ಪದಗಳ ಪದರಗಳ ಪರಮ ಗೋಜಲುಗಳು
ಹಾಸ್ಯ ಲೇಖನ - ಅಣುಕು ರಾಮನಾಥ್
ನಿಜಕ್ಕೂ ಕವಿಗಳು ಅದು ಹೇಗೆ ಭಾಷೆಯ ಮೇಲೆ ಹಿಡಿತ ಸಾಧಿಸುತ್ತಾರೋ, ಪದಗಳು ಅವರಿಗೆ ಹೇಗೆ ಅರ್ಥವಾಗುತ್ತವೋ ಎನ್ನುವುದೇ ನನಗೆ ಇಂದಿಗೂ ಅರ್ಥವಾಗಿಲ್ಲ.
ಮೇಲಿನ ವಾಕ್ಯವನ್ನೇ ಉದಾಹರಣೆಯಾಗಿ ನೋಡಿ. ಕವಿ-ಗಳು ಎಂದು ಬರೆಯುತ್ತೇವೆ. ಎಲ್ಲ ಕವನ ಲೇಖಕರೂ ಸಣ್ಣಗೆ ಗಳುವಿನಂತೆಯೇ ಇರುತ್ತಾರೆಯೇ? ಗುಂಡುಗುಂಡಗಿರುವರನ್ನು ಗಳು ಎಂದು ಕರೆದರೆ ಗಳಗಳನೆ ಅಳುವುದಿಲ್ಲವೆ? ಅಂತಹ ಕವಿಗುಂಪನ್ನು ಕವಿಗುಂಡು ಎಂದು ಕರೆಯಬಹುದೆ? ಹಾಗೆಂದು ಕರೆದರೆ ಅವರೆಲ್ಲ ಗುಂಡು ಹಾಕುವ ಕವಿಗಳೆಂದು ನಾವು ಕರೆದೆವೆಂದು ಕೋಪಿಸಿಕೊಳ್ಳುವುದಿಲ್ಲವೆ? ‘ಭಾಷೆ’ಯಲ್ಲೂ ನುಡಿಯುವುದಕ್ಕೆ ಒಂದು ಭಾಷೆಯಾದರೆ ಕೊಡುವುದಕ್ಕೆ ಒಂದು ‘ಭಾಷೆ’ ಇದೆ. ಕೊಡುವ ಭಾಷೆಯನ್ನೇ ‘ಪ್ರತಿಜ್ಞೆ’ ಎನ್ನುವರಂತೆ. ಸುಮ್ಮನೆ ‘ಭಾಷೆ’ ಎಂದಾಗ ಅದು ‘ಆಡುವುದೋ’ (ಅಕಟಾ! ಆಡುವುದು ಎಂದರೆ ಕ್ರೀಡಿಸುವುದು ಎಂದೂ ಇದೆಯಲ್ಲವೆ! ಇರಲಿ. ಅದನ್ನು ಮತ್ತೆ ನೋಡೋಣ) ನೀಡುವುದೋ ತಿಳಿಯುವುದಿಲ್ಲವಲ್ಲ! ಅದೇ ವಾಕ್ಯದಲ್ಲಿ ‘ಸಾಧಿಸು’ ಎನ್ನುವುದೂ ಹೀಗೆಯೇ – ‘ಬಹಳ ಸಾಧಿಸುತ್ತಾನೆ ಅವನು’ ಎಂದರೆ ಹಠ ಎಂದರ್ಥ. ‘ಬಹಳ ಸಾಧಿಸಿದ್ದಾನೆ ಅವನು’ ಎಂದರೆ ಯಶಸ್ಸಿನ ಹೇಳಿಕೆ. ‘ಸಾಧಿಸುತ್ತಾರೆ’ ಎನ್ನುವಾಗ ‘ಆ’ ಸಾಧನೆ ಬರಬೇಕೋ, ‘ಈ’ ಸಾಧನೆ ಬರಬೇಕೋ? ಅಕಟಕಟಾ ‘ಈ’ ಎಂಬ ಏಕಾಕ್ಷರಿಯೂ ಗೊಂದಲವನ್ನೇ ಉಂಟುಮಾಡುವುದಲ್ಲಾ.... ‘ಈ’ ಎಂದರೆ ಹೆರು ಎಂದರ್ಥವಿದೆ ಎಂದು ನಿಘಂಟು ಹೇಳುತ್ತಿದೆ.
‘ಪದ’ವಂತೂ ಮತ್ತಷ್ಟು ಗೊಂದಲ ಉಂಟುಮಾಡುವ ಅಕ್ಷರಗುಂಪು. ‘ಪದ’ ಹಾಡಿಬಿಡಿ ಎಂದರೆ ಹಾಡು ಹೇಳುತ್ತಾರೆ. ‘ಪದವಿಟ್ಟನು’ ಎಂದರೆ ‘ಹೆಜ್ಜೆಯಿಟ್ಟನು’ ಎನ್ನುತ್ತಾರೆ. ಪದವೆಂದರೆ ‘ಅರ್ಥ ಕೊಡುವ ಅಕ್ಷರಗಳ ಸಮೂಹ’ ಎನ್ನುತ್ತಾರೆ. ಪದಕ್ಕೊಂದು ಗಳು ಸೇರಿಸಿ ‘ಪದಗಳು’ ಮಾಡಿಕೊಂಡಾಗ ಅದು ಗಳುವಿನಿಂದ ತಯಾರಿಸಿದ ಕೊಳಲಿನಿಂದ ಹೊರಡುವ ಹಾಡೋ, ಮೊಬೈಲ್ನಲ್ಲಿ ನಾವು ಪ್ರತಿ ಹೆಜ್ಜೆ ಇರಿಸಿದಾಗಲೂ ಗಣನೆಗೆ ಬರುವ ಹೆಜ್ಜೆಗಳ ಸಂಖ್ಯೆಯೋ ಅಥವ ಅರ್ಥವತ್ತಾದ ಅಕ್ಷರಸಮೂಹವೋ
ಎನ್ನುವುದನ್ನು ತಿಳಿಯುವುದಾದರೂ ಹೇಗೆಂದು ಯಾರಾದರೂ ಹೇಳಿಕೊಡಿ, ಪ್ಲೀಸ್...........
ಎನ್ನುವುದನ್ನು ತಿಳಿಯುವುದಾದರೂ ಹೇಗೆಂದು ಯಾರಾದರೂ ಹೇಳಿಕೊಡಿ, ಪ್ಲೀಸ್...........
‘ಅವರಿಗೆ’ ಎನ್ನುವ ಪದದ ಅರ್ಥ ಬಿಡಿಸಲು ನೋಡೋಣ; ವರಿ ಎಂದರೆ ಸಾಗು ಎಂದಾಯ್ತು; ಮುಂದು’ವರಿ’ ಹಿಂದು’ವರಿ’ಗಳಲ್ಲಿನ ‘ವರಿ’ ಚಲನೆಯನ್ನೇ ಸೂಚಿಸುವುದು. ‘ಅ’ ಎನ್ನುವುದೋ ನೇತ್ಯಾತ್ಮಕ ಪ್ರತ್ಯಯ. ಹೀಗಾಗಿ ‘ಅವರಿ’ ಎಂದರೆ ಚಲನೆಯಿಲ್ಲದ್ದು, ಸ್ಥಬ್ಧ ಎಂದರ್ಥವಾಗಿ ‘ಅವರಿಗೆ’ ಎಂದರೆ ಸ್ಥಬ್ಧವಾಗಿರಲು ಎಂಬ ಅರ್ಥ ಬರುವುದು. ‘ಕವಿಗಳಿಗೆ’ ಎನ್ನುವ ಸ್ಥಳದಲ್ಲಿ ಸರ್ವನಾಮವಾಗಿ ‘ಅವರಿಗೆ’ ಎಂದು ಬಳಸಿರುವಾಗ ‘ಸ್ಥಬ್ಧರಿಗೆ’ ಎನ್ನುವ ಅರ್ಥ ಕವಿಗೆ ಸಮಂಜಸ ಹೇಗಾದೀತು! ಚಲಿಸುವ ಚತುರತೆಯುಳ್ಳವನೇ ಕವಿಯಲ್ಲವೇ. ಛೆ! ‘ಚತುರ’ ಎಂದರೆ ಜಾಣನೆಂಬ ಅರ್ಥದಲ್ಲಿ ಬಳಸಿರುವುದು ತಿಳಿದರೆ ಸರಿ. ಇಲ್ಲವಾದರೆ ‘ನಾಲ್ಕು’ ಎಂಬ ಅರ್ಥ ಬಂದು, ಕವಿಯು ‘ಕನ್ನಡಕ ಧರಿಸಿದ್ದ, ಅವನು ಫೋರ್ ಐಸ್’ ಎಂದು ಯಾರಾದರೂ ಅಪಾರ್ಥ ಮಾಡಿಕೊಂಡಾರು!
ಕೊಂಚ ತಾಳಿ.... ಅಪಾರ್ಥ ಎಂದೆನಲ್ಲವೇ.... ಪಾರ್ಥನಲ್ಲದವನು ಎಂದರ್ಥ! ಎಂದರೆ ‘ಮಿಕ್ಕ ನಾಲ್ವರು ಪಾಂಡವರು ಎಂದು ಅರ್ಥವೇ? ಹಾಗಾದರೆ ಅಪಾರ್ಥ ಎನ್ನುವುದಕ್ಕೂ ‘ನಾಲ್ಕು’ ಎಂದು ಅರ್ಥ ಕೊಡಬಹುದೆ? ಪಾಣಿನಿ, ಆಂಡಯ್ಯನವರು ಬಯ್ಯುವರೋ ಏನೋ!
ಅಕಟಕಟಾ! ಮೇಲಿನ (ಅಂದರೆ ಪೂರ್ತಿ ಮೇಲಿನ ಅಲ್ಲ, ತಕ್ಷಣದಲ್ಲಿ ಮೇಲಿನ) ವಾಕ್ಯದಲ್ಲಿ ‘ತಾಳಿ’ ಎಂದು ಬಳಸಿದೆ. ಅದನ್ನು ಕತ್ತಿಗೆ ಕಟ್ಟುವ ಮಾಂಗಲ್ಯಸರವೆಂದು ಅರ್ಥೈಸಿಕೊಂಡರೆ ‘ಕೊಂಚ ತಾಳಿ’ ಎಂದರೆ ‘ಬೇಗ ಡೈವರ್ಸ್ ಆಗುವ ಮದುವೆ’ ಎಂದು ಅರ್ಥವಾಗಿಬಿಡುವುದಲ್ಲ! ಅರೆರೆ! ಇಲ್ಲಿಯೂ ‘ಬಳಸಿದೆ’ ಎಂಬ ಪದ ಬಂತಲ್ಲ! ‘ಬಳಸು’ ಎಂದರೆ ‘ತಬ್ಬಿಕೊಳ್ಳು’, ‘ದೂರದ ದಾರಿ’ ಎಂದೆಲ್ಲ ಅರ್ಥವಿದೆ. ನಾನೂ ಸರಿಯೇ! ‘ದೂರುವ ದಾರಿ’ ಎಂದು ಯಾವುದೂ ಇಲ್ಲವಾದಾಗ ಅದೇಕೆ ‘ದೂರದ ದಾರಿ’ ಎಂದು ಬರೆದೆನೋ! ಅಪಾರ್ಥವಾಗದಂತೆ (೪ ಎಂಬ ಅರ್ಥದ್ದಲ್ಲ; ಒರಿಜಿನಲ್ ಅರ್ಥದ್ದು) ಬರೆಯುವುದು ಎಷ್ಟು ಕಷ್ಟ ನೋಡಿ!
‘ಅರ್ಥ’ವಂತೂ ಅರ್ಥವಾಗದ ವಿಷಯವೇ. ನಾನು ಮೊದಲಿನಿಂದಲೂ ಎಕನಾಮಿಕ್ಸ್ನಲ್ಲಿ ವೀಕು. (ಹ್ಞಾಂ. ವೀಕ್ ಎಂದರೆ ‘ವಾರ’, ‘ದುರ್ಬಲ’ ಎಂದು ಎರಡು ಅರ್ಥಗಳಿವೆ. ಅದರಲ್ಲಿ ಯಾವುದೆಂದು ಕೇಳುವಿರಿ ಅಲ್ಲವೆ. ಗೊತ್ತಿದೆ ನನಗೆ. ಈ ತಿಳಿಯದಿರುವಿಕೆ ಒಂದು ವಿಧದ ಅಂಟುರೋಗವೇ – ಏನೆಂದಿರಿ? ಅಂಟು ಎಂದರೆ ಗೋಂದು, ಬಂಕೆ, ನರ್ಯಾಸ ಎಂದರ್ಥ ಎಂದಿರೆ? ಇರಲಿ. ಇದರ ಬಗ್ಗೆ ನಂತರ ಚರ್ಚಿಸೋಣ) ಕೂಡುವ ಲೆಕ್ಕ ಬರದಿರುವುದರಿಂದಲೇ ನನಗೆ ಯಾವ ಆಸ್ತಿಯನ್ನೂ ಮಾಡಿಕೊಳ್ಳಲಾಗಲಿಲ್ಲ. ಅರ್ಥಶಾಸ್ತç ಹಾಗಾಯ್ತು, ಪದಗಳ ಅರ್ಥವನ್ನು ಶಾಸ್ತ್ರೋಕ್ತವಾಗಿ ಅರಿತು ಪಂಡಿತನಾಗೋಣವೆಂದರೆ ಪದಗಳು ಅರ್ಥವಾಗುವುದರ ಬದಲು ಬರೀ ಗೊಂದಲವನ್ನೇ ಸೃಷ್ಟಿಸುತ್ತವೆ.
ಇನ್ನೂ ಮೊದಲ ವಾಕ್ಯ ಮುಗಿದಿಲ್ಲ. ಆ ವಾಕ್ಯದಲ್ಲಿ ‘ನನಗೆ’ ಎಂಬ ಪದವಿದೆ. ‘ನ’ ಅಕ್ಷರವಂತೂ ಉಲ್ಟಾ ಅರ್ಥ ಕೊಡುವಂತಹದ್ದೇ. ಶ್ವರ ಎಂದರೆ ಇರುವಂಥದ್ದು, ನಶ್ವರ ಎಂದರೆ ಇಲ್ಲವಾಗುವಂಥದ್ದು; ಇಂತಿರುವಾಗ ನನಗೆ ಎಂದರೆ ‘ಸ್ವಂತಕ್ಕೆ’ ಎಂದು ಅರ್ಥ ಮಾಡಿಕೊಳ್ಳಬೇಕೋ ಅಥವಾ ‘ನಗೆ’ ಪದಕ್ಕೆ ಉಲ್ಟಾ ಅರ್ಥ ಕೊಡುವಂತಹ ‘ಅಳು’ ಎಂದು ಅರ್ಥೈಸಿಕೊಳ್ಳಬೇಕೋ? ಅಧ್ಯಾತ್ಮ ಚಿಂತನೆಯವರು ‘ನಾನು’, ‘ನನಗೆ’ ಎನ್ನುವುವೇ ವರ್ಜ್ಯ ಎನ್ನುತ್ತಾರೆ. ಆ ಅರ್ಥದಲ್ಲಿ ‘ಅಳು’ ಬಿಡಬೇಕೆನ್ನುವುದು ಅವರ ಅರ್ಥವೆ? ಹಾಗಾದರೆ ಸೀರಿಯಲ್ಗಳನ್ನು ಮಾಡುವವರ, ನೋಡುವವರ ಗತಿ?
ಪದಗಳದೇ ಇಷ್ಟು ರಗಳೆ ಆದರೆ (ಯಾವುದು? ಉತ್ಸಾಹ ರಗಳೆಯೋ, ಮಂದಾನಿಲ ರಗಳೆಯೋ, ಸರಳ ರಗಳೆಯೋ ಎಂದೆಲ್ಲ ದಯವಿಟ್ಟು ಕೇಳಬೇಡಿ) ಸಂಧಿಗಳದು ಮತ್ತಷ್ಟು ತಲೆ ಕೆಡಿಸುವ ಅಂಶಗಳೇ. ಸಂಧಿ ಎಂದರೆ ಒಂದೆಡೆ ಸೇರುವಿಕೆ ಎನ್ನುತ್ತಾರೆ, ಇನ್ನೊಂದೆಡೆ ‘ಎರಡು ಯುಗಗಳ ನಡುವಿನ ಕಾಲ’ ಎನ್ನುತ್ತಾರೆ. ಹಾಗೆಂದು ‘ತನುವು ನಿನ್ನದು ಮನವು ನಿನ್ನದು’ ಧಾಟಿಯಲ್ಲಿ ‘ಜಾಯಿಂಟೂ ನಿನ್ನದೆ ಗ್ಯಾಪೂ ನಿನ್ನದೆ’ ಎಂದು ಹೇಳುವುದು ಅದು ಹೇಗೆ ಸರಿಯಾದೀತು!. ‘ಯುಗ’ ಎಂದರೆ ಜೋಡಿ; ‘ನಡು’ ಎಂದರೆ ಮಧ್ಯ; ಮಧ್ಯ ಎಂದರೆ ಸೊಂಟ.... ಸೊಂಟದ ವಿಷಯ ಬಿಟ್ಟು ‘ಸವರ್ಣ ದೀರ್ಘ ಸಂಧಿ’ಗೆ ಬಂದರೆ ವರ್ಣ ಎನ್ನುವುದ ವರ್ಣಾಶ್ರಮದ ವರ್ಣವೋ, ರಂಗೋಲಿಗೆ ಬಳಸುವ ವರ್ಣವೋ ತಿಳಿಯುವುದು ಹೇಗೆ? ವರ್ಣ ಎಂದರೆ ಪಂಗಡ ಎಂದಿಟ್ಟುಕೊಂಡರೆ ಮತ್ತು ಒಂದೇ ಪಂಗಡದವರು ಒಂದು ದೀರ್ಘವಾದ ಸಂಧಿಯಲ್ಲಿ ಸೇರಿದ್ದಾರೆಂದರೆ ಅದನ್ನು ‘ವಠಾರ’ ಎಂದು ಕರೆಯಬಹುದೆ ಎಂದರೆ ಗುರುಗಳು ಅಸಮ್ಮತಿ ಸೂಚಿಸುತ್ತಾರೆ. ‘ಗುಣಸಂಧಿ’ಯೂ ಆಯೋಮಯವೇ. ‘ಗುಣಗಳು ಕೂಡಿಕೊಳ್ಳುವುದು’ ಎಂದು ಅರ್ಥೈಸಿಕೊಳ್ಳುವುದಾದರೆ ‘ವಿವಾಹಕಾಲದಲ್ಲಿ ಲಗ್ನ ಕೂಡಿಸುವಿಕೆ ಮಾತು’ ಎಂದಂತಾಯಿತು; ಅಥವಾ ‘ಗುಣ’ ಎಂದರೆ ನೂಲು, ವಸ್ತ್ರದ ಎಳೆಗಳೆಂಬ ಅರ್ಥವನ್ನು ಅನ್ವಯಿಸಿದರೆ ಈಗಿನ ಅಷ್ಟಷ್ಟಗಲ ಬಾಯಿಬಿಟ್ಟಿರುವ ಹರಕಲು ಬಟ್ಟೆಗಳು (ಗುಣಗಳಲ್ಲಿನ ಸಂಧಿ ಅರ್ಥಾತ್ ರಂಧ್ರ) ಉರುಫ್ ಟೋರ್ನ್ ಡ್ರೆಸ್ ಎಂದುಕೊಳ್ಳುವುದು ಸರಿಯಾದೀತೇ? ‘ಅನುನಾಸಿಕ ಸಂಧಿ’ ಎಂದರೆ ನಾಸಿಕವನ್ನು ಅನುಸರಿಸಿ ಇರುವಂತಹ ರಂಧ್ರ ಎಂದೇ ಅರ್ಥವಲ್ಲವೇ! ನೇರವಾಗಿ ‘ಬಾಯಿ’ ಎಂದು ಹೇಳುವುದಕ್ಕೇಕಿಷ್ಟು ದ್ರಾವಿಡ ಪ್ರಾಣಾಯಾಮವೋ ನಾ ಕಾಣೆ.
ಪದಗಳ ಅರ್ಥಗಳ ಹಿಂದೆಯೇ ಹೋದರೆ ಇನ್ನೊಂದು ಯೋಚನೆಯೂ ಮೂಡುತ್ತಿದೆ; ನಮ್ಮ ಜನ ಯಾವಾಗಲೂ ಕೊಳಕರೇ ಆಗಿದ್ದರೆ? ನಮ್ಮ ಬೆಟ್ಟ, ಗುಡ್ಡ, ಪುರಗಳು, ಸಾಗರಗಳು ಕಲುಷಿತವೇ ಆಗಿದ್ದವೆ? ಇಲ್ಲವೆಂದರೆ ‘ಸಾಗರವಾಸನೆ’, ‘ಗಿರಿವಾಸನೆ’, ‘ಪುರವಾಸನೆ’, ಪುಷ್ಪವಾಸನೆ’ ಎಂದೆಲ್ಲ ಬರೆಯುತ್ತಿರಲಿಲ್ಲ. ವಯ್ಯಾಕರಣಿಗಳು ಇದಕ್ಕೇ ಎಂತೆಂಥದ್ದೋ ಸಮಾಸ ಎಂದು ವಿವರಿಸುತ್ತಾರೆ. ಆ ಸಮಾಸಗಳಾದರೋ ಸಂಪೂರ್ಣ ‘ಮೇಲ್ ಓರಿಯೆಂಟೆಡ್’! ‘ತತ್ಪುರುಷ ಸಮಾಸ’ ಎಂದು ಪುರುಷನ ಹೆಸರಿನದಿದೆಯೇ ವಿನಹ ‘ತತ್ಮಹಿಳಾ ಸಮಾಸ’ ಎಂದಿಲ್ಲ. ಕೇಳಿದರೆ ‘ಪೆಣ್ಣೆನಲ್ ದ್ವಂದ್ವಮಲ್ತೇ... ದ್ವಂದ್ವಸಮಾಸಮೇ ಸ್ತ್ರೀಲಿಂಗಸೂಚಕ ಸಮಾಸಂ’ ಎಂದಿದ್ದರಂತೆ. ಸಮಾಸಗಳಲ್ಲೇ ಅರ್ಥವಾಗದ್ದೆಂದರೆ ‘ಅರಿಸಮಾಸ’. ಅರಿ ಎಂದರೆ ತಿಳಿದುಕೋ ಎಂದೂ ಆಯಿತು, ಶತ್ರು ಎಂದೂ ಆಯಿತು. ಕನ್ನಡಿಗರು ‘ಸುಸಂಸ್ಕೃತ’ರಾದ್ದರಿಂದ
ಸಂಸ್ಕೃತಾರ್ಥವನ್ನು ಬಳಸಬೇಕೋ, ಕನ್ನಡದ ಅರ್ಥವನ್ನು ಬಳಸಬೇಕೋ ತಿಳಿಯಲಾಗದೆ ಕಂಫ್ಯೂಸ್ಡ್ ಸ್ಟೇಟ್ ಮುಟ್ಟುತ್ತಾರೆ. ಓಹ್! ಸ್ಟೇಟ್ ಎಂದರೂ ಹೇಳು, ನಿರೂಪಿಸು, ರಾಜ್ಯ, ಸ್ಥಿತಿ ಎಂದೆಲ್ಲ ಇದೆ ಎಂದು ತಕರಾರು ಎತ್ತಬೇಡಿರೆಂದು ಈಗಲೇ ವಿನಂತಿಸಿಕೊಳ್ಳುತ್ತೇನೆ.
ಹ್ಹ! ಹಾಗೆಂದಾಕ್ಷಣಕ್ಕೆ ನಿಜ ಹೇಳಿದೆನೆಂದು ತಿಳಿಯಬೇಡಿ. ‘ಕೊಳ್ಳುತ್ತೇನೆ’ ಎನ್ನುವುದು ಯಾವ ವಿಧವಾದ ಆಶ್ವಾಸನೆಯೂ ಅಲ್ಲ, ಖರೀದಿಸುವ ಆಲೋಚನೆಯೂ ಇರುವಿದಿಲ್ಲ ಎನ್ನುವುದಕ್ಕೆ ‘ಮಲಗಿಕೊಳ್ಳುತ್ತೇನೆ’, ‘ಕುಳಿತುಕೊಳ್ಳುತ್ತೇನೆ’, ಮೇಲ್ಕಾಣಿಸಿದ ‘ವಿನಂತಿಸಿಕೊಳ್ಳುತ್ತೇನೆ’ ಮುಂತಾದವೇ ಸಾಕ್ಷಿ. ‘ತಿಳಿದುಕೊಂಡರು’, ‘ಹೇಳಿಕೊಂಡರು’, ‘ಮಾಡಿಕೊಂಡರು’ ಎಂದು ಸಹ ಸುಮ್ಮನೆ ಹೇಳುತ್ತೇವಷ್ಟೇ... ಇಲ್ಲಿ ಯಾರೂ ಯಾರಿಂದಲೂ ಏನನ್ನೂ ಖರೀದಿಸಿರುವುದಿಲ್ಲ. ಇದೊಂದು ‘ವರ್ಬಲ್ ಪರ್ಚೇಸಿಂಗ್ ಸಿಂಡ್ರೋಮ್’ ಅಷ್ಟೆ.
ಭಾಷೆಯಲ್ಲಿ ಹೆಚ್ಚು (ಓಹ್! ಹೆಚ್ಚು ಎಂದರೆ ಹೋಳು ಮಾಡು ಎಂದೂ ಆಯಿತಲ್ಲ! ಊಹೂಂ. ಬ್ರಿಟಿಷರು ಬಿಟ್ಟುಹೋದ ನಾಡಿನಲ್ಲಿ ಈಗ ಡಿವೈಂಡ್ & ರೂಲ್ ತರುವುದು ಬೇಡ. ಹೆಚ್ಚು ಎಂದರೆ ಜಾಸ್ತಿ ಎಂದೇ ಇರಲಿ) ಬಳಸುವ ಪದಗಳನ್ನು ನೋಡಿದಾಗ ಕರ್ನಾಟಕದಲ್ಲಿ ಬಳಸುವಷ್ಟು ನಲ್ಲಿಗಳನ್ನು ಅಥವಾ ಕನ್ನಡಿಗರು ಇತರ ಕಡೆಗಳಲ್ಲಿ ಬಳಸುವಷ್ಟು ನಲ್ಲಿಗಳನ್ನು ಇನ್ನಾವ ಭಾಷೆಯವರೂ, ಎಲ್ಲೂ ಬಳಸುವುದಿಲ್ಲ ಎಂದು ತಿಳಿದುಬರುತ್ತದೆ. ‘ಬೆಂಗಳೂರ್ನಲ್ಲಿ’ ‘ತುಮಕೂರಿನಲ್ಲಿ’, ‘ರಾಯಚೂರ್ನಲ್ಲಿ’, ‘ಬಾತ್ರೂಮ್ನಲ್ಲಿ’, ‘ರೂಮ್ನಲ್ಲಿ’, ‘ಹಾಲ್ನಲ್ಲಿ’, ‘ಕಿಚನ್ನಲ್ಲಿ’ ಎನ್ನುತ್ತಾ ಲ್ಯಾಂಗ್ವೇಜ್ನಲ್ಲಿ ಸಿಕ್ಕಸಿಕ್ಕಲ್ಲಿ ‘ನಲ್ಲಿ’ ಹೊಂದಿರುವವರು ಕನ್ನಡಿಗರೇ. ತೆಲುಗಿನಲ್ಲಿ ‘ನಲ್ಲಿ’ ಇದ್ದರೂ ಭಾಷೆಯಲ್ಲಿ ಹೆಚ್ಚಿನ ನಲ್ಲಿಯಿಲ್ಲದಿರುವುದರಿಂದ ಕನ್ನಡಕ್ಕಿಂತ ಆ ಭಾಷೆಯ ‘ಆರ್ದ್ರತೆ’ ಕಡಿಮೆ ಎನಿಸೀತು. ತಮಿಳು ಭಾಷಾ ಪದಗಳಿಗೆ ನಲ್ಲಿ ಸೇರಿಸುವಂತಹ ‘ಲಿಂಗ್ವಿಸ್ಟಿಕ್ ಪ್ಲಂಬರ್’ ಕಂಡುಬರುವುದಿಲ್ಲ. ಆಂಗ್ಲದ ಟ್ಯಾಪ್ ಸಹ ಡ್ಯಾನ್ಸಿನಲ್ಲೊಮ್ಮೆ, ‘ತಟ್ಟುವಿಕೆ’ಯಲ್ಲೊಮ್ಮೆ ಕಂಡುಬಂದರೂ ಕನ್ನಡದ ನಲ್ಲಿಯಷ್ಟು ಬಳಕೆಯಲ್ಲಿಲ್ಲ. ಕರ್ನಾಟಕದವರು ನೀರಿಲ್ಲದೆ ಇರಬಹುದು. ಆದರೆ ನಲ್ಲಿ ಹೇರಳವಾಗಿದೆ. ‘ನೀರು ಆರವರಿಗೆ, ನಲ್ಲಿ ಬಾಯಾರಿದವರಿಗೆ’ ಎನ್ನುವುದು ನಮ್ಮಲ್ಲಿನ ವೈಶಿಷ್ಟ್ಯವೇ ಸೈ.
‘ನಲ್ಲಿ’ಗಳ ನಂತರ ಕಕ್ಕಾಬಿಕ್ಕಿಯಾಗಿಸುವ ಸರದಿ ‘ಗೆ’ಗಳಿಗೆ. ಊಹೂಂ. ವಿದೇಶದ ‘ಗೇ ಕಲ್ಚರ್’ಗೂ ಇದಕ್ಕೂ ಏನೇನೂ ಸಂಬಂಧವಿಲ್ಲ. ಇಲ್ಲಿ ಕೆಲವು ಪದಗಳಿಗೆ ‘ಗೆ’ ಸೇರಿ, ತನ್ಮೂಲಕ ಉಂಟಾದ ಪದ ‘ಏಕವೋ’, ‘ಮಿಶ್ರವೋ’ ಎಂದು ತಿಳಿಯುವುದು ಕಷ್ಟವಾಗುತ್ತದೆ. ‘ಹೋಳಿ’ಯೊಂದಿಗೆ ‘ಗೆ’ ಸೇರಿ ‘ಹೋಳಿಗೆ’ ಆದಾಗ ‘ಹೋಳಿ ಹಬ್ಬದ ವಿಚಾರವನ್ನು ಹೇಳುತ್ತಿರುವರೋ ಅಥವಾ ಒಬ್ಬಟ್ಟಿನ ವಿಚಾರವನ್ನು ಹೇಳುತ್ತಿರುವರೋ ತಿಳಿಯಲು ಮಿಕ್ಕ ಪದಗಳ ಆಸರೆ ಬೇಕೇಬೇಕು. ಹಾಗೆಯೇ ‘ಕಟ್ಟಿಗೆ’ ಎಂದಾಗ ‘ಫ್ರೇಂಗೆ’ ಎಂದೋ, ಉರುವಲು ಎಂದೋ ತಿಳಿಯಲೂ ಅನ್ಯಪದಸಹಾಯ ಅನಿವಾರ್ಯ. ‘ಕಟ್ಟಿಗೆ ಒಡೆಯಬೇಕು’ ಎಂದಾಗ ಉರುವಲು; ‘ಕಟ್ಟಿಗೆ ಮೊಳೆ ಹೊಡೆಯಬೇಕು’ ಎಂದಾಗ ಕಟ್ಟು ಎಂದು ತಿಳಿದೆ. ಒಂದೇ ಪದಕ್ಕೆ ವಿವಿಧ ಅರ್ಥಗಳಿದ್ದು, ಅದರಿಂದ ಹಲವಾರು ಬಾರಿ ನಾನು ಬೆಪ್ಪುತಕ್ಕಡಿ ಆಗಿದ್ದೇನೆ.... ನೋಡಿ, ಇಲ್ಲೂ ಇಣುಕಿತಲ್ಲ! ತಕ್ಕಡಿ ಎಂದಾದರೂ ಬೆಪ್ಪಾಗುವುದುಂಟೆ? ಕೊಂಡುಕೊಂಡವರು (ಈ ಪದವೂ ವಿಚಿತ್ರವೇ. ಮಾರುಮಾರಿದವರು ಎಂದು, ಮಾರು ಹೂವನ್ನೇ ಮಾರಿದವರಿಗೂ ಸಹ, ಹೇಳುವ ಪರಿಪಾಠವಿಲ್ಲ!) ಬೆಪ್ಪಾಗುವರಷ್ಟೆ.
‘ಕು’ ಅಕ್ಷರವೂ ಗೊಂದಲದ ದ್ವಾರದ ಕೀಲಿಕೈಯೇ. ‘ಕುಗ್ರಾಮ’ ಎಂದರೆ ಕೆಟ್ಟ ಹಳ್ಳಿಯಂತೆ; ‘ಕುಖ್ಯಾತ’ ಎಂದರೆ ಕೆಟ್ಟ ಹೆಸರು ಹೊಂದಿರುವನAತೆ. ಆದರೆ ‘ಕುಪಿತ’ ಎಂದರೆ ಕೆಟ್ಟ ತಂದೆ ಎಂದರ್ಥವಲ್ಲವಂತೆ, ‘ಕುಮಾರ’ ಎಂದರೆ ‘ಕೆಟ್ಟ ಮನ್ಮಥ’ ಎಂದಲ್ಲವಂತೆ. ಇದೊಂದೇ ಹೀಗೆಂದುಕೊಂಡೀರಿ. ‘ಅಪ’ ಎನ್ನುವುದೂ ಹೀಗೆಯೇ – ಅಪನಂಬಿಕೆ ಎಂದರೆ ನಂಬಿಕೆ ಇಲ್ಲದಿರುವಿಕೆ; ಅಪಮಾನ ಎಂದರೆ ಮಾನಕ್ಕೆ ಧಕ್ಕೆ; ಆದರೆ ಅಪರೂಪ ಎಂದಾಗ ರೂಪಕ್ಕೆ ಏನೇನೂ ಸಂಬಂಧವಿಲ್ಲದ ‘ವಿರಳ’ ಎಂಬ ಅರ್ಥವಂತೆ. ಅದು ಹೇಗೆ ಈ ಭಾಷೆ ಕಲಿಯುವುದೋ ಏನೋ!
‘ನೋಡು’ ಎನ್ನುವ ಪದ ನನ್ನನ್ನು ಗೊಂದಲಕ್ಕೀಡಾಗಿಸಿದಷ್ಟು ಇನ್ನಾವುದೂ ಆಗಿಸಿಲ್ಲವೆನ್ನಬಹುದು. ‘ನೋಟಕ್ಕೆ ಸಂಬಂಧಿಸಿದ ಪದ; ನೋಡು ಎಂದರೆ ಕಾಣು’ ಎಂದು ನಿಘಂಟೇನೋ ಹೇಳಿಬಿಡುತ್ತದೆ. ಆದರೆ ದಿನನಿತ್ಯದಲ್ಲಿ ‘ಬಿಸಿ ಇದೆಯಾ ಮುಟ್ಟಿ ನೋಡು’, ‘ಇದರ ವಾಸನೆ ನೋಡು’, ‘ಎಷ್ಟು ಜೋರು ಗಲಾಟೆ ಮಾಡ್ತಿದಾನೆ ನೋಡು’, ‘ಖಾರ ಸರಿ ಇದೆಯಾ ನೋಡು’ ಎನ್ನುತ್ತಾ ಕಿವಿ, ಮೂಗು, ನಾಲಿಗೆ, ಚರ್ಮಗಳಿಂದಲೂ ನೋಡೆನ್ನುತ್ತಾರೆ. ಈ ‘ನೋಡು’ ಶಬ್ದವನ್ನು ಬಳಸುವಂತೆ ‘ಮೂಸು’, ‘ಸ್ಪರ್ಶಿಸು’, ‘ಕೇಳು’, ‘ಆಸ್ವಾದಿಸು’ ಎನ್ನುವ ಪದಗಳನ್ನು ಬಳಸುವುದಿಲ್ಲ. ‘ನೋಡು’ ಮಾತ್ರ ಇಂಗ್ಲೀಷಿನ ‘ಡೆಫನೆಟ್ ಆರ್ಟಿಕಲ್’ನಂತೆ ಎಲ್ಲೆಲ್ಲಿಯೂ ಬಳಸಬಹುದಾದ ‘ಸ್ವತಂತ್ರ’ ಪದ.
ಪದವೊಂದು ಒಮ್ಮೆ ಗೊಂದಲ ನೀಡುವುದು ಸಾಲದೆಂಬಂತೆ ‘ಜೋಡಿನುಡಿ’ಗಳೂ ತಮ್ಮ ವಿಕ್ರಮ ತೋರಿಸಲು ಕಾದಿರುತ್ತವೆ. ‘ಬೇಡಬೇಡ’ ಎಂದರೆ ‘ಪಕ್ಷಿಗಳನ್ನು ಬೇಟೆಯಾಡುವವನು ಬೇಡ’ ಎನ್ನುತ್ತಿದೆಯೋ, ‘ಬೇಡನೆಂದರೆ ವಾಲ್ಮೀಕಿ, ಅವನೇ ಬೇಡ’ ಎಂದು ರಾಮಾಯಣವಿರೋಧಿ ಪಂಗಡದ ಹೇಳಿಕೆ ನೀಡುತ್ತಿದೆಯೋ, ‘ಯಾಚನೆ ನಿಷೇಧಿಸು’ ಎನ್ನುತ್ತಿದೆಯೋ ತಿಳಿಯುವ ಪರಿಯುಂಟೇ ಜಗದೊಳ್? ‘ಕಾಡಬೇಡ’ ಎಂದರೆ ‘ನಾಡಬೇಡ’ನ ಅರಣ್ಯಬಂಧುವೇನು? ‘ಬರಬೇಡ’ ಎನ್ನುವುದು ವಿಚಿತ್ರ ಪದವಲ್ಲವೆ! ಯಾರಾದರೂ ‘ಬರಬೇಕು’ ಎನ್ನುವರೇ? ಬರ ಎಂದರೆ ಕ್ಷಾಮಡಾಮರ, ನೀರಿಲ್ಲದ ಒದ್ದಾಟದ ಕಾಲ. ಅದನ್ನು ಯಾರು ಕೇಳಿಯಾರು. ‘ಬರಬೇಡ’ಕ್ಕೆ ಜೈ, ‘ಬರಬೇಕು’ಗೆ ಧಿಕ್ಕಾರ ಎಂದಿದ್ದೆ. ಯಾರ ಮನೆಗೆ ಯಾರು ಬರುವುದೂ ಇಷ್ಟ ಪಡದ ಈಗಿನ ಸಮಾಜಕ್ಕೆ ಅದೇ ಅರ್ಥ ಸರಿಯೆಂದರು ಒಬ್ಬ ‘ಸಮಾಜ ಪಂಡಿತ’ರು.
ಸಾಕಷ್ಟು ಗದ್ದಲ ಎಬ್ಬಿಸುವ ಕನ್ನಡಪದಗಳ ಪೈಕಿ ‘ಲಾಯಕ್ಕಾದವನು’ ಎಂಬುದೂ ಒಂದು ಪದ. ‘ಯೋಗ್ಯನಾದವನು’ ಎಂದು ಇದರ ಅರ್ಥವಂತೆ. ಹೇಗೆ? ‘ಲಾಯ’ ಎಂದರೆ ಕುದುರೆ ಕಟ್ಟುವ ಸ್ಥಳ. ‘ಲಾಯಕ್ಕಾದವನು’ ಎಂದರೆ ‘ಲಾಯದಲ್ಲಿ ಕಟ್ಟುವುದಕ್ಕೆ ಅರ್ಹನಾದವನು’; ಎಂದರೆ ಕುದುರೆಯೇ. ಚುನಾವಣೆಯ ಸಮಯದಲ್ಲಿ ‘ಹಾರ್ಸ್ ಟ್ರೇಡಿಂಗ್’ ಮೂಲಕ ‘ಕುದುರಿಸಿಕೊಂಡು’ ಖರೀದಿಗೊಳಗಾದ ‘ಕುದುರೆ’ಗಳನ್ನು ‘ಲಾಯಕ್ಕಾದವರು’ ಎಂದು ಕರೆದರೆ ಸೂಕ್ತವೋ ಏನೋ. ಅಂತೆಯೇ ಐಪಿಎಲ್ನಲ್ಲಿ ‘ಹರಾಜು’ ಆಗಿ ತಂಡವೊಂದಕ್ಕೆ ಸೇರುವ ಆಟಗಾರರೂ ತತ್ತತ್ತಂಡಗಳ ಲಾಯಕ್ಕೆ ಆದವರೇ ಆಗುವುದರಿಂದ ಅವರನ್ನು ಲಾಯಕ್ಕಾದವರು ಎನ್ನಬಹುದು. ಕನ್ನಡದ ‘ಕುದುರೆ’ಯಲ್ಲೂ ಒಂದು ವಿಶೇಷವಿದೆ. ಬೇರಾವ ಭಾಷೆಯ ಕುದುರೆಗಳಿಗೂ ಕೊಂಬುಗಳಿಲ್ಲ. ಕನ್ನಡದ ‘ಕುದುರೆ’ಗೆ ಎರಡು ಕೊಂಬುಗಳಿವೆಯಂತೆ!
ಪಂಪನ ‘ಆರಂಕುಶವಿಟ್ಟೊಡಂ...’ ಸಾಲನ್ನು ಉಪಾಧ್ಯಾಯರು ಹೇಳಿದಾಗ ‘ಐದಂಕುಷವಿಟ್ಟಿದ್ದರೆ ಅಥವಾ ಏಳಂಕುಷವಿಟ್ಟಿದ್ದರೆ ಕವಿ ಏನು ಹೇಳುತ್ತಿದ್ದ ಸಾರ್?’ ಎಂದು ಕೇಳಿದ್ದೆ. ‘ಆರು’ ಎಂದರೆ ‘ಬಿಸಿಯಿಂದ ತಣ್ಣಗಾಗು’ ಎಂದೂ ಅಲ್ಲ, ‘ಐದರ ನಂತರದ ಸಂಖ್ಯೆ’ಯೂ ಅಲ್ಲ, ‘ಯಾರು’ ಎಂದರ್ಥವೆAದು ಆರು ಬೆತ್ತದೇಟುಗಳ ಮೂಲಕ ನನಗೆ ತಿಳಿಹೇಳಿದ್ದರು (ಇದೂ ವಿಚಿತ್ರ ಜೋಡಿಪದವೇ; ತಿಳಿಹೇಳು ಎಂಬ ಪದವಿದೆ, ಗಬ್ಬಡಹೇಳು, ರಾಡಿಹೇಳು ಎಂದೆಲ್ಲ ಇಲ್ಲ) ಗುರುಗಳು.
ಈ ಓದಿನ ಸಹವಾಸವೇ ಬೇಡ; ಹಾಡಾದರೂ ಕೇಳೋಣ; ಎಂದು ಚಲನಚಿತ್ರಗೀತೆ ಕೇಳಲು ರೇಡಿಯೋ ಕಿವಿ ಹಿಂಡಿದರೆ ‘ಕನ್ನಡನಾಡಿನ ವೀರರಮಣಿಯ...’ ಎಂದು ಆರಂಭವಾಯಿತೊಂದು ಹಾಡು. ಹಾಡೇನೋ ವೇಗವಾಗಿ ಹಾಡಿಬಿಡಬಹುದು(ಹ್ಞಾಂ! ಹಾಡಿ ಎಂದರೆ ಗ್ರಾಮ ಅಥವ ಕೇರಿ. ಅದನ್ನು ಬಿಡುವುದೇ ಇಂದಿನವರ ಪ್ರಮುಖ ಕ್ರಮವಾಗಿದೆ. ಆದರೆ ಇಲ್ಲಿ ‘ಹಾಡಿಬಿಡುವುದು’ ಆ ಅರ್ಥದಲ್ಲಲ್ಲ. ‘ಕೇರಿ’ ಎಂದರೆ ಮೊರದಲ್ಲಿ ಧಾನ್ಯಗಳನ್ನು ಹಾಕಿಕೊಂಡು ಸ್ವಚ್ಛಗೊಳಿಸುವುದು ಎಂದರ್ಥವಿದೆ. ಆ ಅರ್ಥವೂ ಇಲ್ಲಿಗೆ ಪ್ರಸ್ತುತವಲ್ಲ ಎಂದು ಗುರುಗಳೊಬ್ಬರು ಹೇಳಿಕೊಟ್ಟರು. ಹಾಡಿಬಿಡುವುದೆಂದರೆ ಹಾಡುವುದು ಅಷ್ಟೆ. ಬಿಡುವುದು ಏನೇನೂ ಇಲ್ಲ). ಆದರೆ ಮೂಲದಲ್ಲಿ ಕವಿ ಬರೆದಿರುವುದು ‘ವೀರ ರಮಣಿಯ’ ಎಂದೋ, ‘ವೀರರ ಮಣಿಯ’ ಎಂದೋ ಎಂಬ ಗೊಂದಲ ಆರಂಭವಾಯಿತು. ಆ ಸ್ಟೇಷನ್ನೇ ಬದಲಾಯಿಸಿದರೆ ‘ನಿಂಬೆಹಣ್ಣಿನಂ
ತ ಹುಡುಗಿ ಬಂತು ನೋಡು’ ಎಂದು ಆರಂಭವಾಯಿತು ಮತ್ತೊಂದು ಹಾಡು. ತೆಲುಗಿನಲ್ಲೇನೋ ‘ಆಮೆ ವಚ್ಚಿಂದಿ’ ‘ಬಿಡ್ಡ ವಚ್ಚೆ’ ಎನ್ನುತ್ತಾ ಹೆಣ್ಣನ್ನು ‘ವಸ್ತು’ವಾಗಿ ಕಂಡಿದ್ದಾರೆ. ಆದರೆ ಕನ್ನಡದಲ್ಲಿ ‘ಹೆಣ್ಣು’ ‘ಸ್ತ್ರೀ ಲಿಂಗ’ವಾಗಿರುವಾಗ ‘ಹುಡುಗಿ ಬಂತು’ ಎನ್ನುವುದು ಸರಿಯೆ? ಮತ್ತೊಮ್ಮೆ ಚಾನಲ್ ಛೇಂಜ್ ಮಾಡಿದೆ. ‘ನೀನಾರಿಗಾದೆಯೋ ಎಲೆಮಾನವ’ ಎಂದು ಆರಂಭವಾಯಿತು ಮತ್ತೊಂದು ಹಾಡು. ‘ನೀನಾರಿಗಾದೆಯೋ’ ಎಂದರೆ ಒಂದರ್ಥ; ‘ನೀ ನಾರಿಗಾದೆಯೋ’ ಎಂದರೆ ಮತ್ತೊಂದರ್ಥ; ‘ಎಲೆಮಾನವ’ ಎಂದರೆ ಬಟ್ಟೆಗಳಿಗೂ ಮುಂಚಿನ ಕಾಲದಲ್ಲಿ ಎಲೆಗಳಿಂದಲೇ ಮಾನ ಮುಚ್ಚಿಕೊಳ್ಳುತ್ತಿದ್ದ ಮಾನವರೋ, ಈಗಿನ ಫ್ಯಾಷನ್ ಯುಗದಲ್ಲಿ ಬಾಳೆಯೆಲೆಯಲ್ಲೋ, ತುಳಸಿ ಎಲೆಯಲ್ಲೋ ತಯಾರಿಸಿದ ಬಟ್ಟೆ ಕಟ್ಟಿಕೊಂಡವರೋ ಅಥವ ‘ಎಲೆ’ ಹಿಡಿದು, ಅರ್ಥಾತ್ ಇಸ್ಪೀಟ್ ಆಟದಲ್ಲಿ ಮುಳುಗಿ ‘ಎಲೆಮಾನವ’ನೇ ಆಗಿ ನಿರರ್ಥಕನಾದ್ದರಿಂದ ‘ನೀನಾರಿಗಾದೆಯೋ’ ಎಂದು ಬೈಸಿಕೊಳ್ಳುವ ಮಟ್ಟಕ್ಕೆ ತಲುಪಿದವನೋ ಎಂದು ಮತ್ತೆ ಗೊಂದಲಕ್ಕೆ ಬಿದ್ದೆ.
ಇಷ್ಟೆಲ್ಲವನ್ನೂ ನನ್ನ ಮಿತ್ರ (ಅವನಿರುವುದು ಅಮಾವಾಸ್ಯೆಯ ಬಣ್ಣ. ಮಿತ್ರ ಎಂದರೆ ಸೂರ್ಯ ಎಂದರ್ಥವಂತೆ. ಆದ್ದರಿಂದ ಅವನನ್ನು ಮಿತ್ರ ಅನ್ನಬಹುದೋ ಇಲ್ಲವೋ ತಿಳಿಯದಾಗಿದೆ) ಸಂದೇಶನಿಗೆ ಹೇಳಿದೆ. ಕೂಡಲೆ ಎರಡೂ ಕೈಗಳಲ್ಲಿ ತನ್ನ ತಲೆಯನ್ನು ಭದ್ರವಾಗಿ ಹಿಡಿದುಕೊಂಡು ‘ಅದೇನೂಂತ ಗಂಟುಬಿದ್ದೆಯೋ ನನಗೆ. ನೀನೊಬ್ಬ ದೊಡ್ಡ ತಿಳಿಗೇಡಿ. ಮೂರ್ಖ.... ಮೂರ್ಖ... ಮೂರ್ಖ...’ ಎನ್ನುತ್ತಾ ಬರಬರನೆ ಹೊರಟುಹೋದ.
‘ಖ’ ಎಂದರೆ ‘ಶರೀರದಲ್ಲಿನ ರಂಧ್ರ’, ‘ಶೂನ್ಯ’, ‘ಗಹ್ವರ’ ಮತ್ತು ‘ಗಗನ’ ಎಂಬ ನಾಲ್ಕು ಅರ್ಥಗಳಿವೆ. ಅವನು ‘ಮೂರು ಖ’ ಎಂದ. ಹಾಗಾದರೆ ನನಗೆ ಅವುಗಳಲ್ಲಿ ಅನ್ವಯ ಆಗುವ ಮೂರು ಯಾವುವು ಮತ್ತು ಅನ್ವಯ ಆಗದ್ದು ಯಾವುದು? ಏಕೋ ಒಂದೂ ತಿಳಿಯದಾಗಿದೆ. ಯಾರಾದರೂ ತಿಳಿದು ಹೇಳುವಿರಾ ಪ್ಲೀಸ್....
ಎನ್. ರಾಮನಾಥ್
ಅಬ್ಬಾ ಇರೋ ಬರೋ ಪದ ಎಲ್ಲಾ ಹಾಕಿ ಅರ್ಥ ಅಪಾರ್ಥ ಎಲ್ಲಾ ಹೇಳಿ ಕೊನೆಗೆ ತಿಳಿಯದಾಗಿದೆ ಯಾರಾದ್ರು ಹೇಳಿ ಅಂದ್ರೆವೇನ್ ಹೇಳೋದು. ಸೂಪರ್ article.
ReplyDeleteಉದ್ದ ಆಯ್ತು ಎನ್ನದೆ ಓದುವ ನಿಮ್ಮಂತಹವರು ಇರುವವರೆಗೆ ಈ ರೀತಿಯ ಲೇಖನಗಳನ್ನು ಬರೆಯಬಹುದು. ಪದಗಳ ಬೆನ್ನು ಹತ್ತಿದ ಇಂತಹ ಲೇಖನಗಳನ್ನು ಬರೆಯುವುದೇ ಒಂದು ಮುದ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
Deleteಅದ್ಭುತ, ಅತ್ಯದ್ಭುತ!!! ಕನ್ನಡದ ಪದ ಕೋಶ ವನ್ನು ಹಿ ಡಿ ದು, ಜಾ ಲಾ ಡಿ ಬಿ ಟ್ಟಿ ದ್ದೀ ರಿ. ಪ ದ ಗ ಳ ನ್ನು ಯಾ ವ ರೀ ತಿ ಬ ರೆ ದ ರೂ ಮೂ ರ್ ಖ ನಾ ಗು ತ್ತೇ ನೆ. ಆ ಗೋ ಜೇ ಬೇ ಡ ವೆ ಂ ದು ಏ ಕಾ ಕ್ಷ ರಿ ಯಾ ಗಿ ಬಿ ಟ್ಟೆ.
ReplyDeleteನಿ ಮ ಗೆ ಸ ಹಾ ಯ ಮಾ ಡ ಬ ಹು ದಾ ದ ವ ರು ಎಂ ದ ರೆ........
ನಾ......... ಕ ಸ್ತೂ ರಿ ಮಾ ತ್ರ.
ನೀವು ಲಾಯರ್ ಆಗಿದ್ದಿದ್ದರೆ Anticipatory bail ಪಡೆಯುವುದರಲ್ಲಿ ನಿಷ್ಣಾತರಾಗುತ್ತಿದ್ದಿರಿ. ಎರಡು ಅಕ್ಷರಗಳನ್ನು ಸೇರಿಸಿಬಿಟ್ಟರೆ ಅರ್ಥವನ್ನು ಅಪಾರ್ಥ ಮಾಡಿಯೇನೆಂಬ ಮುನ್ನೆಚ್ಚರಿಕೆಯಿಂದ 'not married but living together' ರೀತಿ ಅನುಸರಿಸಿದ್ದೀರಿ. ನೀ (ನೀಲತ್ತಹಳ್ಳಿ) ಕಸ್ತೂರಿಯೂ ಆಗಬಹುದಿತ್ತು. ಅಥವಾ ನೀವೇ ಕಸ್ತೂರಿ ಆಗಿಯೂ ಆಗಬಹುದು. ಆದರೆ ಕತ್ತುರಿ ಆಗದಿದ್ದರೆ ಸರಿ. Thank you for your nice words
Deleteಎಂದಿನಂತೆ ಹಾಸ್ಯವನ್ನೇ ಎದಿರು ನೋಡುತ್ತಿದ್ದ ನಮಗೆ ಪದಗಳ ಪದರಗಳೇ ಎದಿರಾಯ್ತು. ಸಾರ್ ನಿಮಗೆ ಇರುವ ತಿಳುವಳಿಕೆಗೆ ಬರೀತಾ ಹೋದರೆ ದೊಡ್ಡ ಗ್ರಂಥವೇ ಆಗುವುದು ಸಂಶಯವಿಲ್ಲ. ಪದ ಎನ್ನುವ ಪದದಿಂದ ಹಿಡಿದು ಕನ್ನಡ ಮತ್ತು ಕನ್ನಡೇತರ ಪದಗಳನ್ನು ಹಿಡಿದು ಬಡಿದು, ಸಂಸ್ಕೃತವನ್ನು ಸಂಕಷ್ಟಕ್ಕೆ ಸಿಲುಕಿಸಿ, ತೆಲುಗನ್ನೂ ತಮಾಶೆಗೀಡುಮಾಡಿ ಕಡೆಗೆ ಮೂರ್ಖರು ಯಾರು ಎನ್ನುವ ಗೊಂದಲಕ್ಕೂ ತಂದು ನಿಲ್ಲಿಸಲೂ ಇಲ್ಲ ಎಷ್ಟು ಬೇಕಾದರೂ ಈ ಬಗೆಗೆ ಬರೆಯಬಹುದು ಎಂದು ಸಾಬೀತು ಮಾಡಿದ್ದೀರಿ. ನಿಜ ಹೇಳಲೇ ಬೇಕು ಸಾರ್ ಈ ಲೇಖನಕ್ಕೆ ಅನಿಸಿಕೆ ಬರೆಯೋದೂ ಕಷ್ಟ ....... ನೀವು ಅದರಲ್ಲೂ ಪದರ ಬಿಡಿಸಿಬಿಟ್ರೆ !!
ReplyDeleteಯಾವ ಪದಗಳನ್ನ ಉಪಯೋಗಿಸಲಿ ಅಂತ ಯೋಚನೆ ಆಗ್ತಾ ಇದೆ ಈಗ! ಅದ್ಭುತ ಬರಹ!
ReplyDelete- ಪುಷ್ಪ
ಧನ್ಯವಾದಗಳು ಪುಷ್ಪರಿಗೆ. ಪದಪದರಗಳ ಸೊಬಗು ಪ್ರಕೃತಿಯಷ್ಟೇ ಆಕರ್ಷಕ. ನಿಮ್ಮ ಮೆಚ್ಚುಗೆ ಹರ್ಷ ತಂದಿತು.
DeleteInfinite humor and knowledge about the words and its confusions. Feel like I need to be extra careful when I want to say something as it might give a different meaning in your respective ha ha ha
ReplyDeleteIf I can make fun of something you say, you may take it as your contribution to humour. After all, there is no response without stimuli.
Delete:) :)
ReplyDelete:)
Delete