ಜೀವಿತದಾಚೆ ಜೀವಂತವಿರುವುದೆಂದರೆ
ಲೇಖನ - ಮಂಜುಳಾ ಡಿ
ಆ ಗ್ರಾಮದ ಹಿರಿಯರೊಬ್ಬರು ದೂರದೃಷ್ಟಿಯಿಂದ ಆ ಗ್ರಾಮದಲ್ಲಿ ಪ್ರೌಢಶಾಲೆ ತರಲು ಸತತ ಹೋರಾಟ ಮಾಡಿ 1935 ರಲ್ಲಿ ಶಾಲೆಗಾಗಿ ಸ್ವಂತ ಜಮೀನನ್ನು ಉದಾರ ಮನೋಭಾವದಿಂದ ದೇಣಿಗೆ ನೀಡಿದರು. ಆ ಶಾಲೆಯಲ್ಲಿ ಅಂದಿಗೆ ಎಸ್ ಎಸ್ ಎಲ್ ಸಿ ಕಲಿತು ಸಹಸ್ರಾರು ಜೀವಿತಗಳು ಅರಳಿದವು. ಅದೇ ಶಾಲೆಯನ್ನು ಮರು ನಿರ್ಮಾಣಕ್ಕಾಗಿ ನೆಲಸಮ ಮಾಡುವುದನ್ನೇ ಕಾದಂತಿದ್ದ ಆ ಹಿರಿಯರ ವಾರಸುದಾರರು ಭೂಮಿ ದಾನ ಮಾಡಿದ ಬಗ್ಗೆ ಯಾವುದೇ ದಾಖಲೆ ಇಲ್ಲ, ಇದರಿಂದಾಗಿ ಶಾಲೆಗೆಂದು ದೇಣಿಗೆ ನೀಡಿದ ಸ್ವತ್ತು ಖಾಸಗಿ ಸ್ವತ್ತು ಎಂದು ನ್ಯಾಯಾಲಯಕ್ಕೇರಿದರು.
ಇಡೀ ಊರು ಮೂರು ಭಾಗವಾಗಿ ಹೊಯ್ತು. ಒಂದು ಗುಂಪು ಅದು ಶಾಲೆಯ ಸ್ವತ್ತು ಎಂದು ನಿಂತರೆ, ಮೊಮ್ಮಕ್ಕಳಿಗೆ ಹೋರಾಡಿ, ಆ ಸ್ವತ್ತು ನಿಮ್ಮದೇ ಎಂದು ಹುರಿದುಂಬಿಸುವ ಮತ್ತೊಂದು ಗುಂಪು. ಅಲ್ಲಿಯದು ಇಲ್ಲಿ ಹೇಳಿ, ಇಲ್ಲಿಯದು ಅಲ್ಲಿ ಹೇಳಿ ಇನ್ನೂ ಗೊಂದಲ ಹೆಚ್ಚಿಸುವ ಶಕುನಿ ಪಡೆ ಮತ್ತೊಂದು ಕಡೆ. ಈ ಕಡತ ತಿರುಗಿಸಿ ಸಾಕಾಗಿ ಬಂದ ರಜೆಯಲ್ಲಿ ದೇವಸ್ಥಾನಕ್ಕೆಂದು ಹೊರಟು ಸೌದತ್ತಿ ಯಲ್ಲಮ್ಮನ ದರ್ಶನ ಮುಗಿಸಿ, ಶಿರಸಂಗಿಯ ಕಾಳಿಕಾಂಬೆಯ ದರ್ಶನಕ್ಕೆಂದು ಹೊರಟೆ. ಶಿರಸಂಗಿಯ ಕಾಳಿಕಾಂಬೆಯ ಮುಂದೆ ನಿಂತರೆ ಒಮ್ಮೆ ಅರಿವಿಲ್ಲದೆ ಮೈ ನಡುಗಿದಂತೆ ಅನಿಸುವುದು. ಸುಪ್ರಸಿದ್ಧ ಬಂಗಾಲದ ಕಾಳಿಕಾಂಬೆಯ ಮುಂದೆ ಕೂಡ ಇಂಥ ಭಾವ ಮೂಡಲಾರದು. ಸಿಂಗ ಋಷಿ ಇಲ್ಲಿ ತಪವನ್ನಾಚರಿಸಿದ್ದಾನೆ ಎಂಬ ಇತಿಹಾಸ ಅಲ್ಲಿನವರು ಹೇಳುತ್ತಾರೆ.
ಪ್ರತಿಬಾರಿ ಕಾಳಿಕಾಂಬೆಯ ದರ್ಶನಕ್ಕೆ ಹೋಗುವಾಗ ದೇಗುಲಕ್ಕೆ ಹತ್ತಿರದಲ್ಲೇ ಇರುವ ಶಿರಸಂಗಿ ಕೋಟೆ ಹಾದೇ ಹೋಗಬೇಕಾಗುತ್ತದೆ. ಪ್ರತೀಬಾರಿ ಸಮಯಾಭಾವದಿಂದ ಮುಂದಿನ ಬಾರಿ ನೋಡೋಣ ಎಂದೇ ಸಾಗುತ್ತಿದ್ದೆ. ಈ ಬಾರಿ ಮೊದಲು ಕೋಟೆ ದರ್ಶಿಸುವ ಎಂದು ಇಳಿದಾಗ ನಿಜಕ್ಕೂ ಪ್ರತಿ ಕನ್ನಡಿಗ ತಿಳಿದರಬೇಕಾದ ಮತ್ತು ಕೃತಜ್ಞರಾಗಿರಬೇಕಾದ ಚೇತನವೊಂದರ ಬದುಕಿನ ಹರಿವು ತೆರೆದುಕೊಳ್ಳಲಿದೆ ಎಂದು ತಿಳಿದಿರಲಿಲ್ಲ. 3600 ಎಕರೆ ದಾನ ಮಾಡಿದ ಶಿರಸಂಗಿ-ನವಲಗುಂದ ಆಳಿದ ಸಾಮಂತ ರಾಜರಾದ ದೇಸಾಯಿ ಅರಸು ಮನೆತನ ಕೊನೆಯ ರಾಜ ಲಿಂಗರಾಜ ದೇಸಾಯಿಯವರ ಬಗ್ಗೆ ತಿಳಿದು ಮೂಡಿದ ಅಚ್ಚರಿಯಿಂದಾಗಿ ಈ ಲೇಖನ ಹೊಮ್ಮಿದೆ.


.jpg)

Comments
Post a Comment