ಕೊಡಗಿನ ರಾಜಕುಮಾರಿ ಗೌರಮ್ಮ ವಿಕ್ಟೋರಿಯ

 ಕೊಡಗಿನ ರಾಜಕುಮಾರಿ ಗೌರಮ್ಮ ವಿಕ್ಟೋರಿಯ 

ಲೇಖನ - ಶ್ರೀರಾಮಮೂರ್ತಿ ಬೇಸಿಂಗ್ ಸ್ಟೋಕ್ UK 


ಕೆಲವು  ವಾರಗಳ ಹಿಂದೆ ನಡೆದ ಟಿವಿ ಸಂದರ್ಶನದಲ್ಲಿ ಮೆಗನ್ ಮಾರ್ಕಲ್ (Duchess of Sussex ) ಇಂಗ್ಲೆಂಡ್ ರಾಜಮನೆತದಲ್ಲಿ ವರ್ಣದ್ವೇಷ ಇದೆ ಎಂದು ದೂರಿದ್ದಳು . ಇಂತಹ ಅಪವಾದನೆ ಹೊಸದೇನಿಲ್ಲ ಬಿಡಿ. ವಿಕ್ಟೋರಿಯ ರಾಣಿ (೧೮೦೯-೧೯೦೧) .  ಅಬ್ದುಲ್ ಕರೀಮ್ ಎಂಬುವನನ್ನು ಭಾರತದಿಂದ ತನ್ನ ಸೇವಕನಾಗಿ ಕೆಲಸ ಮಾಡಲು ಕರೆಸಿಕೊಂಡ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ , ಇವನನ್ನು ಕೀಳು ಮಟ್ಟದಲ್ಲಿ ನೋಡಿದ್ದು ವಿಕ್ಟೊರಿಯಾ ರಾಣಿ ಅಲ್ಲ, ಅವಳ ಆಡಳಿತಲ್ಲಿದ್ದವರು, ರಾಣಿಗೆ ಇವನು ಅಚ್ಚುಮೆಚ್ಚಿನವನಾಗಿದ್ದನು  ಮತ್ತು ಅವಳಿಗೆ ಉರ್ದು ಭಾಷೆಯನ್ನೂ ಕಲಿಸಿದ್ದನು. ಇಷ್ಟು ಸಲಿಗೆ ಇದ್ದದ್ದು ಅನೇಕರಿಗೆ ಸಹಿಸಲು ಆಗಲಿಲ್ಲ,  ರಾಣಿ ಮರಣವಾದ ಕೂಡಲೇ  ಆಗತಾನೆ ಪಟ್ಟಕ್ಕೆ ಬಂದಿದ್ದ ಎಡ್ವರ್ಡ್ ೭ ಇವನನ್ನು ಮನೆಯಿಂದ ಹೊರಗೆ ಹಾಕಿ ಭಾರತಕ್ಕೆ ಹಿಂತಿರುಗವಂತೆ ಆಜ್ಞೆ ಮಾಡಿದ.

ಚಿಕ್ಕ ವೀರರಾಜೇಂದ್ರನ ಮಗಳು ಕೊಡಗಿನ ರಾಜಕುಮಾರಿ ಗೌರಮ್ಮನನ್ನು ಈ ರಾಣಿ ತನ್ನ ಸಾಕು ಮಗಳಾಗಿ ಸ್ವೀಕರಿಸಿದ್ದು ೧೯ನೇ ಶತಮಾನದ ಒಂದು ಐತಿಹಾಸಿಕ ಸಂಗತಿ. 

ಇವಳ ತಂದೆ , ಕೊಡಗಿನ ರಾಜ  ಚಿಕ್ಕವೀರರಾಜೇಂದ್ರ (೧೮೦೫-೧೮೫೯) ೧೮೩೪ರಲ್ಲಿ ಬ್ರಿಟಿಷರು, ಅಂದರೆ ಈಸ್ಟ್ ಇಂಡಿಯ ಕಂಪನಿಯ ಸೈನ್ಯ ,  ಕೊಡಗು ಪ್ರಾಂತ್ಯಕ್ಕೆ ನುಗ್ಗಿ  ಅರಮನೆ ಲೂಟಿ ಮಾಡಿ ಅರಸನನ್ನು  ಸೆರೆ ಹಿಡಿದು  ಅವನ ಪರಿವಾರದೊಂದಿಗೆ ಬೆನಾರಿಸ್ (ಕಾಶಿ) ಪಟ್ಟಣಕ್ಕೆ ಗಡಿಪಾರು ಮಾಡಿದರು, ಇಲ್ಲಿ ಈಸ್ಟ್ ಇಂಡಿಯಾ ಕಂಪನಿಯ ರಾಜಕೀಯ ಸೆರೆಯಲ್ಲಿ (Political Prison)  £೬೦೦೦ (೬೦೦೦೦ ರೂಪಾಯಿ )  ವರಮಾನದಿಂದ ಅವನ ಕೆಲವು ರಾಣಿಯರು ಮತ್ತು ಸೇವಕರು ನೆಲಸಿದರು.  ಇಲ್ಲಿ ಗೌರಮ್ಮ ೪/೭/ ೧೮೪೧ ನಲ್ಲಿ ಜನಸಿದಳು, ಆದರೆ ಇವಳ ತಾಯಿ, ರಾಜನ ನೆಚ್ಚಿನ ರಾಣಿ,  ಕೆಲವೇ ದಿನಗಳಲ್ಲಿ ಕಾಲವಾದಳು. ತಾಯಿ ಇಲ್ಲದ ಮಗಳ ಮೇಲೆ ಇವನಿಗೆ ಅತ್ಯಂತ  ಪ್ರೇಮ ಬೆಳೆಯಿತು  . 



  ಕೆಲವು  ವರ್ಷಗಳು ಕಳೆದನಂತರ, ತನ್ನ ರಾಜ್ಯ ಮತ್ತು ಆಸ್ತಿಯನ್ನು ಕಳೆದುಕೊಂಡ ಕೊರಗನ್ನು  ಸಹಿಸಲಾರದೆ ಇಂಗ್ಲೆಂಡ್ ಗೆ ಪ್ರಯಾಣ ಮಾಡಿ   ರಾಣಿ ವಿಕ್ಟೋರಿಯನ್ನು ಖುದ್ದಾಗಿ ಭೇಟಿ ಮಾಡಿ  ತನಗೆ ಆಗಿರುವ  ಅನ್ಯಾಯವನ್ನು ವಿವರಿಸಿ  ಬ್ರಿಟಿಷ್ ಸರ್ಕಾರದಿಂದ  ಸೂಕ್ತವಾದ ಪರಿಹಾರವನ್ನು ಪಡೆಯುವ  ನಿರ್ಧಾರ ಮಾಡಿದ , ಇದಲ್ಲದೆ  ತನ್ನ ೧೧ ವರ್ಷದ  ಮಗಳು ಗೌರಮ್ಮನ ಭವಿಷ್ಯ ಭದ್ರ ಮಾಡುವ ಉದ್ದೇಶದಿಂದ  ಅಂದಿನ ಗೌರ್ನರ್ ಜನರಲ್ ಲಾರ್ಡ್ ಡಾಲ್ ಹೌಸಿ ಅವರನ್ನು ಸಂಪರ್ಕಿಸಿ ದೇಶದಿಂದ ಹೊರಗೆ ಹೋಗುವುದಕ್ಕೆ ಅಪ್ಪಣೆ ಕೇಳಿದ, ಬಹಳ ತಿಂಗಳ ನಂತರ ಚಿಕ್ಕವೀರರಾಜೇಂದ್ರ ಒಂದು ವರ್ಷದ ಅವಧಿಯಲ್ಲಿ ಹಿಂತಿರುಗಬೇಕು  ಮತ್ತು ಒಬ್ಬ ಬ್ರಿಟಿಷ್ ಅಧಿಕಾರಿ ಜೊತೆಯಲ್ಲಿ  ಪ್ರಯಾಣ ಮಾಡುವಂತ  ಷರತ್ತು ಬದ್ದಿನ ಮೇಲೆ ಅನುಮತಿ ಬಂತು, ಆದರೆ ಇದು ಗೌರಮ್ಮನಿಗೆ ಅನ್ವಯಿಸಲಿಲ್ಲ,  ಇಬ್ಬರು ರಾಣಿಯರು, ಮಗಳು ಮತ್ತು ಹಲವಾರು ಸೇವಕರೊಂದಿಗೆ ಹಡಗಿನಲ್ಲಿ ಪ್ರಯಾಣ ಮಾಡಿ ೧೨/೫/೧೮೫೨ ಇಂಗ್ಲೆಂಡ್ ದೇಶದಲ್ಲಿ ಕಾಲಿಟ್ಟರು. ಭಾರತದ ರಾಜವಂಶದವರು ಇಂಗ್ಲೆಂಡಿಗೆ ಭೇಟಿ ಮಾಡಿದ್ದವರಲ್ಲಿ ಇವರು ಮೊದಲಿಗರು. 

 


ರಾಣಿ ವಿಕ್ಟೋರಿಯ ಚಿಕ್ಕವೀರರಾಜೇಂದ್ರ ಮತ್ತು ಗೌರಮ್ಮನನ್ನು  ಬಹಳ ಆದರದಿಂದ ಸ್ವಾಗತಿಸಿ ಗೌರಮ್ಮನ ಬೆಳವಣಿಗೆ ತನ್ನ ಹೊಣೆ ಎಂದು ಭರವಸೆ ಕೊಟ್ಟಳು, ಆದರೆ ಹಣಕಾಸಿನ ಪರಿಹಾರದ ಬಗ್ಗೆ ಏನೂ ತೃಪ್ತಿದಾಯಕ ಉತ್ತರ ಕೊಡಲಿಲ್ಲ.  ಆದ್ದರಿಂದ ತನ್ನ ಕೊರತೆಗಳ  ಬಗ್ಗೆ ಲಂಡನ್ The Standard ಪತ್ರಿಕೆಯ ಸಂಪಾದಕರಿಗೆ  ಚಿಕ್ಕವೀರರಾಜೇಂದ್ರ ಒಂದು ದೀರ್ಘ ವಾದ ಪತ್ರವನ್ನು  ಬರೆದ (೧೭/೧೧/೧೮೫೩).

 ಈ ವಿಚಾರ ಭಾರತದಲ್ಲಿದ್ದ ಗವರ್ನರ್ ಜನರಲ್ ಅವರಿಗೆ ಸಂಬಂಧ ಪಟ್ಟಿದ್ದು ಮತ್ತು ಈಸ್ಟ್ ಇಂಡಿಯಾ ಕಂಪನಿ ಜವಾಬ್ದಾರಿ ಎಂದು  ಬ್ರಿಟಿಷ್ ಸರ್ಕಾರ ಸುಮ್ಮನಿದ್ದರು, ( ಬ್ರಿಟಿಷ್ ಸರ್ಕಾರದ ನೇರ ಆಡಳಿತ ೧೮೫೭ ನಂತರ ) 

ವಿಕ್ಟೋರಿಯ ರಾಣಿಗೆ ಗೌರಮ್ಮ ತುಂಬಾ ಇಷ್ಟವಾಗಿ  ಅರಮನೆಯಲ್ಲಿ ಉಳಿಸಿಕೊಂಡು ಅವಳ ಬೆಳವಣಿಗೆಗೆ ಮೇಜರ್ ಮತ್ತು ಶ್ರೀಮತಿ ಡ್ರಮ್ಯಾನ್ಡ್ ಅವರಿಗೆ ಜವಾಬ್ದಾರಿ ವಹಿಸಿ ಅವಳನ್ನು ಅಪ್ಪಟ ಇಂಗ್ಲೀಷ್ ರಾಜಕುಮಾರಿ ಹಾಗೆ ಬೆಳಸುವಂತೆ ಆಜ್ಞೆ ಕೊಟ್ಟಳು,  ರಾಣಿ ಇವಳನ್ನು  ಕ್ರೈಸ್ತ ಮತಕ್ಕೆ  ಸೇರಿಸಿ ತನ್ನ ಸಾಕು  ಮಗಳಾಗಿ  ಮಾಡಿಕೊಳ್ಳುವ ಉದ್ದೇಶ ಇದೆ ಎಂದಳು.  

ಚಿಕ್ಕವೀರರಾಜೇಂದ್ರನಿಗೆ ಮಗಳು ಕ್ರೈಸ್ತ್ ಮತಕ್ಕೆ ಪರಿವರ್ತನೆಯಾಗಲು ಏನೂ ಅಭ್ಯಂತರ ಇರಲಿಲ್ಲ. ಪರಂಪರೆಯಿಂದ ಕೊಡಗಿನ ರಾಜರು ವೀರಶೈವ ಪಂಗಡಕ್ಕೆ ಸೇರಿದವರು ಆದರೆ ಚಿಕ್ಕವೀರರಾಜ ತನ್ನ ಮತವನ್ನು  ತೀವ್ರವಾಗಿ ಅನುಸರಿಸುತಿರಲಿಲ್ಲ ಮತ್ತು  ಮಗಳ ಭವಿಷ್ಯ ಮುಖ್ಯವಾಗಿತ್ತು.  ೫/೭/೧೮೫೨ ದಿನ  ಅರಮನೆಯ ರಾಜ್ಯವಂಶದ ಪ್ರತೇಕ ಚಾಪೆಲ್ ನಲ್ಲಿ, ವಿಕ್ಟೋರಿಯಾ ರಾಣಿಯ ಸಮ್ಮುಖದಲ್ಲಿ, ಆರ್ಚ್ ಬಿಷಪ್ ಆಫ್ ಕ್ಯಾಂಟಬರಿ  ಇವಳನ್ನು ಕ್ರೈಸ್ತ ಮತಕ್ಕೆ ಸೇರಿಸಿ, ರಾಜಕುಮಾರಿ ವಿಕ್ಟೊರಿಯಾ ಗೌರಮ್ಮ ಎಂದು ನಾಮಕರಣ ಮಾಡಿದರು .  


ಗೌರಮ್ಮನಿಗೆ  ಹದಿನೇಳು ವರ್ಷಗಳು ತುಂಬಿದಾಗ ರಾಣಿ ಇವಳಿಗೆ ಮಾದುವೆ ಮಾಡುವ ಉದ್ದೇಶದಿಂದ ಸರಿಯಾದ ಜೋಡಿ ಹುಡುಕುವಂತೆ ಲೇಡಿ ಲಾಗಿನ್ ಅನ್ನುವರಿಗೆ ಸೂಚನೆ ಮಾಡಿದಳು.

 ಆ ಸಮಯದಲ್ಲಿ ಪಂಜಾಬ್ ಪ್ರಾಂತ್ಯದ ರಾಜಕುಮಾರ ದುಲೀಪ್ ಸಿಂಗ್ ಅನ್ನುವನು  ಇಂಗ್ಲೆಂಡ್ ನಲ್ಲಿ ಇದ್ದ,  ಇವನೂ ಸಹ, ಪಂಜಾಬ್ ಪ್ರಾಂತ್ಯವನ್ನು ೧೮೪೯ನಲ್ಲಿ ಬ್ರಿಟಿಷರಿಗೆ ಕಳೆದುಕೊಂಡ ನಂತರ  ಇಂಗ್ಲೆಂಡ್ ಗೆ ಬಂದು ನೆಲಸಿದ್ದ, ರಾಣಿ ವಿಕ್ಟೊರಿಯ ಇವನನ್ನೂ  ಆದರದಿಂದ ಸ್ವಾಗತಿಸಿದ್ದಳು. ಅರಮನೆಯಲ್ಲಿ ಆಗುವ ಔತಣಗಳಿಗೆ ಆಮಂತ್ರಣ ಇರುತಿತ್ತು.  ದುಲೀಪ್ ಸಹ ಕ್ರೈಸ್ತ್ ಮತಕ್ಕೆ ಸೇರಿದ್ದ. ಆದ್ದರಿಂದ ಇವರಿಬ್ಬರ ಜೋಡಿ ಎಲ್ಲ ವಿಚಾರದಲ್ಲೂ ಸರಿ ಅಂದು ಇವರ ಮದುವೆ ವಿಚಾರ ಪ್ರಸ್ತಾಪ ಮಾಡಿದರು.  ಆದರೆ ಈ ಸಂಬಂಧ  ಇಬ್ಬರಿಗೂ ಸಮ್ಮತ ಇರಲಿಲ್ಲ, ದುಲೀಪ್ ಸಿಂಗ್ ಗೆ  ಇಂಗ್ಲೆಂಡಿನ ಶ್ರೀಮಂತರ ಮನೆತನದವರ ಸಂಬಂಧ ಬೇಕಿತ್ತು, ಗೌರಮ್ಮನಿಗೂ ಸಹ ಇದೇ  ಅಸೆ ಇತ್ತು.   ಇಬ್ಬರೂ ರಾಜಮನೆತನದ ಭಾರತೀಯರು ಮತ್ತು ಕ್ರೈಸ್ತ ಮತಕ್ಕೆ  ಸೇರಿದವರು, ಇವರಿಬ್ಬರು ಕೂಡಿದರೆ ಭಾರತದಲ್ಲಿ ಇನ್ನೂ ಅನೇಕರನ್ನು ಈ ಮತಕ್ಕೆ ಸೇರಿಸಿ ಕ್ರೈಸ್ತ ಮತವನ್ನು ಹರಡಬಹುದು ಅನ್ನುವ ಅಸೆ ಅನೇಕರಿಗಿತ್ತು, 

ಗೌರಮ್ಮನನ್ನು  ಆಂಗ್ಲ ರೀತಿಯಲ್ಲಿ ಬೆಳಸುವ ಉದ್ದೇಶದಿಂದ ಹಲವಾರು ಕುಟುಂಬಗಳು ಭಾಗಿಯಾಗಿದ್ದರು. ಈ ಶತಮಾನದಲ್ಲಿ ಉನ್ನತ ದರ್ಜೆಯ ಮನೆತನದವರಿಗೆ ಸರಿಯಾದ ಸಂಗಾತಿಗಳು ಸಿಗುವುದು ಕಷ್ಟವಾಗಿತ್ತು ಮತ್ತು ವ್ಯವಸ್ಥಿತ ಮದುವೆಗಳು ಸಾಮಾನ್ಯವಾಗಿತ್ತು.  ಆದ್ದರಿಂದ ಇವಳಿಗೆ ಸರಿಯಾದ ಜೋಡಿ ಸಿಗುವುದು ಸುಲಭವಾಗಲಿಲ್ಲ . ಸರ್  ಹಾರ್ ಕೋರ್ಟ್ಎಂಬುವರ ಮನೆಯಲ್ಲಿ ಇದ್ದಾಗ ಇವಳಿಗೆ ಸಾಮಾಜಿಕ ಸಂಪರ್ಕ ಮತ್ತು ಸ್ವತಂತ್ರ ಇಲ್ಲದೆ  ಬೇಸರದಿಂದ ಇವರ  ಮನೆ ಬಟ್ಲರ್ ಜೊತೆಯಲ್ಲಿ ಓಡಿ   ಹೋಗುವ ಪ್ರಯತ್ನ ಮಾಡಿದಳು ಅನ್ನುವ  ಸುದ್ದಿಯು ರಾಣಿಯ ಕಿವಿಗೆ ಬಿತ್ತಂತೆ.  ಬೇರೆ ದೇಶಗಳಿಗೆ ಭೇಟಿ ಕೊಟ್ಟರೆ ಇವಳ ಜೀವನದ ಅನುಭವ ಹೆಚ್ಚಾಗದೆಂಬ ಉದ್ದೇಶದಿಂದ  ಯೂರೋಪ್ ನಲ್ಲಿ ಪ್ರಯಾಣ ಮಾಡಲು ಲೇಡಿ ಲಾಗಿನ್ ಅನ್ನುವರ ಜೊತೆ ಮಾಡಿ ಕಳಿಸಿದಳು. 

ದುಲೀಪ್ ಸಿಂಗ್  ಸ್ನೇಹಿತ ಕರ್ನಲ್ ಕಾಂಪ್ ಬೆಲ್ ಅನ್ನುವ ಮಿಲಿಟರಿ ಅಧಿಕಾರಿ  ಮದ್ರಾಸ್ ರೆಜಿಮೆಂಟ್ ನಲ್ಲಿ  ಬಳ್ಳಾರಿಯಲ್ಲಿ  ವಾಸವಾಗಿದ್ದವನ ಪರಿಚಯ ಗೌರಮ್ಮನಿಗೆ ಆಯಿತು ಆದರೆ ಇವನು ಸುಮಾರು  ಇಪ್ಪತೈದು ಮೂವತ್ತು ವರ್ಷ ದೊಡ್ಡವನಾಗಿದ್ದನು  ಮತ್ತು ಮೊದಲನೇ ಹೆಂಡತಿಯಿಂದ ನಾಲ್ಕು ಮಕ್ಕಳು ಇದ್ದರು. ಇವರ ಸಂಬಂಧ ಅನೇಕರಿಗೆ  ಆಶ್ಚರ್ಯ ಆಯಿತು.  ಕೆಲವರ ಪ್ರಕಾರ ಈತನಿಗೆ ಗೌರಮ್ಮನ ಹತ್ತಿರ ಇದ್ದ ಓಡುವೆಗಳು ಮತ್ತು ವರ್ಷಕ್ಕೆ £೪೦೦ ಆದಾಯ ಆಕರ್ಷವಾಗಿತ್ತು. ಅಂತೂ ೧೮೬೦ ನಲ್ಲಿ ಮದುವೆ ನಡೆಯಿತು ಆದರೆ ಇವಳ ಗಂಡ ಜೂಜುಗಾರ ಮತ್ತು ಜವಾಬ್ದಾರಿ ಇಲ್ಲದ ಮನುಷ್ಯ ಅನ್ನುವುದು ಬೇಗ ಅರಿವಾಯಿತು. ಇವರ ಸಂಬಂಧ ಅತೃಪ್ತಿಕರವಾಗಿತ್ತು. ೧೮೬೨ ರಲ್ಲಿ ಒಬ್ಬ ಮಗಳು ಹುಟ್ಟಿದಳು , ಈಡಿತ್ ವಿಕ್ಟೊರಿಯಾ ಗೌರಮ್ಮ ಎಂದು ನಾಮಕರಣ ಮಾಡಿದರು. 

ದುರಾದೃಷ್ಟದಿಂದ ಗೌರಮ್ಮನ ಅರೋಗ್ಯ ಕ್ಷಯ ರೋಗದಿಂದ ಕೆಟ್ಟಿತ್ತು, ೩೦/೩/೧೮೬೪ ರಲ್ಲಿ ಅವಳ ೨೩ನೇ ಜನ್ಮದಿನಕ್ಕೆ ಮುಂಚೆ ತೀರಿಕೊಂಡಳು. ನಂತರ ಇವಳ ಗಂಡ ಗೌರಮ್ಮನ ಓಡುವೆಗಳನ್ನು ಕದ್ದು ಪರಾರಿ ಆದ . ವಿಕ್ಟೋರಿಯಾ ರಾಣಿಗೆ  ಗೌರಮ್ಮನ ಸಾವಿನಿಂದ  ಬಹಳ ನೋವಿತ್ತು. ಅವಳ ಸಮಾಧಿಯ ಕಲ್ಲಿನ ಶಾಶನ ಮೇಲಿರುವ ಸಂದೇಶ ಸ್ವತಃ ರಾಣಿಯಿಂದ ಬಂದಿದ್ದು  ಬರೆಸಲಾಗಿತ್ತು .

ಇವಳ ಸಮಾಧಿ  ಲಂಡನ್ ಬ್ರಾಂಪ್ಟನ್ನಲ್ಲಿದೆ ಮತ್ತು ಇವಳ ಅಮೃತ ಶಿಲೆಯ ಪ್ರತಿಮೆ ಐಲ್ ಆಫ್ ವೈಟ್ (Isle of Wight ) ನಲ್ಲಿರುವ Osborn House ನಲ್ಲಿ ನೋಡಬಹುದು. 

ಇವಳ ಮಗಳು ಈಡಿತ್ ನನ್ನು  ವಿಕ್ಟೋರಿಯಾ ರಾಣಿ ನೋಡುವ ಅವಕಾಶ ಬರಲಿಲ್ಲ ಈ ಸಮಯದಲ್ಲಿ ಅವಳ ಗಂಡ ಪ್ರಿನ್ಸ್ ಅಲ್ಬರ್ಟ್ ತೀರಿಕೊಂಡ ಕಾರಣ ರಾಣಿ ಶೋಕದಲ್ಲಿದ್ದಳು.  ಈ ಮಗು ಅನಾಥೆಯಾಗಿ ಬೆಳೆಯಿತು. ಇವಳನ್ನು ಬೆಳುಸುವ  ಜವಾಬ್ದಾರಿ ವಿಚಾರ ನ್ಯಾಯಾಲದಲ್ಲಿ ಚರ್ಚೆ ಸಹ ಆಯಿತು. ಅಂತೂ ಈಡಿತ್ ಬೆಳದಮೇಲೆ ೧೮೮೨ನಲ್ಲಿ ಹೆನ್ರಿ ಎಡ್ವರ್ಡ್ ಯಾರ್ಡ್ಲಿ ಅನ್ನವನ್ನು ಮದುವೆಯಾದಳು. 

ಚಿಕ್ಕವೀರರಾಜೇಂದ್ರನಿಗೆ ನ್ಯಾಯಾಲದಿಂದ ಸಹ ಪರಿಹಾರ ಸಿಕ್ಕಲಿಲ್ಲ, ಮಗಳ ಹತ್ತಿರ ಎಷ್ಟು ಸಂಭಂದ ಇತ್ತು ಅನ್ನುವುದು ಗೊತ್ತಿಲ್ಲ. ಕೊನೆಗೆ ಅನೊರೋಗ್ಯದಿಂದ ೨೪/೯/೧೮೫೯ ರಂದು, ಕ್ಲಿಫ್ಟನ್ ವಿಲ್ಲಾಸ್, ವಾರ್ವಿಕ್ ರಸ್ತೆ ಮೈಡ ಹಿಲ್ ಲಂಡನ್  ಅಲ್ಲಿ ನಿಧನನಾದನು. ಇವನ ಸಮಾಧಿ Kensal Green Cemetery ಯಲ್ಲಿದೆ. 



ಹೆಚ್ಚೆನ ಓದುವಿಕೆ ( Further Reading )

ಮಾಸ್ತಿ ಅವರ ಚಿಕ್ಕವೀರರಾಜೇಂದ್ರ ಪುಸ್ತಕಕ್ಕೆ ಜ್ಞಾನ ಪೀಠ ಪ್ರಶಸ್ತಿ (೧೯೮೩)

The Lost Princes of Coorg  by cp Belliappa 

Court Life and Camp Life by Lady Login (೧೮೨೦-೧೯೦೪) ಈಕೆ ಭಾರತದಲ್ಲಿ ವಾಸ ಮಾಡಿದ್ದವಳು, ಅವಳ ಅನುಭವಗಳನ್ನು ಇಲ್ಲಿ ಬರೆದಿದ್ದಾಳೆ 

Coorg and Its Rajahs by an Officer . ಇದು ಒಂದು ಸ್ವಾರಸ್ಯಕರವಾದ   ಪುಸ್ತಕ, ೧೮೫೭ ರಲ್ಲಿ ಲಂಡನ್ ನಲ್ಲಿ ಪ್ರಕಟವಾಯಿತು. ಬರೆದವರ ಹೆಸರಿಲ್ಲ ಆದರೆ ಚಿಕ್ಕವೀರರಾಜೇಂದ್ರ ಆಸ್ಥಾನದಲ್ಲಿ ಇದ್ದವನು ಮತ್ತು ಕೊಡಗಿನ ಚರಿತ್ರೆಯನ್ನು ಬಹಳ ವಿವರವಾಗಿ ಬರೆದಿದ್ದಾನೆ,  ಕೆಲವು ದಾಖಲೆಗಳನ್ನು ನೋಡಿದರೆ ಈತನಿಗೆ ನಮ್ಮ ಪಂಚಾಂಗದ ಬಗ್ಗೆ ಅರವಿತ್ತು, ಉದಾಹರಣೆಗೆ " on a Amavasya day  in Shukla Paksha .....  ಇತ್ಯಾದಿ.    

ಕೊನೆಯದಾಗಿ , ಬೆಳ್ಳಿಯಪ್ಪನವರ ಸಂಶೋದನೆಯಿಂದ ಗೌರಮ್ಮನ ಮಗಳು ಈಡಿತ್ ಗೌರಮ್ಮ ಕ್ಯಾಮ್ಪ್ ಬೆಲ್ ಮನೆತನದವವರನ್ನು ಹುಡಿಕಿದ್ದಾರೆ. ಇಂದಿನ ಪೀಳಿಗೆಯ ಕೆಲವರು  ತಮ್ಮ ವಂಶದ ಬಗ್ಗೆ ತಿಳಿಯಲು ಕೊಡಗುಗೆ ಭೇಟಿ ಮಾಡಿದ್ದಾರೆ. 

ಬ್ರಿಟಿಷ ಪ್ರಜೆಗಳು ತಮ್ಮ ಕುಟುಂಬದ ವಂಶಾವಳಿಯನ್ನು ಹುಡಿಕಿದರೆ ಭಾರತಿಯರ  ರಕ್ತ ಸಂಭಂದ ಅನೇಕರಲ್ಲಿ ಸಿಗುವುದು ಆಶ್ಚರ್ಯವಿಲ್ಲ,  ಅನೇಕರು  ಸ್ಥಳೀಯರನ್ನು ಮದುವೆಯಾಗಿ  ಸಂಸಾರಸ್ಥರಾಗಿದ್ದರು,  Who Do You Think You Are ಅನ್ನುವ ಟಿವಿ ಪ್ರೋಗ್ರಾಮ್ ನಲ್ಲಿ ಪ್ರಸಿದ್ಧ ಹಾಸ್ಯಗಾರ Alistair McGowan ವಂಶದವರು ಭಾರತೀಯರು ಎನ್ನುವುದು ತಿಳಿಯಿತು , ಇವರು ಕಲಕತ್ತಾ ಗೆ ಭೇಟಿಮಾಡಿದಾಗ ಹಲವಾರು McGowan ಬಂಧುಗಳನ್ನು  ಭೇಟಿಮಾಡಿದರು, ಹೀಗೆ ಅನೇಕ ಉದಾಹರಣೆಗಳನ್ನು ಕೊಡಬಹುದು,  ಸ್ಕ್ಯಾಟ್ ಲ್ಯಾಂಡಿನ Billi Connolly  ಅವರ ಮುತ್ತಜ್ಜ ಅಥವಾ ಮುತ್ತಜ್ಜಿ, ಸರಿಯಾಗಿ ಜ್ಞಾಪಕ ಇಲ್ಲ, ಭಾರತೀಯರು, 


Comments

  1. ಕೊಡಗಿನ ರಾಜಕುಮಾರಿ ಗೌರಮ್ಮನ ಕಥೆ ಸ್ವಾರಸ್ಯವೂ ಹೌದು. ಶೋಚನೀಯವೂ ಹೌದು. ಆಕಯನ್ನೂ, ಆಕೆಯ ತಂದೆ ಚಿಕ್ಕ ವೀರರಾಜೇಂದ್ರನನ್ನೂ ದುರದೃಷ್ಟ ನಿರಂತರವಾಗಿ ಹಿಂಬಾಲಿಸುತ್ತಿತ್ತೆಂದು ಕಾಣುತ್ತದೆ! They were really fish out of water in mid-nineteenth century England. ಚರಿತ್ರೆಯ ಈ ತುಣುಕನ್ನು ನೆನಪಿಗೆ ತಂದ ಶ್ರೀ ರಾಮಮೂರ್ತಿ ಅವರಿಗೆ ಧನ್ಯವಾದಗಳು.

    ReplyDelete
  2. ಚರಿತ್ರೆಯ ಈ ಸಂಗತಿಯನ್ನು ಲೇಖನದ ಮೂಲಕ ತಿಳಿಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ನಡೆದ ಅನೇಕ ಶೋಚನೀಯ ವಿಚಾರಗಳಲ್ಲಿ ಇದೂ ಒಂದು. ಆಗಿನ ಕಾಲದಲ್ಲಿ ಭಾರತದಲ್ಲಿ ಹುಟ್ಟಿ ಬೆಳೆದ ಗೌರಮ್ಮ ಅದ್ಹೇಗೆ ಆ ಎಲ್ಲ ಬದಲಾವಣೆಗೆ ಹೊಂದಿಕೊಂಡಳೋ ಅನಿಸಿತು, ಆಸ್ತಿ ಅಪಹರಣ ಮತ್ತು ಸಾವಿನ ರೀತಿ ಸಹ ಬೇಸರವೇ ತರುವ ವಿಷಯ.

    ReplyDelete

Post a Comment