ರಂಗಭೂಮಿಯ ಅನರ್ಘ್ಯ ರತ್ನ ಮಾಸ್ಟರ್ ಹಿರಣ್ಣಯ್ಯ
ಲೇಖನ - ಬೇಲೂರು ರಾಮಮೂರ್ತಿ
ಸುಮಾರು ಒಂದೂವರೆ ದಶಕಗಳಿಂದ ನನ್ನನ್ನು ಅವರ ಮನೆಯ ಒಬ್ಬ ಸದಸ್ಯನಂತೆಯೇ ನಡೆಸಿಕೊಂಡಿದ್ದ ಅಣ್ಣ ಇನ್ನಿಲ್ಲ ಎನ್ನುವುದು ನಂಬಲಸಾಧ್ಯವಾದ ಸತ್ಯ. ನನ್ನ ಅವರ ಪ್ರಥಮ ಭೇಟಿ ಎಂದರೆ, ಬೆಳಗಾಂನಲ್ಲಿ ನಡೆದ ಹಾಸ್ಯೋತ್ಸವದಲ್ಲಿ ಅಣ್ಣನೊಂದಿಗೆ ವೇದಿಕೆ ಹಂಚಿಕೊಳ್ಳುವ ಸೌಭಾಗ್ಯ ಬಂದಿತ್ತು. ಅಂದು ನಾನು ಪೋಡಿಯಂನಲ್ಲಿ ನಿಂತು ಮಾತಾಡುತ್ತಿದ್ದಾಗ ಸುಮಾರು ಮೂವತ್ತು ನಿಮಿಷಗಳ ನಂತರ ವ್ಯವಸ್ಥಾಪಕರು ಬಂದು ನನಗೆ ನಿಮ್ಮ ಸಮಯವಾಯಿತು ಎನ್ನುವ ಚೀಟಿ ಕೊಡಲು ಬಂದಾಗ ವೇದಿಕೆಯಲ್ಲಿದ್ದ ಅಣ್ಣ ರೀ ಅವರು ತುಂಬಾ ಚನ್ನಾಗಿ ಮಾತಾಡ್ತಾ ಇದಾರೆ ಇನ್ನೂ ಸ್ವಲ್ಪ ಹೊತ್ತು ಮಾತಾಡಲಿ ಬಿಡಿ ಎಂದರು. ಇದು ಒಬ್ಬ ಮೇರು ಕಲಾವಿದ ಮೊದಲ ಭೇಟಿಯಲ್ಲೇ ಇನ್ನೊಬ್ಬ ಕಲಾವಿದನಿಗೆ ಕೊಟ್ಟ ಬಹು ದೊಡ್ಡ ಗೌರವ. ಅಂದು ನನಗೆ ಅಣ್ಣ ಮತ್ತು ರಾಮನಾಥ್ ಅವರ ಮೊದಲ ಪರಿಚಯ. ಮರುದಿನ ನಾವೆಲ್ಲರೂ ಅಣ್ಣನ ಕಾರಿನಲ್ಲೇ ಕೂಡಲ ಸಂಗಮ ನೋಡಲು ಹೋದದ್ದು ಅವರ ಜೊತೆಯಲ್ಲಿ ಊಟ ಮಾಡಿದ್ದು ಇನ್ನೊಂದು ಬೋನಸ್. ಅಲ್ಲಿಂದ ಪ್ರಾರಂಭವಾದ ನನ್ನ ಅಣ್ಣನ ಅನುಬಂಧ ಮುಂದುವರಿದಿತ್ತು. ಅವರ ಮನೆಗೆ ಹೋದ್ರೆ ಬನ್ರೀ ಬೇಲೂರು ಅಂದು ಪ್ರೀತಿಯಿಂದ ಸ್ವಾಗತಿಸಿ ಶಾಂತ ನೋಡು ಬೇಲೂರು ಬಂದಿದಾರೆ ಅವರಿಗೆ ಏನು ಕೊಡ್ತೀಯ ಅನ್ನೋರು. ತಿಂಡಿ ಕಾಫಿಗಂತೂ ಲೆಕ್ಕಕ್ಕೇ ಇಲ್ಲ. ಇನ್ನು ಅಣ್ಣನ ಮನೆಯಲ್ಲಿ ಊಟ ಸವಿದದ್ದೂ ಇದೆ.
ಕೆಲವು ವರ್ಷಗಳ ಹಿಂದೆ ನನಗೆ ಹಾಸ್ಯ ಸಾಹಿತ್ಯ ಕೃಷಿಗೆ ಪಡುಕೋಣೆ ರಮಾನಂದರಾವ್ ಪ್ರಶಸ್ತಿ ಬಂದಾಗ ಅದನ್ನು ತೆಗೆದುಕೊಳ್ಳಲು ಅಣ್ಣನ ಅಮೃತ ಹಸ್ತಕ್ಕಿಂತ ಇನ್ನೊಂದು ಇಲ್ಲ ಎನಿಸಿದಾಗ ಅವರು ಸಣ್ಣ ಸಮಾರಂಭವಾದರೂ ಬಂದು ನನಗೆ ಪ್ರಶಸ್ತಿ ಕೊಟ್ಟು ಆಶೀರ್ವದಿಸಿದರು. ಅಂದು ಇದ್ದ ಮತ್ತೊಬ್ಬ ಮುಖ್ಯ ಅತಿಥಿ ಎಂದರೆ ಹಂಸಲೇಖ ಅವರು. ಮತ್ತೊಂದು ಸಮಾರಂಭ ಎಂದರೆ ನನ್ನ ಒಂದು ಪುಸ್ತಕ ಬಿಡುಗಡೆ ಅವರ ಕೈನಿಂದಲೇ ನಡೆಯಿತು. ಅದು ನಡೆದದ್ದು ಸುರಾನಾ ಕಾಲೇಜಿನಲ್ಲಿ. ಹೀಗೆ ನನ್ನ ಸಾಹಿತ್ಯ ಜೀವನದ ಬಹಳ ಮುಖ್ಯವಾದ ಘಟ್ಟಗಳಲ್ಲಿ ಅಣ್ಣ ನನ್ನ ಜೊತೆ ಇದ್ದರು ಎನ್ನೋದು ನನ್ನ ಸೌಭಾಗ್ಯ.
ಇನ್ನು ಅಣ್ಣ ನಮ್ಮ ಹಾಸ್ಯೋತ್ಸವದ ಅವಿಭಾಜ್ಯ ಅಂಗ ಎಂದರೆ ತಪ್ಪಿಲ್ಲ. ಪರ್ವತವಾಣಿ ಸಂಸ್ಮರಣೆ, ಬೀಚಿ ಸಂಸ್ಮರಣೆ ಮುಂತಾದ ಹಾಸ್ಯೋತ್ಸವಗಳಲ್ಲಿ ಅವರು ಭಾಗವಹಿಸಿದ್ದರು. ಎಲ್ಲಕ್ಕಿಂತ ಮುಖ್ಯವಾದದ್ದು ಮತ್ತು ನನ್ನ ಬದುಕಿನ ಭಾಗ್ಯ ಎನ್ನುವಂತಿರುವುದು ಎಂದರೆ ನನ್ನ 120 ಲೇಖನಗಳ ಸಮಗ್ರ ಹಾಸ್ಯ ಕೃತಿಗೆ ಅಣ್ಣ ಮುನ್ನುಡಿ ಬರೆದುಕೊಟ್ಟಿರೋದು. ರೀ ಬೇಲೂರು ಇಷ್ಟೊಂದು ಹೇಗ್ರೀ ಬರೀತೀರಿ ಎಂದು ಬೆನ್ನು ತಟ್ಟಿದ್ದರು.
ಚೌಡಯ್ಯ ಸ್ಮಾರಕ ಭವನದಲ್ಲಿ ನಡೆದ ನಗೆ ಜಾಗರಣೆಯಾಗಲೀ, ನಾಟಕೋತ್ಸವಗಳಾಗಲೀ, ಅಲ್ಲಿ ಅಣ್ಣ ಇರಲೇಬೇಕು. ಚೌಡಯ್ಯ ಸ್ವಾರಕ ಭವನದ ರೂವಾರಿ ಶ್ರೀ ಕೆ.ಕೆ.ಮೂರ್ತಿಯವರೂ ಮತ್ತು ಅಣ್ಣ ಇವರು ದೂರದ ಸಂಬಂಧಿಗಳು. ಒಂದು ಸಾರಿ ಆಗಿನ ಮುಖ್ಯಮಂತ್ರಿ ಧರ್ಮಸಿಂಗ್ ಅವರನ್ನೂ ಖರ್ಗೆಯವನ್ನೂ ಮುಂದೆ ಕೂರಿಸಿಕೊಂಡು ಅವರನ್ನೇ ತಮಾಷೆ ಮಾಡಿದ್ದು ಇಂದಿಗೂ ನೆನಪಿದೆ.
ಇನ್ನು ಅಣ್ಣನ ಒಂದೆರಡು ನಗೆ ತುಣುಕುಗಳನ್ನು ನೆನೆಸಿಕೊಳ್ಳದಿದ್ದರೆ ಅಣ್ಣನ ನೆನಪು ಅಪೂರ್ಣ. ಹಾಸ್ಯ ಕಲಾವಿದರ ಬಗೆಗೆ ಒಂದು ಮಾತಿದೆ. ಏನಪ್ಪಾ ಅಂದರೆ ಯಾರು ತನ್ನನ್ನು ತಾನೂ ಕೂಡಾ ಹಾಸ್ಯ ಮಾಡಿಕೊಳ್ಳುವನೋ ಅವನೇ ನಿಜವಾದ ಹಾಸ್ಯ ಕಲಾವಿದ ಅಂತ. ಇದು ಅಣ್ಣನ ಆದಿಯಾಗಿ ನನ್ನನ್ನೂ ಸೇರಿಸಿಕೊಂಡು ಅನೇಕ ಹಾಸ್ಯ ಕಲಾವಿದರ ಸ್ವಭಾವ. ನಮ್ಮ ಹಾಸ್ಯೋತ್ಸವದಲ್ಲಿ ಅಣ್ಣ ಭಾಗವಹಿಸಿದ್ದಾಗ ಎಷ್ಟು ಹೊತ್ತು ಮಾತಾಡಬೇಕು ಎನ್ನುವ ಬಗೆಗೆ ಅವರು ಅನುಸರಿಸಿಕೊಂಡು ಬಂದಿದ್ದ ಶಿಸ್ತನ್ನು ಎಷ್ಟು ಸ್ವಾರಸ್ಯವಾಗಿ ತಿಳಿಸಿದರು ಎಂದರೆ ಜನ ಸುಮಾರು ಐದಾರು ನಿಮಿಷ ನಗುತ್ತಲೇ ಇದ್ದರು.
ಅಣ್ಣ ತಮ್ಮ ಭಾಷಣಕ್ಕೆ ತಾವೇ ಒಂದು ಶಿಸ್ತು ಪಾಲಿಸಿಕೊಂಡು ಬಂದಿದ್ದರು. ಹಿರಣ್ಣಯ್ಯನೋರೇ ಈಗ ನಿಮ್ಮ ಸಮಯ ಮುಗಿಯಿತು ಎಂದಾಗಲೀ, ಮಾತು ಸಾಕು ಎಂದಾಗಲೀ, ಚೀಟಿ ತೆಗೆದುಕೊಳ್ಳೋದಾಗಲೀ ಅಣ್ಣನಿಗೆ ಇಷ್ಟ ಇಲ್ಲ. ಅದಕ್ಕೆ ಅಣ್ಣ ಮಾಡಿದ ಉಪಾಯ ಎಂದರೆ ಅಣ್ಣ ಸಮಾರಂಭಕ್ಕೆ ಹೊರಟಾಗ ಅಣ್ಣನ ಜುಬ್ಬದ ಜೋಬಿನಲ್ಲಿ ಅಮ್ಮ ಒಂದು ಪೆಪ್ಪರ್ಮೆಂಟ್ ಇಡುತ್ತಿದ್ದರು. ಅಣ್ಣ ಭಾಷಣ ಪ್ರಾರಂಬಿಸುವ ಮೊದಲು ಪೆಪ್ಪರ್ಮಿಂಟ್ ಬಾಯಲ್ಲಿ ಹಾಕಿಕೊಂಡು ಭಾಷಣ ಷುರುಮಾಡುತ್ತಾರೆ. ಪೆಪ್ಪರ್ಮೆಂಟ್ ಅಣ್ಣನ ಬಾಯಲ್ಲಿ ತಾನೇ ತಾನಾಗಿ ಕರಗುವ ತನಕ ಅಣ್ಣನ ಮಾತು ನಡೆಯುತ್ತಿರುತ್ತೆ. ಇದು ಸುಮಾರು ಅರ್ಧ ಗಂಟೆ ಆಗಬಹುದು. ಈ ಶಿಸ್ತು ನಡೆದಿತ್ತು. ಒಂದು ಸಮಾರಂಭದಲ್ಲಿ ಅಣ್ಣ ಅರ್ಧಗಂಟೆ ಮಾತಾಡಿದರು, ಮುಕ್ಕಾಲು ಗಂಟೆ ಮಾತಾಡಿದರು, ಒಂದು ಗಂಟೆ ಮತಾಡಿದರು ಆದರೂ ಪೆಪ್ಪರ್ಮಿಂಟ್ ಕರಗಲಿಲ್ಲ. ಸಾಕಪ್ಫಾ ಅಂತ ಅಣ್ಣ ಮಾತು ನಿಲ್ಲಿಸಿದರು. ಇದ್ಯಾಕೆ ಇವತ್ತು ಪೆಪ್ಪರ್ಮಿಂಟ್ ಕರಗಲಿಲ್ಲ ಅಂತ ಬಾಯಿಗೆ ಕೈ ಹಾಕಿ ಪೆಪ್ಪರ್ಮಿಂಟ್ ತೆಗೆದು ನೋಡಿದರೆ ಅದು ಜುಬ್ಬದ ಗುಂಡಿ. ಅಂದು ಅಮ್ಮ ಪೆಪ್ಪರ್ಮಿಂಟ್ ಇಡಲು ಮರೆತಿದ್ದರು. ಇನ್ನೇನು ಬಿದ್ದು ಹೋಗೋದರಲ್ಲಿದ್ದ ಜುಬ್ಬದ ಗುಂಡಿಯನ್ನು ಜೋಬಲ್ಲೇ ಹಾಕಿದ್ದರು. ಎಂದಿನ ಅಭ್ಯಾಸದಂತೆ ಅಣ್ಣ ಜುಬ್ಬದ ಜೋಬಲ್ಲಿದ್ದ ಗುಂಡಿಯನ್ನೇ ಬಾಯಲ್ಲಿ ಹಾಕಿಕೊಂಡು ಮಾತಾಡೋಕೆ ಷುರು ಮಾಡಿದಾರೆ. ಪೆಪ್ಪರ್ಮಿಂಟ್ ಕರಗುತ್ತೆ ಆದರೆ ಗುಂಡಿ ಕರಗುತ್ಯೇ?
ಇನ್ನೊಮ್ಮೆ ಗಣ್ಯಾತಿಗಣ್ಯರ ಜೊತೆ ಅಣ್ಣ ವೇದಿಕೆಯಲ್ಲಿದ್ದರು. ಅಲ್ಲಿ ಕೂತವರೆಲ್ಲ
ರೂ ಕಾಲು ಮೇಲೆ ಕಾಲು ಹಾಕಿಕೊಂಡು ಬಹಳ ಗತ್ತಿನಿಂದ ಕೂತಿದ್ದರು. ಅಣ್ಣ ಒಬ್ಬರೇ ಎರಡೂ ಕಾಲುಗಳನ್ನು ಇಳಿಬಿಟ್ಟುಕೊಂಡು ಕೂತಿದ್ದು. ಇದನ್ನು ನೋಡಿದ ಸಭಿಕರಲ್ಲೊಬ್ಬರು ನೋಡ್ರೀ ಹಿರಣ್ಣಯ್ಯನೋರು ಎಷ್ಟು ಗಂಭೀರವಾಗಿ ಕಾಲುಗಳನ್ನು ಕೆಳಗೆ ಇಳಿಬಿಟ್ಕೊಂಡು ಕೂತಿದಾರೆ. ಮಿಕ್ಕವರೆಲ್ಲಾ ಕಾಲು ಮೇಲೆ ಕಾಲು ಹಾಕಿಕೊಂಡು ಎಷ್ಟು ಗತ್ತಿನಿಂದ ಕೂತಿದ್ದಾರೆ ಅಂದರಂತೆ. ಇದನ್ನು ಕೇಳಿಸಿಕೊಂಡ ಹಿರಣ್ಣಯ್ಯ ಅವರು ಸಭೆಯಲ್ಲಿ ಮಾತಾಡುವಾಗಲೇ ಇದನ್ನು ಪ್ರಸ್ತಾಪಿಸಿ ಪಾಪ ಅವರಿಗೆ ನನ್ನ ಕಷ್ಟ ಗೊತ್ತಿಲ್ಲ ಅಂತ ಕಾಣುತ್ತೆ. ನನ್ನ ಎರಡೂ ಕಾಲುಗಳು ಚಿಕ್ಕವು. ನಾನು ಎಷ್ಟು ಹಠ ಮಾಡಿದರೂ ಕಾಲು ಮೇಲೆ ಕಾಲು ಹಾಕಿಕೊಂಡು ಕೂತ್ಕೊಳೋಕೆ ಆಗೋದೇ ಇಲ್ಲ. ಒಂದು ವೇಳೆ ಕಷ್ಟ ಪಟ್ಟು ಹಾಗೆ ಕೂತರೆ ಮತ್ತೆ ನನ್ನ ಕಾಲುಗಳನ್ನು ಬಿಡಿಸಲು ಯಾರಾದರೂ ಬರಲೇಬೇಕು ಎಂದರಂತೆ. ಸಭೆಯಲ್ಲಿ ನಗು ಕಿಕ್ಕಿರಿಯಿತು.
ಮತ್ಸರವಿಲ್ಲದ ಕಲಾವಿದ ಹೇಗಿರಬೇಕು - ಸಣ್ಣ ಪುಟ್ಟ ಕಲಾವಿದರನ್ನೂ ಹೇಗೆ ಪ್ರೋತ್ಸಾಹಿಸಬೇಕು - ಸದಾ ನಗುನಿವ ಮನೋಭಾವದಿಂದ ಇರೋದು ಹೇಗೆ – ಎಲ್ಲರನ್ನೂ ಪ್ರೀತಿಯಿಂದ ಮಾತಾಡಿಸೋದು ಹೇಗೆ – ಎನ್ನುವ ಪ್ರೆಶ್ನೆಗಳೆದ್ದರೆ ಅವುಗಳಿಗೆಲ್ಲಾ ಒಂದೇ ಉತ್ತರ ಮಾಸ್ಟರ್ ಹಿರಣ್ಣಯ್ಯ ಅವರು.
ಇತ್ತೀಚೆಗೆ ಸುಚಿತ್ರಾ ಸಭಾಂಗಣದಲ್ಲಿ ನಡೆದ ಒಂದು ಸಮಾರಂಭಕ್ಕೆ ಅ.ರಾ.ಮಿತ್ರ ಬಂದಿದ್ದರು. ಬಾಬು ಅವರು ಮಿತ್ರ ಅವರನ್ನು ಇಷ್ಟು ದೂರ ಬಂದಿದ್ದೀರ ಬಂದು ಅಣ್ಣನನ್ನು ನೋಡಿಕೊಂಡು ಹೋಗಿ ಅಂದರು. ಸರಿ ನಾವೂ ಪಟಾಲಂ ಮಿತ್ರ ಅವರ ಜೊತೆ ಹೊರಟೆವು. ಆಗಲೇ ಅಣ್ಣ ಸ್ವಲ್ಪ ಅನಾರೋಗ್ಯದಲ್ಲಿದ್ದರು. ಆದರೂ ಅಂದು ಅವರು ನಮ್ಮೊಂದಿಗೆ ಕಳೆದ ಸುಮಾರು ಒಂದು ಗಂಟೆಗಳು ನೆನಪಿನಲ್ಲಿ ಸದಾ ದಾಖಲಾಗಿರುತ್ತದೆ.
ಚಿಕ್ಕಂದಿನಿಂದಲೂ ಪಟ್ಟ ಕಷ್ಟಗಳು ನೂರಾರು ಇದ್ದರೂ ಬದುಕಿನಲ್ಲಿ ಭರವಸೆ ಕಳೆದುಕೊಳ್ಳದೇ ತಾವು ನಂಬಿಕೊಂಡು ಬಂದ ರಂಗಭೂಮಿಗೆ ಸದಾ ಚಿರಋಣಿಯಾಗಿ, ಮನೆಯನ್ನೂ ಪೋಷಿಸಿಕೊಂಡು, ಮಕ್ಕಳನ್ನೂ ಬೆಳೆಸಿಕೊಂಡು, ಸಮಾಜಕ್ಕೆ ಮಾದರಿಯಾಗುವಂತೆ ಬದುಕಿದವರು ಮಾಸ್ಟರ್ ಹಿರಣ್ಣಯ್ಯ. ಅವರ ಯಶಸ್ಸಿಗೆ ಅಣ್ಣ ಕೊಡುವ ಕಾರಣ ಅವರ ಕೈ ಹಿಡಿದ ಶಾಂತ
ಅವರನ್ನು ನನ್ನ ಎಲ್ಲಾ ಅವಸ್ಥೆಗಳನ್ನೂ ಸಹಿಸಿಕೊಂಡು ಕುಟುಂಬದ ಹಿತಕ್ಕಾಗಿ ದುಡಿದ ಜೀವ ಅದು ಎನ್ನುತ್ತಾರೆ.
ಇಂಥಾ ಅಪರೂಪದ ವ್ಯಕ್ತಿತ್ವದ ಮಾಸ್ಟರ್ ಹಿರಣ್ಣಯ್ಯ ಅವರು ಇಂದು ನಮ್ಮೊಂದಿಗಿಲ್ಲ. ಆದರೆ ಅವರೊಂದಿಗೆ ನಾವು ಕಳೆದ ಸನ್ನಿವೇಶಗಳ ಅನುಭವ, ಅವುಗಳ ಮೆಲುಕು ಸದಾ ನಮ್ಮನ್ನು ಕಾಪಾಡುತ್ತವೆ ಎನ್ನೋದು ಅವರನ್ನು ಬಲ್ಲ ಎಲ್ಲರ ಅನುಭವದ ಮಾತು.
Eradoo Lekhanagalu channagi bandive. Nanna Lekhanada Tale barahadalli Ratna ennuva pada bittu hogirabeku. Anarghya Ratna antha irbekittu. - 27.5.2019 to 1.6.2019 Bengalurina Shankara Matada Sabhaanganadalli Nanna Upanyaasa - SRI SHANKARA CHARITAMRUTHAM ayojane maadiddaare.
ReplyDeleteತುಂಬಾ ಸ್ವಾರಸ್ಯವಾದ ಲೇಖನ.
ReplyDeleteನನಗೆ ಮಾಸ್ಟರ್ ಹಿರಣ್ಣಯ್ಯನವರ ಪರಿಚಯವಾದದ್ದು ಮುಖ್ಯವಾಗಿ ಶ್ರೀ ಕನಕಾಪುರ ನಾರಾಯಣ ಅವರ ಸುಗಮಕನ್ನಡ ಅಂತರ ಜಾಲ ಕ್ಷೇತ್ರದಿಂದ. ಅದರಲ್ಲಿ ನಾನು ಬರೆದಿದ್ದ 'ಸುಭಾಷಿತಗಳು ಮತ್ತು ಹಾಸ್ಯ', 'ಭಾಸಕವಿ ಮತ್ತು ಊರುಭಂಗ', 'ಅನರ್ಥಸಾಧನ' ಮುಂತಾದ ಬರಹಗಳನ್ನು ಹಿರಣ್ಣಯ್ಯನವರು ಓದಿ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಅನಂತರ ೨೦೧೪ರ ಡಿಸೆಂಬರ್ ತಿಂಗಳಲ್ಲಿ ಅವರನ್ನು ಅವರ ಮನೆಯಲ್ಲಿ ಸಂದರ್ಶಿಸಿದಾಗ, ಅವರಿಗೆ ಇಡೀ ರಾತ್ರಿ ಪ್ರಯಾಣಮಾಡಿ ಬೆಂಗಳೂರಿಗೆ ಹಿಂತಿರುಗಿದ್ದರಿಂದ ದಣಿವಾಗಿದ್ದರೂ, ನನ್ನನ್ನೂ ನನ್ನ ಬಂಧುಗಳನ್ನೂ ವಿಶೇಷ ಸ್ನೇಹದಿಂದ ಕಾಫಿ ಕೊಟ್ಟು ಉಪಚರಿಸಿದರು. ಇದು ಮಾತ್ರವಲ್ಲದೆ ತಮ್ಮ ಅನೇಕ ಪುಸ್ತಕಗಳನ್ನು ಕಾಣಿಕೆಯಾಗಿ ಕೊಟ್ಟರು. ಅವರ ಔದಾರ್ಯತೆಯನ್ನೂ, ಆತ್ಮೀಯತೆಯನ್ನೂ ಎಂದಿಗೂ ಮರೆಯಲಾರೆ.
ಲೇಖನದ ಶೀರ್ಷಿಕೆಯಲ್ಲಿ ಅನಘ್ರ್ಯ ಎಂಬ ಪದ ಮುದ್ರಿತವಾಗಿದೆ. ಇದು ಸರಿಯಲ್ಲ. ಸರಿಯಾದ ಪದ ಅನರ್ಘ ಅಥವಾ ಅನರ್ಘ್ಯ.
The word ಅನರ್ಘ್ಯ has been replaced sir, Thank you
Deleteಅಣ್ಣನವರ ಬಗ್ಗೆ ಎಷ್ಟು ಕೊಂಡಾಡಿದರು ಕಡಿಮೆಯೇ, ಅವರ ಮಾತು, ಮಾತು, ಮಾತು, ಮುತ್ತಿನಂಥಾ ಮಾತು, ಮೌಲ್ಯಾತ್ಮಕ ಮಾತು, ನಕ್ಕು ನಲಿಸುವ ಮಾತು ಎಲ್ಲರಿಗೂ ಪ್ರಿಯ. ಸಜ್ಜನಿಕೆಯ ಮಾತು ಆಡುವುದಷ್ಟೇ ಅಲ್ಲ ಮನೆಗೆ ಬಂದವರನ್ನು ಆದರಿಸುವುದು, ನಾಟಕ ಮಾಡಿದ ಸ್ಥಳದಲ್ಲಾದ ಘಟನೆಗಳು, ನೇರ ಟೀಕೆ, ಪಟ್ಟ ಪಾಡು, ಸನ್ಮಾನ, ಆತಿಥ್ಯ, ಅವಮಾನ ಎಲ್ಲವನ್ನೂ ಮುಚ್ಚಿಡದೆ ಬಿಚ್ಚಿಡುವ ವ್ಯಕ್ತಿತ್ವ ಅವರದ್ದು. ನನಗೂ ಅವರೊಡನೆ ಒಂದು ರೀತಿ ತಂದೆ ಮಕ್ಕಳ ಪ್ರೀತಿ ಬೆಳೆದಿತ್ತು ಎಂದರೆ ತಪ್ಪಿಲ್ಲ.
ReplyDelete