ಮರೆಯಲಾಗದ ಮೈಸೂರು ಭಾಗ -1

ಮರೆಯಲಾಗದ ಮೈಸೂರು   ಭಾಗ ೧ 
ಪ್ರವಾಸ ಲೇಖನ - ಕನಕಾಪುರ ನಾರಾಯಣ

ಮೈಸೂರು ನಗರ ಬಹುತೇಕ ಕನ್ನಡಿಗರು ಕಂಡ ಊರು. ಇತ್ತೀಚಿಗೆ ಸಿಡ್ನಿಯಿಂದ ತವರೂರಿಗೆ ಅಮ್ಮನ ಜೊತೆ ಅಮೂಲ್ಯವಾದ ಕೆಲ ಕಾಲ ಕಳೆಯಲು ಬೆಂಗಳೂರಿಗೆ ಹೋಗಿದ್ದಾಗ ಎರಡು ದಿನಗಳು ಮೈಸೂರಿಗೆ ಭೇಟಿ ನೀಡುವ ಯೋಚನೆ ಮೂಡಿತು. ಆದರೆ ಮೈಸೂರಿಗೆ ಸಾಕಷ್ಟು ಸಲ ಭೇಟಿ ನೀಡಿದ್ದರೂ ಸಲದ ಭೇಟಿ ವಿಶೇಷ ಎನಿಸಿತು. ಮಾಮೂಲಾಗಿ ಜಗತ್ಪ್ರಸಿದ್ಧ ಅರಮನೆ, ಕನ್ನಂಬಾಡಿ ಕಟ್ಟೆ, ರಂಗನತಿಟ್ಟು ಪಕ್ಷಿಧಾಮ ಕಣ್ತಣಿಸುವ ಜಾಗಗಳೇ ಆಗಿವೆಯಾದರೂ ಸಲ ಸಂಗೀತ ಸಾಹಿತ್ಯ ರಸಿಕನಾಗಿ ಕಂಡ ಸ್ಥಳಗಳೇ ಬೇರೆಯಿದ್ದವು. ಯಾವುದೇ ಸ್ಥಳಗಳಿಗೆ ಹೋದರು ಹೆಂಡತಿ ಮಕ್ಕಳ ಜೊತೆಗೂಡಿ ಕಾಲಕಳೆದ ನೆನಪಿನಲ್ಲೇ ಬಾರಿ ಒಂಟಿಯಾಗಿ ಹೊರಟರೂ ಪೂರ್ವ ನಿಯೋಜಿತವಾಗಿ ಮೈಸೂರಿಗೆ ಕಲಾವಿದರೊಬ್ಬರ ಆಹ್ವಾನ ಇದ್ದದ್ದು ನನ್ನ ಭಾಗ್ಯ
ರೀ ಫೈನಲಿಸ್ಟ್ ಶ್ರೀಹರ್ಷ ಅವರೇ ಖುದ್ದಾಗಿ ಜೊತೆಜೊತೆಯಲಿ ಮೈಸೂರು ನಗರ ಮತ್ತು ಸುತ್ತಮುತ್ತಲಿನ ನಮ್ಮ ಆಸಕ್ತಿಗೆ ಅನುಗುಣವಾಗಿ ಸ್ವಲ್ಪವೂ ಸಮಯ ವ್ಯಯ ಮಾಡದೆ ತೋರಿಸಿ ಪರಿಚಯಿಸಿದ್ದು ಮರೆಯಲಾಗದ ಅನುಭವವೇ ಸರಿ.
ಮೊದಲ ದಿನ ಮೈಸೂರಿಗೆ ಐರಾವತ ಸರ್ಕಾರಿ ಬಸ್ನಲ್ಲಿ ಪ್ರಯಾಣ, ಮಧ್ಯೆ ಮದ್ದೂರಿನಲ್ಲಿ ರುಚಿಕರ ಮದ್ದೂರು ವಡೆ ಸವಿಯದಿದ್ದರೆ ಹೇಗೆ. ಇಪ್ಪತ್ತು ಮೂವತ್ತು ವರ್ಷ ಕಳೆದರೂ ಈಗಲೂ ಮದ್ದೂರು ವಡೆ ಅದೇ ರುಚಿ.

ಮೈಸೂರು ತಲುಪುತ್ತಿದ್ದಂತೆ ಗಾಯಕ ಶ್ರೀಹರ್ಷ ಅವರ ಭೇಟಿ. ಅವರನ್ನು ಕಾಣುವ ಕಾತುರದಲ್ಲಿ ದಡ ದಡ ನಿಲ್ದಾಣದಿಂದ ಹೊರಬಂದರೆ ಅಲ್ಲಿ ಒಂದು ಅಚ್ಚರಿ. ನನ್ನನ್ನು ಪಿಕ್ ಮಾಡಲು ಕಾರ್ನಲ್ಲಿ ಬಂದ ಶ್ರೀ ಹರ್ಷ ಅವರನ್ನು ಇಬ್ಬರು ಪೊಲೀಸ್ ಪೇದೆಗಳು ವಿಚಾರಿಸುತ್ತಿದ್ದರು. ಅಯ್ಯೋ parking ಶುಲ್ಕ / ದಂಡ ಹಾಕ್ತಿದ್ದಾರೆ ಅಂದ್ಕೊಂಡ್ರೆ ! ಅವರು ಶ್ರೀ ಹರ್ಷ ಅವರ ಅಭಿಮಾನಿಗಳು, ಶ್ರೀಹರ್ಷ ಅವರ ಕೈ ಕುಲುಕಿ ಕಾರ್ನಲ್ಲಿ ಕುಳಿತಾಗ ಪೊಲೀಸರು ನಮಗೆ ನಗುತ್ತಾ ಬಿಳ್ಕೊಟ್ಟರು.

ಇಲ್ಲಿ  ಶ್ರೀಹರ್ಷ ಅವರ ಬಗ್ಗೆ ಎರಡು ಮಾತು ಬರೆಯಲೇ ಬೇಕು.  ಬಸ್ ಸ್ಟಾಂಡ್ ನಿಂದ ಹಿಡಿದು ದೇವಸ್ಥಾನ, ಹೋಟೆಲ್ಲು,ಪ್ರಯಾಣ ಮಾಡುವಾಗ, ರಸ್ತೆಗಳಲ್ಲಿ ಎಲ್ಲಿ ನೋಡಿದರೂ ಶ್ರೀಹರ್ಷ ಅವರ ಅಭಿಮಾನಿಗಳು ಸೆಲ್ಫಿಗೆ ನಿಲ್ಲಿಸುವುದುಸಂತಸ, ಮೆಚ್ಚುಗೆ ಹಾಗು  ಅಭಿಮಾನದ ಮಾತು ಆಡಿ ಫೋಟೋ ತೆಗೆದುಕೊಳ್ಳುವುದು,ಏನಪ್ಪಾ  ಸೆಲೆಬ್ರಿಟಿಯಾದರೆ  ಅದೆಷ್ಟು ಕಷ್ಟ ಅಂತ ನನಗನಿಸಿದರೆ ಅವರು ಮಾತ್ರ ಸ್ವಲ್ಪವೂ ಬೇಸರವಿಲ್ಲದೆ ನಗುನಗುತ್ತಾ ಸಹಕರಿಸುತ್ತಿದ್ದರು. ಬಹುಶಃ ಅದಕ್ಕೆ ಅವರು ಅಷ್ಟು ಜನಪ್ರಿಯ ಅನ್ನಿಸಿತು.

ಬಸ್ ನಿಲ್ದಾಣದಿಂದ ನೇರ ಅರಮನೆಯ ಬಾಗಿಲಿನ ಕೋಟೆ ಆಂಜನೇಯ ಮತ್ತು ಗಣಪತಿಯ ದರ್ಶನ ಪಡೆದು, ನಂತರ ಅವರ ಮನೆಗೆ ಹೋಗಿ ಅಲ್ಲಿ ಅವರ ಮಾತೃಶ್ರೀ ಅವರ ಭೇಟಿ ಮಾಡಿದೆ
ಮನೆಯ ಮುಖ್ಯ ಹಾಲ್ ನಲ್ಲೇ  ಶ್ರೀಹರ್ಷ ಚಿಕ್ಕಂದಿನಿಂದ ಗಳಿಸಿದ ಬಹುತೇಕ ಪ್ರಶಸ್ತಿಗಳನ್ನು ಜೋಡಿಸಲಾಗಿತ್ತು. ಸಾಧನೀಯ ಗುರುತುಗಳಿಗೆ ಜಾಗವಿಲ್ಲದಷ್ಟು ಸನ್ಮಾನ, ಪ್ರಶಸ್ತಿಗಳ ಪುರಾವೆ.


ಮೈಸೂರಿಗೆ ಭೇಟಿ ನೀಡುವುದರ ಮುಖ್ಯ ಉದ್ದೇಶ ಸಂಗೀತ ವಿದ್ವಾಂಸರಾದ ಬಿಡಾರಾಮ್ ಕೃಷ್ಣಪ್ಪ ಹಾಗೂ ವಾಸುದೇವಾಚಾರ್ಯರ ಮನೆಗೆ ಭೇಟಿ ನೀಡುವುದು. ಕೆಲವು ವರ್ಷಗಳ ಹಿಂದೆ ಪಾಳುಬಿದ್ದಿದ್ದ  ವಾಸುದೇವಾಚಾರ್ಯರ ಮನೆ ಈಗ ಜೀರ್ಣೋದ್ಧಾರ ಮಾಡಲಾಗುತ್ತಿದೆ ಎಂದು ತಿಳಿದಿತ್ತು. ಮನೆಯ ಬೀಗದ ಕೈ ಪಡೆದು ಬರಲು ಶ್ರೀನಿವಾಸ ಪುಟ್ಟಿ ಎನ್ನುವವರ ಮನೆಗೆ ಹೋದೆವು.ಬೀಗದ ಕೈ ಪಡೆಯಲು ಹೋದ ನಮಗೆ ಅಲ್ಲೊಂದು ಅಚ್ಚರಿ ಕಾದಿತ್ತು

ಶ್ರೀನಿವಾಸ ಪುಟ್ಟಿ ಅವರು ತಮ್ಮ ತಂದೆಯವರು ತಾಯಿಯವರು ರಚಿಸಿದ ಚಿತ್ರಕಲೆಗಳನ್ನು ತಮ್ಮ ಸ್ವಂತ ಮನೆಯಲ್ಲೇ ಪ್ರದರ್ಶನಕ್ಕಿಟ್ಟಿದ್ದರು. ಅದ್ಭುತ ಕುಂಚಕಲೆ ಮತ್ತು ಅವರ ತಾಯಿಯವರು ರೇಷ್ಮೆ ದಾರಗಳಿಂದ  ರಚಿಸಿದ್ದ ಚಿತ್ರಗಳು ಹುಬ್ಬೇರಿಸುವಂತಿದ್ದವುಶ್ರೀನಿವಾಸ ಅವರು ಸಹ ವಿದ್ಯಾ ಕ್ಷೇತ್ರಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ ಎಂಬುದು ತಿಳಿಯಿತು. ಹೊಯ್ಸಳ ಶಿಲ್ಪಕಲೆಯಲ್ಲಿ ಅಪಾರ ಆಸಕ್ತಿಯುಳ್ಳ ಅವರು ಕರ್ನಾಟಕದಾದ್ಯಂತ ಶಿಲ್ಪಕಲೆಗಳ ವಿಶೇಷ ವಿಚಾರಗಳ ಸಂಗ್ರಹ ಸಂಶೋಧನೆ ನಡೆಸಿದ್ದಾರೆ.ಅದು ಪತ್ರಿಕೆಗೊ ಪ್ರಕಟಣೆ ಮುದ್ರಣಕ್ಕೋ ಆಗಿರದೆ ಅವರ ಹವ್ಯಾಸ ಮಾತ್ರವಾಗಿದೆ.ನಾವು ದೇಗುಲಗಳ ಬಳಿಹೋದಾಗ ನಮ್ಮ ಕಣ್ಣಿಗೆ ಕಾಣದ ಅಥವಾ ಅಲ್ಲಿನ ಗೈಡುಗಳು ತಿಳಿಸದ ಮಾಹಿತಿಗಳು ಇವರ ಸಂಗ್ರಹದಲ್ಲಿತ್ತುಮೈಸೂರು ವಾಸುದೇವಾಚಾರ್ಯರ ಮನೆ ಬೀಗದ ಕೈ ತರಲು ಹೋದ ನಮಗೆ ನಮ್ಮ ಆಸಕ್ತಿ ನೋಡಿ ಶ್ರೀನಿವಾಸ ಅವರೇ ಖುದ್ದಾಗಿ ನಮ್ಮೊಡನೆ ಸ್ಥಳ ಪರಿಚಯ ಮಾಡಿಕೊಡಲು ಹೊರಟು ಬಂದರು.





ಒಡೆಯರ ಆಳ್ವಿಕೆಯಲ್ಲಿ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ದಿಗ್ಗಜರು ಎನಿಸಿದ ಮೈಸೂರು ವಾಸುದೇವಾಚಾರ್ಯರು ವಾಸವಿದ್ದ ಮನೆಗೆ ನಾವು ತಲುಪಿದೆವು.ಮನೆಯ ಒಳಗೂ ಹೊರಗೂ ಮಣ್ಣು ಸಿಮೆಂಟ್ ರಾಶಿಗಳು ಕಂಡು ಇನ್ನು ದುರಸ್ತಿ ಕೆಲಸ ಸಾಗುತ್ತಿರುವುದು ಅರಿವಾಯಿತು.ಹೊರನೋಟಕ್ಕೆ ದೊಡ್ಡಮನೆ ಎನಿಸಿತು. ಹಳೇ ಕಾಲದ ದಪ್ಪ ಗೋಡೆಗಳು, ಮನೆಯ ಮುಂದಿನ ಜಗಲಿ, ಹಿಂದೆ ಅವರ ಮನೆಯವರಿಂದ ಪೂಜಿಸಲ್ಪಟ್ಟ ತುಳಸಿ ಕಟ್ಟೆ, ಒಳಗೆ ಅಷ್ಟೇನೂ ದೊಡ್ಡದಲ್ಲದ ವರಾಂಡ, ಇನ್ನೂ ಒಳಗೆ ಹೋದರೆ ದೊಡ್ಡ ಕೋಣೆ.  ಇತ್ತೀಚಿನ ದಿನಗಳಲ್ಲಿ ಇಲ್ಲೇ ದೊಡ್ಡ ಕೋಣೆಯಲ್ಲಿ ಕಚೇರಿಗಳು ನಡೆಯುತ್ತಿವೆ ಎಂದು ತಿಳಿಯಿತು. ಮನೆಯ ಎಲ್ಲ ಗೋಡೆಗಳನ್ನೂ ಹೊಸ ಗಾರೆ/ಸಿಮೆಂಟ್/ಸುಣ್ಣ ಬಳಿಯಲಾಗಿದ್ದು, ಕಾಲದ ಮೂಲ ದೇವರ ಕೋಣೆ ಮಾತ್ರ ಹಾಗೇ ಬಿಡಲಾಗಿದೆ.

ಅವರು ಕೃತಿಗಳನ್ನು ರಚಿಸುತ್ತಿದ್ದ ಕೋಣೆ ಪುಟ್ಟದಾಗಿದ್ದರೂ ಅದರ ಪರಿಚಯ ಮಾಡಿಕೊಟ್ಟಾಗ ಒಳಗೆ ಕಾಲಿಟ್ಟಾಗ ರೋಮಾಂಚನ ಆಗುವುದು ಖಂಡಿತ. ಸುಮಾರು ವರ್ಷಗಳ ಹಿಂದೆ ಮನೆಯ ಪಾಳುಬಿದ್ದು ಬಾಗಿಲಿಗೆ ಬೀಗ ಬಿಗಿದು ಒಳಗೆ ಪೋಲಿ/ಪಡ್ಡೆಗಳ ಅನೈತಿಕ ಚಟುವಟಿಕೆಗಳಿಗೆ ಆಶ್ರಯ ಆಗಿತ್ತಂತೆ. ನಂತರ ಶ್ರೀನಿವಾಸ ಪುಟ್ಟಿ ಮತ್ತಿತರರು ಪತ್ರಿಕೆಗಳಲ್ಲಿ ಟೀಕೆಯ ಲೇಖನ ಬರೆದು ಸರ್ಕಾರ ಹಾಗೂ ರಾಜರ ಮನೆತನದವರ ಗಮನ ಸೆಳೆದು ಈಗ ಸಂಪೂರ್ಣ ಸ್ವಚ್ಛ ಹಾಗೂ ಸಜ್ಜುಗೊಳಿಸಿ ಆಗಿಂದಾಗ್ಗೆ ಸಂಗೀತ ಕಚೇರಿಗಳು ನಡೆಯುವ ಹಾಗಾಗಿದೆ ಎನ್ನುವುದು ಖುಷಿಯ ಸಮಾಚಾರಮುದುಡಿದ ಹೂ ಅರಳಿದ ಹಾಗೆ ಆಚಾರ್ಯರ ನಿವಾಸ ಮತ್ತೆ ಸಂಗೀತಾಸಕ್ತರನ್ನು ಸೆಳೆಯುವತ್ತ ಸಾಗಿದೆ.ಅವರ ಇನ್ನೂರಕ್ಕೂ ಹೆಚ್ಚು ಕೃತಿಗಳು ದೇಶ ವಿದೇಶಗಳ ಕಚೇರಿಗಳಲ್ಲಿ ಪ್ರಚಲಿತದಲ್ಲಿದ್ದು, ಅವರ ನೆನಪುಗಳು ಮತ್ತು ನಾಕಂಡ ಕಲಾವಿದರು ಎರಡೂ ಪುಸ್ತಕಗಳೂ ಅಷ್ಟೇ ಪ್ರಖ್ಯಾತವಾಗಿವೆ.





ಅಲ್ಲಿಂದ ಮುಂದೆ ನಾವು ಹೊರಟದ್ದು ಮತ್ತೊಬ್ಬ ಸಂಗೀತ ವಿದ್ವಾನ್ ಬಿಡಾರಾಂ ಕೃಷ್ಣಪ್ಪ ರಾಮ ಮಂದಿರಕ್ಕೆ. ಹೊರನೋಟಕ್ಕೆ ಪುಟ್ಟ ಸಭಾಂಗಣದಂತೆ ಕಂಡರೂ ಒಳಗೆ ಮಾತ್ರ ಕಟ್ಟಡ ಭವ್ಯವಾಗಿದೆ. ಅರಮನೆಯ ಮತ್ತೊಂದು ತುಂಡು ಎಂಬಂತೆ ಸುಂದರವಾಗಿ ಬಣ್ಣ ಬಣ್ಣವಾಗಿ ಅಲಂಕೃತವಾದ ಒಳಾಂಗಣ.ದೊಡ್ಡ ಬಾಗಿಲುಗಳು. ಸುಂದರ ಗಾಜಿನ  ವಿದ್ಯುತ್ ತೂಗು ದೀಪಗಳು, ನಿತ್ಯ ಪೂಜಿಸಲ್ಪಡುವ ರಾಮ ಪರಿವಾರದ ವಿಗ್ರಹಗಳು, ಎದುರಿಗೆ ಕುಳಿತು ಕಚೇರಿ ನಡೆಸಲು ದೊಡ್ಡ ಆವರಣಒಳಗೆ ಕಾಲಿಡುತ್ತಿರುವಂತೆಯೇ ನನಗೆ ನೆಲದಮೇಲೆ ಕುಳಿತು, ನೆಲಮುಟ್ಟಿ ನಮಸ್ಕರಿಸಿ, ಧನ್ಯತೆಯ ಭಾವ ವ್ಯಕ್ತಪಡಿಸುವ ಮನಸ್ಸಾಯಿತು. ಅದನ್ನು ಕಂಡು ಶ್ರೀನಿವಾಸ ಅವರು ಒಮ್ಮೆ ಮುಗುಳ್ನಕ್ಕು, "ಅದು ಅಭಿಮಾನಿಗಳಿಗೆ  ಸ್ವಾಭಾವಿಕ, ನನಗೂ ಮೊಟ್ಟಮೊದಲು ಬಂದಾಗ ಅದೇ ಅನುಭವ ಆಯಿತು" ಎಂದರು.
  ನಾವು ಅಲ್ಲಿ ಕೃಷ್ಣಪ್ಪನವರ ಜೀವನದ ಕೆಲವು ನೈಜ ಘಟನೆಗಳನ್ನು ಶ್ರೀನಿವಾಸ ಪುಟ್ಟಿಯವರಿಂದ ಕೇಳುತ್ತಿರುವಾಗ ಸ್ಥಳೀಯ ಮಕ್ಕಳು ಅಲ್ಲಿ ಸಂಗೀತ ಅಭ್ಯಾಸ ಮಾಡಲು ಆರಂಭಿಸಿದರು.ಅವರೂ ಒಂದು ರೀತಿ ಪುಣ್ಯ ಮಾಡಿದ್ರು ಆನಿಸಿತು ಎಂಥಾ ಜಾಗದಲ್ಲಿ ಅವರ ಅಭ್ಯಾಸ ನಡೆಯುತ್ತಿದೆ ಎನ್ನುವುದೇ ಸಂತಸ.

 ೧೮೬೬ ರಲ್ಲಿ ಉಡುಪಿಯ  ನಂದಳಿಕೆ  ಎಂಬ ಊರಿನಲ್ಲಿ ಜನಿಸಿದ ಕೃಷ್ಣಪ್ಪ ಮೂಲತಃ ಬಡವರೂ ಹಾಗು ಮನೆಯಲ್ಲಿ ಕೊಂಕಣಿ ಭಾಷೆ ಮಾತನಾಡುವವರಾಗಿದ್ದರು. ಅದೇ ಊರಿನಲ್ಲಿ ಹುಟ್ಟಿದ ಮತ್ತೊಬ್ಬ ಕನ್ನಡದ ಮಹಾಕವಿ ಮುದ್ದಣ್ಣನವರು ಎಂದು ಇಲ್ಲಿ ನೆನೆಯಬಹುದು. ಹಸಿದ ಬಾಲಕ ಕೃಷ್ಣಪ್ಪ ಒಮ್ಮೆ ದೇಗುಲದಲ್ಲಿ ದೇವರ ನಾಮಗಳನ್ನು ಹಾಡುತ್ತಿದ್ದರು. ಅಂದು ಒಬ್ಬ ಶ್ರೀಮಂತ ವ್ಯಾಪಾರಿ ರಾಮಸ್ವಾಮಿ ಎನ್ನುವವರ ಬಳಿ ಸಂಗೀತ ಅಭ್ಯಾಸಕ್ಕೆ ಸೇರಿಸಲು ಸಹಾಯ ಮಾಡಿದರು. ಮುಂದೆ ದೊಡ್ಡ ಸಂಗೀತಗಾರರಾಗಿ ಬೆಳೆದು ತಮ್ಮಯ್ಯ ಮತ್ತು ವೀಣೆ ಶೇಷಣ್ಣನವರ ಶಿಷ್ಯರಾಗಿ ಉನ್ನತಕ್ಕೇರಿದರು ಬಿಡಾರಂ ಕೃಷ್ಣಪ್ಪನವರು.ಖ್ಯಾತ ಪಿಟೀಲುವಾದಕ ತಿರುಮಕೂಡಲು ಚೌಡಯ್ಯನವರು ಕೃಷ್ಣಪ್ಪನವರ ಬಳಿ ಸಂಗೀತ ಕಲಿತವರು ಎನ್ನುವ ವಿಷಯ ಕೇಳಿದಾಗ ಕೃಷ್ಣಪ್ಪನವರ ಪಾಂಡಿತ್ಯದ ಅರಿವಾಗುತ್ತದೆ. ಮೈಸೂರಿನ ಅರಸರಾದ ಚಾಮರಾಜ ಮತ್ತು ಕೃಷ್ಣರಾಜ ಒಡೆಯರ ಆಳ್ವಿಕೆಯಲ್ಲೂ ಆಸ್ಥಾನ ಸಂಗೀತರಾಗಿದ್ದುದಲ್ಲದೆ   ಬಹುಮುಖ್ಯವಾಗಿ ದೇವರನಾಮಗಳನ್ನು ದಾಸ ಸಾಹಿತ್ಯವನ್ನೂ ಕಚೇರಿಗಳಲ್ಲಿ ಅಳವಡಿಸಲು ನಾಂದಿ ಹಾಡಿದ ಕೀರ್ತಿ ಬಿಡಾರಾಂ ಕೃಷ್ಣಪ್ಪನವರಿಗೆ ಸಲ್ಲಲೇಬೇಕು. ಈಗಿನ ಕಾಲದಲ್ಲಿ ದೇವಾರನಾಮಗಳನ್ನೇ ವೃತ್ತಿಗಾಗಿ  ಬಳಸುತ್ತಿರುವ, ಕಚೇರಿಗಳಲ್ಲಿ ಅಳವಡಿಸುವಾಗ ಎಲ್ಲರನ್ನೂ ನೆನೆಯುವ ಹಾಗೆ ಕೃಷ್ಣಪ್ಪನವರನ್ನೂ ನೆನೆಯುವುದು ನಮ್ಮ ಕರ್ತವ್ಯ.
ಶ್ರೀಹರ್ಷ ಅವರು ಆ ಸ್ಥಳದಲ್ಲಿ ಡಿ ವಿ ಜಿ ಯವರ ಅಂತಃಪುರ ಗೀತೆ ನೃತ್ಯ ಸರಸ್ವತಿ ಹಾಡಿನ ಎರಡು ಸಾಲುಗಳನ್ನು ಪ್ರಶಾಂತ ಸ್ಥಳದಲ್ಲಿ ಹಾಡಿದಾಗ ಶ್ರೋತ್ರಾನಂದವಾಯಿತು. ಅವರ ಕಂಠಸಿರಿಯಲ್ಲಿ ಥರದ ರಚನೆಗಳನ್ನು ಕೇಳುತ್ತಿದ್ದರೆ ಪಕ್ಕವಾದ್ಯಗಳೇ ಬೇಕಿಲ್ಲ.  ಕೂಡಲೇ ಶ್ರೀನಿವಾಸ ಪುಟ್ಟಿಯವರು "ಶ್ರೀಹರ್ಷ ತಾವೇಕೆ ಒಮ್ಮೆ ವಾಸುದೇವಾಚಾರ್ಯರ ಮನೆಯಲ್ಲಿ ಕಚೇರಿಯೊಂದನ್ನು ನೀಡಬಾರದು?" ಎಂದು ಆಹ್ವಾನವಿತ್ತರು. ಆದಿನ ದೂರದಲ್ಲಿಲ್ಲ, ಹರ್ಷ ಅವಕಾಶ ಬಂದಾಗ ಸಾಧಿಸಿಯೇ ತೋರಿಸುತ್ತಾರೆ ಎಂದು ನನ್ನ ಅಭಿಪ್ರಾಯ.ಶ್ರೀಹರ್ಷ ಆಗಬಹುದು ಎಂದು ಒಪ್ಪಿಗೆ ನೀಡಿದರು.

ಅಷ್ಟುಹೊತ್ತಿಗಾಗಲೇ ಹೊಟ್ಟೆ ಚುರ್ ಎನ್ನುತಿತ್ತು.
ಅರಮನೆ ಎನ್ನುವ ಹೋಟೆಲಿಗೆ ಹೋಗಿ ಕಾಫಿ ಬಜ್ಜಿ ಸೇವಿಸಲು ಕುಳಿತಾಗ ಅಲ್ಲೂ ಶ್ರೀಹರ್ಷ ಅವರ ಅಭಿಮಾನಿಗಳು. ಸಾರ್ ಒಂದು ಸೆಲ್ಫಿ ಪ್ಲೀಸ್ , ಒಂದು ಗ್ರೂಪ್ ಫೋಟೋ ಪ್ಲೀಸ್, ಒಬ್ಬರಾಗ್ತಿದ್ದ ಹಾಗೆ ಮತ್ತೊಬ್ಬರು."ಸಾರ್ Zee ಸರಿಗಮಪ ದಲ್ಲಿ  ನೀವೇ ವಿನ್ನರ್ ಆಗಬೇಕಿತ್ತು ಛೇ! " ಎನ್ನುವ ಮಾತು ಬರಿಯ ಈ ಎರಡು ದಿನಗಳಲ್ಲಿ ಹತ್ತುಬಾರಿ ಕೇಳಿದೆವು. ಇನ್ನು ಎರಡು ವರ್ಷಗಳಿಂದ ಅದೆಷ್ಟು ಜನ ಮಾತು ಹೇಳಿರಬೇಕು?ನೀವೇ ಊಹಿಸಿ. ಪುಟ್ಟಿಯವರನ್ನು ಅವರ ಮನೆಗೆ ವಾಪಸ್ ಬಿಡುವ ದಾರಿಯಲ್ಲಿ ಕೈಲಾಸಂ ಅವರ ಮನೆ, ಆರ್ ಕೆ ಲಕ್ಷ್ಮಣ್ ಮತ್ತು ಆರ್ ಕೆ ನಾರಾಯಣ್ ಅವರ ಮನೆ, ರಂಗಮಂದಿರಗಳು ಹೀಗೇ ನೋಡುತ್ತಾ ಅವರ ವಿಷಯಗಳ ಬಗ್ಗೆ ಅರಿಯದ ವಿಚಾರಗಳನ್ನು ತಿಳಿಯುತ್ತಾ ಸಾಗಿದೆವು.


ಶ್ರೀನಿವಾಸ ಪುಟ್ಟಿಯವರನ್ನು ಮನೆಯವರೆಗೂ ಬಿಟ್ಟು ನಾವು ಶ್ರೀಹರ್ಷ ಅವರ ಅಮ್ಮ ಮಾಡಿದ ರುಚಿಕರ ಅಡುಗೆಯ ಊಟ ಮಾಡಿ ಮತ್ತೆ ಸಂಜೆಯ ಪರ್ಯಟನೆಗೆ ಹೊರಟೆವು. ಅವರ ಕೈರುಚಿಯ ಬಗ್ಗೆ ಹರ್ಷ ಬಹಳ ಹೇಳುತ್ತಿದ್ದುದು ನಿಜ ಅನ್ನಿಸಿತು.  ನನ್ನ ತಾಯಿ ಗಟ್ಟಿಯಾಗಿದ್ದಾಗ ಮಾಡುತ್ತಿದ್ದ ಅಡುಗೆಯ ರುಚಿ ನೆನಪಿಸುವಂತಿತ್ತು ದಿನದ ಊಟ. ಆದರೆ ಈಗ ನನ್ನ  ತಾಯಿ ಸುಶೀಲಮ್ಮನವರಿಗೆ  ಕೈಲಾಗದ ಕಾರಣ ಕೆಲಸದವರನ್ನಿಟ್ಟು ಮಾಡಿಸುವಂತಾಗಿದೆ. ಪ್ರತಿ ಮೃಷ್ಟಾನ್ನ ಉಣ್ಣುವಾಗ ಅಮ್ಮನ ಕೈರುಚಿ ನೆನಪು ಬರುತ್ತದೆ. ಹಾಗೆಯೇ ಹೊತ್ತು ನನ್ನ ಪಾಲಿಗೆ ಒಳ್ಳೆಯ ಊಟ ಸಿಕ್ಕಾಗ ಅಮ್ಮನಿಗೆ ಏನು ಮಾಡಿರ್ತಾರೋ ಎನ್ನುವ ಆಲೋಚನೆ ಬರುತ್ತದೆ. ಅಮ್ಮನ ಕೈ ರುಚಿ ಅಡುಗೆ, ಕೈತುತ್ತು, ಏನಾದರೂ ಕರೆದ ತಿಂಡಿ ಮಾಡುತ್ತಿದ್ದಾಗ ಮೊದಲು ಮಕ್ಕಳಾದ ನಮಗೆ ರುಚಿ ನೋಡಲು ಬಿಸಿ ಬಿಸಿ ಚಕ್ಕುಲಿ, ಮುರುಕು, ಕೋಡುಬಳೆ  ಕೈಗಿಡುತ್ತಿದ್ದುದು ಇವೇ ಜೀವನದ ಸವಿನೆನಪುಗಳು.
ಅಲ್ಲಿಂದ ನೇರ ಕಳಲೆ ಎಂಬ ಊರಿಗೆ ಹೊರಟೆವು ನಂಜನಗೂಡಿನಿಂದ ಸುಮಾರು ಏಳು ಕಿ ಮೀ ಪ್ರಯಾಣ………..
to be continued............

Comments

  1. ಲೇಖನ ತುಂಬಾ ಸ್ವಾರಸ್ಯವಾಗಿದೆ. ಶ್ರೀಹರ್ಷನಂಥವರ ಒಡನಾಡಿ ದೊರಕಿದ್ದು ನಿಮ್ಮ ಸೌಭಾಗ್ಯವೇ ಸರಿ. ಲೇಖನದ ಮುಂದಿನ ಕಂತನ್ನು ಎದುರು ನೋಡುತ್ತ್ತಿದ್ದೇನೆ.

    ReplyDelete
    Replies
    1. ಧನ್ಯವಾದಗಳು Dr Madhusudana Sir. ತಮ್ಮ ಮೆಚ್ಚುಗೆ ಪ್ರೋತ್ಸಾಹಕ್ಕೆ
      ಮುಂದಿನ ಭಾಗದಲ್ಲಿ ಅಪೂರ್ವ ಶಿಲ್ಪಕಲೆಯ ಅನುಭವ ಬರೆದಿದ್ದೇನೆ. ತಾವು ಖಂಡಿತ ಓದಿ

      Delete
  2. ಕಥೆತರಹ ಒಂದೊಂದು ನಿಮ್ಮ ಬಾಯಲ್ಲಿ ಕೇಳಿದ್ದೆ. ಈಗ ಅದನ್ನು ಓದಿ ಸಂತೋಷವಾಯಿತು. ಶ್ರೀಹರ್ಷ ನಿಮಗೆ ನಿಜವಾಗ್ಲೂ ಅತ್ಯುತ್ತಮ ಸ್ಥಳಗಳಿಗೆ ಕರೆದುಕೊಂಡು ಹೋಗಿದ್ದಾರೆ. ಭಾಗ 2 ಆದಷ್ಟು ಬೇಗ ಬರಲಿ.

    ReplyDelete
  3. ನಿಮ್ಮ ಪ್ರವಾಸ ಕಥನ ತುಂಬಾ ಆಸಕ್ತಿಕರವಾಗಿದೆ. ಇಲ್ಲಿಗೆ ಬಂದಾಗ ನಾವು ಕಂಡಂತೆ, ಹಾಡುಗಾರ ಶ್ರೀ ಹರ್ಷ, ಬಹಳ ಸರಳ ಹಾಗೂ ಸಜ್ಜನ ವ್ಯಕ್ತಿ. ಅಗಾಧ ಪ್ರತಿಭೆ, ಹೆಸರು ಇದ್ದರೂ, ಎಲ್ಲರೊಡನೆ ಸ್ನೇಹದಿಂದ ಬೆರೆತು ಮನಸೆಳೆದಿದ್ದರು. ಅಂತಹವರ ಒಡನಾಟ ನಿಮಗೆ ದೊರೆತದ್ದು ಸಂತೋಷದ ವಿಷಯ.
    ನಿಮ್ಮ ಸರಳ ನಿರೂಪಣೆ ತುಂಬಾ ಇಷ್ಟವಾಯ್ತು, ಮುಂದಿನ ಕಂತಿಗಾಗಿ ಕಾಯುವಂತಾಗಿದೆ.

    ReplyDelete
    Replies
    1. ನಾಗಶೈಲ ಕುಮಾರ್ ತಮ್ಮ ಮೆಚ್ಚುಗೆ ಪ್ರೋತ್ಸಾಹಕ್ಕೆ ಧನ್ಯವಾದಗಳು. ಶ್ರೀಹರ್ಷ ಅವರ ಬಗ್ಗೆ ಎಷ್ಟು ಹೇಳಿದರೂ ಸಾಲದು. ನಾವು ಕಂಡ ಒಬ್ಬ ವಿಶೇಷ ಕಲಾವಿದ ಹಾಗೂ ಅಪರೂಪದ ವ್ಯಕ್ತಿತ್ವ. ಮುಂದಿನ ಭಾಗದಲ್ಲಿ ಅಪೂರ್ವ ಶಿಲ್ಪಕಲೆಯ ಅನುಭವ ಬರೆದಿದ್ದೇನೆ. ತಾವು ಖಂಡಿತ ಓದಿ. ನಿಮಗೆ ಇನ್ನೂ ಹೆಚ್ಚಿನ ಪ್ರವಾಸ ಅನುಭವಗಳಿವೆ, ಎಲ್ಲರಲ್ಲೂ ಹಂಚಿಕೊಳ್ಳಿ .

      Delete
  4. This comment has been removed by the author.

    ReplyDelete
    Replies
    1. Narayana Sir, Very well written. Your article brought back my childhood spent in Mysore at our grand parents home. As my father N L Seetharama Sastry was Astana Vidwan and AIR artist, our family had close contact with Sri Vasudeva Acharaya,
      Veena Seshanna, T Chowidaiah, Dr Doriswami Iyengar, R K Srikantan and other great musicians. We look forward for your next segment.

      Delete
    2. Many thanks for your sincere feedback smt Radha. Glad to know you your family had close contacts with music legends. Thanks for reading and encouraging. The next part is all about few beautiful temples I visited on the same trip. will be released soon.

      Delete
  5. Naani, your visit to Mysore is very fruitful. Though I have gone there many times I didn't get an opportunity to visit such memorable places. In myNext visit I will make a point to visit them. Thanks for the useful information and thanks to Mr. Sriharsha for his hospitality. We had met him when we went for a trip to Melukote. Really he is gem of a person

    ReplyDelete
    Replies
    1. Thanks for your sincere feedback . Yes he is special and humble celebrity

      Delete
  6. Brought back the memories our evergreen Mysore for sure.

    ReplyDelete
    Replies
    1. Yes Mysore is very lively place. Music art sightseeing literature many more....

      Delete
  7. ಕಣ್ ಕಟ್ಟುವ ಬರವಣಿಗೆ. ಓಡಾಟದ ಜೊತೆ ಹರ್ಷ ಅವರ ಸಂಗೀತದ ಇಂಪು ಇತ್ತ?. ಶ್ರೀ ವಾಸುದೇವ ಆಚಾರ್ಯ ಅವರ ಮನೆಯ ವಿವರಣೆ ಚೆನ್ನಾಗಿತ್ತು. ಸಂಗೀತ ಕ್ಕೆ ಅವರ ಕೊಡುಗೆ ಅಜರಾಮರವಾಗಿ ದೆ. ಧನ್ಯವಾದ

    ReplyDelete

Post a Comment