳಿ ಸರ್ ಈ ಶಾಲು 
ಕೊಡತಾ ಇದ್ದೀವಿ ನಾವು ಆಸಿ ಕನ್ನಡಿಗರು 
ನಿಂತಗೊಂಡು ಸಾಲು-ಸಾಲು 
(ಹಾಗೆ ಅದರೊಳಗಡೆ ಇವೆ ಬೀರ್ ಬಾಟಲು)




ನಾ ಕಂಡ ಆಸ್ಟ್ರೇಲಿಯಾ 

ರಚನೆ: ಜೆ. ಎಸ್. ಗಾಂಜೇಕರ, ಕುಮಟಾ (. ಕನ್ನಡ.)

ನೋಡಲೇ ಬೇಕಾದ ದೇಶ ಆಸ್ಟ್ರೇಲಿಯಾ
ಅಚ್ಚ ಹಸಿರಿನಿಂದ ಕಂಗೊಳಿಸುತಲಿದೆ ಈ ಏರಿಯಾ
ಸಾಗರದ ಮಧ್ಯದಲಿ ನೆಲೆಸಿಹುದು ಈ ದೇಶ
ಸಾರುತಲಿದೆ ವಿಶ್ವದಲಿ ಸೌಂದರ್ಯದ ಸಂದೇಶ
ನಿಸರ್ಗದ ರಾಶಿಯೇ ತಾನೆನ್ನುತಿದೆ ಈ ನಾಡು
ಕೈ ಬೀಸಿ ಕರೆಯುತಿದೆ ಪ್ರಕೃತಿಯ ಬೀಡು
ಎತ್ತ ನೋಡಿದರತ್ತ ಸುಂದರ ಮನೆಗಳ ಸಾಲುಗಳು
ಆಧುನಿಕತೆಯ ವಿನ್ಯಾಸದ ಅಂದದ ರಸ್ತೆಗಳು
ಕಣ್ಣಿಗೆ ಹಬ್ಬವ ನೀಡುವ ಚಂದದ ಹೂದೋಟ
ಮರೆಯಲಾಗದು ಅಲ್ಲಿಯ ರಮ್ಯ ನೋಟ
ಸ್ವರ್ಗವೇ ಧರೆಗಿಳಿದು ಬಂದಂತಿದೆ ಈ ಪ್ರದೇಶ
ಬಣ್ಣಿಸಲಾಗದು ಅಲ್ಲಿಯ ವೈವಿಧ್ಯಮಯ ಶಿಲಾಕೃತಿಯ ವಿಶೇಷ
ಕವಿಯ ಕಲ್ಪನೆಗೂ ನಿಲುಕದ ಭವ್ಯ ವಿನ್ಯಾಸ
ವರ್ಣಿಸಲಾಗದು ಅಲ್ಲಿಯ ವಿನೂತನ ಆಧುನಿಕತೆಯ ಆಭಾಸ
ಸಮಸ್ತ ವಿಜ್ಞಾನಿಗಳ ಕರಕುಶಲತೆಯ ಸಾಕಾರ
ಊಹಿಸಲಾಗದು ಅಲ್ಲಿಯ ತಾಂತ್ರಿಕತೆಯ ಚಮತ್ಕಾರ
ಸ್ವಚ್ಛತೆಯೇ ಸ್ವರ್ಗವೆಂದು ಸಾರುತಿಹುದು ಈ ಜಗದಲಿ
ಹುಡುಕಿದರೂ ಸಿಗದು ಕಸ-ಕಡ್ಡಿ ರಸ್ತೆಯ ಬದಿಯಲಿ
ಪುರಾಣೇತಿಹಾಸದಲಿ ವರ್ಣಿಸಲಾದ ಬೃಂದಾವನದಂತಿದೆ ಈ ಊರು
ಪ್ರತಿಸ್ಠಾಪಿಸಲಾಗಿದೆ ಇಲ್ಲಿ ದೇವಿ -ದೇವತೆಯರ ಮೂರುತಿ ಸಾವಿರಾರು
ದ್ವಾಪರ ಯುಗದ ನಂದಗೋಕುಲದಂತಿದೆ ಇಲ್ಲಿಯ ನೋಟ
ಗಮನಕ್ಕೆ ಬಾರದೇ ಇರದು ಇಲ್ಲಿಯ ನಾರಿಯರ ಅಂದ-ಚಂದದ ಮೈಮಾಟ
ನನಗನಿಸಿತು ನಮ್ಮಲ್ಲಿಯ ಅಪ್ಸರೆಯರ ಪುನಜನ್ಮವೆಂದು
ಅವರ ನಯನಮನೋಹರ ರೂಪರಾಶಿ ನೆನೆದು
 
  ಬೆಳಗು
 - ವಿ.ಎಂ.ಎಸ್. ಗೋಪಿ,  ಬೆಂಗಳೂರು. 


ಬೆಳಗು ಬಾ ಬೆಳಕು
ಬೆಳದಿಂಗಳ ಬೆಳಕು ಚೆಲ್ಲುತ
ರಂಗು ರಂಗಿನ ಕಾಮನಬಿಲ್ಲಿನಂತೆ
ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ
ರಂಗು ರಂಗಿನ ರಂಗೋಲಿಯಂತೆ
ನೆನಪಿನಂಗಳದಿ ನಗು ನಗುತ
ನೀ ಬೆಳಗು ಬಾ ಬೆಳಕು... 
ಈ ಬಾಳ್ ಕತ್ತಲೆಯ ಬದುಕು 
ಹೊಸ ಜ್ಯೋತಿಯ  ಹೊಂಬೆಳಕಲಿ 
ಸೂರ್ಯನ ಬೆಳಕು ಚೆಲ್ಲುತ 
ದ್ಯಿವ ಜ್ಯೋತಿಯ ಉದಯಿಸುತ 
ಬೆಳಗು  ಬಾ ಬೆಳಕು...
 

 
ಪ್ರೀತಿ ಸೆರಗು 


- ಉಮಾ ಕಟ್ಟಿ, ಸಿಡ್ನಿ 


ಯಾರ ದೃಷ್ಟಿ ತಾಗಿತೆನ್ನ
ನಿನ್ನ ಪ್ರೀತಿಗೆ
ಅತ್ತು ಕರೆದು ನಕ್ಕು ನಲಿದ
ಎಮ್ಮ ಬಾಳಿಗೆ
ಬಂದಿತೆಂತೋ ವಿಷದ ಗಾಳಿ
ಪ್ರೀತಿ ಸೆರಗು ಮುಳ್ಳು ಬೇಲಿ -
ಗಂಟಿಕೊಂಡಿತು
ಎಳೆದರೆನಗೆ ಹರಿದ ಸೆರಗು
ಬಿಚ್ಚಲಾರೆ ದಾರಿ ಮಧ್ಯೆ
ತಿರುಗಬೇಕು ತಾಳ್ಮೆ ಬೇಕು
ತಗ್ಗಿ ಬಗ್ಗಿ ಬಿಡಿಸಬೇಕು
ಒಂದೊಂದೇ ಮುಳ್ಳಿನಿಂದ 
ಪ್ರೀತಿ ಸೆರಗನು
ಎನಗಿಂತ ದಿಟ್ಟ ಧೀರ 
ಎತ್ತರದ ನಿಲುವು ನಿನದು
ಕೊನೆಯ ಎರಡು ಮುಳ್ಳ
ನೀನು ಬಿಡಿಸಲಾರೆಯಾ
ಎನ್ನ ಸೆರಗು ಎನ್ನ ಮಾನ
ಉಳಿಸಲಾರೆಯಾ


ಮೌನ
ಕವನ - ಶ್ರೀಮತಿ ಅನು ಶಿವರಾಂ, ಸಿಡ್ನಿ 


ಜ್ಞಾನ ಕೊಡುವ ಗುರುವನರೆಸುತ ನಾ ಊರೂರು ಅಲೆದೆ,
ಗುಡಿ, ಆಶ್ರಮಗಳಲ್ಲಿ ಸಿಗಲಿಲ್ಲ ಮನವೊಪ್ಪುವ ಗುರುವು ಎನಗೆ.
ಸುಡು ಬಿಸಿಲಲಿ ಬೆವರಿ, ಬೆಂಡಾಗಿ ನಾ ತಿರುತಿರುಗಿ ಬಳಲಿದೆ
ತನು-ಮನ ನೊಂದ ತಾಪದಲ್ಲಿ ನೀರಡಿಸಿ ನದಿಯೆಡೆಗೆ ನಡೆದೆ.

ಝುಳು ಝುಳು ನಲಿಯುತ್ತ ನದಿ ತುಂಬಿ ಹರಿದಿತ್ತು
ತನ್ನಲ್ಲಿ ಉಗಿದವರ, ತೊಳೆದವರ ಕೊಳೆಯ ಕ್ಷಮಿಸಿತ್ತು.
ಬಡವ, ಬಲ್ಲಿದ ಬೇಧವಿಲ್ಲದೆ ಎಲ್ಲರಿಗು ನೀರಿತ್ತು ಸಲಹಿತ್ತು
ಮೌನದಲಿ ಗುರಿಯೆಡೆಗೆ ಸಾಗುವ ಪಾಠವ ಅದು ಸಾರಿತ್ತು.

ನದಿಯ ದಡದಲೇ ಹರಡಿತ್ತು, ಹಸಿರು ಮರದ ತಂಪು ವಿಸ್ತಾರ
ಹೂ,ಹಣ್ಣು ಹೊತ್ತು ನಗುವ ಮರದಲ್ಲಿ ಕೇಳಿತು ಹಕ್ಕಿಗಳ ಇಂಚರ.
ಜೀವಿಗಳ ಪೊರೆವ ಹೆಮ್ಮರ, ನೀಡಿದೆ ನಮಗೆ ತನ್ನೆದೆಯ ಉಸಿರ,
ಮೌನದಲಿ ನೆಲೆನಿಂತ ಮರ ಯಾರಿಂದಲೂ ಕೇಳಲಿಲ್ಲ ಪ್ರತ್ಯುಪಕಾರ.

ಚೆಂದದ ಕರಿ ಹಸುವು ಅಲ್ಲೇ ಮರದಡಿಯಲಿ ಮಲಗಿತ್ತು
ಬಿಳಿನೊರೆಯ ಹಾಲು ಅದರ ಒಡಲಲಿ ತುಂಬಿ ಹರಿದಿತ್ತು.
ಗೋಮಾತೆಯ ಪ್ರತಿ ಅಂಗದಲೂ ಸಾರ್ಥಕತೆಯ ಸೆಲೆಯಿತ್ತು
ಮೌನದಲಿ ಮನುಜನಿಗೆ ಮಾಡುವ ಉಪಕಾರವ ಸಾವಿರವಾಗಿತ್ತು.

ನಿಸರ್ಗದ ತಂಪಿನ ನೆರಳಲ್ಲಿ ಕೊನೆಗೂ ದೊರೆಯಿತು ಉಪದೇಶ ಸಾರ
ಆಯಿತು ಪ್ರಕೃತಿಯ ನಿಜ ಶಕ್ತಿದರ್ಶನ, ಕೇಳಿಸಿತು ಗುರುವಿನ ಮೌನ ವ್ಯಾಖ್ಯಾನ.



ಹೊರನಾಡವರು 
ಕವನ - ಉಮಾ ಕಟ್ಟಿ , ಸಿಡ್ನಿ 


ದೇಶ ಬಿಟ್ಟವರು ನಾವು
ಭಾಷೆ ಬಿಟ್ಟವರಲ್ಲ
ನಾಡ ಬಿಟ್ಟರೂ ನಾವು
ನುಡಿಯ ಬಿಡಲಿಲ್ಲ

ಹೊಟ್ಟೆಪಾಡಿಗಾಗೋ
ಉನ್ನತ ವ್ಯಾಸಂಗಕ್ಕಾಗೋ
ವಿದೇಶ ಭ್ರಮಣ ಸಾಹಸಕ್ಕಾಗೋ
ಬಿಟ್ಟು ಬಂದೆವು ನಾವು ಬಂಧುಬಾಂಧವರ

ಹೊರಡುತ್ತೇವೆ ದಿನ ಬೆಳಗು
ಇಲ್ಲಿಯ ವೇಷ ಭೂಷ ಧರಿಸಿ
ಅವರಂತೆ ನಡೆ-ನುಡಿಯುತ್ತೇವೆ
ಎಲ್ಲರೊಳು ನಾವು ಸಮ್ಮಿಳಿತವಾಗಿ

ಮರಳುತ್ತೇವೆ ಮನೆಗೆ
ನಮ್ಮ ಅಡಿ ಗಡಿಯೊಳಗೆ
ನಮ್ಮದೇ ಊಟ ಉಣಿಸು
ವೇಷ ಭೂಷ ಚಿತ್ತ ಕೋಶಕ್ಕೆ

ನಮ್ಮದೇ ಹಬ್ಬ ಹರಿದಿನಗಳು
ನಮ್ಮದೇ ಹಾಡು ಹಸೆ ಶೃಂಗಾರವು
ಹಾಡಿ ಕುಣಿಯುತ್ತೇವೆ ನೋಡಿ ನಲಿಯುತ್ತೇವೆ
ನಮ್ಮದೇ ತಾಳಕ್ಕೆ ನಮ್ಮ ಹೆಜ್ಜೆ

ಭಾಷೆ ಕಲಿಸುವವರಿಹರು
ಹಾಡ ಹಾಡುವವರಿಹರು
ನಮ್ಮದೇ ಸಾಹಿತ್ಯ ಸಂಸ್ಕೃತಿ ಕಲೆ
ಮೆರೆಸುವವರಿಹರು

ಊರಲ್ಲಿ ನಮ್ಮ ಧರ್ಮ ಮತಗಳ
ಗುಡಿ ದೇಗುಲ ಮಠಗಳಿಹವು
ಕುಳಿತು ಕೇಳಲು ನಮ್ಮದೇ ವಾಣಿಯ
ವಿಶಿಷ್ಟ ಬಾನುಲಿಯೂ ಇಹುದು

ವಿಶ್ವಮಾತೆಯ ದಶ ದಿಕ್ಕುಗಳಲ್ಲೂ
ನಮ್ಮ ನಾಡ ಗುಡಿ*ಯನ್ನು
ಏರಿಸಿ ಮೆರೆಸುವವರು ನಾವು
ಹೊರನಾಡ ಕನ್ನಡಿಗರು ನಾವು



*ಗುಡಿ - ಇಲ್ಲಿ ಈ ಶಬ್ದಕ್ಕೆ ಬಾವುಟ ಅಥವಾ ಧ್ವಜ ಎಂಬ ಅರ್ಥ


ಚುಟುಕುಗಳು

1) 

ನನ್ನೀ ಅಕ್ಷರಗಳ ಬದುಕು
ನಿನ್ನ ಕಂಗಳ ತಲುಪಿ ಸಾರ್ಥಕ ವಾಯಿತು

2)
ಮಾತಿಗೆ ಮಾತು 
ಬೆಳೆದು 
ಕಡೆಗೆ 
ನಿಲ್ಲುವುದು 
ಮಾತೇ

3)
ಹಲವಾರು 
ಮುಖವಾಡಗಳಲ್ಲಿ 
ನನಗಿಷ್ಟ 
ಈ ನಗುವಿನ 
ಮುಖವಾಡ 
ಮುಚ್ಚಿಡುವುದು 
ಸುಲಭವಾಗಿ 
ಮನದ 
ನೋವುಗಳ 
ಸಿಡುಬು


ವಿನೋದ್ ಕುಮಾರ್ ಬೆಂಗಳೂರು  

 

1

ಏಕೀ ಬೇಕು 

ಈ ವೇದನೆ 

ನೀ ನನ್ನ 

ತಿದ್ದದೇ 

ನಾ ನಿನ್ನ 

ತಿದ್ದದೇ


2

ರಾತ್ರಿ ನಿನಗಾಗಿ

ಸುರಿಸಿದ್ದ ಕಂಬನಿಯ

ಮುಂಜಾನೆಯಲಿ

ಎಲೆಗಳು ಹೊತ್ತಿದ್ದವು


3

ವಿರಹಿಯ ಕವನದ

ಅಳಿದುಳಿದ 

ಕೊನೆಯ ಸಾಲುಗಳಂತಿದ್ದವು

ಬೀಳ್ಕೊಡುವಾಗ 

ಅವಳ 

ಹೆಜ್ಜೆಗಳು


 4)

 ಕೇಳುತ್ತಿರಲಿಲ್ಲ
ನಾ ಮಾತನಾಡುವುದನ್ನು
ನನ್ನ ಕಂಗಳಲ್ಲಿ
ನಿಜವ ಹುಡುಕುತ್ತಿದ್ದಳು
*****

5)
ಹೆದರಿಕೆಯೆಂಬ
ಹೆಣವ
ಭುಜದಿಂದಿಳಿಸಿ
ಹಾರಲು ಬಯಸಿದೆ
ರೆಕ್ಕೆಗಳು 
ಮೂಡತೊಡಗಿದವು
*****

6)
ಎಷ್ಟು ಚೆನ್ನ 
ಕಡಲೊಳು ನದಿ 
ಮಾಯವಾದಂತೆ 
ಅಳು 
ನಗೆಗಡಲಲ್ಲಿ 
ಕಣ್ಮರೆಯಾದೊಡೆ
****

7)
ಪೆದ್ದುತನದ 
ಗಡಿಯ ದಾಟಿ 
ನೋಡತೊಡಗೆ
ಕಾಣ ಹತ್ತಿತು 
ಹುಸಿಯ 
ಉಡುಗೆ ತೊಡುಗೆ

 
5)
ಅವನು 
ಖಿನ್ನನಾಗಿ 
ಕತ್ತಲಾಗತೊಡಗಿದನು
ಅವಳು
 ಅವನಿಗಾಗಿ 
ಬೆಳದಿಂಗಳಾಗತೊಡಗಿದಳು

*****
6)
ಮರುಭೂಮಿ ಮನ
ಇಲ್ಲವೆಂದುಕೊಂಡರೆ  ಏನೂ ಇಲ್ಲ 
ಏನಾದರೂ ಇದೆಯೆಂದರೆ 
ಇವೆ 
ಓಯಸಿಸ್ 
ಒಂಟೆ 
ಖರ್ಜೂರದ ಮರ
******

7)
ನಿನ್ನ 
ಮರೆಯದೇ ಇರುವುದು
ನನಗಿಷ್ಟವಾದ 
ಯಾತನೆಗಳಲ್ಲೊಂದು
*****

8)
ಅಡವಿಡಲು ಹೋದೆ ಈ ದಿನವ 
ನೆಮ್ಮದಿಯ ನಾಳೆಗಾಗಿ
ಮನಸ್ಸಾಕ್ಷಿಯೆಂಬ ಗಿರಿವಿ ಅಂಗಡಿಯವ 
ಹೇಳಿದ ಖಾರವಾಗಿ
ಸರಿಯಾಗಿ ದುಡಿಸಿಕೋ ಈ ದಿನವ
ನೆಮ್ಮದಿಯ ನಾಳೆ ನಿನ್ನದಾಗುವುದು
***



ಪುನರಾವರ್ತನೆ 
- ಹೇಮಾ  ಸದಾನಂದ್ ,  ಮುಂಬಯಿ  


ಬದುಕಿನ ಬಾಗಿಲಿನ ಬಳಿ  ಬಂದು ನಿಂತು 
ನೀನು ನನ್ನ ಕರೆದಾಗ  ಸಂಜೆಯಾಗುವ ಸೂಚನೆ 
ಕನ್ನಡಿಯಲ್ಲಿ ಕಂಡ ಕನಸಿನ ಬಣ್ಣ ಬೆರಳ ತುದಿಯಲ್ಲಿ 
ಅಳಿದುಳಿದು  ನಿನ್ನ ಬರುವಿಕೆಯ  ದಾರಿ ಕಾಯುತ್ತಲಿತ್ತು 

ಅಂದು ನಿನ್ನ ನಗುವಿನಲ್ಲೂ ಸುತ್ತಿ ತಂದ  ಉಡುಗೊರೆಯ
ಭಾರ ಎದೆಯೊಳಗೆ  ಉಸಿರಾಗಿ ಇಳಿದರೂ 
ಕೆನ್ನೆಯಲ್ಲಿ  ಕೆಂಪು  ಕಣ್ಣಲ್ಲಿ ತಂಪು ಮೌನಗಳು 
ಮಿಸುಕಾಡಿ ತುಟಿಯಂಚಿನ  ಕಂಪನವನ್ನು ತಡೆದ 
ರಾತ್ರಿಯ ಮೈಯೆಲ್ಲಾ ಹಗಲಿನ ಪ್ರಭೆ 

ಕಾಡಿಗೆಯಲ್ಲಿ ಕರಗಿದ ಕವಿತೆಯಲ್ಲಿ  ಬೆರೆತ 
ನಿಟ್ಟುಸಿರಿನಲಿ  ಕಾಣೆಯಾದ ನಿನ್ನ ಹೆಸರನ್ನು ತಡಕಾಡಿದಿದ್ದೆ  
ಮೌನ ಹೆಜ್ಜೆಗಳ ದೂರದ  ಗಮ್ಯ  
ಸುಸ್ತಾದ ನೆರಳಿನ  ಏಕಾಂಗಿ ಪಯಣ 
ಕರ್ಕಶ ದನಿಗಳ ನಡುವೆ ಕ್ಷೀಣವಾದ 
ಅಳಲೊಂದು ಕೇಳಸಿದಾಗ ಚೇತರಿಸಿತು  ಜೀವ 

ಭಾವದೊಡಲಲ್ಲಿ ಕೆನೆಗಟ್ಟಿದ ಆಸೆಗಳ ಅಲಂಕಾರ 
ಗುನುಗುಟ್ಟುವ ತೊದಲು ಮಾತಿನ ಝೇಂಕಾರ 
ಹಸಿಯಾಗಿದೆ ಹಸುರಾಗಿದೆ  ಮನಸ್ಸು 
ಭೂಮಿ ಭಾರದ ಸಂಭ್ರಮ ನಮ್ಮೊಳಗೀಗ 

ಬರುವೆಯಾದರೆ ಬಾ ತೆರೆದಿದೆ ಬಾಗಿಲು 
ಸರಿ ತಪ್ಪುಗಳ ಲೆಕ್ಕವಿಲ್ಲದ ಹಿತವಾಗಿ ಮಾತಾಡು 
ತಾಳ್ಮೆಯಿಂದ   ಕೇಳಿಕೊಳ್ಳುವೆ  
ಆಕಾಶ ತಿಳಿಯಾಗಿದೆ ದೀಪ ಹಚ್ಚುವ ಹೊತ್ತು 
ಇನ್ನು  ಹೋರಾಡಬೇಕು ನೀನು 
ತೊಟ್ಟಿಲ ತೂಗಿ ಜೋಗುಳ ಹಾಡಬೇಕಿದೆ 


ಚುಟುಕುಗಳು

- ವಿನೋದ್ ಕುಮಾರ್ ಬೆಂಗಳೂರು 

ಶ್ರೀ ವಿನೋದ್ ಕುಮಾರ್

1)
ನನಗೆ ನಿನ್ನ ನೋಡಿದಾಗ 
ನೆನಪಾಗುವುದು 
ಅದೇ ಸಿಂಬಳ ತುಂಬಿದ 
ನಾಸಿಕ 
ಅದೇ ನಿಷ್ಕಲ್ಮಶ ನಗು 
ನಾವಿಬ್ಬರು 
ಎಷ್ಟು ದೂರವಿದ್ದರೇನು 
ನಮಗೆ ಎಷ್ಟು 
ವಯಸಾದರೇನು 
ನೀ ನನಗೆ ಇನ್ನೂ 
ಲಂಗ ತೊಡುವ ಸಹೋದರಿ 
ನಾ ನಿನಗೆ ಇನ್ನೂ 
ಚಡ್ಡಿ ಹಾಕಿರುವ ಸಹೋದರ

2)
ಹೊಟ್ಟೆಕಿಚ್ಚಿನ
ಕೆನ್ನಾಲಿಗೆಗಳು
ತಾಕಬಾರದೆಂದೇ 
ಸಂತೋಷದ ರೆಕ್ಕೆಗಳ ಅರಳಿಸಿದೆ
ತಾಳ್ಮೆಯ ಹಂಸದಂತೆ
ಎಲ್ಲೆ ಮೀರಿ
ಎಲ್ಲವನು ಮೀರಿ
ಗುರಿಯ ಕಡೆ ಸಾಗಿದೆ

3)
ಜೊತೆಗೆ ಬಂದವರೊಡನೆಲ್ಲ 
ಮನಸ ಹಂಚಿಕೊಳ್ಳಬೇಡ
ಅಂಬಿಗ
ನಿನ್ನೊಡನೆ ಅವರ 
ಸಂಬಂಧ ದಡ 
ತಲುಪಿಸುವವರೆಗಷ್ಟೆ 

ಆನ್ಲೈನ್ ತರಗತಿ 
- ಹೇಮಾ  ಸದಾನಂದ್ ,  ಮುಂಬಯಿ 

ಸೂರ್ಯನಿದ್ದಾನೋ  ಇಲ್ಲವೋ  

ಚಿಂತೆ ಕಾಡಲೇ ಇಲ್ಲ
೨೪× ೭  ನೆಟ್ ಇದೇಯೋ ಇಲ್ಲವೋ
ಯಾವಾಗ ಹೋದೀತೋ
ಆತಂಕದಲ್ಲೆ   ದಿನವೆಲ್ಲಾ  
ಗಡಿಬಿಡಿಯಲ್ಲಿ ಟ್ರೇನ್ಹತ್ತಿ ಬಿದ್ದೇನೆಂಬ ಆತಂಕ
 ಬಸ್  ಗದ್ದಲಗಳಲ್ಲಿ 
ಕೂದಲು ಕೆದರುವ 
ತೊಟ್ಟಿದ್ದು  ಸುಕ್ಕಾಗುವ
ಎಲ್ಲಿ ವಿದ್ಯಾರ್ಥಿಗಳ ನೋಟ್ಸ್ ಮರೆತು ಬಂದೆನೇನೋ...  
 ಸಂಘರ್ಷಣೆಯ ಹಿತಾನುಭವ.....
ಈಗ ಅದ್ಯಾವ ಭಯವಿಲ್ಲ 
ಇದು ೨೦೨೦ರ  ವೆಬಿನಾರ್  ಶಾಲೆ 

ಗಂಟೆ ಎಂಟಾಗಿದೆ  ಆಲಸ್ಯದ  ಮೋಡಗಳನ್ನು  
ಆಕಳಿಕೆ ಒಡಮುರಿಕೆ 
ಮೆಲ್ಲನೆ ಆಚೆಗೆ ದೂಡಿ ಆನ್ಲೈನ್ ಪಾಠಕ್ಕೆ ಕೂತಿದ್ದೇನೆ
ತೊಟ್ಟ ಮನೆ ಬಟ್ಟೆಕಾಣದಂತೆ
ಮೆಕಪ್ಪ್ ಗಳ ಚಿಂತೆ ಸರಿಸಿ
ನಿದ್ದೆತುಂಬಿದ  ಆ  ಪುಟ್ಟ ಕವಡೆಗಳ 
ಮೇಲೆ ನಗುವಿನ ನೀರು  ಚುಮುಕಿಸಿ  
ಗುಂಡಿಯೊಂದನ್ನು ಒತ್ತಿ 
ತೆರೆದ ಬಾಗಿಲಲಿ ನಿಂತ ಒಬ್ಬೊಬ್ಬರ ಹಾಜರಿ ಹಾಕುತ್ತಲೇ
"ಗುಡ್ ಮಾರ್ನಿಂಗ್ ಚಿಲ್ಡ್ರನ್" ಎನ್ನುತ್ತೇನೆ 

ಅತ್ತ  ಬಾಣಲೆಯಲ್ಲಿ ಸಾಸಿವೆ ಸಿಡಿಯುತ 
ಕುಕ್ಕರ್ ಸೀಳ್ಳೆಗೂ ಬಂದೆ ಇರು ಎನ್ನುತ್ತಾ    
ಪಕ್ಕದ ಕೋಣೆಯ ಫ್ಯಾನಿನ ಕೀರಲು 
ಅಳುವಿನ  ಬಾಯಿಯಿಂದ  ತಪ್ಪಿದ ಮೊಲೆಯನು 
ಹುಡುಕುವ  ಹಸು ಕೂಸಿನ ಕೂಗಿಗೆ 
ಕಿವಿಗಳು ಮಂದವಾದ ಅನುಭವ 
ಶೂನ್ಯವನ್ನೇ ಹಾಸಿ ಹೊದ್ದ ಮುದಿ  ಜೀವದ 
ಬಿಕ್ಕಳಿಕೆಗಳು  ಅನುಮತಿಯಿಲ್ಲದೇ 
ತರಗತಿಯಲ್ಲಿ ಹಾಜರಾಗಿವೆ. 

ಭಾಷಾ  ಪಾಠದ ಮಧ್ಯ ತೂರಿಬಂತು 
ತಿಂಗಳ ಖರ್ಚಿನ ಪಟ್ಟಿ 
ವಿಜ್ಞಾನದ ಪಾಠವನ್ನೂ ಆವರಿಸಿ
ಮೆಥೆಮೆಟ್ಕ್ಸನ್ನೇ ಸಂಪೂರ್ಣ ತಪ್ಪಿಸಿತ್ತು
ಮಗನಿಗೆ ಹೇಳಿದಾಗ ತಲೆ
ಹೊಟ್ಟೆ ಸಹಿತ ತೊಳಸಿದಂತಾಗಿತ್ತು
ಅಮ್ಮ ಬ್ಯಾಲೆನ್ಸ್ ಶಿಟ್ ನೋಡು
ಹೌದು ನೋಡಲಾಗದೇ 
ಕೇಳಿದ್ದು..
ಸೂತಕದಲಿದ್ದ ಆದಾಯದ ರೋದನ ಮುಗಿಲವರೆಗೆ 
ಗಂಡ,ಮುಗಿಲು ಮಾರಿಗೆ ಹಿಡಿದ ನಂಜು ತೆಗೆಯಲಾದೀತೇ..
ನೋಡುತ್ತಲೇ ಇದ್ದರು
ಅಂಗೈಯಲ್ಲಿ ನಾಲ್ಕಾರು
ಹಸಿದ ಹೃದಯಗಳನ್ನು ಜಾರದಂತೆ ಹಿಡಿವ ಪ್ರಯತ್ನ ಪಡುತ್ತ....
ಓ!!!!
೨೫ ಕ್ಕೂ ಹೆಚ್ಙಿನ ಬಾಗಿಲುಗಳು ತೆರೆದಿವೆ
ಮುಪ್ಪಿನಲಿ ಸುಕ್ಕು ಗಟ್ಟಿದ ನಗೆ
ಪಿಸಿದ ನೈಟಿ ಬರ್ಮೂಡಾಗಳ ಹೊಲಿಗೆಯಲಿ ತಲ್ಲೀನತೆ
ಮಿಕ್ಕೆಲ್ಲ ನಮ್ಮದೇ ...ಥೇಟ್
ನಮ್ಮದೇ
ಮಧ್ಯೆ ಮಧ್ಯೆ ಅಮ್ಮಂದಿರ ಕ್ಷೀಣ ದನಿ 
"ಚೆನ್ನಾಗಿ ಪಾಠ ಕೇಳು"
"ಗುರುಗಳಿಗೆ ವಿಶ್ ಮಾಡಿ....."
"ಟೀಚರ್ ನೋಡಿ ಟೀವಿ ಯಲ್ಲಿ"
ಪುಟಾಣಿಗೆ ಕಂಡದ್ದು ನನಗೆ ಕಂಡಿರಲಿಲ್ಲ
ಜೋತಿಷಿ ವಾರ ಭವಿಷ್ಯ ಹೇಳುತ್ತಿದ್ದ
ಗ್ರಹಗಳು ವಕ್ರವಾಗಿವೆ
ಆದಾಯ ಚೆನ್ನಾಗಿದೆ
ಶನಿ ಶಾಂತಿ ಮಾಡಿಸಿ ಮಂಗಳನಿಗೆ ಪೂಜೆ ಮಾಡಿ
ರಾಹೂ ಜಪ ಕೇತೂ ಸ್ಮರಣೆಯಿಂದ ಮನಃ ಶಾಂತಿ
ಶೀತ ಬಾಧೆ..ಒಣ ಕೆಮ್ಮೂ ಜ್ವರ ಬಂದಾವು ಜೋಕೆ....
ಖರ್ಚು ಜಾಸ್ತಿ...

ಹುಡುಗಿಯೊಂದು ಕೇಳಿತು
ಮೇ ಆಯ್ ಕಮೀನ್ ಟೀಚರ್ !!!
ಸ್ವಾರಿ ಫಾರ್ ಟೂ ಲೇಟ್ ಟೀಚರ್.
ತೆರದದ್ದೇ ಬಾಗಿಲಲಿ ಬಂದಿದ್ದಳಾ ವಿದ್ಯಾರ್ಥಿ
ಆಗಲೇ ಎಲ್ಲ ಮಕ್ಕಳಿಗೆ ಹೇಳಿದೆ
ಇಂದಿನ ಕ್ಲಾಸ್ ಮುಗಿಯಿತು.
ನಾಳೆ ಸಮಯಕ್ಕೆ  ಸರಿಯಾಗಿ ಬನ್ನಿ........."
ಗೋಡೆ ಗಡಿಯಾರ ಮುಸಿ ಮುಸಿ ನಗುತ್ತಿತ್ತು.


ಚುಟುಕುಗಳು

- ವಿನೋದ್ ಕುಮಾರ್ ಬೆಂಗಳೂರು


ಮುನಿಸಿನ ಬಿರುಕುಗಳು

ಕಾಣತೊಡಗಿದವು

ನಾ ಮುಗುಳುನಗೆಯ

ಮಲ್ಲಿಗೆ ಗಿಡಗಳ

ನೆಡತೊಡಗಿದೆ ಅಲ್ಲೆಲ್ಲಾ

*******

ಬಾ

ಒಬ್ಬರಿಗೊಬ್ಬರ

ವ್ಯಸನಿಗಳಾಗೋಣ

*******

ಕಳೆದುಕೊಂಡೆ 

ನನ್ನೆರಡು ಮುತ್ತುಗಳ 

ನಿನ್ನೊದೊಂದು ಮುತ್ತ 

ಕದಿಯುವ ದೆಸೆಯಿಂದ

*******

ಅಭಯ ಹಸ್ತ ನೀಡಲಾಗದೆ 

ಬರೀ ವ್ಯಥೆ ಕೇಳುವ  ಕಿವಿಯಾದೆ

******


ಕಥೆ
- ದೀಪಿಕ  Sydney 



ಎಷ್ಟು ಬರೆದರೂ ಮುಗಿಯದ ಕಥೆ
ಸಾಲುಗಳ ಸರಮಾಲೆಯಾಗಿ
ಪುಟಗಳ ತಿರುವಂತಾಗಿದೆ

ಪುಟಗಳಿಗೆ ಎಣೆಯಿರದೆ
ಕೊನೆಗೊಂದು ಮುಕ್ತಾಯವಿಟ್ಟು
ಸುಮಾರಾದ ಪುಸ್ತಕವಾಗಿದೆ

ಆ ಕಥೆಗೊಂದು ಶೀರ್ಷಿಕೆ
ಅದ ನೋಡಿ ಅರಿಯಬೇಕು
ಕಥೆಯ ಒಳಅರ್ಥ

ಪಾತ್ರಗಳು ಕಾಲ್ಪನಿಕ 
ನೀಡಿವೆ ನಿಜ ಜೀವನದ
ಹಲವು ಕುರುಹ

ಇದು ಎಲ್ಲರ ಜೀವನದ ಕಥೆ
ಮುಗಿವುದು ಪುಟಗಳ ತಿರುವಿದಂತೆ
ಓದುಗರು ಓದುವರು ನಾವು  ಬರೆದಾಗ
ಮಾತ್ರ ಅವರು ಮೆಚ್ಚುವಂತೆ.

ಪಶ್ಚಿಮ ಮುಖಿ 
- ಶ್ರೀಮತಿ ಉಮಾ ಕಟ್ಟಿ, ಸಿಡ್ನಿ 

ನಮ್ಮವರನ್ನು
ನಮ್ಮೂರನ್ನು
ದೇಶವನ್ನೂ ಬಿಟ್ಟು
ಬಹುದಿನವಾಯ್ತು
ಭಾಷೆಯೇ ಬೇರೆ
ವೇಷ ಭೂಷವೂ ಬೇರೆ
ಬಂದಿದ್ದಾಯ್ತು ಬಿಡಿ
ಆ ಮಾತು ಬೇರೆ
ಅನ್ನಿಗರಾದರು
ನಮ್ಮವರು
ಸನ್ಮಿತ್ರರೂ
ಇನ್ನಿಹರು
ಮನೆ ಮಠ
ಮಕ್ಕಳು ಮರಿ
ಸಂಸಾರವೇ
ಇಲ್ಲಿಹುದೀಗ
ಆದರೂ
ಎದೆಯೊಳಗಿನ
ದಿಕ್ಸೂಚಿ ಏಕೋ
ಇನ್ನೂ ಪಶ್ಚಿಮ ಮುಖಿ


 ದಿಕ್ಸೂಚಿ 

- ಶ್ರೀಮತಿ ಸಿಂಧುಶ್ರೀ ಸಂದೇಶ್


ಸಿಹಿ ಕಹಿ ನೋವು ನಲಿವುಗಳನ್ನು ಒಳಗೊಂಡ ಪಯಣ
ಸಿಹಿ ಕಹಿ ನೋವು ನಲಿವುಗಳನ್ನು ಒಳಗೊಂಡ ಪಯಣ
ನೌಕೆಯ ನಾವಿಕನಾರೋ ತಿಳಿಯಬೇಕೆಂಬ ತಲ್ಲಣ
ಕಣ್ಣಾಡಿಸದಷ್ಟೂ ದೂರ ಕಾಣುವ ಅಲೆಗಳು ಮತ್ತವುಗಳ ರಿಂಗಣ
ದೊರೆತಿರೆ ಮಾರ್ಗಸೂಚಿ ಸಾಗಲಿದೆ ನಿರಂತರ ಯಾನ
ತೋರಲು ದಿಕ್ಸೂಚಿ ಇನ್ನೀಗ ಆದೀತು ಅಡೆತಡೆಗಳ ನಿರ್ಗಮನ

 


ನವಗ್ರಹಗಳ ನಾಗಾಲೋಟ
-ಶ್ರೀಮತಿ ಸಿಂಧುಶ್ರೀ ಸಂದೇಶ್

ಸೂರ್ಯಗ್ರಹ ತಾ ತಂದನು ಕಾಂತಿಯನು


ಚಂದ್ರನಿಂದ ಪಡೆದದ್ದು ಮನಃಶಾಂತಿಯನು

ಮಂಗಳಕರವಾಗಿರಲೆಂದು ಹರಸಿರಲು ಅಂಗಾರಕನು
ಬುಧನಿಂದ ಪಡೆದದ್ದು ಯುಕ್ತಿಯನು
ಗುರು ತಾ ಹರಸಿರಲು ಅಪರಮಿತ ಜ್ಞಾನವನು
ಶುಕ್ರನಿಂದ ಲಭಿಸಿದ ಕೀರುತಿಯನು
ಶನಿಯಿಂದ ಪಡೆಯಲ್ಪಟ್ಟೆವು ಸಂಕಷ್ಟಗಳಿಂದ ಮುಕ್ತಿಯನು
ರಾಹುವಿನಿಂದ ಪಡೆಯಲು ಅಧಿಕಾರವನು
ಕೇತುವಿನಿಂದ ಹರಸಿರುವೆವು ಆಯುಷ್ಯವನು
ಹೀಗಿರಲು ಗ್ರಹಗತಿಗಳ ಚಲನವಲನ
ಧನ್ಯವಾಯಿತಲ್ಲ ಮನುಜರಿಗೆ ಮಾಡಿರಲು ಭಕ್ತಿಯ ನಮನ

                    



 ಹೆಣ್ಣು
- ದೀಪಿಕ  Sydney

ಹೆಣ್ಣನ್ನು ಹೆಣ್ಣಾಗಿ ಬದುಕಲು ಬಿಡು 


ತಿಳಿ ನೀನು
ಹೆಣ್ಣೆ ಸೃಷ್ಟಿಯ ಮೂಲ
ದೇವರ ರೂಪ
ಸಂಸಾರದ ಕಣ್ಣು
ಜನ್ಮ ನೀಡಿದ ತಾಯಿ
ಒಡ ಹುಟ್ಟಿದ ಸಹೋದರಿ
ಪ್ರೀತಿಯ ಸ್ವರೂಪದ ಮಗಳು
ಈ ಎಲ್ಲಾ ರೂಪವ ಹೊತ್ತು
ಗಂಡಿನ ಸಮನಾಗಿ ಬದುಕುವವಳು

ಈ ದೇವತಾ ಸ್ವರೂಪದ ಹೆಣ್ಣನ್ನು
ಬಲತ್ಕರಿಸಿ ನೀನು ಉಳಿಯುವೆಯ
ಅಪ್ರಾಪ್ಥೆಯೆನ್ನದೆ ಅರಳುವ ಹೂವನ್ನು
ಹೊಸಕಿ ಕೊಲ್ಲುವೆಯಾದರೆ
ನಿನ್ನ ಇರಹುಗೆ ಬೆಲೆಯಿಲ್ಲ
ನಿನ್ನ ವಿನಾಶ ನಿಸ್ಸಂಶಯ

ಹೆಣ್ಣನ್ನು ನಿನ್ನ ತಾಯಿಯಾಗಿ ಆದರಿಸು
ಸಹೋದರಿಯಂತೆ ರಕ್ಷಿಸು
ಮಗಳಂತೆ ಪ್ರೀತಿಸು
ನಿನ್ನ ಕಾಮದ ಕಣ್ಣನ್ನು ಸುಟ್ಟು ಬಿಡು
ಹೆಣ್ಣನ್ನು ಸಮಾಜದ ಶಕ್ತಿಯಾಗಿ ನೋಡು
ಎಲ್ಲರಂತೆ ಸಮನಾಗಿ ಸ್ವೀಕರಿಸು
ಇನ್ನಾದರೂ
ಹೆಣ್ಣನ್ನು ಹೆಣ್ಣಾಗಿ ಬದುಕಲು ಬಿಡು

ಮರೀಚಿಕೆ
-ಶ್ರೀಮತಿ ಸಿಂಧುಶ್ರೀ ಸಂದೇಶ್  Sydney 


ಸಮಯವೊಂದೇ ತಾನೇ ನಿಜದಲ್ಲಿ ಮರೀಚಿಕೆ
ಸಮಯವೊಂದೇ ತಾನೇ ನಿಜದಲ್ಲಿ ಮರೀಚಿಕೆ

ಭೌಗೋಳಿಕ ಸೂಚ್ಯಾಂಕ ಯಾವುದಿದ್ದರೇನು
ಪ್ರಾಂತ ಜಾತಿ ಭಾಷೆ ಬಣ್ಣ ಭಾವ ಯಾವುದಾದರೇನು

ಹಸಿರನ್ನು ಸಂಭ್ರಮಿಸುವ ಮಲೆನಾಡಿನಲ್ಲೂ
ಬಿರು ಶಾಖವನ್ನುಣಿಸುವ ಬಯಲುಸೀಮೆಯಲ್ಲೂ

ಜಾರಿ ಹೋದ ಈ ಕ್ಷಣ ಮತ್ತೆ ಕಾಣದಾಯಿತಲ್ಲ ನಿನ್ನೀ ವೀಕ್ಷಣ
ಸದುಪಯೋಗದಿಂದ ತಾನೇ ಸಮಯದ ನಿಶ್ಚಿತ ಪರಿಪೂರ್ಣ

ಸಮಯವೊಂದೇ ತಾನೇ ನಿಜ ಅರ್ಥದಲಿ ಮರೀಚಿಕೆ!!!


ಕಾಲನ ಪಯಣ
-ಶ್ರೀಮತಿ ಸಿಂಧುಶ್ರೀ ಸಂದೇಶ್  Sydney

ಕಾಲ ಹೀಗಿತ್ತು !! 
ಪ್ರಬಲನಾದ ಪೃಥ್ವಿರಾಜನ ಶೌರ್ಯ ದೇಶಪ್ರೇಮಗಳು ಕ್ಷೀಣಿಸಿತ್ತು

ಧೀರನಾಗಿ ಶತ್ರುಗಳ ನಾಶಪಡಿಸಿದ 
ಸಮರಸಿಂಹನ ಧೈರ್ಯ ನಿಶ್ಕ್ರಿಯವಾಗಿತ್ತು
ಪ್ರಾತಸ್ಮರಿತನೂ ಆದ ವೀರಪ್ರತಾಪನ
ಪರಾಕ್ರಮಗಳೂ ಲುಪ್ತವಾಗಿತ್ತು
ಕಾಲ ಮರುಗಿತ್ತು!!

ಕಾಲ ಜರುಗಿತ್ತು!!
ಪಶ್ಚಿಮ ಮಹಾರಾಷ್ಟ್ರದಲ್ಲಿ 
ಉದಯಿಸಿತೊಂದು ಬೆಳಕು
ವಿಂಧ್ಯೆಯಿಂದ ಕನ್ಯಾಕುಮಾರಿಯ ತನಕ
ಹರಡಿರಲು ಹಿಂದೂ ಸಾಮ್ರಾಜ್ಯದ ಧ್ಯೋತಕ
ಆರ್ಯ ಕೀರ್ತಿ ಎಂದೇ ಮೂಡಿಸಿತು ಪ್ರಖ್ಯಾತಿ
ಶಿವಾಜಿ ಮಹಾರಾಜರೇ ನಿಮಗಲ್ಲದೇ ಮತ್ತಾರಿಗಿದೆ ಇಂತಹ ಕೀರುತಿ
ಕಾಲ ಹರ್ಷಿಸಿತ್ತು!!


ತಿಂಡಿ ಚಿಂತೆ
- ದೀಪಿಕ  Sydney

ಎಲ್ಲ ಗೃಹಿಣಿಯರ ಒಂದೇ ಚಿಂತೆ
ನಾಳೆಗೆ ತಿಂಡಿ ಏನಂತೆ?
ಅವಲಕ್ಕಿಯಂದರೆ! ಮಗಳಿಗೆ ಒಲ್ಲೆಯಂತೆ
ಉಪ್ಪಿಟ್ಟೆಂದರೆ!  ಗಂಡ ಮೂಸಲ್ಲವಂತೆ
ಚಿತ್ರನ್ನ ಮಾಡ್ಲ ಅಂದರೆ ಬೆರೇಬರಲ್ವಾ ನಿಂಗೆ ಅಂತ ಅತ್ತೆ ಅಂದ್ರಂತೆ 
ಪುಳಿಯೋಗರೆ! ತನಗೇ  ಸೇರಲ್ವಂತೆ
ಇಡ್ಲಿ, ದೋಸೆಗೆ ನೆನೆನೆಹಾಕಿಲ್ವಂತೆ
ಚಪಾತಿ ಒತ್ಲ ಅಂದ್ರೆ ಅಜ್ಜಿಗೆ ಅಗಿಯೋಕಾಗಲ್ವಂತೆ
ಯಾವುದಾದರು ಬಾತ್ ಅಂದ್ರೆ ಮಾವಂಗೆ ಅರಗಲ್ವಂತೆ
ಮತ್ತೆ  ಇನ್ನೇನು ಅಂತೆ 
ಅದೇ ನಾಳೆಗೆ ತಿಂಡಿ ಏನಂತೆ?


ಬದಲಾವಣೆ 
-ಶ್ರೀಮತಿ ಸಿಂಧುಶ್ರೀ ಸಂದೇಶ್  Sydney

ಬದಲಾವಣೆ ಎಂಬೋದು ಪ್ರಕೃತಿಯ ಪ್ರಕೃತಿ

ಅಷ್ಟಿಲ್ಲದೇ ನೆನೆವುದೇ ಪ್ರಕೃತಿ ತಾ ವರ್ಷ ಋತುವಿನಲ್ಲಿ
ಒಣಗುವುದು ಬೇಸಿಗೆಯಲ್ಲಿ ಮತ್ತೆ ತಾ
ಚಿಗುರುವುದು ಚೈತ್ರಮಾಸದಲ್ಲಿ
ಸರಿಸಾಟಿಯೇನಿದೆ ಪ್ರಕೃತಿಯ ಓಕುಳಿಗೆ

ಹರಸಿಹನು ದೈವನು
ಕೃತಯುಗದಲ್ಲಿ ವಾಮನನಾಗಿ
ತ್ರೇತಾಯುಗದಲ್ಲೇನೋ ರಾಮನಾಗಿ
ದ್ವಾಪರದಲ್ಲಿ ಶ್ರೀಕೃಷ್ಣನಾಗಿ
ಸರಿಸಾಟಿಯಿದೆಯೇ ಪ್ರಕೃತಿಯ ಅವತಾರಕ್ಕೆ

ಮತ್ತೆ ಬದಲಾವಣೆ ಯಾಕಿನ್ನು ಕಂಡಿಲ್ಲ ಈ ಮನುಜನಲ್ಲಿ
ಇನ್ನೆಷ್ಟು ದೃಷ್ಟಾಂತಗಳು ಬೇಕು ನಿನಗೆ ತಿಳಿಯಲು
ಸ್ಥಾವರಕ್ಕಳಿವುಂಟು 
ಜಂಗಮಕ್ಕಳಿವಿಲ್ಲವೆಂದು??

ಬದಲಾವಣೆ ಎಂಬೋದೇ ಪ್ರಕೃತಿಯ ಪ್ರಕೃತಿ

ಪಂಚೇಂದ್ರಿಯಗಳು
-ಶ್ರೀಮತಿ ಸಿಂಧುಶ್ರೀ ಸಂದೇಶ್ Sydney

ಪಂಚೇಂದ್ರಿಯಗಳು ಐದು
ಶಬ್ದ ಸ್ಪರ್ಶ ರೂಪ ರಸ ಗಂಧಗಳ
ಸಂವಹನ ವಾಹಿನಿ

ಮನಸ್ಸಿಗೆ ಗ್ರಹಿಸಲ್ಪಡುವ ಆಲೋಚನೆಗಳ
ಮುಖ್ಯವಾಹಿನಿ

ಬಹುರ್ಮುಖಿಯಾಗಿರುವ ಮನಸ್ಸನ್ನು
ಅಂತರ್ಮುಖಿಯಾಗಿಸಲು

ಆಲೋಚನೆಗಳನ್ನು ಏಕಾಂತದೆಡೆಗೆ
ನಾಟಿಸಲು ಇರುವ ಸಾಧನ

ಇರಲಿ ಸದಾ ಸಭ್ಯ ಸದಭಿರುಚಿ
ಶಾಂತ ತೃಪ್ತವಾದ ಜೀವನ


ಕೃತಜ್ಞತೆ 
- ಶ್ರೀಮತಿ ಸಿಂಧುಶ್ರೀ ಸಂದೇಶ್ Sydney

ಸಲ್ಲಬೇಕು ಕೃತಜ್ಞತೆ ಇಂತೀರ್ವರಿಗೆ
ಸಲ್ಲಬೇಕು ಕೃತಜ್ಞತೆ ಇಂತೀರ್ವರಿಗೆ

ಜನುಮದಾತರಾದ ತಂದೆತಾಯಿಗೆ
ಸಂಸ್ಕಾರವಿತ್ತು ಪೋಷಿಸಿದ ಗುರುವೃಂದಕ್ಕೆ

ಔದರ್ಯ ತೋರಿದ ಕುಟುಂಬಕ್ಕೆ
ಆಶ್ರಯ ಮತ್ತು ಆಶಯಗಳೊಂದಿಗೆ
ಅಪ್ಪಿಕೊಂಡಿರುವ ಸಮಾಜಕ್ಕೆ

ಇತಿ ಹೇಳಲು ಅಸಾಧ್ಯ ಇಷ್ಟಕ್ಕೆ
ಸಲ್ಲಬೇಕಲ್ಲವೇ ಕೃತಜ್ಞತೆ ಸ್ವ ಆತ್ಮಕ್ಕೆ
ಸಹಪಯಣಿಗನಾಗಿರಲು ಸದಾ ಜೀವನಯಾನಕ್ಕೆ




ಮಳೆ
- ದೀಪಿಕ  Sydney
 
ಸುರಿವ ಮಳೆಯೇ
ನೀ ಇಳಿದು ಇಳೆಯ ಮೇಲೆ
ತಂಪನ್ನು  ತಂದಿರುವೆ

ಚಿಟಪಟದ ಸದ್ದಲ್ಲೇ
ನಿನ್ನ ಬರುವಿಕೆಯ ತಿಳಿಸಿರುವೆ

ಹಸಿರ ಮೇಲೆ ಸುರಿದು
ಮುತ್ತಿನ ರಾಶಿಯಾಗಿರುವೆ

ಹಿರಿಯ ಕಿರಿಯರೆನ್ನದೆ
ಎಲ್ಲರನು ನಿನ್ನ ಆಟಕೆ ಕುಣಿಸಿರುವೆ

ಒಮ್ಮಮ್ಮೆ ಬಂದು ಅಬ್ಬರಿಸಿ ಬೊಬ್ಬಿಡಿದು
ಮಗದೊಮ್ಮೆ ಬಂದದ್ದು ತಿಳಿಯದಂತೆ ಹೊರಡುವೆ

ನೀ ರವಿಯ ಜೊತೆಯಾದಗ
ಆಗಸದಿ ಏಳು ಬಣ್ಣಗಳ ಚಿತ್ರಿಸುವೆ

ಹನಿ ಹನಿಯಾಗಿ ನೀನುದುರಿ
ನದಿಯಾಗಿ ಹರಿದಾಡುವೆ

ಓ ಮಳೆಯೇ ಸುರಿಯುವದೇ
ನಿನ್ನಯ ನಿರಂತರ ಕಾಯಕವಲ್ಲವೇ!

ಓ ಪ್ರಭುವೆ 
- ದೀಪಿಕ  Sydney

ನಿನ್ನ ಅರಸಿ ಬಂದಿರುವೆ
ನಿನ್ನ ಆಸರೆ ಬಯಸಿರುವೆ
ನನ್ನೀ ಕೋರಿಕೆಯ ಪೇಳುವೆ
ನೀ ಅರಿವೇ ಎಂದೆನಿಸಿರುವೆ
ಈ ಜಗದ ನೋವ ನೀನೆಂದಿಗೆ ಅಳಿವೆ
ಕಾಣದ ಜೀವಿಯ ಎಂದಿಗೆ ಕೋನೆಗಾಣಿಸುವೆ
ನೆಮ್ಮದಿಯ ಬದುಕನೆಂದು ಕೊಡುವೆ
ಎಲ್ಲವನರಿತು ಏನು ಅರಿಯದಂತೇಕಿರುವೆ
ನಿನ್ನ ಮಕ್ಕಳ ಮೇಲಿನ್ನು ಕೋಪವೇ
ನಮ್ಮೆಲ್ಲರ ಮೇಲೆ ಕರುಣೆ ತೋರು ಎನ್ನ ಪ್ರಭುವೆ
ಕೈ ಮುಗಿದು ಬೇಡುವೆ ಓ ನನ್ನ ದಿವ್ಯ ಪ್ರಭುವೆ.

_______________________________________________



ಹೊಸತು 
- ದೀಪಿಕ  Sydney

ಹೊಸತೇನು ಇಲ್ಲ ಈಗಿನ ಬದುಕಿನಲಿ 
ಕಲಿತೆ  ನಾ ಇರುವದರಲ್ಲೇ ಹೊಸದಾಗಿ ಬದುಕುವುದನ 
ನನ್ನ ಮನೆಯಲ್ಲಿಯೇ ಕಳೆಯುವೆ ಖುಷಿಯ ಕ್ಷಣ 

ಕಲಿತೆ ನಾ ಹೊಸ ರುಚಿಯನ್ನ 
ಬಡಿಸುವೆ ಮಾಡಿ ಮನೆಯವರಿಚ್ಛೆಯ ಅಡಿಗೆಯನ್ನ 

ಕಲಿತೆ ನಾ ಹೊಸ ಆಟಗಳನ್ನ 
ಮಕ್ಕಳೊಂದಿಗೆ ಆಡಿ ನಲಿದೆನ 

ಅರಿತೆ ನಾ ಹೆಚ್ಚು ನನ್ನ ಮನೆಯವರನ್ನ 
ಕಳೆದೆ ನಾ ಅವರಜೊತೆ ಹೆಚ್ಚು ಸಮಯವನ್ನ 

ಅರಿತೆ ನಾ ನನ್ನ ಹೊಸ ಕಲೆಯನ್ನ 
ಪಡೆದೆ ನಾ ಹೊಸ ಅನುಭವವನ್ನ 

_____________________________________________________________

ಗಜಲ್
-  ಅಂಬಮ್ಮ ಪ್ರತಾಪ್ ಸಿಂಗ್ ಮಾನ್ವಿ   ರಾಯಚೂರು


ಜಗತ್ತಿಗೆ ತಾನೇ ಜಗದ್ಗುರುವಾಗಿ ಬೆಳಗಲಿ ಭಾರತ
ಸ್ನೇಹ ಸೌಹಾರ್ದತೆಗೆ ಬೆಳಕಾಗಿ ಬೆಳಗಲಿ ಭಾರತ

ಸಾಧು-ಸಂತರು ತಪಗೈದ ತಪೋಭೂಮಿ ನನ್ನದು
ಧ್ಯಾನದ ಮಹತ್ವ ಸಾರುವಂತಾಗಿ ಬೆಳಗಲಿ ಭಾರತ

ಮಂದಿರ-ಮಸೀದಿ ಚರ್ಚುಗಳಿವೆ ಪುಣ್ಯ ಭೂಮಿಯಲ್ಲಿ
ಮನುಕುಲದ ಒಳಿತಿಗೆ ಪ್ರಾರ್ಥನೆಯೊಂದಾಗಿ ಬೆಳಗಲಿ ಭಾರತ

ವೈವಿಧ್ಯತೆಯಲ್ಲಿ ಏಕತೆ ಬಿಂಬಿಸುವ ಸಂಸ್ಕೃತಿಯಿದೆ ಇಲ್ಲಿ
ಸಾರ್ವಭೌಮತೆ ಸಾರುವ ರಾಷ್ಟ್ರವಾಗಿ ಬೆಳಗಲಿ ಭಾರತ

ವಿಜ್ಞಾನವು ಜನ್ಮ ತಾಳಿದೆ ಭರತನ ನೆಲದಲ್ಲಿ
ಪ್ರಪಂಚಕ್ಕೆ ದಾರಿ ದೀಪವಾಗಿ ಬೆಳಗಲಿ ಭಾರತ

ಅನ್ನದಾತನ ಬೆನ್ನೆಲುಬಾಗಿ ಹೊಂದಿದೆ ನನ್ನ ದೇಶ
ಹಸಿದ ಒಡಲಿಗೆ ಅನ್ನವಾಗಿ ಬೆಳಗಲಿ ಭಾರತ

ನಿನ್ನ ಪೂರ್ವ ಜನ್ಮದ ಸುಕೃತದ ಫಲವಿದು ವನಿತ
ಪ್ರತಿ ಜೀವಕ್ಕೆ ಜನನಿಯಾಗಿ ಬೆಳಗಲಿ ಭಾರತ


_____________________________________________________________


ನಾ ಕಂಡ ಕನಸು
ದೀಪಿಕ Sydney

ನಾ ಕಂಡ ಕನಸು ನನಸಾಯಿತಂದು
ನಾ ತಿಳಿದಿದ್ದೆ ಆ ಕನಸು ನನ್ನದೇ ಎಂದು
ಆ ಭ್ರಮೆಯಲ್ಲೇ ಇದ್ದೆ ಆ ದಿನದಂದು
ಹತ್ತಿರಹೋದಂತೆಲ್ಲ ಮಾಯವಾಯಿತಂದು
ಕೊನೆಗೆ ನನಗೆ ತಿಳಿಯಿತು ಆ ಕನಸು ನನ್ನದಲ್ಲವೆಂದು
ನಾ ಕಂಡ ಕನಸು ನನದಲ್ಲವೆಂದು.

_____________________________________________________________

ಗಝಲ್ 
 - ಶಿವಶಂಕರ ಕಡದಿನ್ನಿ, ರಾಯಚೂರು 

ಬಿರು ಬಿಸಿಲಲ್ಲಿ ಕೈ ಹಿಡಿದು ನಡೆಸಿದಾಗಲೂ ನಾನು ಏನು ಮಾತನಾಡಲಿಲ್ಲ
ಉರಿ ಬೆಂಕಿಯಲಿ ಕೈ ಬೆರಳು ತಾಕಿಸಿದಾಗಲೂ ನಾನು ಏನು ಮಾತನಾಡಲಲ್ಲಿ
ಬಂಡಿಗಾಲಿಯಲ್ಲೇ ಮಣ್ಣಿನ ಮಡಿಕೆಯಾಗಿ ದಿನವಿಡೀ ದಾಹ ತಣಿಸುತ್ತಿದ್ದೆ
ನೋಡು ನೋಡುತ ನನ್ನ ಒಡಲ ಬಿಂದಿಗೆ ಹೊಡೆದಾಕಿದಾಗಲೂ ನಾನು ಏನು ಮಾತನಾಡಲಿಲ್ಲ
ಮನೆ ತುಂಬೆಲ್ಲ ಹರಡಿದ ಬೆಳಕು ಕಂಡು ಉಕ್ಕುನಗೆಯಲ್ಲಿದ್ದೆ
ಹಬ್ಬಿದ ಬೆಳಕಿಗೆ ಕತ್ತಲೆ ಬೀರಿದಾಗಲೂ ನಾನು ಏನು ಮಾತನಾಡಲಿಲ್ಲ
ಪಕಳೆ ಬೆನ್ನಿಗೆ  ಮುಳ್ಳುಗಳು ಚುಚ್ಚಿದರೂ ಅರಳುವ ಶಕ್ತಿ ನನ್ನಲ್ಲಿತ್ತು
ಸಹಿಸದಿರುವ ಕಾಣದ ಕೈಗಳು ಮುದುಡಿಸಿ ಕೆಳಗೆ ಬೀಸಾಡಿದಾಗಲೂ ನಾನು ಏನು ಮಾತನಾಡಲಿಲ್ಲ
ನಡು ಬೀದಿ ಹಗಲಲ್ಲೆ ದಾಳಿ ನಡೆಯಬಹುದು "ಶಂಕರ"ನ ಜೀವಕ್ಕೆ
ಕತ್ತು ಹಿಸುಕಿ ಮಣ್ಣಲ್ಲಿ ಹೂತು ಇಟ್ಟಾಗಲೂ ನಾನು ಏನು ಮಾತನಾಡಲಿಲ್ಲ...

_____________________________________________________________

ಎನ್ನ ಪಾಲಿಸೋ 
-  ಅಡಿಲೈಡ್ ಮಾಲು    Adelaide

ನಿನ್ನೆಡೆಗೆ ನಡೆಯುವೆನು 
ನಿನ್ನಡಿಗೆ ಎರಗುವೆನು 
ನನ್ನ ಚಿತ್ತದಲಿ ಬಂದು
ನೀನು ನೆಲೆಸೊ||

ನಿನ್ನ ಮುಂದಾಡುವೆನು 
ನಿನ್ನ ಕೊಂಡಾಡುವೆನು 
ಚೆನ್ನ ಮೂರುತಿ ಹರಿಯೆ
ಕಣ್ಣ ತೆರೆಸೊ||

ತರ ತರದಿ ಶ್ರಮಿಸುವೆನು 
ಶಿರ ಬಾಗಿ ನಮಿಸುವೆನು 
ಸಿರಿ ಲಕುಮಿಯ ಸಖನೆ
ನನ್ನ ಬಲಿಸೊ||

ಪಾಪ ಮಾಡಿದೆ ಆಗ 
ಪಾಪ ಮಾಡಿದೆ ಈಗ 
ಲೋಪವಿಲ್ಲದ ಶ್ರೀಶ 
ನನ್ನ ಉಳಿಸೊ||

ಭಕುತಿ ಮಾರ್ಗವ ತಿಳಿಸೊ
ಯುಕುತಿಗಳ ಒಳಗಿಳಿಸೊ
ಮುಕುತಿ ಪಡೆಯುವ ಬಗೆಯ 
ನನಗೆ ಕಲಿಸೊ||

ನಿನ್ನ ಕಂದನು ನಾನು
ನನ್ನ ತಂದೆಯು ನೀನು
ಘನ್ನ ಮೂರುತಿ ಕೃಷ್ಣ
ನನ್ನ ಬಳಸೊ||

ನಿನ್ನೆಡೆಗೆ ನಡೆಯುವೆನು
ನಿನ್ನಡಿಗೆ ಎರಗುವೆನು
ನನ್ನ ಹೃದಯದೊಳಗೆ 
ಬಂದು ನೆಲೆಸೊ||

         _____________________________________________________________

ಅಮ್ಮ  
- ಅಡಿಲೈಡ್ ಮಾಲು  Adelaide

‘ಅಮ್ಮ ನನ್ನ ಕೈಯಿ ಏಕೆ ಚಿಕ್ಕದು’
‘ದೊಡ್ಡ ಕೈಯಿ ಇದ್ದರೂ ಚಂದ್ರ ನಿನಗೆ ಸಿಕ್ಕದು’
‘ಅಮ್ಮ ನನ್ನ ಕೈಯಿ ಸ್ವಲ್ಪ ಕಪ್ಪಿದೆ’
‘ಕಪ್ಪು ಎಂದು ಹೇಳುವವರ ತಲೆಯಲೇನೊ ತಪ್ಪಿದೆ’
‘ಅಮ್ಮ ನನ್ನ ಬಳೆಗಳೇಕೆ ಹಸಿರಿದೆ’
‘ನನ್ನಂತೆಯೆ ನೀ ಕಣೆ, ನಿನ್ನಲೆನ್ನ ಉಸಿರಿದೆ’
‘ಅಮ್ಮ ನಿನ್ನ ಕೈಯಿ ಕೊಂಚ ಕೊಳೆಯಿದೆ’
‘ಹಾ, ನಿನ್ನೆ ಕೆನ್ನೆ ಒರೆಸಿದ ಕಣ್ಣನೀರ ಕಲೆಯಿದೆ’
‘ಅಮ್ಮ ಹೆಣ್ಣು ಜನ್ಮ ಏಕೆ ದೊಡ್ಡದು’
‘ಅವಳ ಮನಸು ಕೆಡಕುಗಳಿಗೆ ಅವಳನೆಂದು ಒಡ್ಡದು’
‘ಅಮ್ಮ ನಿನ್ನ ಮುಖದಲೇಕೆ ಸುಕ್ಕಿದೆ’
‘ನನ್ನ ಕಷ್ಟಗಳಿಗೆ ಈಗ ಬಹುಮಾನ ಸಿಕ್ಕಿದೆ’
‘ಅಮ್ಮ ಕೈಯ್ಯ ಏಕೆ ದೂರ ಸರಿಸಿದೆ’
‘ದೂರವಿದ್ದರೂ, ಕೈಗಳೆರಡು ನಿನ್ನ ಹರಸಿದೆ’
‘ಅಮ್ಮ ನೀ ಬಿಟ್ಟು ಹೋಗಬೇಡವೆ’
‘ಹಾಡಿಕೊಳ್ಳೆ, ನಾನು ಬರೆದ ಹಾಡಿವೆ’
‘ಅಮ್ಮ, ದುಃಖ ಉಕ್ಕಿ ಉಕ್ಕಿ ಬರುತಿದೆ’
‘ನಿನ್ನ ದುಃಖ ನನ್ನ ದುಃಖ ಬೆರೆತಿದೆ’
‘ಅಮ್ಮ, ನೀನೊಮ್ಮೆ ಬಂದು ಅಪ್ಪಿಕೊ’
‘ನಿನ್ನ ಹೃದಯದಲ್ಲಿ ಸದಾ ನಾನಿರುವೆನೆಂದು ಒಪ್ಪಿಕೊ’


_____________________________________________________________
ಸದ್ದು 
  -   ಶ್ರೀಮತಿ ಅನು  ಶಿವರಾಂ  Sydney

ದೂರದಲ್ಲಿ ಕೇಳಿದೊಡನೆ ಕೋಗಿಲೆಯ ಇಂಚರ
ಮರಗಳು ಎದ್ದವು ಮೈಕೊಡವಿ,ಆಯ್ತು ಹೊಸ  ಜೀವ ಸಂಚಾರ;
ಎಳೆ   ಹಸಿರುಟ್ಟು, ಚಿಗುರ  ಒಡವೆ ತೊಟ್ಟು ಸಂಭ್ರಮದಿ
ಬರುವ ವಸಂತನ  ಮಧುರ ಮಿಲನದ  ಕನಸಿನಲಿ

ಬಾನಂಚಿನಲಿ ಘನ ಮೋಡಗಳ ಗರ್ಜನೆ ಕೇಳಿ
ಮರಗಳು ನಲಿದವು  ತಮ್ಮನೀಳ  ರಂಬೆಗಳ  ಚಾಚಿ;
ತುಂತುರು ಮಳೆ ತರುವ ನವ ಚೇತನದ ಆಸೆಯಲಿ
ದಾಹ ಹಿಂಗಿಸುವ ವರ್ಷಋತುವಿನ ಪುಳಕದಲಿ 

ಮಂಜಿನ ರಥವೇರಿ ಬಂದ  ಶಿಶಿರನ ಕುಳಿಗಾಳಿಯ  ಸದ್ದ ಕೇಳಿ 
ಉದುರಿಸಿ ಎಲೆಗಳ, ಕುಗ್ಗಿಸಿ ಮೈಯ್ಯ, ಬೆತ್ತಲೆ ನಿಂತವು ಮರಗಳು;
ದಣಿದ ಮೈಮನಗಳಿಗೆ ವಿಶ್ರಾ ಮ  ತರುವ ಚಳಿಗಾಲದ ಹಿತದಲ್ಲಿ
ಮತ್ತೆ  ಮರಳಿ ಬರುವ ಚೈತ್ರನ ಬಿಸಿಯಪ್ಪುಗೆಯ ನಿರೀಕ್ಷೆಯಲಿ

ಗಾಡಿ ಚಕ್ರದ ಮೇಲೆ ಉರುಳಿ ಬಂತು ಕೊಡಲಿ ಮಸೆಯುವ ಸದ್ದು
ಮೌನದಲಿ ಸಿದ್ದವಾದವು ಮರಗಳು ತಮ್ಮೆಲ್ಲ ಕನಸುಗಳ ಗಂಟು ಕಟ್ಟಿ;
ತಾವು ಶ್ವಾಸವಿತ್ತು  ಸಲಹಿದ ಮನುಜನ   ದುರಾಶೆಗೆ  ತಲೆಬಾಗಿ
ಅವನ ಕುರುಡು  ಸ್ವಾರ್ಥದ  ಯಜ್ಞದಿ   ಅಂತಿಮ  ಆಹುತಿಯಾಗಿ

_____________________________________________________________

ಧ್ವನಿ 
-  ಶ್ರೀಮತಿ ಅನು  ಶಿವರಾಂ  Sydney

ಮಳೆ  ಹನಿ ತುಂಬಿದ ಮೋಡದ  ಬಸಿರು ನಿನ್ನ ದನಿ,
ಎದೆಯ  ಬಂಜರವ  ಹನಿಸಿ  ತಣಿಸುವುದು ನಿನ್ನ ದನಿ.
ಜೇನಿನ ಹನಿಯಲಿ ಅದ್ದಿದ ಎಳೆಯದು ನಿನ್ನ ದನಿ,
ವೀಣೆಯ ತಂತಿಯೊಳ್ ಅಡಗಿಹ ನಾದವು ನಿನ್ನ ದನಿ

ಮನಸಿಗೆ ಸ್ನೇಹದ ಬೆಚ್ಚನೆ ಹಿತವದು ನಿನ್ನ ದನಿ,
ದಣಿದ ತನುವಿಗೆ ಹೊಸ ಉಲ್ಲಾಸ ನಿನ್ನ ದನಿ
 ಕನಸಿನ ಲೋಕಕೆ  ಒಯ್ಯುವ ಕುದುರೆ  ನಿನ್ನ ದನಿ,
ವಾಸ್ತವ ಬದುಕಿಗೆ  ಕಟ್ಟುವ ತಂತಿಯೂ  ನಿನ್ನ ದನಿ

ಹೂವಿನ ಪರಿಮಳ ಬೀರುವ ಗಾಳಿಯು ನಿನ್ನ ದನಿ
ಭಾವದ ಹೂಗಳ  ಕಟ್ಟಿದ ಹಾರವು ನಿನ್ನ ದನಿ 
                   

Comments